ಭೋಪಾಲ್, ಮೇ 21: ಉತ್ತರ ಪ್ರದೇಶದ ನೋಯ್ಡಾ ಮೂಲದ ಯುವತಿ ತ್ವಿಶಾ ಶರ್ಮಾ (Twisha Sharma) ಅವರ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಧ್ಯ ಪ್ರದೇಶದ ಭೋಪಾಲ್ನ ಸಮರ್ಥ್ ಜತೆ ಕೇವಲ 5 ತಿಂಗಳ ಹಿಂದೆ ತ್ವಿಶಾ ಶರ್ಮಾ ಅವರ ಮದುವೆಯಾಗಿತ್ತು. ಮೇ 12ರಂದು ತ್ವಿಶಾ ಶರ್ಮಾ ಮಧ್ಯ ಪ್ರದೇಶದ ಭೋಪಾಲ್ನ ಕಟಾರಾ ಹಿಲ್ಸ್ನಲ್ಲಿರುವ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ಇದೀಗ ಅವರ ಕೊನೆಯ ವಿಡಿಯೊ, ಶ್ವಾನದೊಂದಿಗೆ ಆಡವಾಡುತ್ತಿರುವ ಮುದ್ದಾದ ದೃಶ್ಯ ವೈರಲ್ ಆಗಿದೆ.
ಕ್ಲಿಪ್ನಲ್ಲಿ, ತ್ವಿಶಾ ನಗುತ್ತಾ, ತನ್ನ ಮನೆಯೊಳಗೆ ಭಕ್ತಿಗೀತೆಗೆ ನೃತ್ಯ ಮಾಡುತ್ತಾ, ತನ್ನ ಸಾಕು ಶ್ವಾನದೊಂದಿಗೆ ಪ್ರೀತಿಯಿಂದ ಆಟವಾಡುತ್ತಿರುವುದನ್ನು ಕಾಣಬಹುದು. ಆಕೆ ಮಾನಸಿಕವಾಗಿ ಅಸ್ಥಿರಳಾಗಿದ್ದು ಅಥವಾ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಳು ಎಂಬ ಅತ್ತೆಯ ಹೇಳಿಕೆಗಳಿಗೆ ಈ ದೃಶ್ಯವು ವಿರುದ್ಧವಾಗಿದೆ. ಆಕೆಯ ಅತ್ತೆ-ಮಾವಂದಿರು ನೀಡಿರುವ ಹೇಳಿಕೆಗಳೂ ಸಂಪೂರ್ಣ ಸುಳ್ಳು ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಇದೀಗ ಈ ದೃಶ್ಯ ತನಿಖೆಯಲ್ಲಿ ಪ್ರಬಲ ಸಾಕ್ಷಿಯಾಗುವ ಸಾಧ್ಯತೆ ಇದೆ.
ವಿಡಿಯೊ ನೋಡಿ:
ಅದೇ ರೀತಿ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಸಹ ಕಂಡು ಬಂದಿವೆ. ತ್ವಿಶಾ ಅವರ ಅತ್ತೆ, ನಿವೃತ್ತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಗಿರಿಬಾಲಾ ಸಿಂಗ್, ತ್ವಿಶಾ ಅವರ ಮರಣದ ನಂತರ ನ್ಯಾಯಾಂಗಕ್ಕೆ ಸಂಬಂಧಿಸಿದವರು ಸೇರಿ ಹಲವು ವ್ಯಕ್ತಿಗಳಿಗೆ ಫೋನ್ ಕರೆ ಮಾಡಿದ್ದಾರೆ ಎಂದು ಅವರ ಕುಟುಂಬ ಈಗ ಆರೋಪಿಸಿದೆ.
ಏರ್ಪೋರ್ಟ್ ರೋಡ್ನಲ್ಲಿ ಮಚ್ಚು ಹಿಡಿದು ವಿಲೀಂಗ್; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ
ಇದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಎಂದು ಪೊಲೀಸರು ತಿಳಿಸಿದ್ದರೂ ಏಮ್ಸ್ ಭೋಪಾಲ್ ನೀಡಿದ ವರದಿಯಲ್ಲಿ, ತ್ವಿಶಾ ಅವರ ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಕೆಲವು ಗಾಯದ ಗುರುತುಗಳು ಕಂಡು ಬಂದಿವೆ. ಮದುವೆಯ ನಂತರ ತ್ವಿಶಾ ಕಿರುಕುಳ ಅನುಭವಿಸಿದ್ದಾಳೆ ಎಂದು ಅವರ ಕುಟುಂಬ ಪದೇ ಪದೆ ಹೇಳಿಕೊಂಡಿದ್ದು, ಸಾವಿನ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಆಕೆಯ ಪತಿ ಸಮರ್ಥ್ ಸಿಂಗ್ ತಲೆಮರೆಸಿಕೊಂಡಿದ್ದಾನೆ.
ಸಮರ್ಥ್ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಸದ್ಯ ಕಾನೂನು ತನಿಖೆ ಮುಂದುವರಿದಿದ್ದರೂ, ಹೊಸದಾಗಿ ಕಾಣಿಸಿಕೊಂಡ ವಿಡಿಯೊ ಆನ್ಲೈನ್ನಲ್ಲಿ ಚರ್ಚೆಗೆ ಕಾರಣವಾಗಿದೆ.