ಶ್ರೀನಗರ, ಮೇ 12: ಇತ್ತೀಚೆಗೆ ಮನುಷ್ಯನ ಕ್ರೂರ ನಡವಳಿಕೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯನ್ನು ಜನರ ಗುಂಪೊಂದು ಅತ್ಯಂತ ಕ್ರೂರವಾಗಿ ಹೊಡೆದು ಕೊಂದಿದೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ಜನರ ಮನಸ್ಥಿತಿ ಹಾಗೂ ವರ್ತನೆ ಬಗ್ಗೆ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಾಣಿ ಹಿಂಸೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಕಲ್ಲುಗಳು ಮತ್ತು ಮರದ ಕೋಲುಗಳನ್ನು ಬಳಸಿ ಅಸಹಾಯಕ ಬೀದಿ ನಾಯಿಯ ಮೇಲೆ ಗುಂಪೊಂದು ನಿರ್ದಯವಾಗಿ ದಾಳಿ ಮಾಡಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆಗದೆ ನಾಯಿ ಅಲ್ಲೇ ಪ್ರಾಣ ಬಿಟ್ಟಿದೆ. ಈ ದೃಶ್ಯ ಪ್ರಾಣಿ ಪ್ರಿಯರನ್ನು ತೀವ್ರ ವಾಗಿ ಕೆರಳಿಸಿವೆ. ಅನೇಕರು ಈ ಕೃತ್ಯವನ್ನು ಖಂಡಿಸಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ಮೆರೆಯುವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ವಿಡಿಯೊ ನೋಡಿ:
ಪ್ರಾಥಮಿಕ ವರದಿಗಳ ಪ್ರಕಾರ, ಬೀದಿ ನಾಯಿಯು ಆ ಪ್ರದೇಶದಲ್ಲಿ ಕೆಲವು ದಾರಿಹೋಕರನ್ನು ಕಚ್ಚಿದೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಸಿಟ್ಟುಗೊಂಡ ಸ್ಥಳೀಯರು ನಾಯಿಯನ್ನು ಅಲ್ಲೇ ಕೊಂದಿದ್ದಾರೆ. ಸಾರ್ವಜನಿಕರು ನಗರ ಪಾಲಿಕೆ ಅಥವಾ ಪ್ರಾಣಿ ನಿಯಂತ್ರಣ ಮಂಡಳಿಗೆ ದೂರು ನೀಡುವ ಬದಲು ಕಾನೂನನ್ನು ಕೈಗೆತ್ತಿಕೊಂಡು ಈ ಕೃತ್ಯ ಎಸಗಿದ್ದು, ಹಲವರನ್ನು ಕೆರಳಿಸಿದೆ.
ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು; ವಿಡಿಯೊ ವೈರಲ್
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು, ಪ್ರಾಣಿ ಪ್ರಿಯರು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅನೇಕರು ಈ ಘಟನೆಯನ್ನು ʼಅಮಾನವೀಯ ಎಂದು ಬಣ್ಣಿಸಿದ್ದು ಆಕ್ರೋಶ ಹೊರ ಹಾಕಿದ್ದಾರೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ಬಗ್ಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇಂತಹ ವರ್ತನೆ ತೋರಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮನವಿ ಮಾಡಿದ್ದಾರೆ. ಮತ್ತೊಬ್ಬರು ಬೀದಿ ನಾಯಿ ಕಚ್ಚಿದ್ದರೂ ಇಂತಹ ವರ್ತನೆ ತೋರುವುದು ಸರಿಯಲ್ಲ ಎಂದು ಬರೆದಿದ್ದಾರೆ