ಮುಂಬೈ, ಸೆ. 20: ಚಲಿಸುತ್ತಿದ್ದ ಲೋಕಲ್ ರೈಲನ್ನು ಹತ್ತಲು ಹೋಗಿ ಪ್ರಯಾಣಿಕನೊಬ್ಬ ಆಯತಪ್ಪಿ ಬಿದ್ದ ಅಘಾತಕಾರಿ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್ ಕೂಡಲೇ ರೈಲ್ವೆ ಸಿಬ್ಬಂದಿಯೂ ಸಮಯ ಪ್ರಜ್ಞೆ ಮೆರೆದಿದ್ದು ಪ್ಲಾಟ್ಫಾರ್ಮ್ ನಡುವೆ ಬೀಳುತ್ತಿದ್ದಂತೆ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ (Viral News) ಈ ಘಟನೆ ಸೆರೆಯಾಗಿದ್ದು ಸಿಬ್ಬಂದಿಯ ಕಾರ್ಯ ವೈಖರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಘಟನೆ ಮಹಾರಾಷ್ಟ್ರದ ಮುಂಬೈಯ ಜೋಗೇಶ್ವರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸೆಪ್ಟೆಂಬರ್ 16ರ ರಾತ್ರಿ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕನು ಚಲಿಸುತ್ತಿದ್ದ ರೈಲನ್ನು ಒಮ್ಮೆಲೇ ಹತ್ತಲು ಪ್ರಯತ್ನಿಸಿದ್ದಾನೆ. ಆಗ ನಿಯಂತ್ರಣ ತಪ್ಪಿ ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಪಾಯಕಾರಿ ಜಾಗಕ್ಕೆ ಬೀಳುತ್ತಿದ್ದಂತೆ ಡ್ಯೂಟಿಯಲ್ಲಿದ್ದ ಸಿಬ್ಬಂದಿ ರಕ್ಷಿಸಿದ್ದಾರೆ.
ವಿಡಿಯೊ ನೋಡಿ:
ಪ್ರಯಾಣಿಕ ಜೀವ ಉಳಿಸಿದ ಕಾನ್ಸ್ಟೇಬಲ್ ಅವರನ್ನು ನಾಗೇಶ್ ಮೋಹಿತೆ ಎಂದು ಗುರುತಿಸಲಾಗಿದೆ. ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆತನನ್ನು ಹಿಡಿದು ಸುರಕ್ಷಿತವಾಗಿ ಪ್ಲಾಟ್ಫಾರ್ಮ್ಗೆ ಎಳೆದಿದ್ದಾರೆ. ಈ ರಕ್ಷಣಾ ಕಾರ್ಯಕ್ಕೆ ಮತ್ತೊಬ್ಬ ಆರ್ಪಿಎಫ್ ಸಿಬ್ಬಂದಿ ಸಹ ನೆರವಾಗಿದ್ದಾರೆ. ಈ ರೋಚಕ ರಕ್ಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್ಪಿಎಫ್ ಕಾನ್ಸ್ಟೇಬಲ್ ತ್ವರಿತ ಕಾರ್ಯವೈಖರಿ ಹಾಗೂ ಜಾಗರೂಕತೆಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ
ಸಿಸಿಟಿವಿ ದೃಶ್ಯಾವಳಿಯಲ್ಲಿ ರೈಲ್ವೆ ಸಿಬ್ಬಂದಿ ಮಧ್ಯ ಪ್ರವೇಶಿಸಿ ಮಾರಕ ಅಪಘಾತವನ್ನು ತಡೆಯುವ ಮೊದಲು ಪ್ರಯಾಣಿಕ ಚಲಿಸುತ್ತಿರುವ ರೈಲಿಗೆ ಅಪಾಯಕಾರಿಯಾಗಿ ಹತ್ತಲು ಪ್ರಯತ್ನಿಸಿರುವ ದೃಶ್ಯ ಕಂಡು ಬಂದಿದೆ. ಬಳಕೆದಾರರೊಬ್ಬರು, ʼʼನಿಜಕ್ಕೂ ಸಿಬ್ಬಂದಿಯ ದೈರ್ಯಕ್ಕೆ ಮೆಚ್ಚಲೇ ಬೇಕುʼʼ ಬರೆದಿದ್ದಾರೆ. ಮತ್ತೊಬ್ಬರು, ʼʼಆರ್ಪಿಎಫ್ ಸಿಬ್ಬಂದಿಯ ಜಾಗರೂಕತೆ ಮತ್ತು ತ್ವರಿತ ಕ್ರಮವನ್ನು ಶ್ಲಾಘಿನೀಯʼʼ ಎಂದಿದ್ದಾರೆ.