ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ನಿಮಗೆ ಸಂಧಿರೋಗ ಯಾಕೆ ಬಂತು ಗೊತ್ತೇ ?

ಒಂದು ಮೂಳೆಯ ಭಾಗವು ಮತ್ತೊಂದು ಮೂಳೆಯ ಭಾಗಕ್ಕೆ ಸೇರುವ ವ್ಯವಸ್ಥೆಯನ್ನು ‘ಸಂಧಿ’ ಎಂದು ಕರೆಯುತ್ತೇವೆ. ಆಡುಭಾಷೆಯಲ್ಲಿ ಸಂಧಿಗಳನ್ನು ಕೀಲುಗಳು ಎಂದು ಕರೆಯುವುದುಂಟು. ಸಾಮಾನ್ಯ ವಾಗಿ ಈ ಸಂಧಿಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದು- ಚಲ ಮತ್ತು ಅಚಲ ಸಂಧಿಗಳೆಂದು. ಚಲ ಸಂಧಿ ಅಂದರೆ ಚಲನೆ ಉಳ್ಳಂಥ ಸಂಧಿಗಳು. ಉದಾಹರಣೆಗೆ, ಕೈ ಕಾಲುಗಳಲ್ಲಿ, ಕುತ್ತಿಗೆ, ಸೊಂಟ, ದವಡೆ ಜಾಗಗಳಲ್ಲಿರುವ ಸಂಧಿಗಳು.

ನಿಮಗೆ ಸಂಧಿರೋಗ ಯಾಕೆ ಬಂತು ಗೊತ್ತೇ ?

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

drsadhanashree@gmail.com

ಮಾನವ ಶರೀರವು ಒಂದು ಅತ್ಯದ್ಭುತವಾದ ಸೃಷ್ಟಿ. ಈ ಸೃಷ್ಟಿಯಲ್ಲಿ ಹಲವಾರು ರೀತಿಯ ಅಚ್ಚರಿಯ ವಿಷಯಗಳು ನಮಗೆ ಕಾಣಲಿಕ್ಕೆ ಸಿಗುತ್ತವೆ. ದೇಹದ ಪ್ರತಿಯೊಂದು ಅವಯವವೂ ಒಂದು ಸೋಜಿಗವೇ ಸರಿ. ಸಂಶೋಧನಾತ್ಮಕ ಅಧ್ಯಯನಗಳ ಮೂಲಕ ಅವುಗಳನ್ನು ಎಷ್ಟು ಅರ್ಥಮಾಡಿಕೊಂಡರೂ ಅದು ಅಪೂರ್ಣವೇ; ಕಾರಣ ಈ ಅವಯವಗಳೆಲ್ಲವೂ ಕಾಲಕ್ಕೆ ತಕ್ಕಂತೆ, ನಮ್ಮ ಅವಶ್ಯಕತೆಗೆ ತಕ್ಕಂತೆ ವಿಕಸನಗೊಳ್ಳುತ್ತಲೇ ಇರುತ್ತವೆ.

ಏನಾಶ್ಚರ್ಯ ಅಲ್ಲವೇ? ಆಯುರ್ವೇದದಲ್ಲಿ ಮಾನವ ಶರೀರದ ಆಕೃತಿಯನ್ನು ಮತ್ತು ಅದರ ರಚನೆ ಯನ್ನು ಬಿಡಿಬಿಡಿಯಾಗಿ ಅರ್ಥಮಾಡಿಕೊಳ್ಳುವ ವ್ಯವಸ್ಥೆಯನ್ನು ‘ರಚನಾ ಶಾರೀರ’ ಎಂದು ಕರೆಯುತ್ತೇವೆ. ರಚನಾ ಶಾರೀರವು ಮಾನವನ ಶರೀರವನ್ನು ಬೇರೆ ಬೇರೆ ರೀತಿಯಾಗಿ ವಿಂಗಡಿಸಿ ತನ್ಮೂಲಕ ಆ ಆಕೃತಿಯ ಅಂತರಾಳಕ್ಕೆ ಹೋಗಿ ಅದರ ಒಳಗಿರುವ ಜೈವಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತದೆ.

ಕಾರಣ, ಪ್ರಾಕೃತ ಅವಸ್ಥೆಯಲ್ಲಿ ಶರೀರದ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ವಿಕೃತಿ ಯನ್ನು ಪರಿಹರಿಸಲು ಸಾಧ್ಯ. ಶರೀರದ ನೂರಾರು ಅವಯವಗಳ ಪೈಕಿ ನಮ್ಮ ಸ್ಥಿರತೆಗೆ ಮತ್ತು ಒಂದು ನಿರ್ದಿಷ್ಟವಾದ ಆಕೃತಿಗೆ ಸಹಾಯ ಮಾಡುವ ಅವಯವವೆಂದರೆ ಅದು ‘ಅಸ್ಥಿ’. ಅಸ್ಥಿ ಅಂದರೆ ಮೂಳೆಗಳು.

ನಮ್ಮ ಶರೀರದಲ್ಲಿ ಸುಮಾರು 300 ಮೂಳೆಗಳನ್ನು ಕಾಣಬಹುದು. ಇದರಲ್ಲಿ ವಿವಿಧ ಪ್ರಕಾರಗಳಿವೆ. ಉದಾಹರಣೆಗೆ, ಉದ್ದನೆಯ ಮೂಳೆಗಳು ಕೈಕಾಲುಗಳಲ್ಲಿ ಕಂಡುಬಂದರೆ, ಹಲ್ಲಿನ ರೂಪದಲ್ಲಿ ಚಿಕ್ಕ ಚಿಕ್ಕ ಮೂಳೆಗಳಿವೆ. ಅಗಲವಾದ ಮೂಳೆಗಳು ಸೊಂಟ ಮತ್ತು ತಲೆಬುರುಡೆಯಲ್ಲಿದ್ದರೆ, ಮೃದು ವಾದ ಮೂಳೆಗಳನ್ನು ಕಿವಿ ಮತ್ತು ಮೂಗಿನಲ್ಲಿ ನೋಡಬಹುದು.

ಇದನ್ನೂ ಓದಿ: Dr Sadhanashree Column: ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಒಂದು ಮೂಳೆಯ ಭಾಗವು ಮತ್ತೊಂದು ಮೂಳೆಯ ಭಾಗಕ್ಕೆ ಸೇರುವ ವ್ಯವಸ್ಥೆಯನ್ನು ‘ಸಂಧಿ’ ಎಂದು ಕರೆಯುತ್ತೇವೆ. ಆಡುಭಾಷೆಯಲ್ಲಿ ಸಂಧಿಗಳನ್ನು ಕೀಲುಗಳು ಎಂದು ಕರೆಯುವುದುಂಟು. ಸಾಮಾನ್ಯವಾಗಿ ಈ ಸಂಧಿಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದು- ಚಲ ಮತ್ತು ಅಚಲ ಸಂಧಿಗಳೆಂದು. ಚಲ ಸಂಧಿ ಅಂದರೆ ಚಲನೆ ಉಳ್ಳಂಥ ಸಂಧಿಗಳು. ಉದಾಹರಣೆಗೆ, ಕೈ ಕಾಲುಗಳಲ್ಲಿ, ಕುತ್ತಿಗೆ, ಸೊಂಟ, ದವಡೆ ಜಾಗಗಳಲ್ಲಿರುವ ಸಂಧಿಗಳು.

ಅಚಲ ಸಂಧಿ ಅಂದರೆ ಚಲನೆ ರಹಿತವಾದಂಥ ಸಂಽಗಳು. ಉದಾಹರಣೆಗೆ, ಕಪಾಲದಲ್ಲಿರುವ ಸಂಧಿಗಳು. ಈ ಸಂಧಿಗಳ ಮುಖ್ಯ ಕೆಲಸವೇ ನಮಗೆ ಚಲಿಸುವ ಸಾಮರ್ಥ್ಯವನ್ನು ನೀಡುವುದು. ನಮ್ಮ ಕೈಕಾಲುಗಳನ್ನು ಚಾಚಿಕೊಳ್ಳಲು, ಅಂಗಾಂಗಗಳನ್ನು ಬಗ್ಗಿಸಲು, ಕುಳಿತುಕೊಳ್ಳಲು, ಮೇಲೇ ಳಲು, ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆಯಲು- ಹೀಗೆ, ಎಲ್ಲ ರೀತಿಯ ಕ್ರಿಯೆ ಗಳಿಗೂ ಸಹಾಯ ಮಾಡುವುದೇ ಸಂಧಿ.

ಅನೇಕ ಮೂಳೆಗಳನ್ನು/ಮೂಳೆಗಳಿಂದ ಕೂಡಿರುವ ಸಂಧಿಯನ್ನು ಒಂದೆಡೆ ಬಿಗಿಯಾಗಿ ಹಿಡಿದಿಟ್ಟು, ಅವುಗಳ ಕಾರ್ಯಗಳನ್ನು ನಿಯಂತ್ರಿಸಲು ಹಗ್ಗದ ರೀತಿಯ ರಚನೆಗಳು (ಲಿಗಮೆಂಟ್) ಮತ್ತು ಮಾಂಸದ ತುದಿಯ ಭಾಗಗಳು (ಟೆಂಡನ್) ಸಹಾಯ ಮಾಡುತ್ತವೆ. ಈ ರಚನೆಗಳಿಂದಾಗಿಯೇ ಸಂಧಿಗಳು ತಮ್ಮ ಸ್ಥಾನದಲ್ಲಿ ಸ್ಥಿರವಾಗಿದ್ದು, ನಮಗೆ ಅನೇಕ ರೀತಿಯ ಚಲನೆಯನ್ನು ಮಾಡಲು ಅವಕಾಶ ಮಾಡಿಕೊಡುತ್ತವೆ.

ಎರಡು ಅಥವಾ ಅನೇಕ ಮೂಳೆಗಳು ಸೇರುವ ಸಂಧಿಭಾಗದಲ್ಲಿ ಒಂದು ರೀತಿಯಾದ ಮೃದುವಾದ ಪದರವಿರುತ್ತದೆ. ಆ ಪದರವು ಜಿಡ್ಡಿನ ಅಂಶವಿರುವ ದ್ರವ (ಶ್ಲೇಷಕ ಕಫ) ದಿಂದ ಕೂಡಿರುತ್ತದೆ. ಈ ಜಿಡ್ಡಿನಂಶದಿಂದಲೇ ಸಂಧಿಗಳಿಗೆ ಚಲಿಸುವ ಸಾಮರ್ಥ್ಯ ಬರುವುದು. ನಮ್ಮ ಸಂಧಿಗಳ ಎಲ್ಲಾ ಕಾರ್ಯಗಳು ನೋವಿಲ್ಲದೆ, ಸರಾಗವಾಗಿ ಆಗಬೇಕಾದರೆ, ಅದರಲ್ಲಿರುವ ಸ್ನಿಗ್ಧಾಂಶವು ಉತ್ತಮ ಪ್ರಕಾರ ಮತ್ತು ಪ್ರಮಾಣದಲ್ಲಿ ಇರಬೇಕಾದ ಅವಶ್ಯಕತೆ ಇರುತ್ತವೆ.

ಇದಕ್ಕೆ ಒಂದು ಉತ್ತಮವಾದ ಉದಾಹರಣೆಯನ್ನು ನೀಡಬೇಕಾದರೆ, ನಮ್ಮ ಬಾಗಿಲು ಮತ್ತು ಅದರ ಕೀಲುಗಳನ್ನು ನೋಡಬಹುದು. ಹೇಗೆ ಒಂದು ಬಾಗಿಲು ಚಲಿಸಬೇಕೆಂದರೆ ಅದರ ಕೀಲಿಗೆ ನಾವು ಪದೇ ಪದೆ ಎಣ್ಣೆ ಅಥವಾ ಗ್ರೀಸ್ ಪದಾರ್ಥವನ್ನು ಹಚ್ಚಬೇಕೋ ಅದೇ ರೀತಿಯಲ್ಲಿ ನಮ್ಮ ಮೂಳೆ ಗಳು ಸರಾಗವಾಗಿ ಚಲಿಸಬೇಕೆಂದರೆ ಈ ಸಂಽಗಳ ಸ್ನಿಗ್ಧತೆಯನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.

ಒಟ್ಟಾರೆ ಈ ಸಂಧಿಯಲ್ಲಿರುವ ಮೂಳೆಗಳು, ಅದನ್ನು ಹಿಡಿದಿಟ್ಟಿರುವ ಸ್ನಾಯು ಮತ್ತು ಪೇಶಿಗಳು, ಸಂಧಿಯಲ್ಲಿರುವ ಪದರ ಮತ್ತು ಅದರಲ್ಲಿರುವ ಸ್ನಿಗ್ಧ ದ್ರವಾಂಶ- ಈ ಎಲ್ಲದರ ಸ್ವರೂಪ ಮತ್ತು ಪ್ರಮಾಣಗಳು ಸರಿಯಿದ್ದು, ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ನಮ್ಮ ಸಂಧಿಯ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಹೆಚ್ಚಿನ ಶ್ರಮದಾಯಕ ಕೆಲಸಗಳನ್ನು ಮಾಡಲು ಸಹ ಅವುಗಳು ಸಹಕಾರಿಯಾಗುತ್ತವೆ.

ಆದರೆ ಇವುಗಳಲ್ಲಿ ಯಾವುದೇ ಒಂದರಲ್ಲಿ ವ್ಯತ್ಯಾಸವಾದರೂ ತೊಂದರೆ ಪ್ರಾರಂಭವಾಗುತ್ತದೆ. ಮೇಲೆ ಹೇಳಿದ ಅವಯವಗಳ ಪ್ರಮಾಣ ಅಥವಾ ಸ್ವರೂಪದಲ್ಲಿ ಆಗುವ ಏರುಪೇರನ್ನೇ ನಾವು ಸಂಧಿರೋಗ ಎಂದು ಕರೆಯುತ್ತೇವೆ. ಈ ಸಂಧಿರೋಗಗಳು ನಮ್ಮ ಚಲನೆಯ ಸಾಮರ್ಥ್ಯವನ್ನು ಕುಗ್ಗಿಸಿ ನಮ್ಮನ್ನು ಪರಾವಲಂಬಿಯಾಗಿ ಮಾಡಿಬಿಡುತ್ತವೆ. ಆದ್ದರಿಂದ ಪ್ರತಿನಿತ್ಯವೂ ಈ ಸಂಧಿ ಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಅವಶ್ಯಕತೆ ಇರುತ್ತದೆ.

ಈ ಸಂಧಿಗಳ ಆರೋಗ್ಯ ಕುಂದು ಹೋಗುವ ಮುನ್ನವೇ ಅದರ ಬಗ್ಗೆ ಅರಿತು ಎಚ್ಚರ ವಹಿಸುವ ಅವಶ್ಯಕತೆ ಇದೆ. ಆಯುರ್ವೇದ ವೈದ್ಯರಾಗಿ ಕ್ಲಿನಿಕ್‌ನಲ್ಲಿ ಕುಳಿತಾಗ ಸಾಮಾನ್ಯವಾಗಿ ಕಾಣಲಿಕ್ಕೆ ಸಿಗುವುದು ಮಂಡಿನೋವು ಅಥವಾ ಸೊಂಟನೋವು. ಈಗಿನಿಂದ 20-30 ವರ್ಷಗಳ ಹಿಂದಿನವ ರೆಗೂ ಈ ನೋವುಗಳು ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗಂತೂ 30 ವರ್ಷದ ಪ್ರಾಯದ ಈ ಸಂಧಿನೋವುಗಳ ತೊಂದರೆಯನ್ನು ಕಾಣಬಹುದು.

ಇದಕ್ಕೆ ಮುಖ್ಯವಾದ ಕಾರಣ ನಮ್ಮ ಆಹಾರ ಮತ್ತು ನಮ್ಮ ಜೀವನಶೈಲಿಯಲ್ಲಿ ಆಗಿರುವ ವ್ಯತ್ಯಾಸ ಗಳು. ಈ ವ್ಯತ್ಯಾಸಗಳ ಬಗ್ಗೆ ತಿಳಿದುಕೊಂಡು, ಅದನ್ನು ನಮ್ಮ ಜೀವನದಿಂದ ದೂರ ಮಾಡುವ ಪ್ರಯತ್ನವೇ ಸಂಧಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಕೈಂಕರ್ಯದ ಮೊದಲ ಮೆಟ್ಟಲು.

ಸಂಧಿರೋಗಗಳ ಮುಖ್ಯ ಕಾರಣಗಳಿವು:

ಒಣಗಿದ ಆಹಾರವನ್ನು ಅಥವಾ ಸ್ನಿಗ್ಧಾಂಶವಿಲ್ಲದ ಆಹಾರವನ್ನು ಹೆಚ್ಚು ಪ್ರಮಾಣದಲ್ಲಿ ದಿನನಿತ್ಯವೂ ಸೇವಿಸುವುದು. ಉದಾಹರಣೆಗೆ, ಕಡ್ಲೆಪುರಿ, ಬನ್, ಬ್ರೆಡ್, ಒಣ ತರಕಾರಿಗಳು, ಒರಟಾದ ರೊಟ್ಟಿ, ಚಪಾತಿ, ಒಣಕಾಳುಗಳಾದ ಅಲಸಂದೆ, ಅವರೆ, ಕಡಲೆ ಇತ್ಯಾದಿ.

ನಮ್ಮ ದಿನನಿತ್ಯದ ಆಹಾರದಲ್ಲಿ ತುಪ್ಪ, ಎಣ್ಣೆಗಳಂಥ ಒಳ್ಳೆಯ ಜಿಡ್ಡಿನಂಶವನ್ನು ಬಳಸದೆ ಇರುವುದು.

ಆಹಾರ ಸೇವನೆಯ ಸಮಯದಲ್ಲಿ ಹಸಿವಿದ್ದರೂ ಸೇವಿಸದೇ ಇರುವುದು ಅಥವಾ ಹಸಿವನ್ನು ಗಮನಿಸದೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು. ಸದಾ ಶೀತವಾದ ಅಥವಾ ಶೈತ್ಯೀಕರಿಸಿದ ಆಹಾರವನ್ನು ಬಳಸುವುದು. ಉದಾಹರಣೆಗೆ, ಫ್ರಿಜ್‌ನಲ್ಲಿ ಇಟ್ಟಿರುವ ಮೊಸರು, ಹಾಲು, ತಂಗಳು ಆಹಾರ ಇತ್ಯಾದಿ ಅಥವಾ ಫ್ರಿಜ್ ನಿಂದ ನೇರವಾಗಿ ತಣ್ಣೀರನ್ನು/ ಜ್ಯೂಸ್‌ಗಳನ್ನು ಸೇವಿಸುವುದು. ಆಹಾರದಲ್ಲಿ ಅತಿಯಾದ ಖಾರ, ಹುಳಿ ರುಚಿ ಉಳ್ಳಂಥ ಖಾದ್ಯಗಳನ್ನು ಸತತವಾಗಿ ಸೇವಿಸುವುದು. ಉದಾಹರಣೆಗೆ, ಉಪ್ಪಿನಕಾಯಿ, ಮೆಣಸಿನಕಾಯಿ, ಹುಣಸೆ ಗೊಜ್ಜು ಇತ್ಯಾದಿ. ಅಂತೆಯೇ, ಕಹಿ, ಒಗರು ರುಚಿಗಳಿರುವ ಆಹಾರಗಳನ್ನು ಸಹ ಹೆಚ್ಚು ಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸುವುದು. ಉದಾ ಹರಣೆಗೆ, ಬೇವಿನ ಕಷಾಯ, ಹಾಗಲಕಾಯಿ ರಸ, ಕರಿಬೇವು ಜ್ಯೂಸ್, ಮೆಂತ್ಯ ಇತ್ಯಾದಿಗಳ ಅತಿಯಾದ ಬಳಕೆ.

ರಾತ್ರಿ ಸಮಯದಲ್ಲಿ ನಿದ್ದೆಗೆಡುವುದು, ಸರಿಯಾದ ಸಮಯದಲ್ಲಿ ನಿದ್ದೆ ಮಾಡದೇ ಇರುವುದು ಅಥವಾ ಸಂಪೂರ್ಣವಾಗಿ ನಿದ್ದೆ ಮಾಡದೆ ಇರುವುದು.

ನಮ್ಮ ದೈಹಿಕ ಬಲವನ್ನು ಗಮನಿಸದೆ ಅತಿಯಾದ ಆಯಾಸಕರವಾದ ಕೆಲಸಗಳನ್ನು ಸತತವಾಗಿ ಮಾಡುವುದು. ಉದಾಹರಣೆಗೆ, ನಮ್ಮ ಮಿತಿ ಮೀರಿದ ವ್ಯಾಯಾಮ, ಅತಿ ಹೆಚ್ಚು ಭಾರ ಹೊರು ವುದು, ಆಯಾಸವಾಗಿದ್ದರೂ ಹೆಚ್ಚು ನಡೆಯುವುದು, ತುಂಬಾ ಹೊತ್ತು ನಿಂತಿರುವುದು ಇತ್ಯಾದಿ.

ಅತಿಯಾದ ಪ್ರಯಾಣವು ಸಹ ಸಂಧಿಗಳ ವಿಕೃತಿಗೆ ಕಾರಣ. ಊರಿಂದ ಊರಿಗೆ ಸತತ ವಾಗಿ ಪ್ರಯಾಣಿಸುತ್ತಿರುವುದು, ರಾತ್ರಿ ನಿದ್ದೆಗೆಟ್ಟು ಪ್ರಯಾಣ ಮಾಡುವುದು, ಅತಿಯಾಗಿ ವಾಹನವನ್ನು ಚಾಲಿಸುತ್ತಾ ಪ್ರಯಾಣ ಮಾಡುವುದು ಇತ್ಯಾದಿ.

ಬಿಸಿಲಿನಲ್ಲಿ ಅಥವಾ ತುಂಬಾ ಚಳಿ/ಮಳೆಯಲ್ಲಿ ಓಡಾಡುವುದು ಅಥವಾ ಕೆಲಸ ಮಾಡುವುದು.

ಅಪಘಾತ, ಪೆಟ್ಟು ಬೀಳುವುದು, ಕೆಳಗೆ ಬೀಳುವುದು ಇತ್ಯಾದಿಗಳು ಸಹ ಸಂಧಿಗಳನ್ನು ದುರ್ಬಲಗೊಳಿಸುತ್ತವೆ.

ಸತತವಾಗಿ ವಾಂತಿ, ಬೇಧಿ ಆಗುವಿಕೆ, ರಕ್ತಸ್ರಾವಗಳು ಸಹ ಸಂಽಯ ಆರೋಗ್ಯವನ್ನು ಹಾಳು ಮಾಡುತ್ತವೆ.

ಧೂಮಪಾನ, ಮದ್ಯಪಾನಗಳಂಥ ದುರಭ್ಯಾಸವು ಪ್ರಮುಖ ಕಾರಣವಾಗಬಲ್ಲದು.

ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ವಾತಾದಿ ದೋಷಗಳು ದೇಹದಲ್ಲಿ ಹೆಚ್ಚಾಗಿ ಅಥವಾ ಹಾಳಾಗಿ, ಅವುಗಳು ಸಂಧಿಗಳಲ್ಲಿ ಸೇರಿಕೊಂಡು ನೋವನ್ನುಂಟುಮಾಡಿ ಅನೇಕ ರೀತಿಯ ವಿಕೃತಿ ಗಳನ್ನು ಪ್ರಾರಂಭ ಮಾಡುತ್ತವೆ. ಆದರೆ ಎಲ್ಲರೂ ಈ ನೋವನ್ನು ಅನುಭವಿಸಬೇಕಾಗಿಲ್ಲ. ನಾವು ದಿನನಿತ್ಯ ಸೇವಿಸುವ ಆಹಾರ- ವಿಹಾರಗಳಲ್ಲಿಯೇ ಕೊಂಚ ಬದಲಾವಣೆಗಳನ್ನು ತಂದುಕೊಂಡರೆ ನಮ್ಮ ಸಂಧಿಗಳನ್ನು ಸದಾ ಸದೃಢವಾಗಿರಿಸಿಕೊಳ್ಳಬಹುದು.

ಈಗ ಆಯುರ್ವೇದೋಕ್ತ ಸಂಧಿರಕ್ಷಕ ಸೂತ್ರಗಳ ಬಗ್ಗೆ ಸ್ವಲ್ಪ ಗಮನಹರಿಸೋಣ:

ಮೊಟ್ಟ ಮೊದಲನೇ ಸೂತ್ರವೆಂದರೆ ಆಹಾರದಲ್ಲಿ ಶಿಸ್ತು. ಹಸಿವನ್ನು ತಡೆದು ತಡೆದು ಆಹಾರ ಸೇವಿಸುವುದು ಸಂಧಿರೋಗಗಳಿಗೆ ಪ್ರಮುಖವಾದ ಕಾರಣ. ಆದ್ದರಿಂದ ಮೂರು ಆಹಾರ ಕಾಲಗಳನ್ನು ನಿಗದಿತ ಸಮಯಕ್ಕೆ ಪಾಲಿಸಿ, ಹಸಿವಿಗೆ ತಕ್ಕಂತೆ ಆಹಾರವನ್ನು ಸೇವಿಸಬೇಕು.

ಆಹಾರದಲ್ಲಿ ಕಡ್ಡಾಯವಾಗಿ ಜಿಡ್ಡಿನ ಬಳಕೆ ಇರಲೇಬೇಕು. ಕನಿಷ್ಠಪಕ್ಷ ಒಂದು ಚಮಚ ತುಪ್ಪವನ್ನಾದರೂ ಪ್ರತಿ ಆಹಾರದಲ್ಲೂ ಸೇವಿಸಬೇಕು. ಒಣ ಆಹಾರಗಳಾದ ಕಾಳು, ಒಣ ರೊಟ್ಟಿ, ಆಲೂಗಡ್ಡೆ ಇತ್ಯಾದಿಗಳನ್ನು ಬಳಸಬೇಕಾದರೆ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಹಾಕಿಕೊಂಡು ಸೇವಿಸುವುದರಿಂದ ತೊಂದರೆ ಕಡಿಮೆಯಾಗುತ್ತದೆ.

ಅತಿಯಾದ ಖಾರ ಮತ್ತು ಒಗರು ರಸಗಳನ್ನು, ಕಹಿರಸಗಳನ್ನು ತ್ಯಜಿಸಿ ಷಡ್ರಸದಿಂದ ಸಂತುಲಿತ ವಾದ ಭೋಜನ ಪದ್ಧತಿಯನ್ನು ಪಾಲಿಸಬೇಕು.

ಎಲ್ಲದಕ್ಕಿಂತ ಬಹಳ ಮುಖ್ಯವಾದ ದಿನಚರಿ ಎಂದರೆ, ಇಡೀ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡು ವುದು. ಇದನ್ನು ಆಯುರ್ವೇದದಲ್ಲಿ ಅಭ್ಯಂಗವೆಂದು ಕರೆಯುತ್ತಾರೆ. ಇದು ಸರ್ವಶ್ರೇಷ್ಠ ಸಂಧಿರಕ್ಷಕ.

ನಾವು ಆಗಲೇ ತಿಳಿದುಕೊಂಡ ಹಾಗೆ ಎಲ್ಲಾ ಸಂಧಿಗಳಲ್ಲೂ ಜಿಡ್ಡಿನ ಒಂದು ದ್ರವವಿರುತ್ತದೆ. ಈ ದ್ರವವು ಒಣಗದೆ ಸದಾ ಉತ್ತಮ ಪ್ರಮಾಣದಲ್ಲಿದ್ದು, ಸಂಧಿಗಳನ್ನು ರಕ್ಷಿಸಬೇಕಾದರೆ ಅಭ್ಯಂಗವೆಂಬ ಬಾಹ್ಯ ಸ್ನೇಹನ ಬಹುಮುಖ್ಯ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಯನ್ನು ಬೆಚ್ಚಗೆ ಮಾಡಿ ಇಡೀ ಮೈಗೆ ಸವರಿಕೊಂಡು 5 ನಿಮಿಷಗಳ ನಂತರ ಸ್ನಾನ ಮಾಡುವು ದರಿಂದ ಸಂಧಿಗಳು ಸದಾ ಬಲಿಷ್ಠವಾಗಿರುತ್ತದೆ.

ಹೀಗೆ ಮಾಡುವುದರಿಂದ ಎಷ್ಟೇ ಶಾರೀರಿಕ ಶ್ರಮವಿದ್ದರೂ ದೇಹಕ್ಕೆ ಅದನ್ನು ನಿಭಾಯಿಸುವ ಶಕ್ತಿ ಬರುತ್ತದೆ. ಹಿತಮಿತವಾದ ವ್ಯಾಯಾಮವು ಸಂಧಿಗಳಿಗೆ ಸದಾ ಕ್ಷೇಮಕರ. ಆಯುರ್ವೇದ ನುಡಿಯುವಂತೆ ನಾವು ಮಾಡುವ ವ್ಯಾಯಾಮ ನಮ್ಮ ಅರ್ಧಶಕ್ತಿಗಿಂತ ಮೀರಿದರೆ ತೊಂದರೆ ತಪ್ಪಿದ್ದಲ್ಲ. ಸದಾ ನಮ್ಮ ದೈಹಿಕ ಶಕ್ತ್ಯಾನುಸಾರ ವ್ಯಾಯಾಮ ಮಾಡುವುದು ಒಳ್ಳೆಯದು.

ಇನ್ನು ರಾತ್ರಿ ನಿದ್ದೆಯ ಮಹತ್ವವನ್ನು ಹೇಳಬೇಕಾಗಿಯೇ ಇಲ್ಲ. ರಾತ್ರಿ ಮಾಡುವ ನಿದ್ದೆಯು ನಮ್ಮೆಲ್ಲ ರನ್ನು ಸಲಹುವ ಮಾತೆಯಂತೆ. ಸಂಧಿ ಶೂಲವಿರಲಿ, ತಲೆನೋವಿರಲಿ, ಮಾನಸಿಕ ಕಿರಿಕಿರಿಯಿರಲಿ, ಜ್ವರವೇ ಇರಲಿ, ಸರ್ವರೋಗಕ್ಕೂ ನಿದ್ದೆಯೇ ಮದ್ದು.

ಹಾಗಾಗಿ ರಾತ್ರಿ ಸಮಯದಲ್ಲಿ ಬೇಗ ಮಲಗಿ ಸೂರ್ಯೋದಯದ ಮುನ್ನ ಏಳುವುದು ಸದಾ ಸ್ವಾಸ್ಥ್ಯ ರಕ್ಷಕ. ಮಲಪ್ರವೃತ್ತಿ ಸರಿಯಾಗಿ ಆಗದಿದ್ದರೂ ಸಂಧಿಗಳಲ್ಲಿನ ನೋವು ಹೆಚ್ಚುವುದು. ಆದ್ದರಿಂದ, ಪ್ರತಿನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ಯಾವುದೇ ಬಾಹ್ಯ ಪ್ರಚೋದನೆ ಇಲ್ಲದೆ ಸರಾಗವಾಗಿ ಮಲ ಪ್ರವೃತ್ತಿಯಾಗುವಂತೆ ನೋಡಿಕೊಳ್ಳತಕ್ಕದ್ದು.

ವೃತ್ತಿ ಸಮಯದಲ್ಲಿ ನಾವು ಕುಳಿತುಕೊಳ್ಳುವ ಭಂಗಿಯೂ ಸಂಧಿ ಸ್ವಾಸ್ಥ್ಯಕ್ಕೆ ಬಹಳ ಮುಖ್ಯ. ಲ್ಯಾಪ್‌ ಟಾಪ್ ಬಳಸುವಾಗ, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ, ಮೊಬೈಲ್ ಫೋನನ್ನು ಉಪಯೋಗಿ ಸುವಾಗ ಅಥವಾ ಡೆಸ್ಕ್ ವರ್ಕ್ ಮಾಡುವಾಗ ಬೆನ್ನು-ಕತ್ತು- ತಲೆ ನೇರವಾಗಿಸಿಕೊಂಡು ಮೊಣಕಾಲು ಗಳನ್ನು ನೇರವಾಗಿರಿಸಿ, ಮೊಣಕೈಗೆ ಶ್ರಮವಾಗದಂತೆ ಕುಳಿತುಕೊಂಡು ಕೆಲಸ ಮಾಡುವುದು ಒಳ್ಳೆಯದು.

ಒಟ್ಟಾರೆ, ಚರಕರು ಹೇಳುವಂತೆ- ‘ಸರ್ವಮನ್ಯಂ ಪರಿತ್ಯಜ್ಯ ಶರೀರಮನುಪಾಲಯೇತ್’, ಅಂದರೆ ಬೇರೆ ಎಲ್ಲ ಕೆಲಸಗಳನ್ನೂ ಬದಿಗಿರಿಸಿ ಮೊಟ್ಟಮೊದಲು ನಮ್ಮ ಶರೀರದ ಪಾಲನೆಯನ್ನು ಮಾಡ ತಕ್ಕದ್ದು! ಅದರಲ್ಲೂ ವಿಶೇಷವಾಗಿ ನಿತ್ಯವೂ ಸಂಧಿಗಳ ಪರಿಪಾಲನೆ ಮಾಡಲೇಬೇಕು!