Jagan Reddy: ಜಗನ್ ಮೋಹನ್ ರೆಡ್ಡಿ ವಾಹನದ ಅಡಿಗೆ ಬಿದ್ದು ವೈಎಸ್ಆರ್ಸಿಪಿಯ ಕಾರ್ಯಕರ್ತ ಸಾವು; ವಿಡಿಯೊ ವೈರಲ್
Viral Video: ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಮಾಜಿ ಮುಖ್ಯಮಂತ್ರಿ, ವೈಎಸ್ಆರ್ಸಿಪಿ ಮುಖಂಡ ಜಗನ್ ಮೋಹನ್ ರೆಡ್ಡಿ ಅವರ ವಾಹನಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು 54 ವರ್ಷದ ಚೀಲಿ ಸಿಂಗಯ್ಯ ಎಂದು ಗುರುತಿಸಲಾಗಿದೆ. ಜೂ. 18ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಅಮರಾವತಿ: ಆಂಧ್ರ ಪ್ರದೇಶದ ವಿಜಯವಾಡದಲ್ಲಿ ದಾರುಣ ಘಟನೆಯೊಂದು ನಡೆದಿದ್ದು, ಮಾಜಿ ಮುಖ್ಯಮಂತ್ರಿ, ವೈಎಸ್ಆರ್ಸಿಪಿ ಮುಖಂಡ ಜಗನ್ ಮೋಹನ್ ರೆಡ್ಡಿ (Y.S.Jagan Mohan Reddy) ಅವರಿದ್ದ ವಾಹನಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು 54 ವರ್ಷದ ಚೀಲಿ ಸಿಂಗಯ್ಯ (Cheeli Singaiah) ಎಂದು ಗುರುತಿಸಲಾಗಿದೆ. ಜೂ. 18ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video). ಚೀಲಿ ಸಿಂಗಯ್ಯ ಬಿದ್ದಿರುವುದು ಗಮನಕ್ಕೆ ಬಾರದೆ ಅವರ ಮೇಲೆಯೇ ಕಾರಿ ಹರಿದು ಹೋಗಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ವೆಂಗಲಪಾಲಂನ ಮೂಲದ ಮೃತ ಚೀಲಿ ಸಿಂಗಯ್ಯ ವೈಎಸ್ಆರ್ಸಿಪಿಯ ಕಾರ್ಯಕರ್ತ ಎಂದು ಗುರುತಿಸಲಾಗಿದೆ. ಸಟ್ಟೇನಪಲ್ಲಿ ತಾಲೂಕಿನ ರೆಂಟಪಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಗನ್ ಮೋಹನ್ ರೆಡ್ಡಿ ಅವರನ್ನು ನೋಡಲು ರಸ್ತೆ ಬದಿ ನೂರಾರು ಸಂಖ್ಯೆಯಲ್ಲಿ ವೈಎಸ್ಆರ್ಸಿಪಿ ಕಾರ್ಯಕರ್ತರು ನೆರೆದಿದ್ದರು. ಈ ವೇಳೆ ಚೀಲಿ ಸಿಂಗಯ್ಯ ಕಾರಿನ ಕೆಳಗೆ ಬಿದ್ದಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
Shocking Visuals: Ex-Chief Minister of Andhra Pradesh Jagan Reddys car runs over bystander in rally.
— Ghar Ke Kalesh (@gharkekalesh) June 22, 2025
https://t.co/tXDzLJDwte
ಈ ಸುದ್ದಿಯನ್ನೂ ಓದಿ: Sunjay Kapus: ಸಾವಿಗೂ ಮುನ್ನ ಸಂಜಯ್ ಕಪೂರ್ ಕೊನೆಯ ವಿಡಿಯೋ ವೈರಲ್; ನೆಲದ ಮೇಲೆ ಬಿದ್ದ ಕರಿಷ್ಮಾ ಮಾಜಿ ಪತಿ
ಜಗನ್ ಮೋಹನ್ ರೆಡ್ಡಿ ಅವರಿಗೆ ಪುಷ್ಪಾರ್ಚನೆ ಮಾಡುಲು ಮುಂದೆ ಬಂದಿದ್ದ ಚೀಲಿ ಸಿಂಗಯ್ಯ ನೂಕು ನುಗ್ಗಲಿನ ಕಾರಣಕ್ಕೆ ಕಾರಿನ ಅಡಿಗೆ ಬಿದ್ದಿದ್ದಾರೆ. ಇದನ್ನು ತಿಳಿಯದೆ ಕಾರು ಅವರ ಮೇಲೆಯೇ ಹಾದು ಹೋಗಿದೆ. ವೈರಲ್ ವಿಡಿಯೊದಲ್ಲಿ ನೆಲದ ಮೇಲೆ ಬಿದ್ದ ಚೀಲಿ ಸಿಂಗಯ್ಯ ಅವರ ಕುತ್ತಿಗೆ ಮೇಲೆ ಕಾರಿನ ಚಕ್ರ ಹರಿದುಹೋಗಿರುವುದು ಕಂಡು ಬಂದಿದೆ. ಸ್ಥಳೀಯರು ಕೂಡಲೇ ಪೊಲೀಸರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಅವರನ್ನು ಆಸ್ಪತ್ರೆಗೆ ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ.
ಗುಂಟೂರು ಎಸ್ಪಿ ಸತೀಶ್ ಕುಮಾರ್ ಮತ್ತು ಗುಂಟೂರು ರೇಂಜ್ ಐಜಿ ತ್ರಿಪಾಠಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ದೃಢಪಡಿಸಿದ್ದಾರೆ. "ಪ್ರಾಥಮಿಕ ತನಿಖೆಯ ಪ್ರಕಾರ ಕೇವಲ 3 ವಾಹನಗಳಿಗೆ ಮಾತ್ರ ಅಧಿಕೃತವಾಗಿ ಅನುಮತಿ ನೀಡಲಾಗಿದ್ದರೂ, ಸುಮಾರು 30ರಿಂದ 35 ವಾಹನಗಳು ಬೆಂಗಾವಲು ಪಡೆಯಲ್ಲಿದ್ದವು" ಎಂದು ಐಜಿ ತ್ರಿಪಾಠಿ ಹೇಳಿದ್ದಾರೆ. "ಅನಧಿಕೃತ ವಾಹನಗಳು ಬೆಂಗಾವಲು ಪಡೆಯೊಂದಿಗೆ ಹೇಗೆ ಸೇರಿಕೊಂಡವು ಎಂಬುದನ್ನು ನಿರ್ಧರಿಸಲು ವಿಚಾರಣೆಯ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ವಿವರಿಸಿದ್ದಾರೆ.
ಸಂತ್ರಸ್ತ ಕುಟುಂಬಸ್ಥರು ಹೇಳಿದೇನು?
ಈ ಘಟನೆಯು ಭದ್ರತಾ ಮೇಲ್ವಿಚಾರಣೆ ಮತ್ತು ಬೆಂಗಾವಲು ಪಡೆಗಳ ನಿರ್ವಹಣೆ ಕೊರತೆಯ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಿಂಗಯ್ಯ ಅವರ ಕುಟುಂಬವು ನ್ಯಾಯಕ್ಕಾಗಿ ಮತ್ತು ಅವರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಿವೆ. ಸರ್ಕಾರವು ಅಸ್ತಿತ್ವದಲ್ಲಿರುವ ಬೆಂಗಾವಲು ಶಿಷ್ಟಾಚಾರಗಳನ್ನು ಪರಿಶೀಲಿಸುವ ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ಇಂತಹ ಘಟನೆ ತಡಗಟ್ಟಲು ಕಠಿಣ ಕ್ರಮಗಳನ್ನು ಜಾರಿಗೆ ತರುವ ನಿರೀಕ್ಷೆಯಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ.