ಚಂಡೀಗಢ, ಆ. 26: ಐಷಾರಾಮಿ ವಸತಿ ಕೇಂದ್ರವಾದ ಹರಿಯಾಣದ ಗುರುಗ್ರಾಮದಲ್ಲಿ ಸುರಿದ ಮಳೆ ಅಲ್ಲಿನ ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಉದ್ಯೋಗಿಗಳು, ಶಾಲಾ ಮಕ್ಕಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡರು. ಈ ನಡುವೆ ಕ್ಯಾಬ್ ಅರ್ಧದಲ್ಲೇ ಸಿಲುಕೊಂಡಾಗ ಉದ್ಯೋಗಿಯೊಬ್ಬರು ಕಾರ್ ರೂಫ್ ಅನ್ನೇ ತಾತ್ಕಾಲಿಕ ಕಚೇರಿಯನ್ನಾಗಿ ಮಾರ್ಪಡಿಸಿಕೊಂಡ ವಿಡಿಯೊವೊಂದು ವೈರಲ್ (Viral News) ಆಗಿದೆ.
ಗುರುಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವಸ್ತ್ಯವಾಗಿದೆ. ನೀರಿನ ಮಧ್ಯೆಯೇ ವಾಹನಗಳೆಲ್ಲ ಸ್ಥಗಿತಗೊಂಡಿದ್ದವು. ಈ ವೇಳೆ ಕಾರೊಂದು ಕೆಟ್ಟು ಹೋದಾಗ ಉದ್ಯೋಗಿಯೊಬ್ಬರು ರೂಫ್ನಲ್ಲಿ ಕುಳಿತು ಕೆಲಸ ಮಾಡಿದ್ದಾರೆ. ಕಚೇರಿಗೆ ತಲುಪಲು ಸಾಧ್ಯವಿಲ್ಲವೆಂದು ಅರಿತ ಆತ, ತಕ್ಷಣವೇ ಅಲ್ಲಿಂದಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.
ವಿಡಿಯೊ ನೋಡಿ:
ಈ ದೃಶ್ಯವು ಕ್ಯಾಬ್ನ ಮೇಲ್ಭಾಗದಲ್ಲಿ ಕುಳಿತ ಅವರು ಲ್ಯಾಪ್ಟಾಪ್ ಮುಂದಿಟ್ಟು ಕೆಲಸ ಮಾಡುತ್ತಿರುವುದನ್ನು ತೋರಿಸುತ್ತದೆ. ವಾಹನಗಳ ಸಾಲು ಅವರ ಸುತ್ತಲೂ ಕಂಡು ಬಂದಿದೆ. ಇದರ ಹೊರತಾಗಿಯೂ ಅವರು ತಮ್ಮ ಕೆಲಸದ ಮೇಲೆ ಗಮನಹರಿಸಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರು ಗುರುಗ್ರಾಮದ ಕಾರ್ಪೊರೇಟ್ ಜೀವನ ಮತ್ತು ಸಂಚಾರ ಸಮಸ್ಯೆಯ ಕುರಿತು ಚರ್ಚೆ ಮಾಡುತ್ತಿದ್ದಾರೆ.
ಯುವಕನ ಸಮಯಪ್ರಜ್ಞೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲಸದ ಜವಾಬ್ದಾರಿಯ ಬಗ್ಗೆ ಕೊಂಡಾಡಿದ್ದಾರೆ. ರಸ್ತೆ ಸಂಚಾರದಿಂದ ಅನೇಕರು ತೊಂದರೆಗೆ ಸಿಲುಕಿದ್ದು, ಶಾಲೆಯಿಂದ ಹೊರಟಿದ್ದ 2ನೇ ತರಗತಿಯ ಮಗುವೊಂದು ಮಧ್ಯಾಹ್ನ 12:30ಕ್ಕೆ ಬಸ್ ಹತ್ತಿದರೆ, ರಾತ್ರಿ 8:30ಕ್ಕೆ ಮನೆ ತಲುಪಿದೆ. ಅದೇ ರೀತಿ ಮಹಿಳೆಯೊಬ್ಬರು ವಾಹನ ಸಿಗದೇ 8 ಕಿ.ಮೀ.ವರೆಗೆ ನಡೆದುಕೊಂಡೇ ಮನೆ ತಲುಪಿದ್ದಾರೆ.