ಮುಂಬೈ, ಆ. 11: ಮಹಿಳೆಯೊಬ್ಬಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಚಪ್ಪಲಿ ಮತ್ತು ಕಲ್ಲುಗಳನ್ನು ಎಸೆದಿರುವ ಅಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ನಡೆದಾಗ ಪ್ರತಿಮೆಗೆ ಗಾಜಿನ ರಕ್ಷಣಾತ್ಮಕ ಕವಚದಿಂದ ಮುಚ್ಚಲಾಗಿತ್ತು. ಇದರಿಂದ ಪ್ರತಿಮೆಗೆ ಯಾವುದೇ ಹಾನಿ ಆಗಿಲ್ಲ. ಈ ಕೃತ್ಯ ಎಸಗಿದ ಮಹಿಳೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯ ಹಡಪ್ಸರ್ನ ಸಾಸಣೆ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯತ್ತ ಚಪ್ಪಲಿ ಮತ್ತು ಕಲ್ಲುಗಳನ್ನು ಎಸೆಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ಕೋಪಗೊಂಡ ಜನರು ಆಕೆಯನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಿದ್ದಾರೆ. ಕೆಲವರು ಆಕೆಯ ಮುಖಕ್ಕೆ ನೇರಳೆ ಬಣ್ಣದ ಶಾಯಿಯನ್ನು ಬಳಿದರೆ, ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ.
ವಿಡಿಯೊ ನೋಡಿ:
ಆಕೆ ಈ ಕೃತ್ಯ ಎಸಗಲು ಕಾರಣವೇನು? ಕಿಡೀಗೆಡಿಗಳ ಒತ್ತಾಯದಿಂದ ಹೀಗೆ ಮಾಡಿದ್ದಾಳೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯದ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಕ್ಕೆ ಟೀಕಿಸಿದ್ದಾರೆ. ಮಹಿಳೆಯನ್ನು ಪುಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಬೈಕ್ನಲ್ಲಿ ರ್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್ಪೆಕ್ಟರ್ ವಿರುದ್ಧ ಕ್ರಮ
ಈ ಘಟನೆಯು ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೇಲಿರುವ ಭಾವುಕ ಮತ್ತು ಸಾಂಸ್ಕೃತಿಕ ಗೌರವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಭಾರತದ ಇತಿಹಾಸದಲ್ಲಿ ಪೂಜನೀಯ ವ್ಯಕ್ತಿತ್ವ ಹೊಂದಿರುವ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜರನ್ನು ಅವಮಾನಿಸಿದ ಹಲವು ಘಟನೆಗಳು ಇತ್ತೀಚೆಗೆ ನಡೆಯುತ್ತಿದ್ದು, ಕಿಡೀಗೆಡಿಗಳಿಗೆ ಸರಿಯಾದ ಪಾಠ ಕಲಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ನೆಟ್ಟಿಗರೊಬ್ಬರು "ಯಾರೇ ತಪ್ಪಿತಸ್ಥರಾಗಿದ್ದರೂ ಕಾನೂನಾತ್ಮಕವಾಗಿಯೇ ಶಿಕ್ಷೆಯಾಗಬೇಕು. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸಾರ್ವಜನಿಕರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.