ಶ್ರೀನಗರ, ಜೂ. 24: ಇತ್ತೀಚೆಗೆ ರೀಲ್ಸ್ ಕ್ರೇಝ್ ಮಿತಿ ಮೀರಿ ಹೋಗಿದೆ. ಪ್ರಾಣವನ್ನು ಲೆಕ್ಕಿಸದೆ ಜನ ದುಸ್ಸಾಹಸಕ್ಕೆ ಮುಂದಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಶ್ಮೀರದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಪ್ರವಾಸಿಗನೊಬ್ಬ ತನ್ನ ಐಷಾರಾಮಿ ಕಾರನ್ನು ನದಿಯಲ್ಲಿ ಓಡಿಸಿದ್ದಾನೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ನೀರಿನಲ್ಲಿ ಇಂತಹ ಅಪಾಯಕಾರಿ ಸಾಹಸದ ಅಗತ್ಯ ಏನಿತ್ತು? ಎಂದು ನೆಟ್ಟಿಗರು ಟೀಕಿಸಿದ್ದಾರೆ. ರೀಲ್ಸ್ಗಾಗಿ ಇಂತಹ ಸಾಹಸ ಮಾಡಲು ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಎಲ್ಲದಕ್ಕೂ ಸರ್ಕಾರವನ್ನೇ ದೂಷಿಸಿದರೆ ಪ್ರಯೋಜನವಿಲ್ಲ. ಕಾಮನ್ ಸೆನ್ಸ್ ಎನ್ನೋದು ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರದ ಪ್ರವಾಸಿಯೊಬ್ಬ ತನ್ನ ಐಷಾರಾಮಿ ಟೊಯೋಟಾ ಫಾರ್ಚುನರ್ ಕಾರನ್ನು ಝೇಲಂ ನದಿಯ ನೀರಿನ ಮಧ್ಯೆ ಚಲಾಯಿಸಲು ಮುಂದಾಗಿದ್ದಾನೆ. ನೀರಿನ ಪ್ರವಾಹವು ಕಾರನ್ನು ಮುಂದಕ್ಕೆ ತಳ್ಳುತ್ತಿದ್ದರೂ ಹರಸಾಹಸ ಪಟ್ಟು ಡ್ರೈವ್ ಮಾಡಿದ್ದಾನೆ. ಈ ಸವಾಲಿನ ಹೊರತಾಗಿಯೂ, ಕಾರ್ ಯಾವುದೇ ತೊಂದರೆಯಿಲ್ಲದೆ ಝೀಲಂ ನದಿಯನ್ನು ದಾಟಿ ಸುರಕ್ಷಿತವಾಗಿ ನೀರಿನಿಂದ ಹೊರಬಂದಿದೆ.
ವಿಡಿಯೊ ನೋಡಿ:
ವೈರಲ್ ಆದ ದೃಶ್ಯದಲ್ಲಿ ಪ್ರವಾಸಿಗನು ತೀವ್ರವಾದ ನೀರಿನ ಸೆಳೆತ ನಡುವೆ ಫಾರ್ಚುನರ್ ಕಾರನ್ನು ಚಲಾಯಿಸುತ್ತಿರುವುದು ಕಂಡು ಬಂದಿದೆ. ಜತೆಗೆ ಕಿಟಕಿಯಿಂದ ಕೈ ಹೊರಗೆ ಹಾಕಿ ವಿಡಿಯೊ ಮಾಡಿದ್ದಾನೆ. ಕಾರ್ ಯಾವುದೇ ಅಪಾಯವಿಲ್ಲದೆ ಸಾಗಿದರೂ ಈತನ ಬೇಜವಾಬ್ದಾರಿ ವರ್ತನೆಗೆ ಆಕ್ಷೇಪ ವ್ಯಕ್ತವಾಗಿದೆ. ಇಂತಹ ಮೂರ್ಖರಿಗೆ ಸರಿಯಾದ ಶಿಕ್ಷೆಯನ್ನು ವಿಧಿಸಿದರೆ, ಇತರರು ಅದನ್ನು ಅನುಸರಿಸಲು ಧೈರ್ಯ ಮಾಡುವುದಿಲ್ಲ. ಈತನ ವಿರುದ್ಧ ಕ್ರಮ ಕೈಗೊಳ್ಳಲು ನೆಟ್ಟಿಗರು ಒತ್ತಾಯಿಸಿದ್ದಾರೆ.
ಬಿಕಾನೆರ್ ಎಕ್ಸ್ಪ್ರೆಸ್ ರೈಲಿನ ಎಸಿ ಕೋಚ್ನಲ್ಲಿ ನೀರು ಸೋರಿಕೆ; ಪ್ರಯಾಣಿಕರಿಗೆ 'ಶವರ್ ವ್ಯವಸ್ಥೆ'
ನೆಟ್ಟಿಗರೊಬ್ಬರು, ʼʼಕ್ಷಣಿಕವಾಗಿ ಗಮನ ಸೆಳೆಯಲು ಪ್ರಾಣವನ್ನು ಲೆಕ್ಕಿಸದೆ ನದಿಗೆ ಕಾರ್ ಇಳಿಸುವುದು ನಮ್ಮಲ್ಲಿ ಬೇಜವ್ದಾರಿತನ ಎಷ್ಟಿದೆ ಎಂಬುದನ್ನು ತೋರಿಸುತ್ತದೆʼʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಕಾರನ್ನು ವಶಪಡಿಸಿಕೊಂಡು ದಂಡ ವಿಧಿಸಿ ಮತ್ತು ಚಾಲಕನನ್ನು ಜೈಲಿಗೆ ಹಾಕಿʼʼ ಎಂದು ಸಲಹೆ ನೀಡಿದ್ದಾರೆ.