ಶಶಾಂಕಣ
ಕಳೆದ ವಾರ, ಪತ್ರಿಕೆಗಳಲ್ಲಿ ಒಂದು ಪುಟ್ಟ ಸುದ್ದಿ ಪ್ರಕಟವಾಯಿತು. ಅದೇನೆಂದರೆ, ನಮ್ಮ ರಾಜ್ಯದ ಕೆಲವು ಪರ್ವತ ಮತ್ತು ಬೆಟ್ಟಗಳಲ್ಲಿ ಕಾಡಿನ ಬೆಂಕಿಯ ಅಪಾಯದ ಸಂಭಾವ್ಯತೆ ಇರುವುದ ರಿಂದಾಗಿ, ಕುದುರೆಮುಖ ಮೊದಲಾದ ಸುಂದರ ತಾಣಗಳಿಗೆ ಚಾರಣ ಕೈಗೊಳ್ಳುವುದನ್ನೇ ಕೆಲವು ವಾರಗಳ ಕಾಲ ನಿಷೇಧಿಸಲಾಗಿದೆ!
ಪರ್ವತಗಳ ಅಂದವನ್ನು ನೋಡಲು ಚಾರಣ ಕೈಗೊಳ್ಳುವವರು ಅಲ್ಲಿರುವ ಹುಲ್ಲಿಗೆ ಬೆಂಕಿ ಹಾಕುವ ಸಾಧ್ಯತೆ ಮತ್ತು ಆಕಸ್ಮಿಕವಾಗಿ ಹರಡುವ ಕಾಡಿನ ಬೆಂಕಿಯು ಅಂಥವರಿಗೆ ಅಪಾಯವನ್ನುಂಟು ಮಾಡಬಾರದು ಎಂಬ ಎಚ್ಚರಿಕೆಯಿಂದ ಇಂಥದೊಂದು ನಿರ್ಬಂಧವನ್ನು ಹಾಕಿರುವುದು ನಮ್ಮ ಸರಕಾರದ ಅಂಗಸಂಸ್ಥೆಗಳು.
ನಿಜ, ನಮ್ಮ ಕಾಡುಪ್ರದೇಶದಲ್ಲಿ ಈಗ ಕಾಳ್ಗಿಚ್ಚು ಹರಡುವ ಕಾಲ. ಜನರ ಕುರಿತು ಮತ್ತು ಕಾಡಿನ ಕುರಿತು ಇರುವ ಅಪಾರ ಕಾಳಜಿಯಿಂದಾಗಿ, ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಿರುವುದು ಮೇಲ್ನೋಟಕ್ಕೆ ಸರಿ ಎನ್ನಿಸಬಹುದಾದರೂ, ಪ್ರವಾಸ ಮತ್ತು ಚಾರಣದ ಉದ್ದೇಶಕ್ಕೆ ಮತ್ತು ಅದರಿಂದ ದೊರಕುವ ಲಾಭಗಳ ಮೂಲಕ್ಕೇ ಕೊಡಲಿ ಏಟು ಹಾಕುವಂಥ ನಿರ್ಬಂಧ ಇದು ಎನ್ನಿಸುವುದಿಲ್ಲವೆ? ನೆಗಡಿಯಾಗುತ್ತದೆ ಎಂಬ ಭಯಕ್ಕೆ, ಮೂಗನ್ನೇ ಕತ್ತರಿಸಿದಂತೆ ಅಲ್ಲವೇ ಇಂಥ ಕ್ರಮಗಳು? ಏಕೆಂದರೆ, ದೈಹಿಕ ಶ್ರಮವನ್ನು ಬೇಡುವ ಚಾರಣದಿಂದ ಆರೋಗ್ಯಕ್ಕೂ ಲಾಭ, ಜ್ಞಾನ ವೃದ್ಧಿಸಿ ಮನಸ್ಸಿಗೂ ಲಾಭ ಮತ್ತು ಅಂಥ ಚಾರಣದಿಂದ ಪ್ರವಾಸೋದ್ಯಮಕ್ಕೂ ಲಾಭ ಎಂಬ ವಿಚಾರ ಸರ್ವವಿದಿತ.
ಇದನ್ನೂ ಓದಿ: Shashidhara Halady Column: ಒಂದು ಹಡಗಿನ ತುಂಬಾ ರಫ್ತಾದ ನುಗ್ಗೆಗಿಡದ ಬೀಜ
ಬೆಟ್ಟ ಗುಡ್ಡಗಳಲ್ಲಿ ಅಲೆದಾಡುವ ಚಾರಣಿಗರು, ಎಡವಟ್ಟು ಮಾಡದಂತೆ, ಹುಲ್ಲಿಗೆ ಬೆಂಕಿ ಹಾಕ ದಂತೆ ಎಚ್ಚರಿಕೆಗಳನ್ನು ಕೈಗೊಂಡು, ಚಾರಣಕ್ಕೆ ಅವಕಾಶವನ್ನು ನೀಡುವುದು ಜವಾಬ್ದಾರಿ ಯುತ ಕ್ರಮ ಎನಿಸಬಹುದು; ಆದರೆ, ಕೆಲವು ಸೂಕ್ಷ್ಮ ತಾಣಗಳಿಗೆ ಒಟ್ಟಾರೆ ಚಾರಣವನ್ನೇ ನಿರ್ಬಂಧಿಸು ವುದು ಎಷ್ಟು ಸರಿ? ಇದು ಚರ್ಚೆಗೆ ಒಳಬೇಕಾದ ವಿಷಯ.
ತುಂಬಿದ ಜಲಪಾತದ ನೋಟವನ್ನು, ನೊರೆನೊರೆಯಾಗಿ ಧುಮುಕುವ ನೀರಿನ ನರ್ತನವನ್ನು ನೋಡಿ, ಮನಸೋಲದ ಮನುಷ್ಯನೇ ಇಲ್ಲ ಎನ್ನಬಹುದು. ನಮ್ಮ ಬದುಕಿನ ಅತಿ ಸುಂದರ ಅನುಭವಗಳಲ್ಲಿ ಜಲಪಾತದ ವೀಕ್ಷಣೆಯೂ ಒಂದು. ಅದೇ ರೀತಿ, ಪರ್ವತವೊಂದನ್ನು ಏರಿ, ಅದರ ತುದಿಯಲ್ಲಿ ನಿಂತು, ಸುತ್ತಲಿನ ಭೂದೃಶ್ಯವನ್ನು ಕಾಣುವಾಗ ದೊರಕುವ ಮಹದಾನಂದವನ್ನು ಅನುಭವಿಸಿಯೇ ತಿಳಿಯಬೇಕೇ ಹೊರತು ಅಕ್ಷರಗಳಲ್ಲಿ ವರ್ಣಿಸಲು ಅಸಾಧ್ಯ.
ನೆರೆಯ ನೀರು ಪ್ರವಾಸಿಗರಿಗೆ, ಚಾರಣಿಗರಿಗೆ ಅಪಾಯ ತಂದೊಡ್ಡಬಹುದೆಂಬುದು ನಿಜವಾದರೂ, ಅದಕ್ಕೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಿದರೆ, ರಕ್ಷಣೆಗೆಂದು ಸಿಬ್ಬಂದಿಯನ್ನು ನೇಮಿಸಿ, ಅದಕ್ಕೆ ತಗಲುವ ವೆಚ್ಚವನ್ನು ಚಾರಣಿಗರಿಂದ, ಪ್ರವಾಸಿಗರಿಂದ ವಸೂಲು ಮಾಡಿದರೆ, ಅದರಿಂದ ಎಲ್ಲರಿಗೂ ಲಾಭ, ಅಲ್ಲವೆ? ನಮ್ಮ ರಾಜ್ಯದಲ್ಲಿ ಹಲವು ಸುಂದರ ತಾಣಗಳಿವೆ.
ಕುದುರೆಮುಖ, ಕುಮಾರ ಪರ್ವತ, ಎತ್ತಿನ ಭುಜ, ಕೊಡಚಾದ್ರಿ, ಮುಳ್ಳಯ್ಯನಗಿರಿ ಮೊದಲಾದ ಕಡೆ, ವರ್ಷದ ಈ ಸಮಯದಲ್ಲಿ (ಜನವರಿ-ಫೆಬ್ರವರಿ) ಹುಲ್ಲು ಒಣಗುತ್ತದೆ. ಒಂದು ಕಿಡಿ ತಾಗಿದರೂ, ಆ ಹುಲ್ಲಿಗೆ ಬೆಂಕಿ ಹೊತ್ತಿಕೊಳ್ಳಬಹುದು, ಮತ್ತು ಆ ಬೆಂಕಿಯು ಸುತ್ತಲಿನ ಕಾಡಿಗೂ ವ್ಯಾಪಿಸಬಹುದು.
ಅಂಥ ಸಂಭಾವ್ಯತೆ ಪ್ರತಿ ವರ್ಷ ಜನವರಿಯಿಂದ ಕಾಣಿಸಿಕೊಳ್ಳುತ್ತದೆ. ಅದನ್ನು ತಡೆಯುವುದು ಸರಕಾರದ ಇಲಾಖೆಗಳ ಮತ್ತು ಸಂಬಂಧಪಟ್ಟವರ ಕರ್ತವ್ಯವೂ ಹೌದು. ಅದಕ್ಕೆ ಸೂಕ್ತ ಎಚ್ಚರಿಕೆ ಯನ್ನು ತೆಗೆದುಕೊಂಡು, ಚಾರಣಕ್ಕೆ ಅವಕಾಶ ಮಾಡಿಕೊಡುವುದು ಉತ್ತಮ ನಿರ್ಧಾರ ಎನಿಸೀತು. ನಮ್ಮ ರಾಜ್ಯದ ಬಹು ಸುಂದರ ತಾಣಗಳಲ್ಲಿ, ಕೆಲವು ಬಾರಿ ಬಿಕ್ಕಟ್ಟುಗಳು ಎದುರಾಗುತ್ತವೆ. ಎತ್ತಿನ ಭುಜ ಮತ್ತು ಕುಮಾರ ಪರ್ವತಗಳಂಥ ಪರಿಸರ ಸೂಕ್ಷ್ಮ ತಾಣಗಳನ್ನು ನೋಡಲು ಒಂದೇ ದಿನ ಸಾವಿರಾರು ಜನರು ಬರುವುದು!
ಸಾವಿರಾರು ಜನರು ಸೇರಿದಾಗ, ಅವರು ಸುಂದರ ಪರಿಸರವನ್ನು ನೋಡಿ, ಅಲ್ಲೇ ಬೆರೆತು, ಮನಸ್ಸಂತೋಷ ಹೊಂದಬೇಕಾದ ತಾಣದಲ್ಲಿ, ಪರಿಸರಹಾನಿಯಂಥ ಚಟುವಟಿಕೆಗಳು ನಡೆಯ ಬಾರದು ತಾನೆ? ಹಾಗಾಗದಂತೆ ನೋಡಿಕೊಳ್ಳಬೇಕಾದುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ಆದರೆ, ಜನರು ಅಧಿಕ ಸಂಖ್ಯೆಯಲ್ಲಿ ಬಂದು ಪರಿಸರ ವೀಕ್ಷಣೆ ಮಾಡಿದರೆ, ಅಂಥ ಜಾಗಗಳಿಗೆ ಹಾನಿಯಾದೀತು, ಅದನ್ನು ತಡೆಯಬೇಕು ಎಂಬ ಕಾಳಜಿಯಲ್ಲಿ, ಅಲ್ಲಿಗೆ ಒಟ್ಟಾರೆ ಚಾರಣವನ್ನೇ ನಿಷೇಧಿಸುವುದು ಎಷ್ಟು ಸರಿ? ರಸ್ತೆಗಳಲ್ಲಿ ವಾಹನಗಳು ಸಾಗುವಾಗ, ಅಪಘಾತವಾಗಿ ಜೀವಹಾನಿಯಾಗುತ್ತದೆ; ಹಾಗಂತ, ವಾಹನ ಸಂಚಾರವನ್ನೇ ನಿಷೇಧಿಸುವುದು ಎಷ್ಟು ಸಮಂಜಸ? ಇದೂ ಅಂಥದ್ದೇ ಸನ್ನಿವೇಶ ಅಲ್ಲವೆ? ಎತ್ತಿನಭುಜ ಶಿಖರದಂಥ ಸುಂದರ, ಅಗಲ ಕಿರಿದಾದ ಪ್ರದೇಶಗಳಲ್ಲಿ, ಒಂದೇ ದಿನ ಸಾವಿರಾರು ಜನ ಇಕ್ಕಟ್ಟಾಗಿ ಸೇರುವುದು ನಿಜಕ್ಕೂ ಸೂಕ್ಷ್ಮ ವಿಚಾರವೇ ಸರಿ, ಅದರಲ್ಲಿ ಅನುಮಾನವೇ ಇಲ್ಲ; ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಲು ಬಂದವರು, ಆ ಪ್ರದೇಶದ ಮೂಲ ಸೌಂದರ್ಯವನ್ನು ಹಾಳುಮಾಡಬಾರದು ಮತ್ತು ಅಲ್ಲಿ ಪ್ಲಾಸ್ಟಿಕ್ ಎಸೆದು ಗಲೀಜು ಮಾಡಬಾರದು.
ಒಣಗಿದ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ಹಚ್ಚಬಾರದು ಎಂಬುದು ಸಹ ಉತ್ತಮ ಕಾಳಜಿ. ಆದರೆ, ಅಲ್ಲಿಗೆ ಜನರೇ ಬರಬಾರದು ಎಂದು ನಿಷೇಧ ಹೇರುವುದು ತುಸು ಅತಿರೇಕವೇ ಎನಿಸುತ್ತದೆ, ಅಲ್ಲವೆ? ಹಾಗಿದ್ದರೆ ಕುದುರೆಮುಖ ಶಿಖರ, ಕುಮಾರ ಪರ್ವತದಂಥ ಪರಿಸರವನ್ನು ರಕ್ಷಿಸಲು ಏನು ಮಾಡಬೇಕು ಎಂದು ನೀವು ಪ್ರಶ್ನಿಸಬಹುದು.
ಉತ್ತರ ಸರಳ- ಪರಿಸರಕ್ಕೆ ಲವಲೇಶವೂ ಹಾನಿಯಾಗದಂತೆ ಅಲ್ಲಿಗೆ ಚಾರಣಿಗರು ಬರುವಂಥ ನಿಯಮಾವಳಿಗಳನ್ನು ರೂಪಿಸಿ, ಅಲ್ಲಿಗೆ ಪ್ರಾಮಾಣಿಕ ಪರಿಸರ ಪ್ರೇಮಿಗಳು ಬರುವಂತೆ ಮಾಡು ವುದು. ಇಂಥ ಜಾಗಗಳಿಗೆ ಮಕ್ಕಳು ಮತ್ತು ದೊಡ್ಡವರು ಬಂದು, ಅಲ್ಲಿನ ಹಸಿರಿನ ಸಿರಿಯನ್ನು, ಮೋಡಗಳ ಆಟವನ್ನು ನೋಡುವುದರಿಂದ, ಅವರಲ್ಲೂ ಪರಿಸರಾಸಕ್ತಿ ಬೆಳೆಯುತ್ತದೆ, ಮುಂದಿನ ದಿನಗಳಲ್ಲಿ ಅವರಲ್ಲಿ ಕೆಲವರಾದರೂ ಪರಿಸರ ರಕ್ಷಿಸುವ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಪರಿಸರ ಸೂಕ್ಷ್ಮ ಪ್ರದೇಶಗಳಿಗೆ, ಒಣಹುಲ್ಲಿಗೆ ಬೆಂಕಿ ತಗಲುವ ಸಂಭಾವ್ಯತೆ ಇರುವ ತಾಣಗಳಿಗೆ, ಒಂದು ದಿನಕ್ಕೆ ಗರಿಷ್ಠ ಇಂತಿಷ್ಟು ಮಂದಿ ಭೇಟಿಕೊಡುವಂತೆ ಮಾಡುವುದು ಒಂದು ಪರಿಹಾರ. ಇದಕ್ಕೆ ಆನ್ಲೈನ್ ನೋಂದಣಿ ಸಹಕಾರಿ. ಹುಲ್ಲಿಗೆ ಬೆಂಕಿ ತಗುಲದಂತೆ ಸೂಕ್ತ ಎಚ್ಚರಿಕೆ ವಹಿಸು ವುದು ಪ್ರಮುಖ ಕ್ರಮ; ಚಾರಣಿಗರು ಕಪಿಚೇಷ್ಟೆ ಮಾಡದಂತೆ, ಎಡವಟ್ಟು ಮಾಡದಂತೆ ಅಗತ್ಯ ವೆನಿಸುವ ಕಣ್ಗಾವಲು ನೇಮಿಸಬಹುದು.
ಇದನ್ನು ಈಗಾಗಲೇ ನೇತ್ರಾವತಿ ಶಿಖರದಂಥ ಕೆಲವು ತಾಣಗಳಲ್ಲಿ ಅರಣ್ಯ ಇಲಾಖೆ ಜಾರಿಗೆ ತಂದಿದೆ. ಸ್ಥಳೀಯ ಗೈಡ್ಗಳನ್ನು ಜತೆಯಲ್ಲಿ ಕಡ್ಡಾಯವಾಗಿ ಕರೆದೊಯ್ಯುವಂತೆ ಮಾಡಿ, ತಮ್ಮ ಸುತ್ತಲಿನ ಪ್ರಕೃತಿಗೆ ಸ್ಥಳೀಯರು ಅದೆಷ್ಟು ಗೌರವ ಕೊಡುತ್ತಾರೆಂದು ತಿಳಿಯಪಡಿಸುವಂತೆ ಮಾಡುವುದು ಸಹ ಮುಖ್ಯವಾಗಬಲ್ಲದು.
ಕೇರಳದ ಸೈಲೆಂಟ್ ವ್ಯಾಲಿಗೆ ಭೇಟಿ ನೀಡುವವರು, ಸ್ಥಳೀಯ ಗೈಡ್ ಜತೆಯಲ್ಲೇ ಓಡಾಡುವ ನಿಯಮ ಇರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೈಲೆಂಟ್ ವ್ಯಾಲಿಯಲ್ಲಿ ಸಂಚರಿಸುವ ಪ್ರವಾಸಿಗರು ಮತ್ತು ಚಾರಣಿಗರು ತಮ್ಮ ಜತೆ ಸ್ಥಳೀಯ ಗೈಡ್ ಅನ್ನು ಕಡ್ಡಾಯವಾಗಿ ಕೊಂಡೊಯ್ಯ ಲೇಬೇಕು!
ಒಂದು ಸುಂದರ ತಾಣಕ್ಕೆ ಪ್ರವೇಶವನ್ನೇ ಒಟ್ಟೂ ನಿಷೇಧಿಸುವ ಬದಲಿಗೆ, ಸೂಕ್ತ ನಿಯಮಾವಳಿ ಗಳನ್ನು ರೂಪಿಸಿ, ಪಾಲಿಸುವಂತೆ ಮಾಡಿ ನಿಸರ್ಗ ವೀಕ್ಷಣೆಗೆ ಅವಕಾಶ ದೊರಕಿಸಿಕೊಟ್ಟಾಗ, ಒಂದು ‘ವಿನ್-ವಿನ್’ ಸನ್ನಿವೇಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಇದರಿಂದಾಗಿ, ಮಕ್ಕಳಲ್ಲಿ, ಜನರಲ್ಲಿ ಪರಿಸರ ಪ್ರೇಮ ಬೆಳೆಸಿ, ಮುಂದೆ ಅವರೇ ಪರಿಸರ ರಕ್ಷಕರಾಗುವಂತೆ ಮಾಡುವುದು ಸಹ ಸಾಧ್ಯ.
ಚಾರಣ ಎಂದಾಕ್ಷಣ, 1980ರ ದಶಕದಲ್ಲಿ ನಾವು ಕೈಗೊಂಡ ಚಾರಣದ ನೆನಪಾಗುತ್ತದೆ. ಆಗಿನ್ನೂ ಪ್ಲಾಸ್ಟಿಕ್ ಹಾವಳಿ ಆರಂಭವಾಗಿರಲಿಲ್ಲ. ಆದ್ದರಿಂದಲೇ ಇರಬೇಕು, ರೆಡಿ ಕುಕ್ ಮಿಕ್ಸ್, ಪ್ಲಾಸ್ಟಿಕ್ ಕವರಿನಲ್ಲಿನ ವಿವಿಧ ತಿನಿಸುಗಳ ಕಾಟವಿರಲಿಲ್ಲ- ಒಂದು ಕಿಲೋ ಅಕ್ಕಿ, 100 ಗ್ರಾಂ ಕೊಳಂಬೊ ಪುಡಿ (ಸಾಂಬಾರು ಪುಡಿ), ಅರ್ಧ ಕಿಲೊ ಟೊಮೇಟೊ, 100 ಗ್ರಾಂ ಟೀ ಪುಡಿ, ಹಾಲಿನ ಪುಡಿ, ಒಂದಿಷ್ಟು ಬ್ರೆಡ್, ಹಣ್ಣು ಮೊದಲಾದವುಗಳನ್ನು ನಮ್ಮ ಭುಜದ ಚೀಲಕ್ಕೆ ತುಂಬಿಕೊಳ್ಳುವುದರ ಮೂಲಕ ಚಾರಣದ ತಯಾರಿ ಆರಂಭ. ಅದೊಂದು ದಿನ ನಾವು ನಾಲ್ಕು ಜನ, ಬೆಳಗ್ಗೆ ಆರು ಗಂಟೆಗೆ ಸುಬ್ರಹ್ಮಣ್ಯದ ಪುಟ್ಟ ಹೋಟೆಲ್ನಲ್ಲಿ ಇಡ್ಲಿ ತಿಂದು, ಕಾಡಿನ ದಾರಿ ಹಿಡಿದೆವು.
ದಟ್ಟಕಾಡಿನ ನಡುವಿನ ಏರುದಾರಿಯಲ್ಲಿ ನಡೆಯುವಾಗ, ಬೆವರು, ಸೆಕೆ, ಸುಸ್ತು; ಜತೆಗೇ ಕಾಡಿನ ವೀಕ್ಷಣೆ, ಅಲ್ಲಿನ ನಿಗೂಢ ಮೌನದ ಭಾಗವಾಗುವ ಅದೃಷ್ಟ. ಕಲ್ಲುಗುಡ್ಡೆ ಎಂಬ ಕಲ್ಲು ತುಂಬಿದ ಕಡಿದಾದ ಏರನ್ನು ಹತ್ತಿದ ಬಳಿಕ, ನಿಧಾನವಾಗಿ ಸಹ್ಯಾದ್ರಿಯ ಸಿರಿ ಕಾಣಿಸತೊಡಗಿತು.
ಹಸಿರಿನ ಪರ್ವತಗಳ ನೋಟವನ್ನು ಕಣ್ತುಂಬಿಕೊಳ್ಳುತ್ತಾ, ‘ಗಿರಿಗದ್ದೆ’ ತಲುಪಿದಾಗ, ಬೆಳಗಿನ ಸುಮಾರು 10 ಗಂಟೆ. ಅಲ್ಲಿ ವಾಸವಿದ್ದ ಮಹಾಲಿಂಗ ಭಟ್ಟರು ಮತ್ತು ಅವರ ಕುಟುಂಬ ನಮಗೆ ಉಚಿತವಾಗಿ ಮಜ್ಜಿಗೆ ನೀಡಿದರು. ‘ಇಲ್ಲೇ ಊಟ ಮಾಡಬಹುದು’ ಎಂಬ ಆಹ್ವಾನವನ್ನೂ ನೀಡಿದರು!
ನಾವು ಮುಂದುವರಿದು, ಬಿರುಬಿಸಿಲಿನಲ್ಲಿ ನಡೆಯುತ್ತಾ ಬೆಟ್ಟವೇರಿದಾಗ ಮುಂದಿನ ಒಂದೆರಡು ಗಂಟೆಗಳಲ್ಲಿ ಎದುರಾಗಿದ್ದೇ ಕಲ್ಲುಮಂಟಪ. ಅದರ ಬಳಿ ವಿಶ್ರಾಂತಿ. ಮೂರು ಕಲ್ಲುಗಳೇ ಒಲೆ; ಸುತ್ತಮುತ್ತ ದೊರಕಿದ ತರಗಲೆ, ಒಣಕಡ್ಡಿಗಳೇ ಉರುವಲು; ಹೊತ್ತು ತಂದಿದ್ದ ಪುಟ್ಟ ಅಲ್ಯುಮಿನಿ ಯಂ ಪಾತ್ರೆಯಲ್ಲಿ ನೀರು ತುಂಬಿ, ಅಕ್ಕಿ ಬೇಯಿಸಿ, ಗಂಜಿ ಮಾಡಿದೆವು.
ಉಪ್ಪು, ಉಪ್ಪಿನ ಕಾಯಿಯ ಜತೆ ಅದನ್ನು ಸೇವಿಸಿದಾಗ ಊಟದ ಕೆಲಸ ಮುಗಿದಂತೆ. ಸುತ್ತಲಿನ ಹುಲ್ಲಿಗೆ ಬೆಂಕಿಯ ಕಿಡಿ ತಾಗದಂತೆ ಎಚ್ಚರಿಕೆ ವಹಿಸಿದೆವು. ಬಹುಶಃ ಇಂಥ ಸಂದರ್ಭಗಳಲ್ಲಿ ಸ್ಥಳೀಯ ಗೈಡ್ ಕಡ್ಡಾಯವಾಗಿ ಇದ್ದರೆ, ಅವರು ಚಾರಣಿಗರಿಗೆ ಇನ್ನಷ್ಟು ರಕ್ಷಣಾ ಮಾರ್ಗದರ್ಶನ ವನ್ನು ನೀಡಬಲ್ಲರು.
ನಮ್ಮ ಚಾರಣ ಮುಂದುವರಿಸಿ, ‘ಬತ್ತದ ರಾಶಿ’ ಎಂಬ ಹೆಸರಿನ ಕಡಿದಾದ ಬೆಟ್ಟವನ್ನು ಏರಿ, ಒಂದೆರಡು ಗಂಟೆ ನಡೆದಾಗ, ಶೇಷ ಪರ್ವತ, ಸಿದ್ಧ ಪರ್ವತ, ಕುಮಾರ ಪರ್ವತಗಳ ದರ್ಶನ ವಾಯಿತು. ಅಲ್ಲಿಂದ ಕಾಣಿಸುವ ಒಂದು ಬೃಹತ್ ಶಿಲಾಭಿತ್ತಿಯು, ನಮ್ಮ ನಾಡಿನ ಅತಿ ಎತ್ತರದ ಶಿಲಾಭಿತ್ತಿಗಳಲ್ಲೊಂದು. ಆ ಸುತ್ತಲೂ ಪರ್ವತಗಳು ಹೇಗೆ ಹರಡಿವೆ ಎಂದರೆ, ಆ ಶಿಲಾಭಿತ್ತಿಯಿಂದ ಏಳು ಬಾರಿ ಪ್ರತಿಧ್ವನಿ ಕೇಳಿಸುತ್ತದೆ.
ಆ ಎತ್ತರದಿಂದ ಕಾಣಿಸುವ ಕಾಡು, ಬೆಟ್ಟ, ಶಿಲೆ, ದೂರದ ಪರ್ವತ ಶ್ರೇಣಿ ಎಲ್ಲವೂ ಬಹು ಸುಂದರ, ನೋಡುತ್ತಲೇ ನಿಲ್ಲಬೇಕೆನಿಸುವ ದೃಶ್ಯ ಅದು. ಪ್ರಪಾತದಂಚಿನಲ್ಲೇ ಸಾಗುವ ದಾರಿಯನ್ನು ಅನುಸರಿಸಿ, ನಂತರ ಹದವಾದ ಕಾಡಿನಲ್ಲಿ ನಡೆದು, ತೊರೆಯೊಂದರ ಬಳಿ ಬಂದೆವು. ಅಲ್ಲೇ ಇರುವ ಒಂದು ಬಂಡೆಯನ್ನು ಏರಿ, ಸ್ವಲ್ಪ ದೂರ ನಡೆದಾಗ, ಶಿಖರದ ದರ್ಶನ. ಆ ಎತ್ತರದಿಂದ ಮಡಿಕೇರಿ ಜಿಲ್ಲೆಯ ನೋಟ ಕಾಣಿಸುತ್ತದೆ.
ಕುಮಾರ ಪರ್ವತದ ತುದಿಯಲ್ಲಿ ಒಂದು ಪುಟ್ಟ ದೇಗುಲವಿದೆ. ಸ್ಥಳೀಯವಾಗಿ ದೊರಕುವ ಕಲ್ಲುಗಳಿಂದ ಮಾಡಿದ ಪುಟ್ಟ ಪಾಗಾರ, ಗೋಡೆಯಂಥ ರಚನೆ. ಇಲ್ಲಿನ ಪರಿಸರದಲ್ಲಿ ಒಂದು ಅಪರೂಪದ ಶಿಲಾ ವಿಸ್ಮಯವಿದೆ. ಅಂಥ ನೈಸರ್ಗಿಕ ವಿಸ್ಮಯಗಳಿಗೆ ಹೆಚ್ಚು ಪ್ರಚಾರ ನೀಡಬಾರ ದೆಂದೇ ನನ್ನ ಅಭಿಮತವಾದ್ದರಿಂದ, ಅದರ ವಿವರಗಳನ್ನು ಉದ್ದೇಶಪೂರ್ವಕವಾಗಿ ಇಲ್ಲಿ ನೀಡಿಲ್ಲ. ಅಷ್ಟರಲ್ಲಿ ಸಂಜೆಯಾಯಿತು.
ಸಮುದ್ರಮಟ್ಟದಿಂದ 5,626 ಅಡಿ ಎತ್ತರವಿರುವ ಆ ಜಾಗದಿಂದ ಸೂರ್ಯಾಸ್ತವನ್ನು ನೋಡುವ ಅನುಭವವು ವಿಭಿನ್ನ, ಅನನ್ಯ. ಕತ್ತಲಾವರಿಸುತ್ತಿದ್ದಂತೆ, ವಾಪಸು ಹೊರಟು, ಶಿಖರದ ಕೆಳಗಿರುವ ತೊರೆಯ ಬಳಿ ಠಿಕಾಣಿ ಹೂಡಿದೆವು. 1980ರ ದಶಕದಲ್ಲಿ ಅಲ್ಲಿ ತಂಗಲು ಅವಕಾಶವಿತ್ತು (ಈಗ ಇಲ್ಲ). ತೊರೆಯ ಬಳಿ ಮೂರು ಕಲ್ಲು ಹೂಡಿದೆವು. ಒಣಗಿದ ಪುಟ್ಟ ಪುಟ್ಟ ಪುರಲೆಯನ್ನು ಆರಿಸಿ, ಅನ್ನ ಬೇಯಿಸಿದೆವು.
ಊರಿನಿಂದ ತಂದಿದ್ದ ಟೊಮೇಟೋ, ಸಾಂಬಾರು ಪುಡಿ ಬಳಸಿ ತಿಳಿಸಾರು ತಯಾರಿ. ಎಲ್ಲೂ ಪ್ಲಾಸ್ಟಿಕ್ ಎಸೆಯಲಿಲ್ಲ; ಬೆಂಕಿ ಹರಡುವಂಥ ಚಟುವಟಿಕೆಯನ್ನು ಮಾಡಲಿಲ್ಲ. ಚಳಿಯ ರಕ್ಷಣೆಗೆ ಒಂದು ಬೆಡ್ಶೀಟ್. ಮರುದಿನ ಬೇಗನೆದ್ದು, ಚಹಾ ತಯಾರಿಸಿ, ಬ್ರೆಡ್ ಜತೆ ಸೇವಿಸಿ, ಅಲ್ಲೇ ಒಂದಿಷ್ಟು ಪರಿಶೋಧನೆ ನಡೆಸಿದೆವು.
ತೊರೆಯಿಂದ ಇನ್ನೊಂದು ದಿಕ್ಕಿಗೆ ಒಂದು ಕಿ.ಮೀ. ನಡೆದರೆ, ಸಿದ್ಧಪರ್ವತದ ತುದಿ ತಲುಪಬಹುದು. ಅಲ್ಲಿನ ಪ್ರಪಾತದ ಅಂಚಿನಲ್ಲಿ ನಿಂತರೆ, ಶಿಲಾಭಿತ್ತಿಗಳ ಮತ್ತು ಪರ್ವತ ಕಮರಿಗಳ ವಿಭಿನ್ನ ನೋಟ ಲಭ್ಯ. ಆ ತುದಿಯಲ್ಲಿ, ಒಂದು ಕಲ್ಲಿನ ಮೇಲೆ ಎರಡು ಪವಿತ್ರ ಪಾದಗಳ ಗುರುತನ್ನು ಬಹು ಹಿಂದೆ ಯಾರೋ ಕೆತ್ತಿದ್ದರು. ಅರ್ಧಗಂಟೆ ಅಲ್ಲಿ ಅಡ್ಡಾಡಿ, ಪುನಃ ರಾತ್ರಿ ತಂಗಿದ್ದ ಜಾಗಕ್ಕೆ ಬಂದು, ಅಲ್ಲಿದ್ದ ಕಸ, ಪೇಪರು ಎಲ್ಲವನ್ನೂ ಆ ಪರಿಸರದಲ್ಲಿ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಿದೆವು. ಇದನ್ನು ಏಕೆ ಒತ್ತಿಹೇಳಿದೆನೆಂದರೆ, ಆಗಿನ ದಿನಗಳಲ್ಲಿ ನಾವು ಕೈಗೊಳ್ಳುತ್ತಿದ್ದ ಇಂಥ ಚಾರಣಗಳಿಂದ ಪರಿಸರ ನಾಶವಾಗುತ್ತಿರಲಿಲ್ಲ (ಇಂದಿನ ಸನ್ನಿವೇಶಕ್ಕೆ ಇದನ್ನು ಅನ್ವಯಿಸಿ ಹೇಳುವುದಾರೆ, ಸೂಕ್ಷ್ಮ ಪಾರಿಸರಿಕ ತಾಣಗಳಿಗೆ ಸಾಗುವ ಪ್ರತಿ ಚಾರಣದ ತಂಡದ ಜತೆ, ಅರಣ್ಯ ಇಲಾಖೆಯ ಸಿಬ್ಬಂದಿ ಯನ್ನು ಅಥವಾ ಸ್ಥಳೀಯರನ್ನು ಗೈಡ್ ರೂಪದಲ್ಲಿ ಕಳಿಸಿ, ಚಾರಣಿಗರು ಯಾವುದೇ ಎಡವಟ್ಟು ಮಾಡದಂತೆ ನೋಡಿಕೊಂಡು, ಸುರಕ್ಷಿತ ಚಾರಣವನ್ನು ಮಾಡುವರೆಂದು ಖಚಿತಪಡಿಸಿ ಕೊಳ್ಳಬಹುದು).
ಪ್ರಕೃತಿಯ ಶಿಶುಗಳಂತೆ ವರ್ತಿಸುತ್ತಾ, ಅಲ್ಲಿನ ನೋಟವನ್ನು ಕಣ್ತುಂಬಿಕೊಂಡು, ಮರಗಳ ಆಶ್ರಯ ದಲ್ಲಿ ರಾತ್ರಿ ಕಳೆಯುವ ಅನುಭವವನ್ನು ಪಡೆದು ವಾಪಸಾಗುತ್ತಿದ್ದ ನಮ್ಮಲ್ಲಿ, ಆ ನಂತರ ಪ್ರಕೃತಿಯ ಕುರಿತು ಗೌರವ ಹೆಚ್ಚಾಗುತ್ತಿತ್ತು. ಇಂಥ ಪರಿಸರವನ್ನು, ಪ್ರಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡಬೇಕೆಂಬ ಹಂಬಲವೂ ಮೂಡುತ್ತಿತ್ತು. ಆರೋಗ್ಯಕರ ಚಾರಣವನ್ನು ಕೈಗೊಂಡ ಎಲ್ಲರಲ್ಲೂ, ಪ್ರಕೃತಿಯ ಮೇಲಿನ ಪ್ರೀತಿ, ಗೌರವ ಹೆಚ್ಚಳವಾಗುತ್ತದೆ; ನಮ್ಮ ವನ್ಯ ಪ್ರದೇಶಗಳನ್ನು ಕಾಪಾಡುವ ಕಾಳಜಿ ಮೂಡುತ್ತದೆ.