ಬೋಪಾಲ್, ಆ.12: ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸರ್ಕಾರ ನಿಗದಿ ಪಡಿಸಿದೆ. ದೈಹಿಕ-ಮಾನಸಿಕ ಬೆಳವಣಿಗೆಗೆ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣಿನಂತಹ ಆಹಾರ ಪದಾರ್ಥಗಳನ್ನು ನಿಗದಿಪಡಿಸಿದೆ. ಆದರೆ ಮಧ್ಯ ಪ್ರದೇಶದ ಮೈಹಾರ್ ಜಿಲ್ಲೆಯ ಕಾಕ್ರಾ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರದ ಬದಲಿಗೆ ಕೇವಲ ಪೂರಿ ಮತ್ತು ಉಪ್ಪನ್ನು ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಅಂಗನವಾಡಿ ಶಾಲೆಯ ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಪೌಷ್ಟಿಕಾಂಶದ ಮಧ್ಯಾಹ್ನದ ಊಟದ ಹೆಸರಿನಲ್ಲಿ ಚಿಕ್ಕ ಮಕ್ಕಳಿಗೆ ಪೂರಿ ಮತ್ತು ಉಪ್ಪನ್ನು ಮಾತ್ರ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಗಂಭೀರ ಕಳವಳ ಮೂಡಿಸಿದೆ. ಅನೇಕರು ಸಂಬಂಧಪಟ್ಟವರ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.
ವಿಡಿಯೊ ನೋಡಿ:
ವೈರಲ್ ವಿಡಿಯೊದಲ್ಲಿ, ಮಕ್ಕಳು ಅಂಗನವಾಡಿಯಲ್ಲಿ ಆರುವುದನ್ಹಾನು ಕಾಣಬಹುದು. ಊಟಕ್ಕೆ ಏನು ಬಡಿಸಲಾಗಿದೆ ಎಂದು ಕೇಳಿದಾಗ ಓರ್ವ ಹುಡುಗಿ, ಪೂರಿ ಮತ್ತು ಉಪ್ಪು ಎಂದು ಹೇಳಿದ್ದಾಳೆ. ಅಧಿಕಾರಿಗಳ ಪ್ರಕಾರ, ವೈರಲ್ ಆಗಿರುವ ವಿಡಿಯೊ ಸುಮಾರು ಮೂರು ತಿಂಗಳು ಹಳೆಯದು. ಈ ಘಟನೆ ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತನಿಖೆಗೆ ಆದೇಶ ಹೊರಡಿಸಿದೆ.
ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ
ವಿಡಿಯೊಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಹೇಳಿದ್ದಾರೆ. ಅಲ್ಲದೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇತ್ತೀಚೆಗೆ ಗರ್ಭಿಣಿಯರು ಹಾಗೂ ಮಕ್ಕಳಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ಕೊಂಡೊಯ್ದ ಘಟನೆ ಬೀದರ್ನಲ್ಲಿ ಕಂಡು ಬಂದಿದ್ದು, ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿದ್ದರು.