ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shashidhara Halady Column: ಒಂದು ಹಡಗಿನ ತುಂಬಾ ರಫ್ತಾದ ನುಗ್ಗೆಗಿಡದ ಬೀಜ

ಬಡ ಜನರಿಗೆ ನುಗ್ಗೆಕಾಯಿಯನ್ನು ತಿನ್ನಿಸುವುದು ಎಂದು ನಿರ್ಧರಿಸಲಾಯಿತು. ಆದರೆ, ಅದರ ಗಿಡ, ಬೀಜ ಸುಲಭವಾಗಿ ಎಲ್ಲಿ ಸಿಗುತ್ತದೆ? ಅವರಿಗೆ ದೊರೆತ ಉತ್ತರ- ಭಾರತ! ಪೌಷ್ಟಿಕಾಂಶಗಳ ಆಗರ ನುಗ್ಗೆ ಕಾಯಿ, ನುಗ್ಗೆ ಸೊಪ್ಪು, ನುಗ್ಗೆ ಬೀಜಗಳ ಮೂಲ ಭಾರತ ಮತ್ತು ಸುತ್ತಮುತ್ತಲಿನ ದೇಶಗಳು. ನುಗ್ಗೆಕಾಯಿ ಯ ವಿಚಾರ ತಿಳಿದ ಕೂಡಲೇ, ಕಾಸ್ಟ್ರೋ ಅವರು ಅದರ ಕುರಿತು ಎಲ್ಲಾ ಮಾಹಿತಿಯನ್ನು ಕಲೆ ಹಾಕಿದರು.

ಒಂದು ಹಡಗಿನ ತುಂಬಾ ರಫ್ತಾದ ನುಗ್ಗೆಗಿಡದ ಬೀಜ

-

ಶಶಾಂಕಣ

ಬಡತನದಲ್ಲಿರುವ, ಪೌಷ್ಟಿಕಾಂಶಗಳ ಕೊರತೆ ಇರುವ ಪ್ರದೇಶಗಳಿಗೆ ಅತ್ಯುತ್ತಮ ತರಕಾರಿ ಎಂದರೆ ನುಗ್ಗೆ ಕಾಯಿ! ಇದನ್ನು ಗಮನಿಸಿದ ಕ್ಯೂಬಾ ದೇಶವು, ನಮ್ಮ ದೇಶದಿಂದ ನುಗ್ಗೆಕಾಯಿಯ ಗಿಡಗಳನ್ನು, ಬೀಜಗಳನ್ನು ತರಿಸಿಕೊಂಡ ವಿಚಾರ ಬಹಳ ಸ್ವಾರಸ್ಯಕರವಾಗಿದೆ. ಈ ವಿಚಾರವನ್ನು ಹೊರತುಪಡಿಸಿಯೂ, ನುಗ್ಗೆಕಾಯಿಯ ಪೌಷ್ಟಿಕಾಂಶಗಳ ವಿಚಾರ ಬಹು ಹಿಂದೆಯೇ ನಮ್ಮ ದೇಶದವರಿಗೆ ತಿಳಿದಿತ್ತು.

ನುಗ್ಗೆಯ ಸೊಪ್ಪು, ಕಾಯಿ, ಬೀಜ ಎಲ್ಲದರಲ್ಲೂ ಔಷಧಿಯ ಗುಣಗಳಿವೆ; ಜತೆಗೆ, ಇದನ್ನು ತರಕಾರಿ ಯಾಗಿಯೂ ಉಪಯೋಗಿಸಬಹುದು ಎಂದು ನಮ್ಮ ದೇಶದಲ್ಲಿ ಬಹು ಹಿಂದಿನಿಂದಲೇ ಕಂಡು ಕೊಂಡಿದ್ದರು.

ಅಮೆರಿಕದಂಥ ಪ್ರಬಲ ರಾಷ್ಟ್ರದ ಪಕ್ಕದಲ್ಲಿರುವ ಕ್ಯೂಬಾ ದೇಶವು, ನುಗ್ಗೆ ಗಿಡಗಳ ಬೆನ್ನು ಹತ್ತಿದ ಕಥೆಗೆ ಮೂಲ ಪುರುಷರೆಂದರೆ, ಆ ಸಣ್ಣ ದ್ವೀಪರಾಷ್ಟ್ರವನ್ನು ನಾಲ್ಕೈದು ದಶಕಗಳ ಕಾಲ ಮುನ್ನಡೆ ಸಿದ, ಫೀಡೆಲ್ ಕಾಸ್ಟ್ರೋ! ಕ್ಯೂಬಾವು ಅನುಸರಿಸಿಕೊಂಡು ಬಂದ ರಾಜಕೀಯ ಸಿದ್ಧಾಂತವನ್ನು ಅಮೆರಿಕವು ಒಪ್ಪದೇ ಇರುವುದರಿಂದಾಗಿ, ಆ ಪುಟ್ಟ ದೇಶವು ಪ್ರತಿದಿನ ಹೋರಾಟ ನಡೆಸುವ ಅನಿವಾರ್ಯತೆ, ತನ್ನ ದೇಶದಲ್ಲಿ ಸಮಾಜವಾದವನ್ನು ಅಕ್ಷರಶಃ ಜಾರಿಗೆ ತರುವ ದಿಟ್ಟತನ, ವ್ಯವಹಾರ, ಕೃಷಿಯನ್ನು ರಾಷ್ಟ್ರೀಕರಣಗೊಳಿಸುವ ಧೈರ್ಯ, ಕಮ್ಯುನಿಸ್ಟ್ ತತ್ವಗಳ ಅನುಷ್ಠಾನ, ಎಂಥ ಹೋರಾಟಕ್ಕಾದರೂ ಸದಾ ಸಿದ್ಧ- ಇದು ಫೀಡೆಲ್ ಕ್ಯಾಸ್ಟ್ರೋ ಅವರ ಕಾಲದ ಕ್ಯೂಬಾ ದಲ್ಲಿದ್ದ ಸ್ಥಿತಿ.

ಹಲವು ದಶಕಗಳ ಕಾಲ ಕ್ಯೂಬಾದಲ್ಲಿ ಆಡಳಿತ ನಡೆಸಿದ ಕಮ್ಯುನಿಸ್ಟ್ (ಎಂಎಲ್) ಪಕ್ಷಕ್ಕೆ ಇವರದ್ದೇ ನಾಯಕತ್ವ. 1959ರಿಂದ 1976ರ ತನಕ ಕ್ಯೂಬಾದ ಪ್ರಧಾನಿಯಾಗಿ, 1976ರಿಂದ 2008ರ ತನಕ ಕ್ಯೂಬಾದ ಅಧ್ಯಕ್ಷರಾಗಿ, 1965ರಿಂದ 2011ರ ತನಕ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಪ್ರಥಮ ಕಾರ್ಯ ದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದ ಕಾಸ್ಟ್ರೋ, 2011ರಲ್ಲಿ ರಾಜಕೀಯ ಜೀವನದಿಂದ ನಿವೃತ್ತ ರಾದರು. ಆ ಸಮಯದಲ್ಲಿ, ಅಂದರೆ 2010ರಲ್ಲಿ ಪಕ್ಕದ ದೇಶ ಹೈಟಿಯಲ್ಲಿ ಭೂಕಂಪ ವಾಗಿತ್ತು.

ಇದನ್ನೂ ಓದಿ: Shashidhara Halady Column: ಗ್ರಾಮೀಣ ಜನರನ್ನೂ ಕಾಡುತ್ತಿರುವ ಸಕ್ಕರೆ ಕಾಯಿಲೆ !

ಅಲ್ಲೂ ಬಡತನ. ಆ ನಡುವೆ ನೆರೆಹಾವಳಿ, ಜತೆಗೆ ಕಾಲರಾ. ಜನರು ಅನಾರೋಗ್ಯದಿಂದ ಕಂಗೆಟ್ಟರು. ಅವರ ಕಷ್ಟ ನೋಡಲಾಗದೇ, ನಿವೃತ್ತ ಜೀವನದಲ್ಲಿದ್ದ ಕಾಸ್ಟ್ರೋ ಅವರು ಅಲ್ಲಿನ ಬಡಜನರ ಆರೋಗ್ಯ ಉತ್ತಮಪಡಿಸಲು ಏನಾದರೂ ಮಾಡಬೇಕೆಂದು ನಿಧರಿಸಿದರು. ಕ್ಯೂಬಾದ ಫಿನ್ಲೆ ಇನ್‌ ಸ್ಟಿಟ್ಯೂಟ್‌ನ ಕಾಂಪಾ ಹ್ಯೂರ್ಗೊ ಎಂಬ ಮಹಿಳೆಗೆ ಫೋನ್ ಮಾಡಿ, ಜನರ ಅಪೌಷ್ಟಿಕತೆಗೆ ಒಂದು ಪರಿಹಾರ ಹುಡುಕಲು ಹೇಳಿದಾಗ ಅವರು ನೀಡಿದ ಉತ್ತರ ಆ ಕಾಲಕ್ಕೆ ಮಾರ್ಮಿಕವಾಗಿತ್ತು!

“ನಮ್ಮ ನಾಡಿನಲ್ಲಿ ವ್ಯಾಪಕವಾಗಿರುವ, ಜನರ ನಿರಂತರ ಹಸಿವು ಮತ್ತು ಅಪೌಷ್ಟಿಕತೆಗೆ ಸರಿಯಾದ ಉತ್ತರ ಎಂದರೆ ನುಗ್ಗೆಕಾಯಿ!" ಎಂದು ಆ ಮಹಿಳೆ ಉತ್ತರಿಸಿದಾಗ, ಬೆರಗಾಗುವ ಸರದಿ ಕಾಸ್ಟ್ರೋ ಅವರದ್ದು. ಸಸ್ಯವೊಂದು ಕೊಡುವ ಕಾಯಿ ಮತ್ತು ಅದರ ಎಲೆಗಳು ಬಡವರ ಆರೋಗ್ಯಕ್ಕೆ ಪೂರಕವಾಗಬಲ್ಲವು, ಕಡಿಮೆ ಬೆಲೆಯಲ್ಲಿ ಪೌಷ್ಟಿಕಾಂಶಗಳನ್ನು ನೀಡಬಲ್ಲವು ಎಂಬ ವಿಚಾರವೇ ತುಸು ವಿಸ್ಮಯ ಹುಟ್ಟಿಸುವಂಥದ್ದು.

ಬಡ ಜನರಿಗೆ ನುಗ್ಗೆಕಾಯಿಯನ್ನು ತಿನ್ನಿಸುವುದು ಎಂದು ನಿರ್ಧರಿಸಲಾಯಿತು. ಆದರೆ, ಅದರ ಗಿಡ, ಬೀಜ ಸುಲಭವಾಗಿ ಎಲ್ಲಿ ಸಿಗುತ್ತದೆ? ಅವರಿಗೆ ದೊರೆತ ಉತ್ತರ- ಭಾರತ! ಪೌಷ್ಟಿಕಾಂಶಗಳ ಆಗರ ನುಗ್ಗೆಕಾಯಿ, ನುಗ್ಗೆ ಸೊಪ್ಪು, ನುಗ್ಗೆ ಬೀಜಗಳ ಮೂಲ ಭಾರತ ಮತ್ತು ಸುತ್ತಮುತ್ತಲಿನ ದೇಶಗಳು. ನುಗ್ಗೆಕಾಯಿಯ ವಿಚಾರ ತಿಳಿದ ಕೂಡಲೇ, ಕಾಸ್ಟ್ರೋ ಅವರು ಅದರ ಕುರಿತು ಎಲ್ಲಾ ಮಾಹಿತಿ ಯನ್ನು ಕಲೆ ಹಾಕಿದರು.

ಮೊರಿಂಗಾ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ಈ ಸಸ್ಯವು ಬಡವರ ಉತ್ತಮ ಆಹಾರ ಎಂದು ನಿರ್ಧರಿಸಿ, ಕಾಂಪಾ ಹ್ಯೂರ್ಗೊ ಅವರೊಂದಿಗೆ ಚರ್ಚಿಸಿ, “ಈ ಗಿಡವನ್ನು ನಮ್ಮ ದ್ವೀಪಗಳಲ್ಲಿ ಬೆಳೆಯಬೇಕಲ್ಲ, ಏನು ಮಾಡುವುದು? ಯಾರಾದರೂ ಭಾರತಕ್ಕೆ ಹೋಗಿ ನುಗ್ಗೆ ಕೃಷಿಯನ್ನು ಅಧ್ಯಯನ ಮಾಡಿ, ಅದರ ಬೀಜಗಳನ್ನು ಕ್ಯೂಬಾಕ್ಕೆ ತರಬೇಕು. ಯಾರು ಹೋಗುತ್ತಾರೆ?" ಎಂದರು.

Screenshot_2 ಋ

ಕಾಸ್ಟ್ರೊ ಅವರ ಅಪಾರ ಆಸಕ್ತಿಯನ್ನು ಕಂಡು, ಆ ವಿಜ್ಞಾನಿ ಮಹಿಳೆ “ನಾನೇ ಭಾರತಕ್ಕೆ ಹೋಗಿ ನೋಡಿಕೊಂಡು ಬರುತ್ತೇನೆ" ಎಂದರು. ಫಿನ್ಲೆ ಇನ್ಸ್ʼಟಿಟ್ಯೂಟ್‌ನ ನಿರ್ದೇಶಕರಾಗಿ 31 ವರ್ಷ ದುಡಿದ ಅನುಭವ ಹೊಂದಿದ್ದ ಹ್ಯೂರ್ಗೊ ಅವರು, ವ್ಯಾಕ್ಸಿನ್ ಕ್ಷೇತ್ರದಲ್ಲಿ ತಜ್ಞರು.

ರಾಜಕೀಯದಿಂದ ನಿವೃತ್ತರಾಗಿದ್ದರೂ, ಕಾಸ್ಟ್ರೋ ವ್ಯಕ್ತಪಡಿಸುತ್ತಿದ್ದ ಉತ್ಸಾಹ ಕಂಡು, ತಮ್ಮ ದೇಶದ ಬಡಜನರಿಗೆ ಅನುಕೂಲವಾಗುವುದಾದರೆ ತಾವೇ ಭಾರತಕ್ಕೆ ಹೋಗಿ ನುಗ್ಗೆಕಾಯಿ ಕೃಷಿಯ ಮಾಹಿತಿಯನ್ನು ತರುವುದಾಗಿ ಹೇಳಿ ಹೊರಟರು. ಇದು ನಡೆದದ್ದು 2011ರಲ್ಲಿ. ನಮ್ಮ ದೇಶದ ನುಗ್ಗೆಕಾಯಿಯ ಔಷಧಿಯ ಗುಣಗಳು, ಲಾಭಗಳು ನಮಗೆಲ್ಲಾ ತಿಳಿದಿದ್ದರೂ, ಅದು ಅದರ ಪಾಡಿಗೆ ಒಂದು ತರಕಾರಿ ಎಂದೇ ಗುರುತಿಸುವವರು ಬಹಳ.

ನುಗ್ಗೆ ಸೊಪ್ಪು, ಬೀಜಗಳು ಸಹ ಔಷಧಿಯ ಗುಣ ಹೊಂದಿವೆ, ನಾಟಿ ವೈದ್ಯದಲ್ಲಿ, ಹಳ್ಳಿ ಮದ್ದಿನಲ್ಲಿ, ಆಯುರ್ವೇದದಲ್ಲಿ ಮೊದಲಿನಿಂದಲೂ ಬಳಕೆಯಲ್ಲಿದೆ. ಕ್ಯೂಬಾದಿಂದ ತಜ್ಞರ ತಂಡದೊಂದಿಗೆ ಬಂದ ಕಾಂಪಾ ಹ್ಯೂರ್ಗೊ ಅವರು ಆಂಧಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಸಂಚರಿಸಿ ದರು; ಅಲ್ಲೆಲ್ಲಾ ಇದ್ದ ವಿವಿಧ ತಳಿಯ ನುಗ್ಗೆಕಾಯಿ ಗಿಡಗಳನ್ನು ಗಮನಿಸಿದರು ಮತ್ತು ನುಗ್ಗೆಗಿಡದ ಕೃಷಿಯನ್ನು ಅಧ್ಯಯನ ಮಾಡಿದರು.

ಬೇರೆ ಬೇರೆ ಪ್ರದೇಶಗಳಲ್ಲಿರುವ ನುಗ್ಗೆಯ ಸ್ಥಳೀಯ ಮತ್ತು ವಿಭಿನ್ನ ತಳಿಯನ್ನು ಪರಿಶೀಲಿಸಿ, ಕ್ಯೂಬಾಕ್ಕೆ ಯಾವ ತಳಿ ಉತ್ತಮ ಎಂಬುದನ್ನು ಗುರುತಿಸಲು ಪ್ರಯತ್ನಿಸಿದರು. ಸ್ಥಳೀಯ ಅಡುಗೆ ಯವರನ್ನು ಕೂರಿಸಿಕೊಂಡು, ನುಗ್ಗೆಯನ್ನು ಯಾವ ರೀತಿಯಲ್ಲಿ ಆಹಾರವಾಗಿ ಸೇವಿಸಬಹುದು ಎಂಬುದನ್ನು ಬರೆದುಕೊಂಡರು. ನುಗ್ಗೆ ಕಾಯಿಯ ಸಾಂಬಾರು, ಪಲ್ಯಗಳ ಜತೆ ನುಗ್ಗೆ ಸೊಪ್ಪಿನ ಹುಡಿಯನ್ನು ಪ್ರತಿದಿನ ಆಹಾರದೊಂದಿಗೆ ಸೇವಿಸುವ ಪದ್ಧತಿಯ ಲಾಭವನ್ನು ಕಂಡುಕೊಂಡರು.

ಡಿಸೆಂಬರ್ 2011. ಇವರ ಅಧ್ಯಯನದ ವಿವರಗಳು ಕ್ಯೂಬಾ ಸರಕಾರವನ್ನು ತಲುಪಿತ್ತು. ಕಾಸ್ಟ್ರೊ ಅವರ ಶಿಫಾರಸಿನ ಮೇಲೆ, ಅಲ್ಲಿನ ಸರಕಾರವು 100 ಟನ್ ನುಗ್ಗೆ ಬೀಜವನ್ನು ಕ್ಯೂಬಾಕ್ಕೆ ತರಿಸಲು ಅನುಮೋದನೆ ನೀಡಿತು. ಕ್ಯೂಬಾದಿಂದ ಬಂದ ಮಹಿಳೆ ಕಾಂಪಾ ಹ್ಯೂರ್ಗೊ ನಮ್ಮ ದೇಶದಿಂದ 100 ಟನ್ ನುಗ್ಗೆ ಬೀಜಗಳನ್ನು ಹಡಗಿನಲ್ಲಿ ತುಂಬಿಸಿ ತಮ್ಮ ದೇಶಕ್ಕೆ ಕಳಿಸಿದರು!

ಭಾರತದಿಂದ ಒಂದು ಹಡಗಿನ ತುಂಬಾ ವಿವಿಧ ತಳಿಯ ನುಗ್ಗೆ ಬೀಜಗಳು ಕ್ಯೂಬಾ ದೇಶವನ್ನು ತಲುಪಿದಾಗ, ಅಲ್ಲಿನ ಬಂದರಿನ ಅಧಿಕಾರಿಗಳು, ಈ ಬೀಜಗಳನ್ನು ಕಂಡು ವಿಸ್ಮಯಗೊಂಡಿರಲೇ ಬೇಕು! ಫೀಡೆಲ್ ಕಾಸ್ಟ್ರೊ ಅವರಂತೂ ನುಗ್ಗೆ ಬೀಜ, ನುಗ್ಗೆ ಕೃಷಿಯ ಕುರಿತು ಬಹಳ ಉತ್ಸಾಹ ತಳೆದಿದ್ದರು. ಅವರ ದೇಶದ ಬಡಜನರ ಆರೋಗ್ಯ ಸುಧಾರಿಸಲು ನುಗ್ಗೆಕಾಯಿಯೇ ರಾಮಬಾಣ ಎಂದು ನಿಧರಿಸಿದ್ದರು.

ಭಾರತದ ಈ ಸಸ್ಯವು ತಮ್ಮ ಜನರಲ್ಲಿ ಶಕ್ತಿ ತುಂಬುತ್ತದೆ ಎಂಬುದು ಅವರ ವಿಶ್ವಾಸ. ನಂತರದ ವರ್ಷಗಳಲ್ಲಿ, ಕ್ಯೂಬಾ ದೇಶದಲ್ಲಿದ್ದ ಒಣ ಮತ್ತು ಬರಡು ಪ್ರದೇಶಗಳಲ್ಲಿ ನುಗ್ಗೆ ಕೃಷಿಯನ್ನು ಆರಂಭಿಸಲಾಯಿತು. ನುಗ್ಗೆ ಗಿಡಕ್ಕೆ ಹೆಚ್ಚಿನ ಆರೈಕೆ ಬೇಡ; ತುಸು ಒಣ ಪ್ರದೇಶ ಮತ್ತು ನೀರಿನ ಆಶ್ರಯ ಕಡಿಮೆ ಇದ್ದಲ್ಲೂ ಅದು ಬೆಳೆಯಬ್ಲದು. ಗಿಡಗಳು ಬೆಳೆದವು; ಕಾಯಿ ಬಿಡುವ ಮುಂಚೆಯೇ, ಆ ಗಿಡದ ಸೊಪ್ಪಿನ ಬಳಕೆಯನ್ನು ಪ್ರಚುರ ಪಡಿಸುವ ಮೂಲಕ, ಜನರ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು ಎಂದು ಕಂಡುಕೊಂಡ ಅಲ್ಲಿನವರು, ಸೊಪ್ಪಿನ ಪುಡಿಯನ್ನು ತಯಾರಿಸಿ, ಆಹಾರದ ಜತೆ ಬಳಸುವುದನ್ನು ಕಲಿತರು.

ಸೂಪ್‌ಗಳಲ್ಲಿ, ಕರಿಗಳಲ್ಲಿ ನುಗ್ಗೆ ಸೊಪ್ಪಿನ ಪುಡಿಯನ್ನು ನಿರಂತರವಾಗಿ ಉಪಯೋಗಿಸುವುದನ್ನು ರೂಢಿ ಮಾಡಿಕೊಂಡರು. ನುಗ್ಗೆಯನ್ನು ಅಲ್ಲಿ ಜನಪ್ರಿಯಗೊಳಿಸಲು ಸ್ವತಃ ಕಾಸ್ಟ್ರೊ, ಹಲವು ಲೇಖನಗಳನ್ನು ಬರೆದರು! ‘ಭಾರತ ಮೂಲದ ನುಗ್ಗೆಯು ಎಲ್ಲಾ ಅಮೈನೋ ಆಸಿಡ್ ಹೊಂದಿರುವ ಏಕೈಕ ಸಸ್ಯ. ನುಗ್ಗೆಗಿಡಗಳ ಕೃಷಿಯನ್ನು ಕೈಗೊಳ್ಳುವ ಮೂಲಕ, ಒಂದು ಹೆಕ್ಟೇರಿಗೆ ಪ್ರತಿ ವರ್ಷ 300 ಟನ್ ನುಗ್ಗೆ ಸೊಪ್ಪನ್ನು ತಯಾರಿಸಬಹುದು. ಅದರಲ್ಲಿ ನಾನಾ ರೀತಿಯ ಔಷಧಿಯ ಗುಣಗಳಿವೆ’ ಎಂಬ ಲೇಖನವನ್ನು ಕಾಸ್ಟ್ರೋ ಬರೆದಾಗ ಅವರಿಗೆ 90 ವರ್ಷ!

2016ರಲ್ಲಿ ಫಿಡೆಲ್ ಕಾಸ್ಟ್ರೊ ನಿಧನರಾದಾಗ, ಅವರ ಕ್ರಾಂತಿಕಾರಿ ಜೀವನ, ಕಮ್ಯುನಿಸ್ಟ್ (ಎಂಎಲ್) ಪಕ್ಷದ ಒಡನಾಟ, ಅಮೆರಿಕಕ್ಕೆ ಸೆಡ್ಡು ಹೊಡೆದದ್ದು ಮೊದಲಾದವುಗಳನ್ನು ನೆನಪಿಸಿಕೊಳ್ಳುವುದರ ಜತೆಯಲ್ಲೇ, ಭಾರತದಿಂದ 100 ಟನ್ ನುಗ್ಗೆಕಾಯಿ ಬೀಜಗಳನ್ನು ತರಿಸಿದ್ದನ್ನು ಸಹ ಜನರು ನೆನಪಿಸಿ ಕೊಂಡರು.

ಆದರೂ, ನುಗ್ಗೆಕಾಯಿಯ ಅಪಾರ ಶಕ್ತಿಯನ್ನು, ಪೌಷ್ಟಿಕಾಂಶಗಳನ್ನು ಇಂದು ನಾವು ಸರಿಯಾಗಿ ಗುರುತಿಸಿ, ಬಳಸುತ್ತಿದ್ದೇವೆಯೆ? ನಗರೀಕರಣದ ಭರದಲ್ಲಿ, ಹಳೆಯದೆಲ್ಲವನ್ನೂ ಹಳ್ಳಿಯವರೂ ಕ್ರಮೇಣ ಮರೆಯುತ್ತಿರುವ ಭರಾಟೆಯಲ್ಲಿ, ನುಗ್ಗೆಕಾಯಿಯ ಅಪಾರ ಶಕ್ತಿಯನ್ನು ಕಡೆಗಣಿಸು ತ್ತಿದ್ದೇವೆಯೆ? ನುಗ್ಗೆಕಾಯಿಯು ನಮ್ಮ ನಾಡಿನ ಅಡುಗೆ ಮನೆಯಲ್ಲಿ ಒಂದು ಹಂತದ ತನಕ ಪ್ರಮುಖ ಸ್ಥಾನ ಗಳಿಸಿದ್ದು, ಅದು ಮುಂದುವರಿಯುತ್ತಿದೆ; ಆದರೆ ನುಗ್ಗೆ ಸೊಪ್ಪಿನ ಬಳಕೆಯನ್ನು ನಾವು ಏಕೆ ಗರಿಷ್ಠ ಪ್ರಮಾಣದಲ್ಲಿ ಮಾಡುತ್ತಿಲ್ಲ? ಆ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸಿ ಕೊಳ್ಳುತ್ತಿಲ್ಲ? ನುಗ್ಗೆಕಾಯಿ ಮತ್ತು ಸೊಪ್ಪಿನಲ್ಲಿರುವ ಪೌಷ್ಟಿಕಾಂಶಗಳು ಹೇರಳ. ಸಮಾನ ತೂಕದ ನುಗ್ಗೆಕಾಯಿಯನ್ನು ಮತ್ತು ಇತರ ಹಲವು ತರಕಾರಿಗಳನ್ನು ಹೋಲಿಸಿದರೆ, ನುಗ್ಗೆಯಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿಯೆಂಟ್ಸ್ ಇವೆ.

ನುಗ್ಗೆಕಾಯಿಯಲ್ಲಿ ಕಿತ್ತಲೆ ಹಣ್ಣಿನಲ್ಲಿರುವ ವಿಟಮಿನ್ ‘ಸಿ’ಗಿಂತ ಏಳು ಪಟ್ಟು ಹೆಚ್ಚು ಇದೆ. ಬಸಳೆ ಸೊಪ್ಪಿಗಿಂತ ಮೂರು ಪಟ್ಟು ಕಬ್ಬಿಣದ ಅಂಶವಿದೆ. ಕ್ಯಾರೆಟ್‌ನಲ್ಲಿರುವುದಕ್ಕಿಂದ ನಾಲ್ಕು ಪಟ್ಟು ವಿಟಮಿನ್ ‘ಎ’ ಇದೆ. ಒಂದು ಲೋಟ ಹಾಲಿನಲ್ಲಿರುವುದಕ್ಕಿಂತ ನಾಲ್ಕು ಪಟ್ಟು ಕ್ಯಾಲ್ಷಿಯಂ ಇದೆ. ಬಾಳೆ ಹಣ್ಣಿನಲ್ಲಿರುವ ಪೊಟ್ಯಾಸಿಯಂನ ಮೂರು ಪಟ್ಟು ಇದೆ.

ಮಜ್ಜಿಗೆಯಲ್ಲಿರುವ ಎರಡರಷ್ಟು ಪ್ರೊಟೀನ್ ಇವೆ. ಈ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. ನಾನಾ ರೀತಿಯ ಪೌಷ್ಟಿಕಾಂಶಗಳ ಜತೆಯಲ್ಲೇ, ಹಲವು ಔಷಧಿಯ ಗುಣಗಳೂ ಇದರಲ್ಲಿವೆ. ಕ್ಯೂಬಾದ ಉದಾಹರಣೆಯನ್ನೇ ತೆಗೆದುಕೊಂಡರೆ, ಪೌಷ್ಟಿಕಾಂಶಗಳ ಕೊರತೆ ಮತ್ತು ಜನರನ್ನು ಬಾಧಿಸುತ್ತಿರುವ ಲವಣಾಂಶಗಳ ಕೊರತೆ ಎಂಬ ಸಂಕೀರ್ಣ ಸಮಸ್ಯೆಗೆ ಒಂದೇ ಪರಿಹಾರ ನುಗ್ಗೆಕಾಯಿ!

ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ ‘ಬಿ’, ವಿಟಮಿನ್ ‘ಸಿ’, ರಿಬೋಫ್ಲೇವಿನ್ ಮತ್ತು ಕಬ್ಬಿಣದ ಅಂಶ ಇರುವ ನುಗ್ಗೆಯು, ನಮ್ಮ ಜನರ ಪ್ರತಿದಿನದ ಆಹಾರವಾಗುವ ಅವಶ್ಯಕತೆ ಇದೆ. ನುಗ್ಗೆ ರಸವನ್ನು ಮೂಗಿಗೆ, ಕಿವಿಗೆ ಹಾಕಿ ಹಲವು ರೋಗಗಳನ್ನು ನಮ್ಮ ನಾಟಿ ವೈದ್ಯ ಪದ್ಧತಿ ಗುಣಪಡಿಸ ಬಲ್ಲದು.

ಅರಶಿನ ಮುಂಡಿಗೆ ಕಾಯಿಲೆಗೆ ಇಂದಿಗೂ ನುಗ್ಗೆಸೊಪ್ಪಿನ ರಸವನ್ನು ಔಷಧವಾಗಿ ನೀಡಲಾಗುತ್ತಿದೆ. ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್ ಇವೆ. ನಮ್ಮ ದೇಹದ ವಯಸ್ಸಾಗುವ ಪ್ರಕ್ರಿಯೆಯನ್ನು ಈ ಆಂಟಿ ಆಕ್ಸಿಡೆಂಟ್‌ಗಳು ಕಡಿಮೆ ಮಾಡುತ್ತವೆ.

ನುಗ್ಗೆಕಾಯಿ ಸೇವನೆಯಿಂದ ಒತ್ತಡ, ಖಿನ್ನತೆ ಕಡಿಮೆಯಾಗುತ್ತವೆ ಎನ್ನುತ್ತಾರೆ ಕೆಲವು ಆಯುರ್ವೇದ ತಜ್ಞರು. ಸಂಧಿವಾತ, ಆಥ್ರೈಟಿಸ್‌ನಲ್ಲಿ ಕಂಡುಬರುವ ಕೀಲುಗಳ ನೋವನ್ನು ನುಗ್ಗೆ ಉಪಶಮನ ಗೊಳಿಸಬಲ್ಲದು. ನುಗ್ಗೆಯ ಎಲೆ ಮತ್ತು ಬೀಜಗಳಲ್ಲಿ ಆಂಟಿ ಇನ್ ಫ್ಲಮೇಟರಿ ಸಂಯುಕ್ತಗಳಿವೆ ಮತ್ತು ಅವು ಉರಿಯೂತವನ್ನು ತಡೆಯುತ್ತವೆ. ಇದರಲ್ಲಿರುವ ನಿಯಾಜಿಮೈಸಿನ್ ಕ್ಯಾನ್ಸರ್ ಬಾರ ದಂತೆ ತಡೆಯಬಲ್ಲದು ಎನ್ನುತ್ತದೆ ಇನ್ನೊಂದು ಅಧಯನ.

ನುಗ್ಗೆಗಿಡವನ್ನು ನಮ್ಮ ದೇಶದಲ್ಲಿ ವ್ಯಾಪಕವಾಗಿ ಬೆಳೆಯಲು ಅನುಕೂಲವಾಗುವ ಒಂದು ಪ್ರಮುಖ ಪಾರಸರಿಕ ಅಂಶವಿದೆ. ನುಗ್ಗೆಯು ಅತಿ ಕಡಿಮೆ ನೀರಿನ ಪ್ರದೇಶದಲ್ಲಿ, ಒಣ ಪ್ರದೇಶಗಳಲ್ಲಿ ಸುಲಭ ವಾಗಿ ಬೆಳೆಯಬಲ್ಲದು. ಇದರ ಬೇರುಗಳು ನೆಲದಾಳಕ್ಕೆ ಹೋಗುವ ಗುಣ ಹೊಂದಿರುವುದರಿಂದ, ಕಡಿಮೆ ನೀರಿನಂಶ ಇರುವ ಪ್ರದೇಶಗಳಲ್ಲೂ ನುಗ್ಗೆ ಬೆಳೆಯಬಲ್ಲದು, ಸಾಕಷ್ಟು ಇಳುವರಿ ನೀಡಬಲ್ಲದು.

ಇತರ ಹಲವು ಬೆಳೆಗಳಿಗೆ ಹೋಲಿಸಿದರೆ, ನುಗ್ಗೆಗೆ ಅತಿ ಕಡಿಮೆ ನೀರು ಸಾಕು. ಕ್ಯೂಬಾದ ಅಧ್ಯಕ್ಷ ಕಾಸ್ಟ್ರೋ ನಮ್ಮ ದೇಶದಿಂದ 100 ಟನ್ ನುಗ್ಗೆ ಬೀಜ ತರಿಸಿಕೊಂಡು, ಕ್ಯೂಬಾ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ನುಗ್ಗೆ ಗಿಡ ಬೆಳೆಸಿ, ಅಲ್ಲಿನ ಬಡಜನರಿಗೆ ಅದನ್ನು ತಿನ್ನಿಸಿ, ಅವರ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರಲ್ಲಿ ನಮಗೆ ಒಂದು ಪಾಠವಿದೆ.

ಮೂಲತಃ ನಮ್ಮ ನಾಡಿನಲ್ಲಿ ವ್ಯಾಪಕವಾಗಿ ಬೆಳೆಯುತ್ತಿರುವ ನುಗ್ಗೆ ಸಸ್ಯಗಳಿಗೆ ನಾವು ಇನ್ನಷ್ಟು ಪ್ರಚಾರ ಕೊಡಬೇಕು. ಇದರ ಸೊಪ್ಪನ್ನು, ಬೀಜಗಳನ್ನು ಹೆಚ್ಚು ಹೆಚ್ಚು ಸೇವಿಸುವ ವಿಧಾನವನ್ನು ಪ್ರಚುರಗೊಳಿಸಬೇಕು.

ನಮ್ಮ ದೇಶದಲ್ಲಿ ಈಚಿನ ಒಂದು ದಶಕದಲ್ಲಿ ಒಂದು ಭ್ರಮೆ ಆವರಿಸಿದೆ: ನಗರೀಕರಣದ ಪ್ರಭಾವ ದಿಂದ ಮತ್ತು ಜಾಹೀರಾತಿನ ಅಬ್ಬರದಿಂದಾಗಿ, ಹಳೆಯ ಉತ್ತಮ ಆಹಾರ ಮತ್ತು ವಸ್ತುಗಳ ಕುರಿತು ಅನಾದರವಿದೆ.

ಜಂಕ್ ಫುಡ್, ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿದ ಆಹಾರವೇ ಶ್ರೇಷ್ಠ ಎಂಬ ಭ್ರಮೆ ಹೆಚ್ಚಿನವರನ್ನು ಆವರಿಸಿದೆ. ಥಳುಕಿನ ಆಹಾರಪದಾರ್ಥಗಳ ಮಧ್ಯೆ ನುಗ್ಗೆಯಂಥ ಅಪೂರ್ವ ತರಕಾರಿ, ಸೊಪ್ಪಿನ ಪ್ರಾಮುಖ್ಯ ಕಳೆದುಹೋಗುತ್ತಾ ಇದೆ. ದುಬಾರಿ ಆಹಾರ ಪದಾರ್ಥಗಳನ್ನು ಖರೀದಿಸಲು ಅವಕಾಶ ವಿಲ್ಲದವರು, ನುಗ್ಗೆಯನ್ನು ಚೆನ್ನಾಗಿ ತಿನ್ನಿ, ನುಗ್ಗೆ ಸೊಪ್ಪನ್ನು ಪುಡಿ ಮಾಡಿ ಪ್ರತಿದಿನ ಸೂಪ್ ಜತೆ, ತಿಳಿಸಾರಿನ ಜತೆ ಸೇವಿಸಿ ಎಂದು ಪ್ರಚಾರ ಮಾಡಬೇಕಾಗಿದೆ.

ಕ್ಯೂಬಾ ದೇಶದ ಕ್ಯಾಸ್ಟ್ರೋ ಮೆಚ್ಚಿದ ನುಗ್ಗೆಕಾಯಿ ನಮ್ಮ ಪ್ರೀತಿಯ ಆಹಾರವಾಗಬೇಕು, ಆಗ ದೇಶಕ್ಕೆ, ದೇಹಕ್ಕೆ ಶಕ್ತಿ ಕೂಡಿ ಬರುತ್ತದೆ.