ಡೆಹ್ರಾಡೂನ್,ಜು.31: ಹರಿದ್ವಾರದಲ್ಲಿ "ಕನ್ವರಿಯಾತ್ರೆ" ನಡೆಯುತ್ತಿದ್ದು ಈ ಸಮಯದಲ್ಲಿ ಅಘಾತಕಾರಿ ಘಟನೆಯೊಂದು ಕಂಡುಬಂದಿದೆ. ಗಂಗಾ ನದಿಯ ಭೋರ್ಗರೆಯುವ ಪ್ರವಾಹದಲ್ಲಿ ಭಕ್ತನೊಬ್ಬ ಕೊಚ್ಚಿ ಹೋಗಿದ್ದು ಎಸ್ಡಿಆರ್ಎಫ್ ತಂಡ ಕೂಡಲೇ ಸಮಯ ಪ್ರಜ್ಞೆ ಮೆರೆದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ SDRF ಕಾನ್ಸ್ಟೇಬಲ್ ನಿತೇಶ್ ಖೇತ್ವಾಲ್ ತಕ್ಷಣ ಹಿಂಜರಿಕೆ ಮಾಡದೇ ನದಿಗೆ ಹಾರಿದ್ದು ಸಿನಿಮೀಯ ಶೈಲಿಯಲ್ಲಿ ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ದೃಶ್ಯ ಭಾರೀ ವೈರಲ್ (Viral Video) ಆಗುತ್ತಿದೆ.
ವಾರ್ಷಿಕ ತೀರ್ಥಯಾತ್ರೆಯ ಸಮಯದಲ್ಲಿ ಹರಿದ್ವಾರದ ಘಾಟ್ಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಹರಿದ್ವಾರದ ಕಾಂಗ್ರಾ ಘಾಟ್ನಲ್ಲಿ ಭಕ್ತರ ಸುರಕ್ಷತೆಗಾಗಿ ಎಸ್ಡಿಆರ್ಎಫ್ ತಂಡವನ್ನು ಈಗಾಗಲೇ ನಿಯೋಜನೆ ಮಾಡಲಾಗಿತ್ತು. ಈ ವೇಳೆ ನದಿಯ ಹರಿವಿನಲ್ಲಿ ಯುವಕ ನೊಬ್ಬ ಕೊಚ್ಚಿ ಹೋಗುತ್ತಿದ್ದು ಇದನ್ನು ಎಸ್ಡಿಆರ್ಎಫ್ ತಂಡದ ಸದಸ್ಯರೊಬ್ಬರು ಗಮನಿಸಿದ್ದಾರೆ.
ವಿಡಿಯೋ ನೋಡಿ:
ರಕ್ಷಿಸಲಾದ ಯಾತ್ರಿಕನನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸೂರಜ್ಕುಂಜ್ ಗ್ರಾಮದ ನಿವಾಸಿ ಮನೀಶ್ ಎಂದು ಗುರುತಿಸಲಾಗಿದೆ. ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ಪ್ರದೇಶವನ್ನು ಮೇಲ್ವಿಚಾರಣೆ ಮಾಡುವಾಗ, ಗಂಗಾ ನದಿಯ ಪ್ರವಾಹದಲ್ಲಿ ಯುವಕ ಪರದಾಡುತ್ತಿರುವುದು ತಂಡ ಗಮನಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ SDRF ಕಾನ್ಸ್ಟೇಬಲ್ ನಿತೇಶ್ ಖೇತ್ವಾಲ್ ತಕ್ಷಣ ಹಿಂಜರಿಕೆಯಿಲ್ಲದೆ ನದಿಗೆ ಹಾರಿದ್ದಾರೆ.
ರಕ್ಷಣಾ ಕೌಶಲ್ಯವನ್ನು ಅವಲಂಬಿಸಿ, ಮುಳುಗುತ್ತಿರುವ ಭಕ್ತನನ್ನು ತಲುಪಿ, ಅವನನ್ನು ಸುರಕ್ಷಿತ ವಾಗಿ ದಡಕ್ಕೆ ಕರೆತಂದಿದ್ದಾರೆ. ತಕ್ಷಣ ಎಸ್ಡಿಆರ್ಎಫ್ ತಂಡ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಪ್ರಸ್ತುತ ಪ್ರಾಣಾಪಾಯದಿಂದ ಯುವಕ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ನಂತರ, ಕನ್ವರ್ನ ಎಲ್ಲಾ ಯಾತ್ರಿಕರು ಮತ್ತು ಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಜಾಗೃತಿ ವಹಿಸಲು ಎಸ್ಡಿಆರ್ಎಫ್ ತಂಡ ಸಲಹೆ ನೀಡಿದೆ.