ಮುಂಬೈ: ಪರೀಕ್ಷೆಗೆ ಒಳಪಡುತ್ತಿದ್ದ ಮೋನೋರೈಲಿನ ಬೋಗಿ ಹಳಿತಪ್ಪಿ, ಡಿಕ್ಕಿ ಹೊಡೆದಿರುವ (Monorail accident) ಆಘಾತಕಾರಿ ಘಟನೆ ಮುಂಬೈನ ವಡಾಲಾದಲ್ಲಿ ನಡೆದಿದೆ. ಅಪಘಾತದಲ್ಲಿ ಮೋಟಾರ್ಮ್ಯಾನ್ ಗಾಯಗೊಂಡಿದ್ದು, ಅವರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ರೈಲಿನ ಜೋಡಣೆಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು (Police) ಮತ್ತು ಎಂಎಂಆರ್ಡಿಎ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ರೈಲಿನೊಳಗೆ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇಬ್ಬರು ಸಿಬ್ಬಂದಿ ಅಲ್ಲಿದ್ದರು. ಅವರನ್ನು ಮೋನೋರೈಲಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಕುರಿತು ಮಾತನಾಡಿದ ಮೋನೋರೈಲ್ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಕಾಂತ್ ಕಾಕಡೆ, ತಮ್ಮ ಮೂಲಗಳ ಮೂಲಕ ಅಪಘಾತದ ಬಗ್ಗೆ ತಿಳಿದುಕೊಂಡರು. ಹಳಿಗಳನ್ನು ಬದಲಾಯಿಸುವ ಸ್ವಿಚ್ನಲ್ಲಿ ಸ್ವಲ್ಪ ತೊಂದರೆ ಉಂಟಾದ ಕಾರಣ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.
ಹಳಿಗಳನ್ನು ಬದಲಾಯಿಸಲು ಬಳಸುವ ಸ್ವಿಚ್ನಲ್ಲಿನ ಕೆಲವು ದೋಷದಿಂದಾಗಿ ಅಪಘಾತ ಸಂಭವಿಸಿದೆ ಎಂದು ನನಗೆ ತಿಳಿದುಬಂದಿದೆ. ಇದು ಪರೀಕ್ಷಾರ್ಥ ರೈಲಾಗಿರುವುದರಿಂದ, ಪ್ರಯಾಣಿಕರು ಇಲ್ಲದೇ ಇದ್ದಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಅದು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತಿತ್ತು ಎಂದು ಅವರು ತಿಳಿಸಿದರು. ಘಟನೆಯ ಸಮಯದಲ್ಲಿ, ರೈಲು ಕ್ಯಾಪ್ಟನ್ ಮತ್ತು ಮೇಧಾ ಕಂಪನಿಯ ಸಿಬ್ಬಂದಿ ಮಾತ್ರ ಮೋನೋ ರೈಲಿನಲ್ಲಿದ್ದು, ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿತ್ತು. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.
ವಿಡಿಯೊ ವೀಕ್ಷಿಸಿ:
ಆಗಸ್ಟ್ನಲ್ಲಿ ನಡೆದ ಮೋನೋರೈಲು ಅಪಘಾತ
ಆಗಸ್ಟ್ ಆರಂಭದಲ್ಲಿ, ವಿದ್ಯುತ್ ಸರಬರಾಜು ಸಮಸ್ಯೆಯ ನಂತರ ಮೈಸೂರು ಕಾಲೋನಿ ನಿಲ್ದಾಣದ ಬಳಿ ಮೋನೋರೈಲ್ ರೈಲು ನಿಂತಿತು. ಪುರಸಭೆ ಆಯುಕ್ತ ಭೂಷಣ್ ಗಗ್ರಾಣಿ ಅವರ ಪ್ರಕಾರ, ರೈಲಿನೊಳಗೆ ಸುಮಾರು 200 ಪ್ರಯಾಣಿಕರಿದ್ದರು. ನಗರದಲ್ಲಿ ಭಾರಿ ಮಳೆ ಸುರಿಯುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ರೈಲಿನೊಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹೊರಗೆ ಕರೆದೊಯ್ಯುವ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು.
ಸಂಜೆ 6.15ರ ಸುಮಾರಿಗೆ ಈ ಘಟನೆ ನಡೆದಿದ್ದು, ನಂತರ ಚೆಂಬೂರು ಮತ್ತು ಭಕ್ತಿ ಪಾರ್ಕ್ ನಡುವಿನ ಮೋನೋರೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಸ್ಥಗಿತಗೊಂಡ ರೈಲಿನಲ್ಲಿದ್ದ ಪ್ರಯಾಣಿಕರು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನ ತುರ್ತು ಸಹಾಯವಾಣಿ (1916) ಗೆ ಕರೆ ಮಾಡಿದರು. ನಂತರ ಮುಂಬೈ ಅಗ್ನಿಶಾಮಕ ದಳವು ಮೂರು ಸ್ನಾರ್ಕೆಲ್ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿತು.
ಇನ್ನು ಇತ್ತೀಚೆಗಷ್ಟೇ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ದುರಂತವೊಂದು ಸಂಭವಿಸಿತ್ತು. ಹಳಿಗಳನ್ನು ದಾಟುತ್ತಿದ್ದ ಪ್ರಯಾಣಿಕರ ಮೇಲೆ ರೈಲೊಂದು ಹರಿದಿದ್ದ ಪರಿಣಾಮ, ಹಲವಾರು ಮಂದಿ ಮೃತಪಟ್ಟರು. ಯಾತ್ರಿಕರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಚೋಪನ್ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಪ್ರಯಾಣಿಕರು ರೈಲಿನ ಪ್ಲಾಟ್ಫಾರ್ಮ್ ಬದಿಯಲ್ಲಿ ಇಳಿಯದೆ ಮತ್ತೊಂದು ಕಡೆ ಇಳಿದು ಹಳಿಯನ್ನು ದಾಟಲು ಯತ್ನಿಸಿದ್ದಾರೆ. ಆಗ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲು ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.