ಡೆಹ್ರಾಡೂನ್, ಸೆ. 9: ಇತ್ತೀಚೆಗೆ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಕ್ಕೆ ನುಗ್ಗಿ ದಾಳಿ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಸಾಕು ನಾಯಿಯೊಂದರ ಮೇಲೆ ಚಿರತೆಯೊಂದು ಭೀಕರ ದಾಳಿ ಮಾಡಿದ ಘಟನೆ ವರದಿಯಾಗಿದೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಕತ್ತಲೆಯ ಮರೆಯಲ್ಲಿ, ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ನಾಯಿ ಗಾಢ ನಿದ್ರೆಯಲ್ಲಿದ್ದಾಗ ಅದರ ಮೇಲೆ ದಾಳಿ ಮಾಡಿದೆ. ಈ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು (Viral News) ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ವಿಕಾಸ್ ಭವನ ಕಚೇರಿಯ ಬಳಿಯ ನಿವಾಸದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ನಾಯಿ ಗಾಢ ನಿದ್ದೆಯಲ್ಲಿತ್ತು. ಆಗ ಚಿರತೆಯೊಂದು ದಿಢೀರ್ ಎಂಟ್ರಿ ನೀಡಿ ದಾಳಿ ಮಾಡಿದೆ. ಈ ಆಕ್ರಮಣದಿಂದ ಎದೆ ಗುಂದದ ನಾಯಿ, ಹಿಂದೇಟು ಹಾಕದೆ ಚಿರತೆಯನ್ನು ಎದುರಿಸಲು ಮುಂದಾಗಿದೆ. ಚಿರತೆಯ ದೇಹದ ಗಾತ್ರ ಮತ್ತು ಸಾಮರ್ಥ್ಯದ ಮುಂದೆ ನಾಯಿ ಚಿಕ್ಕದಾಗಿದ್ದರೂ, ಅತ್ಯಂತ ಧೈರ್ಯದಿಂದ ಚಿರತೆಯನ್ನೇ ಎದುರಿಸಿ ನಿಂತಿದೆ.
ವಿಡಿಯೊ ನೋಡಿ:
ಜೀವದ ಹಂಗು ತೊರೆದು ಹೋರಾಡಿದ ನಾಯಿ ಕೊನೆಗೆ ಚಿರತೆಯನ್ನೇ ಓಡಿಸಿದೆ. ಆ ಮೂಲಕ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ತಡರಾತ್ರಿಯ ಈ ಘರ್ಷಣೆ ಸ್ತಳೀಯರಲ್ಲಿ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಮನೆಯ ಬಾಗಿಲ ಅಲ್ಪ ದೂರದಲ್ಲೇ ಎರಡೂ ಪ್ರಾಣಿಗಳ ನಡುವೆ ತೀವ್ರ ಹೆಣಗಾಟ ನಡೆದಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ಚಿರತೆ; ರಕ್ಷಣೆಗೆ ಮುಂದಾದ ಅರಣ್ಯಾಧಿಕಾರಿ ಮೇಲೆಯೇ ಏಕಾಏಕಿ ದಾಳಿ
ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭಯದ ವಾತಾವರಣ ಸೃಷ್ಟಿಸಿದೆ. ಇತ್ತೀಚಿನ ದಿನಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಾಕುಪ್ರಾಣಿಗಳು ಹಾಗೂ ಸಾರ್ವಜನಿಕರ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.