ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ...

‘ಹದಿಮೂರ್ ಹದಿನೇಳ್ಲ ಎಷ್ಟು?’ ಎಂದು ಕೇಳಿದರೆ ಬೆಚ್ಚಿ ಬಿದ್ದು ಕಾಲ್ಕ್ಯುಲೇಟರ್‌ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ, ಈಗ ಅದನ್ನೂ ಮರೆತ ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು.

ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ...

-

ತಿಳಿರು ತೋರಣ

ಅದ್ಭುತವೂ ಅಸದೃಶವೂ ಆದ ವಿದ್ಯಮಾನವೊಂದು ಕಳೆದವಾರ ಕಾಶಿಯಲ್ಲಿ ಜರುಗಿದ ಸಮಾಚಾರವನ್ನು ನೀವು ಓದಿ/ಕೇಳಿಯೇ ಇರುತ್ತೀರಿ. ಅದೇ- ಮಹಾರಾಷ್ಟ್ರ ಮೂಲದ ದೇವವ್ರತ ಮಹೇಶ ರೇಖೆ ಎಂಬ 19 ವರ್ಷ ವಯಸ್ಸಿನ ನವತರುಣ ವೇದಮೂರ್ತಿಯ ದಂಡಕ್ರಮ ಪಾರಾಯಣ.

ಪುಸ್ತಕದ ಸಹಾಯವಿಲ್ಲದೆ, ಕೇವಲ ಸ್ಮರಣಶಕ್ತಿಯಿಂದ ಶುಕ್ಲ ಯಜುರ್ವೇದದ ಮಾಧ್ಯಂದಿನೀಯ ಶಾಖೆಯ 2000 ಮಂತ್ರಗಳ ದಂಡಕ್ರಮ ಪಾರಾಯಣವನ್ನು ಕಾಶಿಯ ವಲ್ಲಭರಾಮ ಶಾಲಿಗ್ರಾಮ ಸಾಂಗವೇದ ವಿದ್ಯಾಲಯದಲ್ಲಿ ಅಕ್ಟೋಬರ್ ೨ರಿಂದ ನವೆಂಬರ್ ೩೦ರವರೆಗೆ ವಿದ್ವತ್‌ವರ್ಗದ ಸಮ್ಮುಖದಲ್ಲಿ ಮಾಡಿದ್ದು, 200 ವರ್ಷಗಳ ಬಳಿಕ ವಿದ್ವಾಂಸರೊಬ್ಬರು ಮಾಡಿರುವ ಸಾಧನೆ ಇದಾಗಿರುವುದು, ಪ್ರಧಾನಿ ಮೋದಿಯವರಿಂದಲೂ ಸೇರಿದಂತೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತ ವಾಗಿರುವುದು, ಶೃಂಗೇರಿ ಶ್ರೀಗಳಿಂದ ಸುವರ್ಣಕಂಕಣ ಸನ್ಮಾನ ಸಂದಿರುವುದು, ಮಾಧ್ಯಮಗಳು ದೇವವ್ರತ ರೇಖೆ ಮತ್ತು ಅವರ ತಂದೆಯ ಸಂದರ್ಶನಗಳನ್ನು ಪ್ರಸಾರ ಮಾಡಿರುವುದು... ಇತ್ಯಾದಿ.

ಈ ಹಿನ್ನೆಲೆಯಲ್ಲಿ, ಸುಮಾರು ೨೦ ವರ್ಷಗಳ ಹಿಂದೆ ನಾನು ಬರೆದಿದ್ದ ‘ವೇದಪಠನ ವಿಧಾನಗಳ ವಿಸ್ಮಯ’ ಎಂಬೊಂದು ಲೇಖನದ ಸಾರಾಂಶವನ್ನು ಮೊದಲು ನಿಮ್ಮ ಓದಿಗೆ ಒದಗಿಸುತ್ತೇನೆ. ಆಮೇಲೆ ನಿರ್ದಿಷ್ಟವಾಗಿ ದಂಡಕ್ರಮ ಪಾರಾಯಣದ ಬಗ್ಗೆಯೇ ಮತ್ತೊಂದಿಷ್ಟು ಸೋದಾಹರಣ ವಿವರಗಳನ್ನು ನೋಡೋಣವಂತೆ.

ಇದನ್ನೂ ಓದಿ: Srivathsa Joshi Column: ಕಲಿಸಿಕೊಟ್ಟರೆ ಕೋಡಗನಿಂದಲೂ ಕೆಲಸ ಕೈಗೂಡಬಹುದು !

‘ಹದಿಮೂರ್ ಹದಿನೇಳ್ಲ ಎಷ್ಟು?’ ಎಂದು ಕೇಳಿದರೆ ಬೆಚ್ಚಿ ಬಿದ್ದು ಕಾಲ್ಕ್ಯುಲೇಟರ್‌ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ, ಈಗ ಅದನ್ನೂ ಮರೆತ ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು.

ಅದೂ ರಿವರ್ಸ್ ಆರ್ಡರ್, ಡಯಾಗನಲ್ ಆರ್ಡರ್ ಹೀಗೆ ಯಾವ ನಮೂನೆಯಲ್ಲಿ ಬೇಕೋ ಹಾಗೆ ಮಗ್ಗಿಯನ್ನು ಒಪ್ಪಿಸುವ ಜಾಣರಿರುತ್ತಿದ್ದರು. ಯಾಕೆ ಆ ಜಾಣ್ಮೆ ಇರುತ್ತಿತ್ತೆಂದರೆ ಆಗ ಕ್ಯಾಲ್ಕ್ಯು ಲೇಟರ್‌ಗಳು ಇರಲಿಲ್ಲ, ಅದಕ್ಕೂ ಹಿಂದೆ ಮಗ್ಗಿಪುಸ್ತಕಗಳೂ ಇರುತ್ತಿರಲಿಲ್ಲವೇನೋ. ಎಲ್ಲವೂ ಬಾಯಿಪಾಠದ ಕಲಿಕೆ. ಹಸಿಗೋಡೆಯಲ್ಲಿ ಹರಳು ನೆಟ್ಟಂತೆ ಚಿಕ್ಕಂದಿನಲ್ಲೇ ಮಗ್ಗಿ-ಕೋಷ್ಟಕಗಳ, ಗಣಿತ ಸೂತ್ರಗಳ ಕಂಠಪಾಠದ ಅಭ್ಯಾಸ. ಅದರ ಒಳಿತು-ಕೆಡುಕುಗಳು ಏನೇ ಇರಲಿ ಆಗಿನ ಕಾಲದಲ್ಲಿ ಅದು ಅನಿವಾರ್ಯವೆಂಬ ವಿಷಯವೂ ಗಮನಾರ್ಹ.

ಮಗ್ಗಿ-ಕೋಷ್ಟಕ, ಸೂತ್ರ-ಸ್ತೋತ್ರಗಳದೇ ಮಾತು ಅನ್ವಯವಾಗುತ್ತದೆ ವೇದಗಳಿಗೆ ಕೂಡ! ವೇದಗಳು ಭಗವಂತನ ಉಸಿರಿನಿಂದ ಉದ್ಭವವಾದುವು ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಋಷಿಮುನಿ ಗಳು ವೇದಗಳನ್ನು ಅವುಗಳ ಮೂಲ ಸ್ವರೂಪದಲ್ಲಿ, ಒಂದಿನಿತೂ ಬದಲಾವಣೆ ಇಲ್ಲದಂತೆ ಜತನವಾಗಿ ಇರಿಸುವಲ್ಲಿ ಬಹಳ ಎಚ್ಚರ ಮತ್ತು ಶ್ರಮ ವಹಿಸಿದ್ದಾರೆ.

Screenshot_3 R

ಲಿಖಿತ ದಾಖಲೆಗಳಿಲ್ಲದೆ ಬಾಯಿಯಿಂದ ಬಾಯಿಗೆ (ತಂದೆಯಿಂದ ಮಗನಿಗೆ ಅಥವಾ ಗುರುವಿನಿಂದ ಶಿಷ್ಯನಿಗೆ) ವರ್ಗಾವಣೆ ಹೊಂದುತ್ತ ಸಹಸ್ರಾರು ವರ್ಷಗಳ ಕಾಲದಿಂದಲೂ ವೇದಗಳು ಅಸ್ತಿತ್ವದಲ್ಲಿ ಇವೆಯೆಂದರೆ ಈ ಮೂಲಸ್ವರೂಪ ರಕ್ಷಣೆಯ ಮಹತ್ತ್ವ ಮತ್ತು ಅದರ ವಿಸ್ಮಯಕರವಾದ ತಂತ್ರ ನಿಜಕ್ಕೂ ಅದ್ಭುತವಾದುದು!

ವೇದಮಂತ್ರ ಪಠನದ ಒಂದು ಮೂಲಭೂತ ಆವಶ್ಯಕತೆಯೆಂದರೆ ಅದರ ಸಂಪೂರ್ಣ ಪ್ರಯೋಜನ ಸಿಗಬೇಕಾದರೆ ಅಕ್ಷರಶುದ್ಧಿ, ಮಾತ್ರಾಶುದ್ಧಿ ಮತ್ತು ಸ್ವರಶುದ್ಧಿ- ಈ ಮೂರರಲ್ಲೂ ಯಾವೊಂದು ಲೋಪವೂ ಇರಬಾರದು. ಅಷ್ಟೇಅಲ್ಲ, ಹಾಡು ಗುನುಗಿದಂತೆ, ಅವಸರದಲ್ಲಿ, ಸುಮ್ಮನೆ ತಲೆಯನ್ನು ಮೇಲೆ-ಕೆಳಗೆ ಅಲ್ಲಾಡಿಸುತ್ತ, ಪುಸ್ತಕದಿಂದ ಓದುತ್ತ, ಅರ್ಥವನ್ನು ತಿಳಿದುಕೊಳ್ಳದೆ, ಮತ್ತು ಕ್ಷೀಣಸ್ವರ ದಲ್ಲಿ- ಈ ಆರು ರೀತಿಗಳಲ್ಲಿ ವೇದಪಠನ ಮಾಡಿದರೆ ಅದು ನಿಷ್ಪ್ರಯೋಜಕ.

ವೇದಗಳ ಸರಿಯಾದ ಪಠನಕ್ಕೆ, ಜತೆಯಲ್ಲೇ ಅವುಗಳ ಮೂಲರೂಪ ರಕ್ಷಣೆಗೆ ದೋಷರಹಿತ ವಿಧಾನ ಮತ್ತು ನಿಯಮಗಳ ಆವಶ್ಯಕತೆ ಬಹಳವಾಗಿ ಇದೆ. ಏಕೆಂದರೆ ವೇದೋಚ್ಚಾರದಲ್ಲಿ ಒಂದೇಒಂದು ಅಕ್ಷರ, ಮಾತ್ರೆ ಅಥವಾ ಸ್ವರದ ಲೋಪವಾದರೂ ಆ ಮಂತ್ರದ ಪರಿಣಾಮ ತದ್ವಿರುದ್ಧವಾಗ ಬಹುದು. ಇಂದ್ರನನ್ನು ಕೊಲ್ಲಹೊರಟ ವೃತ್ರನ ತಂದೆ ತ್ವಷ್ಟೃವು ಉಚ್ಚರಿಸಿದ್ದರಲ್ಲಿ ಒಂದು ಸ್ವರ ವಷ್ಟೇ ತಪ್ಪಾಗಿತ್ತು; ವೃತ್ರನಿಂದ ಇಂದ್ರಹತ್ಯೆಯಾಗುವ ಬದಲು ಇಂದ್ರನೇ ವೃತ್ರನನ್ನು ಕೊಲ್ಲು ವಂತಾಯಿತು!

ವೇದೋಚ್ಚಾರದ ನಿಯಮಗಳೆಲ್ಲ ‘ಶಿಕ್ಷಾ’ ಎನ್ನುವ ವೇದಾಂಗದಲ್ಲಿ ಅಳವಡಿಸಲ್ಪಟ್ಟಿವೆ. ವರ್ಣ (ಅಕ್ಷರಗಳು), ಸ್ವರ (ಉದಾತ್ತ, ಅನುದಾತ್ತ ಮತ್ತು ಸ್ವರಿತ), ಮಾತ್ರಾಕಾಲ, ಬಲ (ಉಚ್ಚರಿಸಲು ಬೇಕಾದ ಧ್ವನಿಶಕ್ತಿ), ಸಾಮ (ಸ್ವರಗಳ ಏರಿಳಿತದಲ್ಲಿ ಏಕರೂಪ) ಮತ್ತು ಸಂತಾನ (ನಿರಂತರತೆ)- ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಶಿಕ್ಷಾದಲ್ಲಿ ನಿಯಮಗಳಿವೆ. ಇಷ್ಟೆಲ್ಲ ಚಾಕಚಕ್ಯತೆ ವಹಿಸಿ ವೇದಪಠನ ಮಾಡಬೇಕಿದ್ದರೆ ಅದರ ಅಭ್ಯಾಸದಲ್ಲೂ ಕಠಿಣ ಪರಿಶ್ರಮದ ಆವಶ್ಯಕತೆ ಇದೆಯೆಂದು ಬೇರೆ ಹೇಳಬೇಕಿಲ್ಲ.

ವೇದಾಭ್ಯಾಸ ಒಂದು ಆಸಕ್ತಿಯ ವಿಷಯವಾಗುವಂತೆ, ಬರೀ ಬಾಯಿಪಾಠವಷ್ಟೇ ಎನಿಸದೆ ಬುದ್ಧಿ ವಂತಿಕೆಯ ಉಪಯೋಗವೂ ಚೆನ್ನಾಗಿ ಆಗುವಂತೆ ಮಾಡಬೇಕಾದರೆ ಪಠನ ಕ್ರಮದಲ್ಲಿ ವೈವಿಧ್ಯ ವಿರಬೇಕಾಗುತ್ತದೆ. ಇದನ್ನು ಮನಗಂಡ ಋಷಿಗಳು ಕೆಲವು ‘ಪಾಠಕ್ರಮ’ಗಳನ್ನು ರೂಪಿಸಿದರು. ತನ್ಮೂಲಕ ವೇದಕಲಿಕೆ ದೋಷರಹಿತವಾಗಿರುವಂತೆ ನೋಡಿಕೊಂಡರು.

ಅಂಥ ಪಾಠಕ್ರಮಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳುವುದಕ್ಕಾಗಿ ಈ ಲೇಖನ. ಬೇರೆ ಬೇರೆ ಕ್ರಮಗಳಲ್ಲಿ ಪದಗಳ ಜೋಡಣೆ ಅರ್ಥವಾಗುವುದಕ್ಕೋಸ್ಕರ ಸಂಸ್ಕೃತ ಮಂತ್ರಗಳ ಬದಲಿಗೆ, ನಮಗೆಲ್ಲ ಚಿರಪರಿಚಿತವಾದ ‘ಬಣ್ಣದ ತಗಡಿನ ತುತ್ತೂರಿ...’ ಪದ್ಯದ ಬಳಕೆ. ಇದು ಕೇವಲ ಉದಾ ಹರಣೆಗಾಗಿಯೇ ಹೊರತು ವೇದಗಳನ್ನು ಲಘುವಾಗಿ ಪರಿಗಣಿಸುವುದಾಗಲೀ ಜಿ.ಪಿ. ರಾಜರತ್ನಂರ ಪದ್ಯವನ್ನು ತಿರುಚುವುದಾಗಲಿ ಇಲ್ಲಿಯ ಉದ್ದೇಶವಲ್ಲ.

ಅತ್ಯಂತ ಪ್ರಾಥಮಿಕ ಸರಳ ಪಾಠವೆಂದರೆ ‘ವಾಕ್ಯಪಾಠ’. ವೇದದ ಒಂದೊಂದೇ ಮಂತ್ರವನ್ನು ಒಂದು ವಾಕ್ಯದಂತೆ ಪಠಿಸುವುದು. ಇದನ್ನೇ ‘ಸಂಹಿತಾಪಾಠ’ ಎಂದೂ ಕರೆಯುವರು. ವಾಕ್ಯ ಪಾಠದಲ್ಲಿ ತುತ್ತೂರಿಪದ್ಯದ ಸಾಲು “ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ||" ಎಂದು ಸುಲಭರೂಪದಲ್ಲೇ ಇರುತ್ತದೆ.

ಮುಂದಿನದು ‘ಪದಪಾಠ’. ಪದಗಳು ಸಂಧಿಗಳಿಂದಾಗಿ ಕೂಡಿಕೊಂಡಿದ್ದರೆ ಬಿಡಿಸಿ ಹೇಳುವುದೇ ಪದಪಾಠ. ತುತ್ತೂರಿ ಪದ್ಯದಲ್ಲಿ ಅಂಥವೇನೂ ಸಂಧಿಗಳಿಲ್ಲವಾದ್ದರಿಂದ ಪದಪಾಠವೂ ವಾಕ್ಯ ಪಾಠದಂತೆಯೇ. ಆದರೆ ಸಂಸ್ಕೃತ ಮಂತ್ರಗಳು ಅಷ್ಟು ಸರಳವಲ್ಲ, ಅವುಗಳಲ್ಲಿ ಅನೇಕ ಸಂಕೀರ್ಣ ಸಂಧಿಗಳಿರುತ್ತವೆ, ಬಿಡಿಸಿದಾಗ ಪದಪಾಠವು ವಾಕ್ಯಪಾಠಕ್ಕಿಂತ ಭಿನ್ನವಾಗಿರುತ್ತದೆ.

ಉದಾಹರಣೆಗೆ ಗಾಯತ್ರೀ ಮಂತ್ರದ ವಾಕ್ಯಪಾಠ “ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧಿಮಹಿ| ಧಿಯೋ ಯೋ ನಃ ಪ್ರಚೋದಯಾತ್|" ಅಂತಾದರೆ, ಪದಪಾಠವು “ತತ್| ಸವಿತುಃ| ವರೇಣ್ಯಂ| ಭರ್ಗಃ| ದೇವಸ್ಯ| ಧಿಮಹಿ| ಽಯಃ| ಯಃ| ನಃ| ಪ್ರಚೋದಯಾತ್|" ಎಂದಾಗುತ್ತದೆ. ಪದಪಾಠಕ್ಕಿಂತ ಸಂಕೀರ್ಣವಾದದ್ದು ‘ಕ್ರಮಪಾಠ’.

ಇದರಲ್ಲಿ ಮಂತ್ರದ ಎರಡೆರಡು ಪದಗಳನ್ನು, ಒಂದಕ್ಕೊಂದು ಬೆಸೆಯುವಂತೆ ಉಚ್ಚರಿಸುವುದು. ೧-೨, ೨-೩, ೩-೪, ೪-೫, ೫-೬... ಈ ರೀತಿ. ಕ್ರಮಪಾಠದಲ್ಲಿ ವೇದಪಠನದ ನಿಷ್ಣಾತಿ ಹೊಂದಿದವರನ್ನು ‘ಕ್ರಮವಿತ್’ ಎನ್ನುತ್ತಾರೆ. ತುತ್ತೂರಿಪದ್ಯದ ಸಾಲು ಕ್ರಮಪಾಠದಲ್ಲಿ ಹೀಗೆ ಬರುತ್ತದೆ: “ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ||" ಗಮನಿಸ ಬೇಕಾದ ಅಂಶವೆಂದರೆ ವಾಕ್ಯಪಾಠ, ಪದಪಾಠ ಮತ್ತು ಕ್ರಮಪಾಠ- ಈ ಮೂರರಲ್ಲೂ ಮಂತ್ರದ ಪದಗಳ ಅನುಕ್ರಮವು ಸ್ವಾಭಾವಿಕ ಹರಿವಿನಲ್ಲೇ ಇರುತ್ತದೆ.

ಆದ್ದರಿಂದ ಈ ಮೂರು ವಿಧಾನಗಳನ್ನು ‘ಪ್ರಕೃತಿ’ ರೂಪದವು ಎನ್ನುತ್ತಾರೆ. ಮುಂದೆ ವಿವರಿಸಲಿರುವ ಪಾಠಕ್ರಮಗಳಲ್ಲಿ ಮಂತ್ರದ ಪ್ರತ್ಯೇಕ ಪದಗಳನ್ನೂ ಆಚೀಚೆ, ಹಿಂದೆಮುಂದೆ ಸ್ಥಾನಪಲ್ಲಟ ಮಾಡುವುದಿರುತ್ತದೆ. ಅಂದರೆ ಸ್ವಾಭಾವಿಕ ಅನುಕ್ರಮವನ್ನು ಬದಲಿಸಲಾಗುತ್ತದೆ. ಆದ್ದರಿಂದ ಇಂಥ ಪಾಠಕ್ರಮಗಳಿಗೆ ‘ವಿಕೃತಿ’ ಎಂದು ಹೆಸರು.

ಸಂಸ್ಕೃತ ಶ್ಲೋಕಗಳಲ್ಲಿ ಹೇಗೂ ಕರ್ತೃ-ಕರ್ಮ-ಕ್ರಿಯಾ ಇದೇ ಮಾದರಿಯಲ್ಲಿ ಪದಗಳು ಬರಬೇಕೆಂದೇನಿಲ್ಲ, ಹಾಗಾಗಿ ವಿಕೃತಿಗೊಳಪಟ್ಟ ಶ್ಲೋಕವೂ ಅರ್ಥಪೂರ್ಣವೇ ಆಗಿರುತ್ತದೆ. ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ, ಘನ- ಈ ಎಂಟು ಪಾಠಕ್ರಮಗಳು ವಿಕೃತಿ ರೂಪದವು. ಇವುಗಳ ಪೈಕಿ ಜಟಾ ಮತ್ತು ಘನ ಪಾಠಕ್ರಮಗಳು ತುಂಬ ಪ್ರಸಿದ್ಧವಾದುವು.

‘ಜಟಾಪಾಠ’ದಲ್ಲಿ ಪದಗಳು ಜಡೆ ಹೆಣೆದಂತೆ ೧-೨-೨-೧-೧-೨, ೨-೩-೩-೨-೨-೩, ೩-೪-೪-೩-೩-೪, ೪-೫-೫-೪-೪-೫... ಈ ರೀತಿ ಆವರ್ತವಾಗುತ್ತವೆ. ತುತ್ತೂರಿಪದ್ಯದ ಸಾಲನ್ನು ಜಟಾಕ್ರಮದಲ್ಲಿ ಅಳವಡಿಸಿದಾಗ: “ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ| ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ| ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ| ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು| ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕೊಂಡನು ಕಸ್ತೂರಿ| ಕಸ್ತೂರಿಯೆಂಬ ಕಸ್ತೂರಿ||" ಎಂದಾಗುತ್ತದೆ.

ಇಲ್ಲಿ, ‘ಕಸ್ತೂರಿಯೆಂಬ ಕಸ್ತೂರಿ...’ ಸಾಲು ಎಲ್ಲಿಂದ ಬಂತು? ರಾಜರತ್ನಂ ಬರೆದ ಮೂಲಪದ್ಯದಲ್ಲಿ ಹಾಗಿರಲಿಲ್ಲವಲ್ಲ ಎಂದು ನಿಮಗೆ ಸಂಶಯ ಬರಬಹುದು. ವೇದಪಠನದ ವಿವಿಧ ಕ್ರಮಗಳಲ್ಲಿ, ಸೂಕ್ತದ ಕೊನೆಯ ಪದವನ್ನುಪಯೋಗಿಸಿ ಈ ರೀತಿ ಉಚ್ಚರಿಸುವುದು ವಾಡಿಕೆ. ಉದಾಹರಣೆಗೆ ಒಂದು ಸೂಕ್ತವು ‘ಸುವೃತ್ತಿಃ’ ಎಂಬ ಪದದೊಂದಿಗೆ ಮುಕ್ತಾಯವಾಗಿದ್ದರೆ ಕೊನೆಯಲ್ಲಿ ‘ಸುವೃತ್ತಿಃ ಇತಿ ಸುವೃತ್ತಿಃ’ (ಅಥವಾ ಸಂಧಿ ಮಾಡಿ ‘ಸುವೃತ್ತಿರಿತಿ ಸುವೃತ್ತಿಃ’) ಎಂದು ಹೇಳಬೇಕು. ಹಾಗೆ ‘ಕಸ್ತೂರಿ ಎಂಬ ಕಸ್ತೂರಿ’ಯನ್ನು ಸಂಧಿ ಮಾಡಿ ಸೇರಿಸಿದ್ದೇನೆ.

ಘನಪಾಠದಲ್ಲಿ ಪದಗಳ ಜೋಡಣೆ ೧-೨-೨-೧-೧-೨-೩-೩-೨-೧-೧-೨-೩; ೨-೩-೩-೨-೨-೩-೪-೪-೩-೨-೨-೩-೪; ೩-೪-೪-೩-೩-೪-೫-೫-೪-೩-೩-೪-೫... ಕ್ರಮದಲ್ಲಿರುತ್ತದೆ.

ತುತ್ತೂರಿಪದ್ಯವನ್ನು ಘನಪಾಠದಂತೆ ಹೇಳಿದರೆ- “ಬಣ್ಣದ ತಗಡಿನ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ ತುತ್ತೂರಿ ತಗಡಿನ ಬಣ್ಣದ ಬಣ್ಣದ ತಗಡಿನ ತುತ್ತೂರಿ| ತಗಡಿನ ತುತ್ತೂರಿ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತಗಡಿನ ತಗಡಿನ ತುತ್ತೂರಿ ಕಾಸಿಗೆ| ತುತ್ತೂರಿ ಕಾಸಿಗೆ ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ ಕೊಂಡನು ಕೊಂಡನು ಕಾಸಿಗೆ ತುತ್ತೂರಿ ತುತ್ತೂರಿ ಕಾಸಿಗೆ| ಕೊಂಡನು ಕಾಸಿಗೆ ಕೊಂಡನು ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ ಕಸ್ತೂರಿ ಕೊಂಡನು ಕಾಸಿಗೆ ಕಾಸಿಗೆ ಕೊಂಡನು ಕಸ್ತೂರಿ| ಕಸ್ತೂರಿಯೆಂಬ ಕಸ್ತೂರಿ||" ಎಂದಾಗುತ್ತದೆ.

ಘನಪಾಠ ಅತ್ಯಂತ ಕ್ಲಿಷ್ಟದ ಪಾಠಕ್ರಮ. ಘನಪಾಠಿ ಎಂದರೆ ಅವರು ಘನಪಾಠ ಕ್ರಮದಲ್ಲಿ ವೇದ ಗಳನ್ನು ಪಠಿಸಬಲ್ಲ ಪಂಡಿತರೆಂದರ್ಥ. ಹಾಗೆ ಮಂತ್ರವನ್ನು ಉಚ್ಚರಿಸಿದರೆ ಸಾವಿರಪಟ್ಟು ಪುಣ್ಯ. ಸಹಜವಾಗಿಯೇ ಪದಗಳೆಲ್ಲ ಪುನರಾವರ್ತನೆ ಆಗುವುದರಿಂದ ಭಗವಂತನ ಗುಣಗಾನ, ಸದ್ಗುಣ ಚಿಂತನೆ ಅಧಿಕ ಪ್ರಮಾಣದಲ್ಲಿ ಆಗುತ್ತದೆ.

ಮೇಲಿನ ಪದ್ಯವನ್ನೇ ನೋಡಿ- ಕಸ್ತೂರಿ, ತುತ್ತೂರಿ ಪದಗಳು ಎಷ್ಟು ಸಲ ಬಂದುಹೋಗುತ್ತವೆ! ಅಂದಹಾಗೆ, ಘನಪಾಠ ರೀತಿಯಲ್ಲಿ ಸಂಪೂರ್ಣ ಋಗ್ವೇದವನ್ನು ಪಠಿಸಲು ಸುಮಾರು 450 ಗಂಟೆ ಗಳು ಬೇಕಾಗಬಹುದು!

ಮಾಲಾ ಪಾಠಕ್ರಮದಲ್ಲಿ ಪುಷ್ಪಮಾಲಾ ಮತ್ತು ಕ್ರಮಮಾಲಾ ಎಂಬ ಎರಡು ನಮೂನೆಗಳಿವೆ. ದೇವರಿಗೆ ಅರ್ಪಿಸಲು ಹೂಮಾಲೆ ಕಟ್ಟುವಾಗ ಹೇಗೆ ಬೇರೆಬೇರೆ ಬಣ್ಣದ, ಪ್ರಭೇದಗಳ ಹೂವು ಗಳಿದ್ದರೂ ಮಾಲೆಯು ಸಮಮಿತಿಯಲ್ಲಿರುವಂತೆ ಕಾಯ್ದುಕೊಳ್ಳುತ್ತೇವೋ ಹಾಗೆಯೇ ಪದಗಳ ಜೋಡಣೆ. ಶಿಖಾ ಪಾಠಕ್ರಮದಲ್ಲಿ ಜಟೆಯಂತೆಯೇ, ಆದರೆ ಎರಡೆರಡು ಪದಗಳ ಬದಲಿಗೆ ಮೂರುಮೂರು ಪದಗಳನ್ನು ಜೋಡಿಸುತ್ತ ಹೋಗಬೇಕು.

ದಂಡ ಪಾಠಕ್ರಮದಲ್ಲಿ ಪದಯುಗ್ಮಗಳನ್ನು ಪೋಣಿಸುತ್ತ ಹೋಗಬೇಕು, ಒಂದೊಂದು ಸಲಕ್ಕೂ ಒಂದು ಪದವನ್ನು ಹೆಚ್ಚಿಸುತ್ತ ಹೋಗಬೇಕು, ಮಾತ್ರವಲ್ಲ ಅವರೋಹಣ ಕ್ರಮದಲ್ಲಿ ಮೊದಲಿನ ಪದದವರೆಗೂ ಬರಬೇಕು. ರಥ ಪಾಠಕ್ರಮದಲ್ಲಿ ದ್ವಿಪಾದ, ತ್ರಿಪಾದ ಮತ್ತು ಚತುಷ್ಪಾದ ರಥ ಎಂಬ ಉಪವಿಧಾನಗಳೂ ಇವೆ, ಒಂದೊಂದೂ ಜಟಿಲವಾಗುತ್ತ ಹೋಗುತ್ತವೆ.

ಹಾಗೆಯೇ ರೇಖಾ ಮತ್ತು ಧ್ವಜ ಪಾಠಕ್ರಮಗಳೂ ಕ್ಲಿಷ್ಟವಾದುವುಗಳೇ. ನಮ್ಮ ಪೂರ್ವಜರು ಕಂಡುಕೊಂಡ ಈ ಎಲ್ಲ ಪಾಠಕ್ರಮಗಳು, ಅವುಗಳ ಸಂಕೀರ್ಣತೆ, ಅವುಗಳಲ್ಲಿ ಹೇರಳವಾಗಿ ಉಪಯೋಗವಾಗಿರುವ ಗಣಿತ ಮತ್ತು ಸಂಖ್ಯಾಶಾಸ ಇವೆಲ್ಲ ಅಚ್ಚರಿ ಮೂಡಿಸುತ್ತವೆಯಲ್ಲವೆ? ಇಂಥ ಪ್ರಮಾಣೀಕೃತ, ನಿಯಮಬದ್ಧ ಮೌಖಿಕ ವೇದಪಠನ ಕ್ರಮವನ್ನು ಒಂದು ಅತ್ಯಮೂಲ್ಯ, ದುರ್ಲಭ ಸಂಪ್ರದಾಯವೆಂದು ಯುನೆಸ್ಕೋ ಗೌರವಿಸಿದೆ.

ಸನಾತನ ಸಂಸ್ಕೃತಿಯ ಅರ್ಥಪೂರ್ಣ ಸತ್ಸಂಪ್ರದಾಯವೊಂದಕ್ಕೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ನಾವೆಲ್ಲರೂ ಹೆಮ್ಮೆಪಡುವಂಥದು. ‘ವೇದಪಠನ ವಿಧಾನಗಳ ವಿಸ್ಮಯ’ ಲೇಖನವು ಮೊದಲಿಗೆ 2006ರಲ್ಲಿ ‘ದಟ್ಸ್‌ಕನ್ನಡ ಡಾಟ್ ಕಾಮ್’ನ ‘ವಿಚಿತ್ರಾನ್ನ’ ಅಂಕಣದಲ್ಲಿ ಪ್ರಕಟವಾದದ್ದು ಆಮೇಲೆ ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲೂ ಮರುಪ್ರಕಟಗೊಂಡಿತ್ತು. ಅಲ್ಲಿ ಆ ಲೇಖನ ವನ್ನೋದಿ ಬೆಂಗಳೂರಿನ ‘ವೇದಪ್ರಕಾಶ’ ಪತ್ರಿಕೆಯವರೂ ಒಂದು ಸಂಚಿಕೆಯಲ್ಲಿ ಅದನ್ನು ಪ್ರಕಟಿಸಿದ್ದರು.

ಮೈಸೂರಿನ ವಾಕ್-ಶ್ರವಣ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಡಾ. ನ.ರತ್ನ(ಈಗ ದಿವಂಗತ) ತಾವು ಆಗ ಬರೆಯುತ್ತಿದ್ದ ‘ನಟ ಮತ್ತು ಮಾತು’ ಪುಸ್ತಕದಲ್ಲಿ ಒಂದು ಅನುಬಂಧದಂತೆ ಅದೇ ಲೇಖನವನ್ನು ಅಳವಡಿಸಿಕೊಂಡಿದ್ದರು, ವೇದವನ್ನು ಕಂಠಪಾಠ ಮಾಡುವ ಕ್ರಮಬದ್ಧ ರೀತಿಯು ನಟನಟಿಯರಿಗೆ ಸಂಭಾಷಣೆ ಕಂಠಪಾಠ ಮಾಡಿ ನೆನಪಿಟ್ಟುಕೊಳ್ಳುವುದಕ್ಕೂ ನೆರವಾಗುತ್ತದೆ ಎಂಬ ತರ್ಕದಿಂದ.

ಇದೀಗ ದೇವವ್ರತ ಮಹೇಶ ರೇಖೆಯವರ ಸಾಧನೆಯ ಸಂದರ್ಭದಲ್ಲಿ, ದಂಡಕ್ರಮದ ಬಗ್ಗೆ ಒಂದಿಷ್ಟು ವಿವರಗಳು. ನಮ್ಮೂರಿನಲ್ಲಿ, ನಮ್ಮ ಪಕ್ಕದಮನೆಯಲ್ಲಿ ನೀಲಕಂಠ ಪಾಠಕ್ ಎಂಬ ಹಿರಿಯರಿದ್ದರು. ಅವರೊಬ್ಬ ಸ್ವಾತಂತ್ರ್ಯಯೋಧ ಮತ್ತು ವೇದವಿದ್ಯಾಪಾರಂಗತ. ನಮ್ಮೂರಿನ ಪರಶುರಾಮ ದೇವಸ್ಥಾನದಲ್ಲಿ ಅಷ್ಟಸೇವೆಯಲ್ಲಿ ಯಜುರ್ವೇದದ ಸುತ್ತಿನಲ್ಲಿ ಅವರು ದಂಡಕ್ರಮ ರೀತಿಯಲ್ಲಿ ಕೆಲವು ಚಿಕ್ಕಚಿಕ್ಕ ಸೂಕ್ತಗಳನ್ನು ಪಠಿಸುತ್ತಿದ್ದರು.

ಅಗ್ನಿವೇಶ್ಯಗೃಹ್ಯಸೂತ್ರದಲ್ಲಿ ಬರುವ “ಮಾರುತಮಸಿ ಮರುತಾಮ್ ಓಜೋಧಿಪಾಂ ಧಾರಾಂ ಭಿನ್ಧಿ ರಮಯತ ಮರುತಃ ಶ್ಯೇನಮಾಯಿನಂ ಮನೋಜವಸಂ ವೃಷಣಂ ಸುವೃಕ್ತಿಮ್|" ಅಂಥದೊಂದು ಸೂಕ್ತ. ಅದನ್ನವರು ದಂಡಕ್ರಮದಲ್ಲಿ “ಮಾರುತಮಸಿ| ಅಸಿ ಮರುತಾಮ್| ಮರುತಾಮೋಜಃ| ಓಜೋಧಿಪಾಂ| ಅಪಾಂ ಧಾರಾಂ| ಧಾರಾಂ ಭಿನ್ಧಿ| ಭಿನ್ಧಿ ರಮಯತ| ರಮಯತ ಮರುತಃ| ಮರುತಃ ಶ್ಯೇನಮ್| ಶ್ಯೇನಮಾಯಿನಂ| ಆಯಿನಂ ಮನೋಜವಸಂ| ಮನೋಜವಸಂ ವೃಷಣಂ| ವೃಷಣಂ ಸುವೃಕ್ತಿಮ್| ಸುವೃಕ್ತಿರಿತಿ ಸುವೃಕ್ತಿಮ್|" ಎಂದು ಆರೋಹಣದಲ್ಲಿ ಪದಯುಗ್ಮಗಳನ್ನು ಪೋಣಿಸುತ್ತ, ಮತ್ತು “ಸುವೃಕಿಂ ವೃಷಣಂ ಮನೋಜವಸಮಾಯಿನಂ ಶ್ಯೇನಂ ಮರುತೋ ರಮಯತ ಭಿನ್ಧಿ ಧಾರಾಮಪಾಮೋಧಿಜೋ ಮರುತಾಮಸಿ ಮಾರುತಮ್..." ಎಂದು ಅವರೋಹಣದಲ್ಲಿ ಪಠಿಸುವುದನ್ನು ಕೇಳಲಿಕ್ಕೆ ತುಂಬ ಚೆನ್ನಾಗಿರುತ್ತಿತ್ತು.

ದಂಡಕ್ರಮದ ವಿನ್ಯಾಸವು ೧-೨, ೨-೧, ೧-೨-೨-೩, ೩-೨-೧, ೧-೨-೨-೩-೩-೪, ೪-೩-೨-೧... ರೀತಿಯಲ್ಲಿರುತ್ತದೆಂದು ಅವರಿಂದ ಕೇಳಿ ತಿಳಿದಿದ್ದೆ. ತುತ್ತೂರಿಪದ್ಯವನ್ನು ಈ ವಿನ್ಯಾಸಕ್ಕೆ ಅಳವಡಿಸಿದರೆ “ಬಣ್ಣದ ತಗಡಿನ| ತಗಡಿನ ಬಣ್ಣದ| ಬಣ್ಣದ ತಗಡಿನ ತಗಡಿನ ತುತ್ತೂರಿ| ತುತ್ತೂರಿ ತಗಡಿನ ಬಣ್ಣದ| ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ| ಕಾಸಿಗೆ ತುತ್ತೂರಿ ತಗಡಿನ ಬಣ್ಣದ| ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು| ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ| ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ| ಕಸ್ತೂರಿ ಕೊಂಡನು ಕಾಸಿಗೆ ತುತ್ತೂರಿ ತಗಡಿನ ಬಣ್ಣದ| ಬಣ್ಣದ ತಗಡಿನ ತಗಡಿನ ತುತ್ತೂರಿ ತುತ್ತೂರಿ ಕಾಸಿಗೆ ಕಾಸಿಗೆ ಕೊಂಡನು ಕೊಂಡನು ಕಸ್ತೂರಿ| ಕಸ್ತೂರಿಯೆಂಬ ಕಸ್ತೂರಿ|" ಎಂದಾಗುತ್ತದೆ.

ತುತ್ತೂರಿಪದ್ಯದ ಮೊದಲ ಸಾಲಿನ ಆರು ಸರಳ ಪದಗಳನ್ನಷ್ಟೇ ತಗೊಂಡರೂ ದಂಡಕ್ರಮ ಕಂಠಪಾಠ ಒಪ್ಪಿಸುವುದು ಎಷ್ಟು ಕಷ್ಟವಿದೆ! ಹಾಗಿರುವಾಗ 2000 ಮಂತ್ರಗಳನ್ನು ದಂಡಕ್ರಮದಲ್ಲಿ ಕಂಠಪಾಠ ಒಪ್ಪಿಸಿದ ದೇವವ್ರತ ಮಹೇಶ ರೇಖೆಯವರ ಸಾಧನೆ ಎಷ್ಟು ಅದ್ಭುತ ಮತ್ತು ಅಗಾಧ ವಾದುದು ಎಂದು ಅಂದಾಜಾಯ್ತಲ್ಲ?