ಲಖನೌ, ಜೂ. 6: ಅಯೋಧ್ಯೆಯ ಸಾರ್ವಜನಿಕ ಉದ್ಯಾನವನವೊಂದರಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇಸರಿ ಉಡುಪು ಧರಿಸಿದ್ದ ಪುರುಷರ ಗುಂಪೊಂದು ಯುವ ಜೋಡಿಯನ್ನು ಅಟ್ಟಾಡಿಸಿ ಹೊಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಹಲ್ಲೆಯ ಘಟನೆ ನಡೆದಿರುವ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊದಲ್ಲಿ (Viral News) ಸಂತರ ಉಡುಪಿನಲ್ಲಿರುವ ನಾಲ್ವರು ಪುರುಷರು ಉದ್ಯಾನವನದೊಳಗೆ ಕುಳಿತಿದ್ದ ಯುವಕ ಮತ್ತು ಯುವತಿಯನ್ನು ಅಟ್ಟಾಡಿಸುತ್ತಿರುವುದು ಸೆರೆಯಾಗಿದೆ.
ಅಯೋಧ್ಯೆಯ ತುಳಸಿ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಯುವಕ- ಯುವತಿ ಇಬ್ಬರು ಉದ್ಯಾನವನದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಸಾಧುಗಳ ವೇಷದಲ್ಲಿದ್ದ ನಾಲ್ವರು ಪುರುಷರು ಇವರನ್ನು ಪ್ರಶ್ನಿಸಿದ್ದಾರೆ. ಬಳಿಕ ಇವರ ನಡುವೆ ಮಾತಿನ ಚಕಮಕಿ ನಡೆದಿದ್ದು ಕೇಸರಿ ಉಡುಪು ಧರಿಸಿದ್ದ ಪುರುಷರು ಈ ಜೋಡಿ ಮೇಲೆ ಹಲ್ಲೆ ನಡೆಸಿದೆ.
ವಿಡಿಯೊ ನೋಡಿ:
ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಜೋಡಿ ಉದ್ಯಾನವನದ ಮುಖ್ಯ ದ್ವಾರದ ಕಡೆಗೆ ಓಡಿಹೋಗಲು ಪ್ರಯತ್ನಿಸಿದೆ. ಅದಾಗ್ಯೂ ದಾಳಿಕೋರರು ಅವರನ್ನು ಬೆನ್ನಟ್ಟಿದ್ದು ಆವರಣದ ಹೊರಗೆಯೂ ಸರಿಯಾಗಿ ಥಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಉದ್ಯಾನವನದಿಂದ ಹೊರಬಂದ ನಂತರವೂ ಯುವಕನ ಮೇಲೆ ಪದೇ ಪದೆ ಹಲ್ಲೆ ನಡೆದಿದೆ.
ವೇದಿಕೆಯಲ್ಲೇ ಆ್ಯಂಕರ್ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ
ದಾಳಿಕೋರರು ಯುವತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿದ್ದರೂ, ಪಕ್ಕದಲ್ಲಿ ಇದ್ದ ಯಾರೂ ಕೂಡ ಸಹಾಯಕ್ಕೆ ಧಾವಿಸಿಲ್ಲ. ಕೆಲವರು ತಮ್ಮ ಫೋನ್ಗಳಲ್ಲಿ ಈ ಘಟನೆಯನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ವಿಡಿಯೊ ಕಾಣಿಸಿಕೊಂಡ ಸಮಯದಲ್ಲಿ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲವಾದರೂ, ದೃಶ್ಯಗಳನ್ನು ಗಮನಿಸಿದ ನಂತರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಸದ್ಯ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತರನ್ನು ಧರ್ಮೇಂದ್ರ ದಾಸ್ ಮತ್ತು ಗುಂಕೇಶ್ ತಿವಾರಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಗೊಂಡಾ ಪ್ರದೇಶದವರು ಆಗಿದ್ದು, ಶಿಕ್ಷಣಕ್ಕಾಗಿ ಅಯೋಧ್ಯೆಗೆ ಆಗಮಿಸಿದ್ದಾರೆ ಎನ್ನಲಾಗಿದೆ. ವಿಚಾರಣೆ ವೇಳೆ, ʼʼಜೋಡಿಯು ಉದ್ಯಾನವನದಲ್ಲಿ ಅಶ್ಲೀಲವಾಗಿ ವರ್ತಿಸುತ್ತಿತ್ತು. ಹೀಗಾಗಿ ಹಲ್ಲೆ ಎಸಗಿದ್ದೇವೆʼʼ ಎಂದು ಪ್ರತಿಕ್ರಿಯಿಸಿದ್ದಾನೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೆಟ್ಟಿಗರೊಬ್ಬರು, ʼʼಏನೇ ಮಾಡಿದ್ದರೂ ಈ ರೀತಿಯಾಗಿ ಹಲ್ಲೆ ನಡೆಸುವುದು ತಪ್ಪುʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.