ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ಸುಳಿವು ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ
ಸಿಎಂ ಸ್ಥಾನದ ನಿರೀಕ್ಷೆಯಲ್ಲಿರುವ ರಾಜ್ಯ ಬಿಜೆಪಿ ನಾಯಕರಿಗೆ ದಿಗಿಲು
ದಿಲ್ಲಿಯತ್ತ ಎಲ್ಲರ ಚಿತ್ತ
ಬೆಂಗಳೂರು: ರಾಜ್ಯ ರಾಜಕಾರಣದತ್ತ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚುನಾವಣೆಗೆ ಮುಂಚಿತವಾಗಿಯೇ ಮುಖ ಮಾಡಿರುವುದರಿಂದ ರಾಜ್ಯ ಬಿಜೆಪಿಯಲ್ಲಿ ಅಯೋಮಯ ಪರಿಸ್ಥಿತಿ ಏರ್ಪಟ್ಟಿದೆ. ಅಂಬೇಡ್ಕರ್ ದಿನಾಚರಣೆ ಪ್ರಯುಕ್ತ ಜೆಡಿಎಸ್ ಕಚೇರಿಯಲ್ಲಿ ಮೂರನೇ ಬಾರಿ ಮುಖ್ಯ ಮಂತ್ರಿ ಕನಸು ಬಿಚ್ಚಿಟ್ಟಿದ್ದಾರೆ ಕುಮಾರಸ್ವಾಮಿ.
ಇದೇ ವೇಳೆ ಮುಂದಿನ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ರಚನೆಯಾಗಲಿದ್ದು, ಮುಖ್ಯ ಮಂತ್ರಿಯನ್ನು ಪ್ರಧಾನಿ ಮೋದಿ ತೀರ್ಮಾನಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿರುವುದು ಎಚ್ಡಿಕೆ ರಾಜ್ಯ ರಾಜಕಾರಣದ ಸಮೀಕರಣಕ್ಕೆ ಒತ್ತು ನೀಡಿದೆ.
ರಾಜ್ಯ ಬಿಜೆಪಿ ನಾಯಕರು ಪಕ್ಷ ಸಂಘಟನೆ ಮಾಡಿ, ಮುಂದಾಳತ್ವ ವಹಿಸಿಕೊಂಡರೂ ರಾಜ್ಯದಲ್ಲಿನ ತೀರ್ಮಾನ ದೆಹಲಿಯ ಫರ್ಮಾನಿನಂತೆ ಇರುತ್ತದೆ. ಹೀಗಾಗಿ ಮುಂದಿನ ಬಾರಿ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಸಿದ್ಧ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ಹೋರಾಟ ಮಾಡುವ ಉದ್ದೇಶದಿಂದಲೇ ಇನ್ನು ಮುಂದೆ ವಾರದಲ್ಲಿ ಎರಡು ದಿನ ಕರ್ನಾಟಕದ ಇರುತ್ತೇನೆ. ಪಕ್ಷವನ್ನು ಸಂಘಟನೆ ಮಾಡುತ್ತೇನೆ. ನಾನು ಸುಮ್ಮನೆ ಇರುವ ಹಾಗಿಲ್ಲ. ಜನರ ಪರವಾಗಿ ದನಿ ಎತ್ತಬೇಕಾಗಿದೆ ಎಂದು ಎಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: HD Kumaraswamy: ಒಂದು ಬಾರಿ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದ ಗ್ರಹಣ ಮುಕ್ತಿ: ಎಚ್ಡಿ ಕುಮಾರಸ್ವಾಮಿ
ಕುಮಾರಸ್ವಾಮಿ ಹೇಳಿಕೆಯಿಂದ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರಿಗೆ ಅಪಾಯದ ವಾಸನೆ ಬಡಿದಿದೆ. ಇದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನೊಳಕ್ಕೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಲೂ ಬಹುದು. ಒಂದು ವೇಳೆ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ, ಬಿಜೆಪಿಯ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ರೊಚ್ಚಿಗೇಳಬಹುದು. ಅವರನ್ನೆಲ್ಲ ಹೇಗೆ ಸಂಬಾಳಿಸಲಾಗುತ್ತದೆ ಎಂಬ ಕುತೂಹಲವುಂಟಾಗಿದೆ.
ನಾವು ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಒಳ್ಳೇದು: ಅಲ್ಲದೇ ಕಾಂಗ್ರೆಸ್ ಸರಕಾರದಿಂದ ರಾಜ್ಯಕ್ಕೆ ಒಳ್ಳೆಯದು ಆಗುವುದಿಲ್ಲ. ನಾವು ಅಧಿಕಾರದಲ್ಲಿದ್ದಾಗ ಮಾತ್ರ ಈ ರಾಜ್ಯಕ್ಕೆ ಒಳ್ಳೆಯದಾಗಿದೆ. ಹೀಗಾಗಿ ಮುಂದೆ ನಾವು ಜನರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸ ಬೇಕಾಗಿದೆ. ಮಹಿಳಾ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದರೆ ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಮೋದಿಯವರ ನಾಯಕತ್ವದಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕೊಡಲಾಗುತ್ತಿದೆ. ಅಲ್ಲದೆ ಕ್ಷೇತ್ರಗಳ ಮರು ವಿಂಗಡಣೆ ನಂತರ ರಾಜ್ಯದಲ್ಲಿ 42 ಲೋಕಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿವೆ. ಈ 42 ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ದೊರೆಯಲಿದ್ದು, ನಮ್ಮ ಪಕ್ಷದಲ್ಲಿ ಮಹಿಳಾ ಕಾರ್ಯಕರ್ತರಿಗೆ ಹೆಚ್ಚಿನ ಉತ್ತೇಜನ ಕೊಡಲಿದ್ದೇವೆ.
ಬಿಜೆಪಿಯವರು ಮಹಾ ಸುಳ್ಳುಗಾರರು ಎಂದು ಮುಖ್ಯಮಂತ್ರಿ ಭಾಷಣ ಮಾಡುತ್ತಾರೆ. ಆದರೆ, ಇವರು ಎಷ್ಟು ಸುಳ್ಳುಗಳು ಹೇಳಿದ್ದಾರೆ ಎಂಬುದು ಗೊತ್ತಿದೆ. ಯಾರು ಸುಳ್ಳುಗಾರರು ಎಂದು ಸಿದ್ದರಾಮಯ್ಯ ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಸರಕಾರದ ವಿರುದ್ದ ಈಗಲೇ ತಿರುಗಿ ಬಿದ್ದಿದ್ದಾರೆ.
ಇನ್ನು ಚುನಾವಣೆಯಲ್ಲಿ ಮೈತ್ರಿ ಎದುರಾದರೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯು ತನ್ನ ನೆಲೆ ಯನ್ನು ಬಿಟ್ಟುಕೊಡಬೇಕಾಗಬಹುದು. ರಾಜ್ಯ ಬಿಜೆಪಿಯಲ್ಲಿ ಕೆಲ ಗೊಂದಲಗಳಿದ್ದರೂ ಪಕ್ಷ ಸಂಘಟಿಸುವಲ್ಲಿ ಪ್ರಮುಖ ನಾಯಕರು ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಮೈತ್ರಿಯಾದರೆ ಚುನಾವಣಾ ಸಮಯದಲ್ಲಿ ಕೆಲವು ಸಮಸ್ಯೆಗಳಾಗಬಹುದು, ಕ್ಷೇತ್ರ ಮರುವಿಂಗಡಣೆಯಾದರೂ ಕೂಡ ಜೆಡಿಎಸ್ಗೆ ಹಲವು ಕ್ಷೇತ್ರಗಳನ್ನು ಬಿಟ್ಟುಕೊಡಬೇಕಾಗುತ್ತದೆ.
ಹೀಗಾಗಿ ಬಿಜೆಪಿಯ ಬಲ ಕಡಿಮೆಯಾಗಬಹುದು. ಮೈತ್ರಿ ಚುನಾವಣೆಯಲ್ಲಿ ಕೆಲವೇ ಸ್ಥಾನಗಳನ್ನು ಪಡೆದರೂ ಒಟ್ಟಾರೆ ಪ್ರಮುಖ ಹುದ್ದೆಗಳು ಜೆಡಿಎಸ್ʼಗೆ ಒಲಿಯಬಹುದು. ಇದರ ಸುಳಿವರಿತೇ ಕುಮಾರಸ್ವಾಮಿ ಇನ್ನು ಮುಂದೆ ಕರ್ನಾಟಕದಲ್ಲಿ ಹೆಚ್ಚಾಗಿ ಕಳೆಯುವ ಮಾತನಾಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
2 ದಿನ ರಾಜ್ಯ ಪ್ರವಾಸ
ಕೇಂದ್ರ ಸಚಿವರಾದ ಬಳಿಕ ಕುಮಾರಸ್ವಾಮಿ ಅವರು ಬಹುಪಾಲು ಸಮಯವನ್ನು ದೆಹಲಿ ಯಲ್ಲಿಯೇ ಕಳೆಯುತ್ತಿದ್ದರು. ಆದರೆ ಚುನಾವಣೆಗೆ ಎರಡು ವರ್ಷ ಬಾಕಿಯಿರುವುದರಿಂದ, ಈಗಿನಿಂದಲೇ ತಯಾರಿ ಆರಂಭಿಸುವ ಮನ್ಸೂಚನೆ ನೀಡಿದ್ದಾರೆ. ಇದರ ಭಾಗವಾಗಿ, ಮೂರನೇ ಬಾರಿಗೆ ಸಿಎಂ ಆಗುವುದು ಜನರ ಕೈಯಲ್ಲಿದೆ ಎನ್ನುವ ಜತೆಜತೆಗೆ ಮುಂದಿನ ದಿನದಲ್ಲಿ ವಾರದಲ್ಲಿ ಎರಡು ದಿನ ಕರ್ನಾಟಕದಲ್ಲಿಯೇ ಇರುವುದಾಗಿ ಹೇಳಿದ್ದಾರೆ.
![]()
2028ಕ್ಕೆ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಯಾವ ಅನುಮಾನವಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ನಿತಿನ್ ನವೀನ್ ಅವರು ನಿರ್ಧರಿಸುತ್ತಾರೆ. ನಮಗೆ ಅಧಿಕಾರಕ್ಕೆ ಬರುವುದೇ ಮುಖ್ಯ. ಜತೆಗೆ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರಕಾರ ತೊಲಗುವುದು ಮುಖ್ಯ.
-ಆರ್.ಅಶೋಕ, ಪ್ರತಿಪಕ್ಷ ನಾಯಕ