ಮಧ್ಯಪ್ರದೇಶ: ಸಾಲ ಎನ್ನುವುದು ಮನುಷ್ಯನ ಸಂಬಂಧಗಳನ್ನು ದೂರ ಮಾಡುತ್ತದೆ ಎಂಬ ಮಾತಿದೆ. ಕಷ್ಟ ಎಂದು ಬಂದವರಿಗೆ ಸಾಲ ನೀಡಿ ಬಳಿಕ ತಾನೇ ಸಾಲಗಾರನಾಗುವ ಸ್ಥಿತಿಯನ್ನು ಅನೇಕರು ಅನುಭವಿಸುತ್ತಿರುತ್ತಾರೆ. ಹೀಗಾಗಿ ಸಾಲದಿಂದ ಒಮ್ಮೆ ಪಾಠ ಕಲಿತ ನಂತರ ಖಡಾ ಖಂಡಿತವಾಗಿ ಆ ಸಾಲವನ್ನು ನಿರಾಕರಿಸುವವರು ಇದ್ದಾರೆ. ಅಂತೆಯೇ ಅಂಗಡಿಯ ಮಾಲಿಕನೊಬ್ಬ ತನ್ನ ಬಳಿ ಸಾಲಕ್ಕೆ ತಿಂಡಿ ತಿನಿಸು ಕೇಳಿದ್ದ ಗ್ರಾಹಕನಿಗೆ ಸಾಲ ನೀಡಲು ನಿರಾಕರಿದ್ದಾನೆ. ಪರಿಣಾಮ ಗ್ರಾಹಕರಿಬ್ಬರು ಕೋಪದಿಂದ (Viral Video) ದಿನಸಿ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ (Madhya Pradesh) ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ಸಾಲಕ್ಕೆಂದು ತಿಂಡಿ ತಿನಿಸು ಕೇಳಿದ್ದಾಗ ಸಾಲ ನೀಡಲು ಸಾಧ್ಯವಿಲ್ಲ ಹಣ ನೀಡಿದರೆ ಮಾತ್ರವೇ ವಸ್ತುಗಳನ್ನು ಕೊಡುವುದಾಗಿ ಅಂಗಡಿ ಮಾಲಿಕ ತಿಳಿಸಿದ್ದಾನೆ. ಬಳಿಕ ಇಬ್ಬರು ಗ್ರಾಹಕರು ಕೋಪದಲ್ಲಿ ದಿನಸಿ ಅಂಗಡಿಗೆ ಬೆಂಕಿ ಹಚ್ಚುವ ಮೂಲಕ ದುಷ್ಕೃತ್ಯವೆಸಗಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಸಾಲವಾಗಿ ಬರೆಸಿಟ್ಟು ವಸ್ತುಗಳನ್ನು ನೀಡುವಂತೆ ಗ್ರಾಹಕರಿಬ್ಬರು ಕೋರಿದ್ದಾರೆ. ಆದರೆ ಈ ಹಿಂದೆಯೇ ನೀಡಿದ್ದ ಸಾಲವನ್ನೇ ತಿರಿಸದ ಗ್ರಾಹಕರಿಗೆ ಪುನಃ ಸಾಲ ನೀಡಲು ಅಂಗಡಿ ಮಾಲಕನಿಗೆ ಇಷ್ಟವಿರಲಿಲ್ಲ. ಹೀಗಾಗಿ ಹಣ ನೀಡಿದರಷ್ಟೇ ತಿಂಡಿ ನೀಡುವುದಾಗಿ ತಿಳಿಸಿ ದ್ದಾನೆ. ಹೀಗಾಗಿ ಅವರ ನಡುವೆ ತೀವ್ರ ವಾಗ್ವಾದ ನಡೆಯಿತು. ಇದೇ ಕೋಪದಲ್ಲಿ ದುಷ್ಕರ್ಮಿಗಳು ದಿನಸಿ ಅಂಗಡಿಗೆ ಬೆಂಕಿ ಹಚ್ಚಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ಅಕ್ಟೋಬರ್ 31ರ ಸಂಜೆ ಸತ್ನಾ ಜಿಲ್ಲೆಯಲ್ಲಿ ದಿಡೌಂಡ್ ಗ್ರಾಮದಲ್ಲಿ ದಿನಸಿ ಅಂಗಡಿ ಮಾಲಿಕರಾದ ಪ್ರಿಯಾಂಕಾ ಕಿರಣ ಅವರು ಇಬ್ಬರು ಗ್ರಾಹಕರಿಗೆ ಸಾಲವಾಗಿ ವಸ್ತು ನೀಡಲು ನಿರಾಕರಿಸಿದ್ದ ಕಾರಣ ಅವರ ನಡುವೆ ದೊಡ್ಡ ವಾಗ್ವಾದವೇ ಆಗಿದೆ. ಸುಮಾರು ಹೊತ್ತಿನ ಬಳಿಕ ಆರೋಪಿಗಳು ಸಿಟ್ಟಿನಿಂದ ಅಂಗಡಿಗೆ ಪೆಟ್ರೋಲ್ ಸುರಿದಿದ್ದಾರೆ ಆಗ ಅಂಗಡಿ ಮಾಲಿಕರು ಅಂಗಡಿ ಒಳಗೆ ಇದ್ದರು ಕೂಡ ನೋಡ ನೋಡುತ್ತಿದ್ದಂತೆ ಬೆಂಕಿ ಹಚ್ಚಿದರು. ಕೆಲವೇ ನಿಮಿಷಗಳಲ್ಲಿ, ಇಡೀ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಸದ್ಯ ಈ ಘಟನೆ ಸಂಬಂಧಿಸಿದಂತೆ ಕೋಥಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಚಾ ತ್ರಿವೇದಿ ಮತ್ತು ಕೃಷ್ಣ ತ್ರಿವೇದಿ ಎಂದು ಗುರುತಿಸಲಾಗಿದೆ.
ದಿನಸಿ ವಸ್ತುಗಳ ಮೇಲೆ ಹಾಗೂ ದೀಪಾವಳಿಯ ಪಟಾಕಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಕಾರಣ ಪಟಾಕಿ ಸ್ಫೋಟವಾಗಿ ಇಡೀ ಅಂಗಡಿಯೇ ಅಗ್ನಿಗೆ ಆಹುತಿಯಾಗಿದೆ. ಇದನ್ನು ಕಂಡ ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಧಾವಿಸಿದ್ದಾರೆ. ಘಟನೆಯ ವೇಳೆಯಲ್ಲಿ ಅಂಗಡಿ ಮಾಲಿಕ ಅಂಗಡಿಯೊಳಗಿದ್ದು ಆತನನ್ನು ರಕ್ಷಿಸಲಾಗಿದೆ. ಬೆಂಕಿಯಿಂದ ಅಂಗಡಿ ಮಾಲಿಕನಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಹೀಗಾಗಿ ಅವರನ್ನು ಕೋಥಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಆದರೆ ಅಲ್ಲಿ ಹೆಚ್ಚಿನ ಚಿಕಿತ್ಸೆ ವ್ಯವಸ್ಥೆ ಇಲ್ಲದ ಕಾರಣ ಸತ್ನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅವರು ಪ್ರಸ್ತುತ ಸತ್ನಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರ ವಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆ ಆಗಿ ಕೆಲವೇ ಹೊತ್ತಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಸ್ಥಳದಿಂದ ಸುಟ್ಟ ವಸ್ತುಗಳು ಮತ್ತು ಪೆಟ್ರೋಲ್ ಬಾಟಲಿಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ, ಬೆಂಕಿ ಹಚ್ಚಿ ದಾಂದಲೆ, ಜೀವ ಬೆದರಿಕೆ ಗಳಂತಹ ಗಂಭೀರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರೂ ಆರೋಪಿಗಳು ಈ ಹಿಂದೆಯೇ ಅಪರಾಧಿ ಕೃತ್ಯ ಮಾಡಿದವರಾಗಿದ್ದು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.