Roopa Gururaj Column: ಅಹಂಭಾವವಿಲ್ಲದ ಸತ್ಕಾರ್ಯಕ್ಕೆ ಹೆಚ್ಚು ಬೆಲೆ
ಒಮ್ಮೆ ಯೋಚಿಸಿ ನೋಡಿ, ಮೌನವಾಗಿ ನಮಗೇ ಅರಿವಿಲ್ಲದಂತೆ ಮತ್ತೊಬ್ಬರ ಬದುಕಿನಲ್ಲಿ ಒಳಿತನ ಮಾಡುವುದು ಎಂಥ ಚಂದದ ಅನುಭವ. ಯಾರಾದರೂ ಬಹಳ ದಿನಗಳ ನಂತರ ಬಂದು ನಿಮ್ಮಿಂದ ಇಂತಹ ಉಪಕಾರವಾಗಿತ್ತು ಅದರಿಂದ ನಮ್ಮ ಜೀವನ ಬದಲಾಯಿತು ಎಂದಾಗ ಮನಸ್ಸಿಗೆ ಎಷ್ಟು ಸಂತೋಷವಾಗುತ್ತದೆ. ಹೇಳಿ ಮಾಡುವ ಉಪಕಾರಕ್ಕಿಂತ ನಮಗೆ ಅರಿವಿಲ್ಲದೆ ಆಗುವ ಉಪಕಾರ, ನೂರು ಪಟ್ಟು ಹೆಚ್ಚಿನ ತೂಕವುಳ್ಳದ್ದು


ಒಂದೊಳ್ಳೆ ಮಾತು
rgururaj628@gmail.com
ಹಿಂದೆ ಒಂದು ಕಾಲದಲ್ಲಿ ಒಬ್ಬ ಮುನಿಗಳಿದ್ದರು. ನಕ್ಷತ್ರಗಳು ತಮ್ಮಗರಿವಿಲ್ಲದಂತೆ ಬೆಳಕನ್ನು ನೀಡುವಂತೆ, ಹೂಗಳು ತಮಗರಿವಿಲ್ಲದಂತೆ ಸುಗಂಧವನ್ನು ಸೂಸುವಂತೆ ಈ ಮುನಿಗಳು, ತಮ್ಮಗರಿ ವಿಲ್ಲದಂತೆ ಸದ್ಗುಣ ಸಚ್ಚಾರಿತ್ರ್ಯವನ್ನು ಹರಡುತ್ತಾ ಸಾಗಿದ್ದರು. ಈ ಮುನಿಗಳ ದಿವ್ಯತೆ ಪವಿತ್ರತೆ, ದೇವತೆಗಳನ್ನು ಕೂಡಾ ಆಕರ್ಷಿಸಿ ಧರೆಗಿಳಿಯುವಂತೆ ಮಾಡಿತು. ಇವರ ದಿವ್ಯತೆಯನ್ನು ಕಂಡ ದೇವತೆಗಳು, ಪರಮಾತ್ಮನಲ್ಲಿ ಪ್ರಭೂ ಈ ಮುನಿಗಳಿಗೆ ಕೆಲವು ದಿವ್ಯ ಶಕ್ತಿಗಳನ್ನು ನೀವು ವರದಾನ ವಾಗಿ ಕರುಣಿಸಿ. ಅವರು ಅದನ್ನು ಖಂಡಿತವಾಗಿ ಸದ್ಬಳಕೆ ಮಾಡಿ ಕೊಳ್ಳುತ್ತಾರೆ ಎಂದು ವಿನಂತಿಸಿ ದರು. ಆಗ ಭಗವಂತ ಆ ದಿವ್ಯಶಕ್ತಿ ಆ ಮುನಿಗಳಿಗೆ ಬೇಕಾಗಿದೆಯೋ ಇಲ್ಲವೊ ಎಂದು ಅವರಲ್ಲಿಗೆ ಹೋಗಿ ಒಮ್ಮೆ ವಿಚಾರಿಸಿ ನಂತರ ನೋಡೋಣ ಎಂದು ಹೇಳಿದ. ದೇವತೆಗಳು ಮುನಿಗಳಲ್ಲಿ ಬಂದು ನಿಮ್ಮ ಸ್ಪರ್ಶ ಮಾತ್ರದಿಂದ ರೋಗಿಗಳನ್ನು ಗುಣಪಡಿಸುವಂತಹ ದಿವ್ಯ ಹಸ್ತ ನಿಮ್ಮದಾಗಬೇಕೆ? ಅಂಥಾ ವರ ನಿಮಗೆ ಬೇಕೆ? ಎಂದು ಕೇಳಿದರು. ಆಗ ಮುನಿಗಳು ಅದನ್ನು ಆ ಪರಮಾತ್ಮನೇ ಮಾಡುತ್ತಿದ್ದಾನಲ್ಲಾ ಅವನು ಮಾಡುವುದನ್ನೇ ಮತ್ತೆ ನಾನು ಏಕೆ ಮಾಡಲಿ ಎಂದರು.
ಹಾಗಾದರೆ ಕೆಟ್ಟ ಮನಸ್ಸಿನ ಮನುಷ್ಯರನ್ನು ಒಳ್ಳೆಯ ಆತ್ಮಗಳಾಗಿ ಪರಿವರ್ತನೆ ಮಾಡುವ ಚಮತ್ಕಾರಿ ವಿದ್ಯೆ ನಿಮಗೆ ಬೇಕೆ? ಎಂದು ದೇವತೆಗಳು ಕೇಳಿದಾಗ ಆ ಕೆಲಸವೆಲ್ಲಾ ನಿಮ್ಮಂಥ ದೇವತೆಗಳದ್ದು ಅದು ನನಗೆ ಬೇಡ ಎಂದರು ಮುನಿಗಳು ಶಾಂತ ಚಿತ್ತರಾಗಿ. ನಿಮ್ಮ ಒಳ್ಳೆಯತನ ಒಳ್ಳೆಯ ನೆಡವಳಿಕೆಗಳಿಂದ ಜನರು ಪ್ರಭಾವಿತರಾಗಿ ನಿಮ್ಮನ್ನು ದೇವರಂತೆ ಕೊಂಡಾಡಲು ನೀವು ಬಯಸುವಿರೆಯೇನು? ಎಂದು ದೇವತೆಗಳು ಕೇಳಿದರು.
ಇದನ್ನೂ ಓದಿ: Roopa Gururaj Column: ಜನರನ್ನು ಮೋಸಗೊಳಿಸುವ ಸುಲಭ ಮಾರ್ಗ
ಆಗ ಮುನಿಗಳು, ಬೇಡ, ಮನುಷ್ಯರು ನನ್ನಿಂದ ಪ್ರಭಾವಿತರಾಗಿ ಆ ಭಗವಂತನನ್ನೇ ಮರೆಯುವಂತೆ ಆಗಬಾರದು. ಇದೆಂತಹ ವರ ಎಂದರು. ಆಗ ದೇವತೆಗಳು, ಹಾಗಾದರೆ ನೀವೇನು ಮುನಿಗಳು. ಅವರ ಮಾತು ಕೇಳಿ ದೇವತೆಗಳಿಗೆ ಆಶ್ಚರ್ಯವಾಯಿತು.
ಮುನಿಗಳಿಗೇ ಕಾಣದಂತೆ ಅವರಿಗೆ ಗೊತ್ತಿಲ್ಲದಂತೆ ಅವರ ನೆರಳು ಅವರ ಹಿಂದೆಯೊ ಅಥವಾ ಅಕ್ಕಪಕ್ಕದಲ್ಲೊ ಬಿದ್ದಾಗ ಆ ನೆರಳಿಗೆ ರೋಗವನ್ನು ಗುಣಪಡಿಸುವ, ನೋವನ್ನು ಶಮನ ಮಾಡುವ, ದುಃಖವನ್ನು ನೀಗಿಸುವ ಚಮತ್ಕಾರಿ ಶಕ್ತಿಯನ್ನು ದೇವತೆಗಳು ನೀಡಿದರು. ಅವರ ನೆರಳಿನಿಂದ ಶುಷ್ಕ ಪ್ರದೇಶಗಳು ಹಸಿರಾದವು. ಒಣಗಿದ ಸಸ್ಯಗಳು ಚಿಗುರಿ ಹೂ ಬಿಟ್ಟವು. ಬತ್ತಿದ ಹಳ್ಳ, ಕೊಳ್ಳಗಳು ನೀರಿನಿಂದ ತುಂಬಿದವು. ಬಿಳುಚಿಕೊಂಡಿದ್ದ ಹಾಲು ಹಸುಳೆಗಳ ಮುಖದಲ್ಲಿ ರಂಗು ತುಂಬಿತು. ಅಸಂತುಷ್ಟ ಪುರುಷ ಮಹಿಳೆಯರು ಅವರ ಆಶೀರ್ವಾದ ಪಡೆದು ಸಂತುಷ್ಟರಾದರು.
ತಮಗರಿವಿಲ್ಲದಂತೆ ಮುನಿಗಳು, ಸದ್ಗುಣ ಸಚ್ಚಾರಿತ್ಯವನ್ನು ಎಲ್ಲೆಡೆ ಪಸರಿಸುತ್ತಿದ್ದರು. ಜನರೆಲ್ಲ ಅವರ ಸದ್ಗುಣವನ್ನು, ಸನ್ನಡತೆಯನ್ನು, ಗೌರವಿಸುತ್ತಾ ಮೌನದಿಂದ ಅವರನ್ನೇ ಹಿಂಬಾಲಿಸು ತ್ತಿದ್ದರು.
ಒಮ್ಮೆ ಯೋಚಿಸಿ ನೋಡಿ, ಮೌನವಾಗಿ ನಮಗೇ ಅರಿವಿಲ್ಲದಂತೆ ಮತ್ತೊಬ್ಬರ ಬದುಕಿನಲ್ಲಿ ಒಳಿತನ ಮಾಡುವುದು ಎಂಥ ಚಂದದ ಅನುಭವ. ಯಾರಾದರೂ ಬಹಳ ದಿನಗಳ ನಂತರ ಬಂದು ನಿಮ್ಮಿಂದ ಇಂತಹ ಉಪಕಾರವಾಗಿತ್ತು ಅದರಿಂದ ನಮ್ಮ ಜೀವನ ಬದಲಾಯಿತು ಎಂದಾಗ ಮನಸ್ಸಿಗೆ ಎಷ್ಟು ಸಂತೋಷವಾಗುತ್ತದೆ. ಹೇಳಿ ಮಾಡುವ ಉಪಕಾರಕ್ಕಿಂತ ನಮಗೆ ಅರಿವಿಲ್ಲದೆ ಆಗುವ ಉಪಕಾರ, ನೂರು ಪಟ್ಟು ಹೆಚ್ಚಿನ ತೂಕವುಳ್ಳದ್ದು. ಅದಕ್ಕಾಗಿ ಒಂದು ಒಳ್ಳೆಯ ವ್ಯಕ್ತಿತ್ವ ವನ್ನ ಬೆಳೆಸಿಕೊಂಡಾಗ ಸದಾ ಒಳ್ಳೆಯ ಯೋಚನೆಗಳನ್ನು ಕೆಲಸಗಳನ್ನು ಮಾಡುವಂತಹ ಪ್ರಯತ್ನ ಮಾಡಿದಾಗ ಇಂತಹ ಅನುಭವಗಳನ್ನು ನಮ್ಮದಾಗಿಸಿಕೊಳ್ಳಬಹುದು.