ಗಾಂಧಿನಗರ, ಮಾ. 8: ಗುಜರಾತ್ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಪೂಜೆಯ ನಂತರ ಕುಟುಂಬವೊಂದು ಆಕಸ್ಮಿಕವಾಗಿ, ಕೈ ತಪ್ಪಿ ಬರೋಬ್ಬರಿ 2 ಲಕ್ಷ ರುಪಾಯಿ ನಗದು ಕಾಲುವೆಗೆ ಎಸೆದಿದೆ. ನೀರಿಗೆ ಹಣದ ಕಂತೆ ಬಿದ್ದ ಬಳಿಕ ಕುಟುಂಬಕ್ಕೆ ತನ್ನ ತಪ್ಪಿನ ಅರಿವಾಗಿದ್ದು, ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದೆ. ಕಾಲುವೆಗೆ ಹಾರಿ ಅಗ್ನಿ ಶಾಮಕ ದಳದ ಸಿಬ್ಬಂದಿ ಕೊನೆಗೂ ಹಣವನ್ನು ಮರಳಿಸುವಲ್ಲಿ ಯಶಸ್ವಿಯಾಗಿದೆ. ಸೂರತ್ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೊ ವೈರಲ್ (Viral Video) ಆಗಿದೆ.
ಸೂರತ್ನ ಪೂನಾ ರೋಡ್ ಪ್ರದೇಶದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಪೂಜೆ ಎಲ್ಲ ಮುಗಿದ ಬಳಿಕ ಆಚರಣೆಯ ಭಾಗವಾಗಿ ಕುಟುಂಬಸ್ಥರು ಕಾಲುವೆ ಬಳಿಗೆ ತೆರಳಿದಾಗ ಈ ಅನಾಹುತ ನಡೆದಿದೆ. ಪೂನಾಗಂ ರೋಡ್ನ ನಿಜಾನಂದ ಸೊಸೈಟಿಯಲ್ಲಿ ವಾಸವಾಗಿರುವ ಲಿಂಬಾ ಕುಟುಂಬಸ್ಥರಿಂದ ಈ ಎಡವಟ್ಟು ನಡೆದು ಕೈ ಕೈ ಹಿಸುಕಿಕೊಳ್ಳುವಂತಾಯಿತು.
ಘಟನೆ ವಿವರ
ಲಿಂಬಾ ಕುಟುಂಬಸ್ಥರು ಪೂನಾ ರೋಡ್ನಲ್ಲಿ ಇತ್ತೀಚೆಗೆ ಪೂಜೆ ನೆರವೇರಿಸಿತ್ತು. ಧಾರ್ಮಿಕ ವಿಧಿ ವಿಧಾನಗಳ ಬಳಿಕ ಆಚರಣೆಯ ಭಾಗವಾಗಿ ಕುಟುಂಬಸ್ಥರು ಪೂಜಾ ಸಾಮಗ್ರಿ ಮತ್ತು ಪೂಜೆಗೆ ಬಳಿಸಿದ ಹೂವನ್ನು ನೀರಿಗೆ ಎಸೆಯಲು ಕಾಲುವೆ ಬಳಿಗೆ ತೆರಳಿದ್ದರು.
ವೈರಲ್ ವಿಡಿಯೊ ನೋಡಿ:
ಅದರಂತೆ ಆ ವಸ್ತುಗಳನ್ನು ಕಾಲುವೆಗೆ ಎಸೆದಿದ್ದಾರೆ. ಅಲ್ಲಿಯ ತನಕ ಎಲ್ಲವೂ ಸರಿಯಾಗಿತ್ತು. ಇನ್ನೇನು ಮನೆಗೆ ಹಿಂದಿರುಗಬೇಕು ಎನ್ನುವಷ್ಟರಲ್ಲಿ ಅವರಿಗೆ ಸುಮಾರು 2 ಲಕ್ಷ ರುಪಾಯಿಯ ಬಂಡಲ್ ಕೂಡ ನೀರಿಗೆ ಬಿದ್ದಿರುವ ವಿಚಾರ ಗೊತ್ತಾಯಿತು. ಮನೆಯಲ್ಲಿ, ಕಪಾಟಿನೊಳಗೆ ಇಟ್ಟಿದ್ದ ನಗದು ಆಕಸ್ಮಿಕವಾಗಿ, ಕಣ್ತಪ್ಪಿ ಕಾಲುಗೆವೆಗೆ ಎಸೆಯುವ ವಸ್ತುವಿನೊಂದಿಗೆ ಸೇರಿಕೊಂಡಿತ್ತು. ನೂರಾರಲ್ಲ, ಒಂದೆರಡು ಸಾವಿರವಲ್ಲ, ಬರೋಬ್ಬರಿ 2 ಲಕ್ಷ ರುಪಾಯಿ ನೀರು ಪಾಲಾಗಿದ್ದು ಕಂಡು ಕುಟುಂಬಸ್ಥರ ಎದೆ ಒಂದುಕ್ಷಣ ಧಸಕ್ಕೆಂದಿದೆ. ಎಷ್ಟೋ ವರ್ಷಗಳ, ದಿನಗಳ ಶ್ರಮ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.
ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಕೂಡಲೇ ಎಚ್ಚೆತ್ತ ಕುಟುಬಸ್ಥರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ದಂಭಾಲ್ ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಲೇ ಧಾವಿಸಿ ನೀರಿಗೆ ಧುಮುಕಿ ಹಣಕ್ಕಾಗಿ ಶೋಧ ಕಾರ್ಯ ಆರಂಭಿಸಿದರು. ಈ ಬಗ್ಗೆ ಅಧಿಕಾರಿ ಸುನಿಲ್ ಚೌಧರಿ ಮಾಹಿತಿ ನೀಡಿ, ʼʼವಿಷಯ ತಿಳಿದ ಕೂಡಲೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾಲುವೆಗೆ ಇಳಿದು ಹುಡುಕಾಟ ಆರಂಭಿಸಿದರು. ಹರಿಯುವ ನೀರಿನಲ್ಲಿ ಹುಡುಕಾಟ ನಡೆಸುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿತ್ತು. ಅಂತೂ ನಿರಂತರ ಶ್ರಮದ ಬಳಿಕ ನಮ್ಮ ಸಿಬ್ಬಂದಿ 500 ರುಪಾಯಿ ನೋಟ್ನ ಒಟ್ಟು 2 ಲಕ್ಷ ರುಪಾಯಿ ಪತ್ತೆ ಹಚ್ಚಿತುʼʼ ಎಂದು ತಿಳಿಸಿದರು.
ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲೇ ಹೊತ್ತುಕೊಂಡು ಕ್ಲಿನಿಕ್ಗೆ ಬಂದ ತಾಯಿ ಶ್ವಾನ
ನಿಟ್ಟಿಸಿರು ಬಿಟ್ಟ ಲಿಂಬಾ ಕುಟುಂಬ
ನೀರಿನಿಂದ ಹೊರತೆಗೆದು ಹಣದ ಬಂಡಲ್ ಅನ್ನು ಅಗ್ನಿ ಶಾಮದ ದಳದ ಸಿಬ್ಬಂದಿ ಲಿಂಬಾ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಆ ಮೂಲಕ ಲಿಂಬಾ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಾರ್ಯಾಚರಣೆ ವೇಳೆ ನೀರಿನಲ್ಲಿದ್ದ ಗಾಜು ತಾಗಿ ಇಬ್ಬರು ಅಗ್ನಿ ಶಾಮಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ. ʼಕಸವೇ ಆಗಿದ್ದರೂ ಅದನ್ನು ಹೊರಗೆಸೆಯುವ ಮುನ್ನ ಪರಿಶೀಲಿಸಬೇಕುʼ ಎನ್ನುವ ಮಾತಿದೆ. ವೈರಲ್ ವಿಡಿಯೊ ನೋಡಿದ ಅನೇಕರು ನೆಟ್ಟಿಗರು ಈ ಮಾತನ್ನು ನೆನಪಿಸಿಕೊಂಡಿದ್ದಾರೆ.