ನವದೆಹಲಿ,ಸೆ.16: ವಂದೆ ಭಾರತ್ ರೈಲು ಎಂದಾಗ ಅದರಲ್ಲಿರುವ ಅತ್ಯಾಧುನಿಕ ಸೌಲಭ್ಯಗಳಿಗೆ ಮನಸೋಲದವರು ಯಾರು ಇಲ್ಲ. ಅತ್ಯಂತ ಕಡಿಮೆ ಸಮಯದಲ್ಲಿ ವೇಗವಾಗಿ ತಲುಪುದಲ್ಲದೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ನೀಡುತ್ತವೆ. ಜೊತೆಗೆ ಕೋಚ್ಗಳು ಸುರಕ್ಷಿತ ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ. ಆದರೆ ಜನರಿಗೆ ಎಷ್ಟೇ ಸೌಲಭ್ಯಗಳನ್ನು ನೀಡಿದರೂ ಮೂಲಭೂತ ನಾಗರಿಕ ಪ್ರಜ್ಞೆಯನ್ನು ಮರೆಯುತ್ತಿದ್ದಾರೆ. ಕಸದ ಬುಟ್ಟಿ ಇದ್ದರೂ ಅಲ್ಲಲ್ಲಿ ಸೀಟ್ ನ ಕೆಳಗೆ ಪ್ಲಾಸ್ಟಿಕ್, ತಿಂಡಿ ಪ್ಯಾಕೇಟ್ ಎಸೆದು ಹೋಗುತ್ತಿದ್ದಾರೆ. ವಂದೇ ಭಾರತ್ ರೈಲು ಅತ್ಯಂತ ಸ್ವಚ್ಛವಾಗಿ ಮತ್ತು ಸುಸ್ಥಿತಿಯಲ್ಲಿ ಕಂಡುಬಂದರೂ ಪ್ರಯಾಣಿಕರೇ ಹಾಳುಗೆಡವುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್ ಕ್ರಿಯೇಟರ್ ವೊಬ್ಬರು ಬೇಸರ ಹೊರ (Viral News) ಹಾಕಿದ್ದಾರೆ.
ವಂದೇ ಭಾರತ್ ರೈಲು ಅತ್ಯಂತ ಸ್ವಚ್ಛವಾಗಿ ಕಂಡುಬಂದರೂ, ಸಿಬ್ಬಂದಿಗಳು ನಿಯಮಿತವಾಗಿ ಸ್ವಚ್ಛಗೊಳಿಸಿದ ಹೊರತಾಗಿಯೂ ಸೀಟುಗಳ ಕೆಳಗೆ ಮತ್ತು ಬೋಗಿಯ ವಿವಿಧ ಭಾಗಗಳಲ್ಲಿ ಕಸ ಬಿದ್ದಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಬೇಸರ ಹೊರಹಾಕಿದ್ದಾರೆ.
ವಿಡಿಯೋ ನೋಡಿ:
ಇನ್ಸ್ಟಾಗ್ರಾಮ್ ಬಳಕೆದಾರ ಸುನಿಲ್ ಆರ್ ಎಂಬುವವರು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವಾಗ ಚಿತ್ರೀಕರಿಸಿದ ವಿಡಿಯೊ ಹಂಚಿಕೊಂಡಿದ್ದಾರೆ. ವಂದೇ ಭಾರತ್ ರೈಲು ಸ್ವಚ್ಛವಾಗಿ ಕಾಣುತ್ತಿತ್ತು. ಸಿಬ್ಬಂದಿ ಆಹಾರವನ್ನು ಬಡಿಸುತ್ತಿದ್ದರು, ಪತ್ರಿಕೆಗಳನ್ನು ನೀಡುತ್ತಿದ್ದರು. ಬಳಸಿದ ಟ್ರೇಗಳು ಹಾಗೂ ತ್ಯಾಜ್ಯವನ್ನು ನಿಯಮಿತವಾಗಿ ಸಂಗ್ರಹಿಸುತ್ತಿದ್ದರು. ಆದರೆ ವಿಡಿಯೋದ ಕೊನೆಯ ಭಾಗದಲ್ಲಿ ಕಂಡುಬಂದ ದೃಶ್ಯ ಮಾತ್ರ ನೋಡುಗರನ್ನು ಬೇಸರಗೊಳಿಸುವಂತಿತ್ತು.
ಸೀಟುಗಳ ಕೆಳಗೆ ಮತ್ತು ಬೋಗಿಯ ಇತರ ಭಾಗಗಳಲ್ಲಿ ಪ್ರಯಾಣಿಕರು ಕಸ ಹಾಕಿರುವುದನ್ನು ತೋರಿಸಿದ್ದಾರೆ. ಕಸದ ಬುಟ್ಟಿಗಳು ಲಭ್ಯವಿದ್ದರೂ ಮತ್ತು ಸಿಬ್ಬಂದಿಗಳು ನಿಯಮಿತವಾಗಿ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದರೂ ಕೆಲ ಪ್ರಯಾಣಿಕರು ತಾವು ತಿಂದ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ಸೀಟುಗಳ ಅಡಿಯಲ್ಲಿ ಹಾಗೂ ನೆಲದ ಮೇಲೆಯೇ ಎಸೆದು ಹೋಗಿದ್ದರು. ಕನಿಷ್ಠ ಪಕ್ಷ ಕಸದ ಬುಟ್ಟಿ ಬಳಸಬೇಕೆಂಬ ನಾಗರಿಕ ಪ್ರಜ್ಞೆಯೂ ಇಲ್ಲವಲ್ಲ? ಎಂದು ಬರೆದುಕೊಂಡಿದ್ದಾರೆ.
ಸುಮಾರು 90 ಲಕ್ಷಕ್ಕೂ ಹೆಚ್ಚು ಈ ವಿಡಿಯೊ ವೀಕ್ಷಣೆ ಪಡೆದಿದೆ. ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಎಷ್ಟು ದುರ ದೃಷ್ಟಕರ, "ಹಣದಿಂದ ಸಂಸ್ಕಾರವನ್ನು ಖರೀದಿಸಲು ಸಾಧ್ಯವಿಲ್ಲ," ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಕೆಲವು ಜನರು ಸಾರ್ವಜನಿಕ ಸಾರಿಗೆ ಮತ್ತು ಸಾರ್ವಜನಿಕ ಸ್ಥಳಗಳನ್ನು ತಮ್ಮ ಸ್ವಂತ ಮನೆ ಎಂದು ಅಂದುಕೊಂಡಿದ್ದಾರೆ. ಇಂತವರಿಗೆ ಪ್ರಯಾಣಿಸಲು ಅವಕಾಶವೇ ನೀಡಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.