ಲಖನೌ, ಜು. 16: ಹಿಂದೂಗಳ ಆರಾಧ್ಯ ದೈವ ಶ್ರೀಕೃಷ್ಣನು (Lord Krishna) ಮುಸ್ಲಿಂ ಆಗಿದ್ದ, ಅವನು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ ಎಂದು ಹೇಳಿರುವ ಮುಸ್ಲಿಂ ಧರ್ಮಗುರುವಿನ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಮೌಲಿ ಜಾರ್ಜಿಸ್ ಅನ್ಸಾರಿ ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆದ ನಂತರ ವಿವಾದಕ್ಕೆ ಕಾರಣವಾಗಿದೆ. ಜೂನ್ 23ರಂದು ಜಾರ್ಖಂಡ್ನಲ್ಲಿ ನಡೆದ ಧಾರ್ಮಿಕ ಭಾಷಣ ಎಂದು ಹೇಳಲಾದ ಈ ವಿಡಿಯೊ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಮೌಲಿಯ ಬಂಧನಕ್ಕೆ ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ.
ಭಾಷಣದ ಸಮಯದಲ್ಲಿ ಅನ್ಸಾರಿ ಭಗವದ್ಗೀತೆಯ ಒಂದು ಶ್ಲೋಕವನ್ನು ಉಲ್ಲೇಖಿಸಿದ್ದ. ʼʼಯೋಗಿ ಯುಂಜಿತಾ ಸತತಮ್ ಆತ್ಮನಮ್ ರಹಸಿ ಸ್ಥಿತಃ, ಏಕಕೀ ಯತ-ಚಿತ್ತಾತ್ಮ ನಿರಾಶಿರ್ ಅಪರಿಗ್ರಹಃʼ ಎಂಬ ಈ ಶ್ಲೋಕವು, ಭಕ್ತರು ಇಡೀ ದೇಹದೊಂದಿಗೆ ಆರಾಧನೆ ಮಾಡಬೇಕು ಎಂದು ಹೇಳುತ್ತದೆ. ಅಲ್ಲದೆ, ಭಗವಾನ್ ಶ್ರೀಕೃಷ್ಣ ಸ್ವತಃ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ. ನೀವು ನಂಬದಿದ್ದರೆ, ಶ್ರೀ ಭಗವದ್ಗೀತೆಯ 6ನೇ ಅಧ್ಯಾಯದ 10 ನೇ ಶ್ಲೋಕವನ್ನು ಓದಿ” ಎಂದು ಅನ್ಸಾರಿ ನಾಲಗೆ ಹರಿಯಬಿಟ್ಟಿದ್ದ.
ಇಲ್ಲಿದೆ ವಿಡಿಯೊ:
“ಹಿಂದೂಗಳು ತಮ್ಮ ಧರ್ಮಗ್ರಂಥಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ, ಅವರು ಇಸ್ಲಾಂ ಪ್ರೀತಿಸಲು ಪ್ರಾರಂಭಿಸುತ್ತಾರೆʼʼ ಎಂದು ಪ್ರತಿಪಾದಿಸಿದ್ದ. ʼʼಇಸ್ಲಾಂ ಧರ್ಮವು ಪ್ರವಾದಿ ಮೊಹಮ್ಮದ್ ಮಾತ್ರವಲ್ಲದೆ ಭಗವಂತ ರಾಮ ಮತ್ತು ಭಗವಂತ ಕೃಷ್ಣರೂ ಬೋಧಿಸಿದ ಸಾರ್ವತ್ರಿಕ ನಂಬಿಕೆ” ಎಂದು ಪ್ರಹೇಳಿದ್ದ.
ದೇವಾಲಯದಲ್ಲಿ ಡ್ಯಾನ್ಸ್ ರೀಲ್ ಚಿತ್ರೀಕರಿಸುತ್ತಿದ್ದ ಯುವತಿ; ಖಡಕ್ ಕ್ಲಾಸ್ ತೆಗೆದುಕೊಂಡ ಪೊಲೀಸ್ ಸಿಬ್ಬಂದಿ
ಆದರೆ ಭಗವದ್ಗೀತೆಯ ಅಧ್ಯಾಯ 6ರ ಶ್ಲೋಕವು ಅನ್ಸಾರಿ ಪ್ರತಿಪಾದಿಸಿದ್ದಕ್ಕೆ ಸರಿಹೊಂದುವುದಿಲ್ಲ ಎಂದು ಹಿಂದೂ ಪಂಡಿತರು ತಿಳಿಸಿದ್ದಾರೆ. “ಯೋಗಿಯು ಸದಾ ಏಕಾಂತ ಸ್ಥಳದಲ್ಲಿ, ಒಬ್ಬನೇ ಇದ್ದು, ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಆಸೆ-ಆಕಾಂಕ್ಷೆಗಳು ಹಾಗೂ ಸ್ವಾಮಿತ್ವದ ಭಾವನೆಯಿಂದ ಮುಕ್ತನಾಗಿ ಧ್ಯಾನದಲ್ಲಿ ನಿರತನಾಗಿರಬೇಕು” ಎಂಬುದಾಗಿ ಶ್ಲೋಕ ಹೇಳುತ್ತದೆ. ನಮಾಜ್, ಇಸ್ಲಾಂ ಅಥವಾ ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸುವ ಪದ್ಧತಿಯ ಬಗ್ಗೆ ಯಾವುದೇ ವ್ಯಾಖ್ಯಾನವನ್ನು ಇದು ನೀಡುವುದಿಲ್ಲ.
ಇದೇ ಮೊದಲ ಬಾರಿಯಲ್ಲ
ಅಂದಹಾಗೆ, ಅನ್ಸಾರಿ ಈ ಹಿಂದೆಯೂ ಕೂಡ ವಿವಾದಗಳ ಕೇಂದ್ರಬಿಂದುವಾಗಿದ್ದ. 2022ರಲ್ಲಿ, ಮುಸ್ಲಿಂ ಮಹಿಳೆ ಹೆರಿಗೆ ನೋವು ಅನುಭವಿಸುತ್ತಿದ್ದರೂ, ಯಾವುದೇ ಸಂದರ್ಭದಲ್ಲೂ ತನ್ನ ಗಂಡನ ದೈಹಿಕ ಆಕಾಂಕ್ಷೆಯನ್ನು ನಿರಾಕರಿಸಬಾರದು ಎಂದು ಹೇಳಿದ್ದ ವಿಡಿಯೊ ವೈರಲ್ ಆಗಿತ್ತು. ಪ್ರವಾದಿಯ ಆಜ್ಞೆ ಎಂದು ವಿವರಿಸಿದ್ದನ್ನು ಉಲ್ಲೇಖಿಸುತ್ತಾ, “ಹೆರಿಗೆ ನೋವು ಬಂದರೂ, ಆ ವೇಳೆ ನಿಮ್ಮ ಪತಿ ನಿಮ್ಮ ದೇಹವನ್ನು ಆನಂದಿಸಲು ಬಯಸಿದರೆ, ನೀವು ನಿಮ್ಮ ಪತಿಯ ಆಸೆಯನ್ನು ಪೂರೈಸಬೇಕಾಗುತ್ತದೆ” ಎಂದು ಹೇಳಿದ್ದ.
ಅಲ್ಲದೆ, ಈ ಹಿಂದೆ ಅತ್ಯಾಚಾರ ಪ್ರಕರಣವೊಂದರಲ್ಲಿ ಆತ ದೋಷಿ ಎಂದು ಸಾಬೀತಾಗಿತ್ತು. ಮದುವೆಯಾಗುವುದಾಗಿ ನೆಪವೊಡ್ಡಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಬ್ಲ್ಯಾಕ್ಮೇಲ್ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಾರಣಾಸಿಯ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ, 10,000 ರುಪಾಯಿ ದಂಡವನ್ನು ವಿಧಿಸಿತ್ತು.
ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅನ್ಸಾರಿ ವಿವಿಧ ಹೋಟೆಲ್ಗಳಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ನಂತರ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಆಕೆಯ ದೂರಿನ ಆಧಾರದ ಮೇಲೆ, 2015ರ ನವೆಂಬರ್ 19ರಂದು ಅನ್ಸಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.