ಹೈದರಾಬಾದ್, ಮಾ. 28: ಆಹಾರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುವ ಅನೇಕ ಘಟನೆಗಳು ಇತ್ತೀಚೆಗೆ ಹೆಚ್ಚೆಚ್ಚು ವರದಿಯಾಗುತ್ತಲೇ ಇದೆ. ಇದೀಗ ತೆಲಂಗಾಣದ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಂಟೀನ್ನ ಚಿತ್ರಾನ್ನದಲ್ಲಿ ಕಲ್ಲು ಪತ್ತೆಯಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣ ಕ್ಯಾಂಟೀನ್ ಅನ್ನು ಪ್ರತಿನಿತ್ಯ ಚಾಲಕರು ಮತ್ತು ಗ್ರಾಹಕರು ಬಳಸುತ್ತಿದ್ದಾರೆ. ಆದರೆ ಹೋಟೆಲ್ ಗ್ರಾಹಕರ ಸುರಕ್ಷತೆಯನ್ನು ನಿರ್ಲಕ್ಷಿಸಿದೆ. ಪ್ಲಾಸ್ಟಿಕ್ ಕವರ್ನಲ್ಲಿ ನೀಡಲಾದ ಆಹಾರದಲ್ಲಿ ಕಲ್ಲು ಕಂಡು ಗ್ರಾಹಕರು ಶಾಕ್ ಆಗಿದ್ದಾರೆ.
ವಿಡಿಯೊ ನೋಡಿ:
ಈ ಕೃತ್ಯವನ್ನು ಖಂಡಿಸಿ ವಿಡಿಯೊವನ್ನು ಹಂಚಿಕೊಂಡ ಕಾರ್ಮಿಕರ ಸಂಘವು, "ಲೆಮೆನ್ ರೈಸ್ ಅನ್ನು ಪ್ಲಾಸ್ಟಿಕ್ ಕವರ್ನಲ್ಲಿ ನೀಡಲಾಯಿತು. ಆಹಾರದಲ್ಲಿ ಕಲ್ಲು ಕಂಡುಬಂದಿದೆ" ಎಂದು ಹೇಳಿದೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್ಫಾರ್ಮ್ ವರ್ಕರ್ಸ್ ಯೂನಿಯನ್ ಎಕ್ಸ್ನಲ್ಲಿ ಈ ವಿಡಿಯೊ ಹಂಚಿಕೊಂಡಿದೆ.
ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ
ಘಟನೆ ವೈರಲ್ ಆಗುತ್ತಿದ್ಧಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಮಧ್ಯ ಪ್ರವೇಶಿಸಿ, ವಿಮಾನ ನಿಲ್ದಾಣದ ಸೌಲಭ್ಯಗಳಲ್ಲಿ ಕಟ್ಟುನಿಟ್ಟಾದ ಮಾನದಂಡಗಳನ್ನು ಜಾರಿಗೊಳಿಸಲಾಗಿದೆಯೆ ಎಂದು ಪರಿಶೀಲಿಸಲು ತಿಳಿಸಿದ್ದಾರೆ. ನಿಲ್ದಾಣದ ನಿರ್ವಾಹಕ ಜಿಎಂಆರ್ ಹೈದರಾಬಾದ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿದ್ದು, ತನಿಖೆಯ ಆಧಾರದ ಮೇಲೆ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.