ಬಜೆಟ್ ಮಂಡಿಸಲು ಸಿದ್ಧವಾಗಿರುವ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಕೈಕೊಡುವ ಹೆದರಿಕೆ
ರಾಮ್ಜಿಗೆ ಹೆಚ್ಚುವರಿ 4000 ಕೋ.ರು. ಬೇಕು
ಜಿಎಸ್ಟಿ ಇಳಿಕೆ: 9000 ಕೋ.ರು. ನಷ್ಟ
ಬೆಂಗಳೂರು: ಅನುದಾನದ ಕೊರತೆ ವಿಷಯ ಬಂದಾಗಲೆಲ್ಲ ಕೇಂದ್ರದತ್ತ ಬೊಟ್ಟು ಮಾಡುವ ಕರ್ನಾಟಕ ಸರಕಾರದ ಬಜೆಟ್ಗೆ ಇನ್ನೊಂದು ದಿನ ಬಾಕಿಯಿದ್ದು, ಕೇಂದ್ರದಿಂದ ಬರಬೇಕಿರುವ ಅನುದಾನದಲ್ಲಿನ ಖೋತಾ ಹಾಗೂ ಕೇಂದ್ರ ಸರಕಾರಿ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಹೊಂದಿಸಬೇಕಾದ ಇಕ್ಕಟ್ಟಿನಲ್ಲಿ ಸರಕಾರ ಸಿಲುಕುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 17ನೇ ಬಜೆಟ್ ಮಂಡಿಸಲು ಇನ್ನೊಂದು ದಿನ ಬಾಕಿಯಿದೆ. ಈ ಬಾರಿ 4.50 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಮಂಡಿಸಿದರೂ, ಇದರಲ್ಲಿ ಕೇಂದ್ರದಿಂದ ಬರಬೇಕಿರುವ ಅನುದಾನಗಳನ್ನೂ ಸೇರಿಸ ಲಾಗಿದೆ.
ಒಂದು ವೇಳೆ ಕೇಂದ್ರದಿಂದ ಸೂಕ್ತ ಅನುದಾನ ಹಂಚಿಕೆಯಾಗದಿದ್ದರೆ, ರಾಜ್ಯ ಸರಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸರಕಾರ ಕೈಗೊಂಡಿರುವ ಜಿಎಸ್ಟಿ ಇಳಿಕೆಯಿಂದ ಸರಕಾರಕ್ಕೆ ಬರಬೇಕಿದ್ದ ಅನುದಾನದಲ್ಲಿ ಸುಮಾರು 9000 ಕೋಟಿ ರು. ಖೋತಾ ಆಗಲಿದೆ.
16ನೇ ಹಣಕಾಸು ಆಯೋಗದಿಂದ ನಿರೀಕ್ಷಿಸಿದಷ್ಟು ಅನುದಾನ ಹಂಚಿಕೆಯಾಗಿಲ್ಲ. ರಾಮ್ ಜಿ ಯೋಜನೆಯಲ್ಲಿ ರಾಜ್ಯ ಸರಕಾರದ ಪಾಲುದಾರಿಕೆಯನ್ನು ಗಣನೀಯವಾಗಿ ಏರಿಸಿರು ವುದು ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನೂ ಓದಿ: Karnataka Budget 2026: ರಾಜ್ಯ ಬಜೆಟ್ ದಿನಾಂಕ ಸದ್ಯದಲ್ಲಿಯೇ ನಿಗದಿ: ಸಿಎಂ ಸಿದ್ದರಾಮಯ್ಯ
ಮನರೇಗಾ ಬದಲಿಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ವಿಬಿ ರಾಮ್ ಜಿ ಯೋಜನೆ ಯಿಂದ ರಾಜ್ಯ ಸರಕಾರಗಳಿಗೆ ಹೆಚ್ಚುವರಿ ಅನುದಾನ ಅಗತ್ಯ. ಕಾಂಗ್ರೆಸ್ ನಾಯಕರು, ಈ ಯೋಜನೆ ಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುತ್ತಿದ್ದರೂ, ಕಾನೂನಾತ್ಮಕವಾಗಿ ಕಾಯಿದೆ ಯನ್ನು ಹಿಂಪಡೆಯದ ಹೊರತು ಈ ಯೋಜನೆಗೆ ಅನುದಾನ ನೀಡದೇ ಇರಲು ಸಾಧ್ಯ ವಿಲ್ಲ. ಈ ಹಿಂದೆ ಕೇಂದ್ರ ಹಾಗೂ ರಾಜ್ಯ ಶೇ.90:10 ಅನುಪಾನದಲ್ಲಿ ಅನುದಾನ ನೀಡಬೇಕಿತ್ತು. ಆದರೀಗ 60:40 ಅನುಪಾತದಲ್ಲಿ ನೀಡಲಾಗಿದೆ. ಆದ್ದರಿಂದ ಹೊಸ ಕಾಯಿದೆ ಯಂತೆ ಹೆಚ್ಚುವರಿ 3000-4000 ಕೋಟಿ ರು. ಹೊರೆ ಬೀಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ಮೂರು ಸಾವಿರ ಕೋಟಿ ರು. ಅನುದಾನ ಹೊಂದಿಸುವುದು ಸವಾಲಿನ ಕೆಲಸ ಎನ್ನಲಾಗುತ್ತಿದೆ.
ಕೃಷ್ಣಾ ಯೋಜನೆಯ ಭಾಗ
ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಅಗತ್ಯವಿರುವ 18 ಸಾವಿರ ಕೋಟಿ ರು.ಗಳನ್ನು ಯಾವ ರೀತಿ ಹೊಂದಿಸಲಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿದೆ. ಸದ್ಯ ಆಂಧ್ರಪ್ರದೇಶ ಸರಕಾರ ಇದಕ್ಕೆ ಅಕ್ಷೇಪ ಸಲ್ಲಿಸಿದೆ. ಆಕ್ಷೇಪಣೆ ಸಲ್ಲಿಸಿದೆ ಎನ್ನುವ ಕಾರಣಕ್ಕೆ, ಅನುದಾನ ಮೀಸಲಿಡದಿದ್ದರೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಆದ್ದರಿಂದ ಅನುದಾನ ಮೀಸಲಿಡುವ ಅನಿವಾರ್ಯತೆಯಲ್ಲಿ ಸರಕಾರವಿದೆ. ಸರಕಾರ ಹೆಚ್ಚುವರಿಯಾಗಿ ಒಟ್ಟು 21 ಸಾವಿರ ಕೋಟಿ ರು. ಕ್ರೋಢೀಕರಿಸಬೇಕಿದೆ.
ಜಿಎಸ್ಟಿ ಪೆಟ್ಟು
ಕೇಂದ್ರದ ಜಿಎಸ್ಟಿ 2.0ದಿಂದಾಗಿ ಎಲ್ಲ ರಾಜ್ಯಗಳ ಆದಾಯದ ಮೇಲೆ ಹೊಡೆತ ಬೀಳುತ್ತಿದೆ. ಕರ್ನಾಟಕಕ್ಕೆ ಜಿಎಸ್ಟಿ ಸರಳೀಕರಣದಿಂದ ಸುಮಾರು 9000 ಕೋಟಿ ರು. ನಷ್ಟವಾಗಲಿದೆ ಎನ್ನುವುದನ್ನು ಈಗಾಗಲೇ ಸರಕಾರ ಒಪ್ಪಿಕೊಂಡಿದೆ. ಆದ್ದರಿಂದ ರಾಜಸ್ವ ಸ್ವೀಕೃತಿಯಲ್ಲಿ ಬಹುಪಾಲು ಜಿಎಸ್ಟಿ ತೆರಿಗೆ ಮೇಲೆ ಆಧರಿಸಿದ್ದ ಸರಕಾರಕ್ಕೆ ಪೆಟ್ಟು ಬಿದ್ದಿದೆ. ಜಿಎಸ್ಟಿ ಸರಳೀಕರಣದ ಬಳಿಕ ಕರ್ನಾಟಕದ ಜಿಎಸ್ಟಿ ಬೆಳವಣಿಗೆ ಶೇ.12ರಿಂದ ಶೇ 5ಕ್ಕೆ ಇಳಿಕೆಯಾಗಿವೆ.