ಲಖನೌ, ಏ.1: ಇತ್ತೀಚೆಗೆ ಆಹಾರದಲ್ಲಿ ಕಲಬೆರಕೆ ವಸ್ತುಗಳು ಹೆಚ್ಚುತ್ತಿವೆ. ಕಳಪೆ ಆಹಾರ, ಆಹಾರ ತಯಾರಿಸುವಾಗ ನೈರ್ಮಲ್ಯದ ಕೊರತೆ ತೀವ್ರ ಆತಂಕ ಮೂಡಿಸಿದೆ. ಈ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ (Vande Bharat Express) ಕಳಪೆ ಮಟ್ಟದ ಆಹಾರ ನೀಡಲಾಗಿದೆ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ. ರೈಲಿನಲ್ಲಿ ಆಹಾರ ಸೇವಿಸಿದ ಬಳಿಕ ತೀವ್ರ ಅಲರ್ಜಿ ಉಂಟಾಗಿದೆ ಎಂದು ದೂರಿದ್ದಾರೆ. ಅಲ್ಲದೆ ತಮ್ಮ ಎರಡು ವರ್ಷದ ಮಗನೂ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಿದ ನಂತರ ಪ್ರಯಾಣಿಕರೊಬ್ಬರು ನೀಡಿದ ಆತಂಕಕಾರಿ ದೂರು ಭಾರತೀಯ ರೈಲುಗಳಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ಮತ್ತೆ ಕಳವಳ ಮೂಡುವಂತೆ ಮಾಡಿದೆ. ರೈಲು ಪ್ರಯಾಣದಲ್ಲಿ ಊಟವನ್ನು ಸೇವಿಸಿದ ನಂತರ ತನಗೆ ಗಂಭೀರ ಅಲರ್ಜಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
ಘಟನೆ ವಿವರ
ಮಾರ್ಚ್ 27ರಂದು ಉತ್ತರ ಪ್ರದೇಶದ ವಾರಣಾಸಿಯಿಂದ ದಿಯೋಘರ್ಗೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 22500ರ ಕೋಚ್ E1ರಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು. ಅವರು ಹೇಳಿಕೊಂಡಂತೆ ವಿಮಾನದಲ್ಲಿ ನೀಡಿದ ಊಟವನ್ನು ಸೇವಿಸಿದ ಕೂಡಲೇ ಅವರಿಗೆ ತೀವ್ರ ಅಲರ್ಜಿಯ ಉಂಟಾಯಿತು. ಪ್ರಯಾಣದ ಸಮಯದಲ್ಲಿ ತನ್ನ ಎರಡು ವರ್ಷದ ಮಗ ಕೂಡ ಅನಾರೋಗ್ಯಕ್ಕೆ ಒಳಗಾಗಿ ಅತಿಸಾರ ಸಮಸ್ಯೆ ಎದುರಿಸಿದ ಎಂದು ಹೇಳಿದ್ದಾರೆ.
ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್ ಇನ್ಫ್ಲುಯೆನ್ಸರ್?
ಆನ್ಲೈನ್ನಲ್ಲಿ ಈ ವಿವರವನ್ನು ಹಂಚಿಕೊಂಡ ಅವರು, ವೈದ್ಯರ ಪ್ರಿಸ್ಕ್ರಿಪ್ಷನ್ ಜತೆಗೆ ಊದಿಕೊಂಡ ತುಟಿಗಳನ್ನು ತೋರಿಸಿದ್ದಾರೆ. ರೈಲಿನಲ್ಲಿ ನೀಡಲಾಗುವ ಕುಡಿಯುವ ನೀರಿನ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅದು ಅಸಾಮಾನ್ಯ ರುಚಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವಂದೇ ಭಾರತ್ ರೈಲಿನಲ್ಲಿ ಬಡಿಸಿದ ಮೊಸರಿನ ಪ್ಯಾಕೆಟ್ ಒಳಗೆ ಹುಳುಗಳು ಪತ್ತೆಯಾಗಿವೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದರು. ಇದೀಗ ಅಲರ್ಜಿಯ ಪ್ರಕರಣ ವರದಿಯಾಗಿರುವುದು ಪ್ರಯಾಣಿಕರಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಮತ್ತಷ್ಟು ಆತಂಕ ಮೂಡಿದೆ.