ಧ್ಯೇಯಜೀವಿ
ಎಸ್.ಆರ್.ರಾಮಸ್ವಾಮಿ
‘ಅವಿಶ್ರಾಂತ ಧ್ಯೇಯಜೀವಿ- ‘ಮೈ.ಚ.ಜಯದೇವ: ಬದುಕು- ನೆನಪು’ ಪುಸ್ತಕ ನಾಳೆ (ಮೇ 14) ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆರೆಸ್ಸೆಸ್ನ ದತ್ತಾತ್ರೇಯ ಹೊಸಬಾಳೆ ಭಾಗವಹಿಸ ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಯದೇವ ಅವರ ಕುರಿತು ಇತ್ತೀಚೆಗೆ ಗತಿಸಿದ ಹಿರಿಯ ಚಿಂತಕ ಎಸ್.ಆರ್.ರಾಮಸ್ವಾಮಿ ಅವರ ಲೇಖನ.
ಬಹುಶಃ ಜಯದೇವ ಅವರ 60ನೇ ವರುಷದ ಜನ್ಮದಿನ ಅಭಿನಂದನ ಕಾರ್ಯಕ್ರಮ ಸಣ್ಣದಾಗಿ ಏರ್ಪಾಡಾಗಿತ್ತು. ಆ ಕಾರ್ಯಕ್ರಮದಲ್ಲಿ ನ.ಕೃಷ್ಣಪ್ಪನವರು ಅಭಿನಂದನ ಭಾಷಣ ಮಾಡಿದರು. ಅವರು ತಮ್ಮ ಮಾತನ್ನು ಆರಂಭಿಸಿದ್ದು ಹೀಗೆ: ನಮ್ಮ, ಅಂದರೆ ಸಂಘದ ವಲಯದಲ್ಲಿ ಯಾವುದಾದರೂ ತುಂಬಾ ಜಟಿಲವಾದ ಕ್ಲಿಷ್ಟತೆಗಳು ತುಂಬಿದ ಸಮಸ್ಯೆ ಎದುರಾದಾಗ ಅದನ್ನು ಪರಿಹಾರಕ್ಕಾಗಿ ಜಯದೇವ ಅವರಿಗೆ ವಹಿಸೋಣ, ಅವರು ನಿರ್ವಹಿಸಬಲ್ಲರು- ಹೀಗೆ ಒಂದು ಪದ್ಧತಿ ಬೆಳೆದುಬಂದಿದೆ.
ನ.ಕೃಷ್ಣಪ್ಪನವರ ಆ ಮಾತು ಎಷ್ಟು ಯಥಾರ್ಥ ಎಂದು ಅನೇಕರ ಅನುಭವದಲ್ಲಿ ಇದೆ. ಅದೇ ಸಂದರ್ಭದಲ್ಲಿ ಜಯದೇವ ಅವರು ಮಾತನಾಡುತ್ತಾ, ತಮ್ಮ ಮನಸ್ಸಿನಲ್ಲಿದ್ದ ಧ್ಯೇಯವನ್ನು ಸ್ಮರಣೆ ಮಾಡಿದರು. ಅವರ ಹಿರಿಯರೊಬ್ಬರು ಹೇಳಿದ್ದ ಮಾತು: ’One Life One Mission.’ ಆ ಸೂತ್ರವನ್ನು ತಾನು ಜೀವನದಲ್ಲಿ ಸಾಗಿಸುತ್ತಾ ಬಂದಿದ್ದೇನೆ ಎಂದರು.
’Crisis Management Expert’ ಎಂಬ ಪ್ರಥೆ ಜಯದೇವ ಅವರಿಗೆ ಅನೇಕ ದಶಕಗಳ ಹಿಂದಿ ನಿಂದ ಬಂದಿದೆ. ಭಾವನಾತ್ಮಕ, ವ್ಯವಸ್ಥಾತ್ಮಕ - ಈ ಎರಡೂ ಆಯಾಮಗಳ ನಡುವೆ ಸಮನ್ವಯ ಮಾಡುವುದನ್ನು ಜಯದೇವರು ಒಂದು ಕುಶಲಕಲೆಯ ಮಟ್ಟಕ್ಕೆ ಏರಿಸಿದ್ದರು. ಅವರು ಸದಾ ಆಗ್ರಹಪೂರ್ವಕ ಒತ್ತಿ ಹೇಳುತ್ತಿದ್ದುದು ವ್ಯಾವಹಾರಿಕ ವ್ಯವಸ್ಥೆಗಳು ಸಮರ್ಪ ಕವಾಗಿರ ಬೇಕೆಂದು ಮತ್ತು ಇದಕ್ಕೆ ಯಾವುದೇ ಹೊಸ ಚಟುವಟಿಕೆಯ ಆರಂಭದಿಂದಲೇ ಸಾಕಷ್ಟು ಗಮನ ಕೊಡುವುದು ಆವಶ್ಯಕ ಎಂದು.
ಅನೇಕ ಸಂದರ್ಭಗಳಲ್ಲಿ ಏನಾದರೂ ಎಡವಟ್ಟು ಆದ ಮೇಲೆಯೇ ವ್ಯವಸ್ಥೆಯ ಬಗ್ಗೆ ಯೋಚಿಸಲು ಆರಂಭಿಸುತ್ತೇವೆ. ಜಯದೇವ ಅವರು ಈ ಧಾಟಿಯಲ್ಲಿ ಮಾತನಾಡುತ್ತಿದ್ದು ದರಿಂದ ಆರಂಭದ ದಿನಗಳಲ್ಲಿ ಅವರನ್ನು ‘ಮಿಲಿಟರಿ ಕಮಾಂಡರ್’ ಎಂದು ಕೆಲವರು ಹಾಸ್ಯ ಮಾಡುತ್ತಿದ್ದುದುಂಟು. ಆದರೆ ಈ ರೀತಿಯ ಮಾರ್ಗದರ್ಶನದಿಂದ ಸಂಘದ ಅಸಂಖ್ಯ ಪ್ರಕಲ್ಪಗಳಿಗೆ ಎಷ್ಟು ಅಗಾಧ ಪ್ರಮಾಣದ ಲಾಭವಾಗಿದೆ ಎನ್ನುವುದು ಈಗ ಇತಿಹಾಸ.
ಇದನ್ನೂ ಓದಿ; Dr Sadhanashree Column: ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ- ಆಯುರ್ವೇದದ ಸಮಗ್ರ ಪರಿಹಾರಗಳು
ಹಾಗೆ ನೋಡಿದರೆ ಜಯದೇವ ಅವರು ಭಾವತೀವ್ರತೆ ಇಲ್ಲದವರೇನೂ ಅಲ್ಲ, ಪ್ರತಿಯಾಗಿ ಅವರ ಭಾವಸ್ಪಂದನ ನಮ್ಮೆಲ್ಲರಿಗಿಂತ ತೀಕ್ಷ್ಣವಾಗಿಯೇ ಇರುತ್ತಿತ್ತು. ಆದರೆ ಭಾವನೆಗಳಿಗೆ ಕಾರ್ಯ ರೂಪ ಕೊಡುವುದರಲ್ಲಿ ನಮಗಿಂತ ಮುಂದೆ ಇರುತ್ತಿದ್ದರು.
ವ್ಯಕ್ತಿತ್ವದ ಹೊಳಹುಗಳು
ಚಿತ್ರ 1: ಆರಂಭಕಾಲದ ರಾಷ್ಟ್ರೋತ್ಥಾನ ಪರಿಷತ್ತಿನ ಮೊದಲ ಹೆಜ್ಜೆ ಎಂದರೆ ‘ಉತ್ಥಾನ’ ಮಾಸಪತ್ರಿಕೆ. ಆಗ ಲೇಖನಗಳ ಸಜ್ಜಿಕೆ, ಮುದ್ರಣ ಎಲ್ಲವೂ ದೊಡ್ಡ ಸವಾಲಾಗಿರುತ್ತಿತ್ತು. ಅತ್ಯಂತ ಕ್ಲಿಷ್ಟವಾದ ಸಂದರ್ಭವೆಂದರೆ ಮುದ್ರಿತ ಉತ್ಥಾನದ ಪ್ರತಿಗಳ ರವಾನೆ. ರವಾನೆಗೆ ಅವಶ್ಯವಿದ್ದ ಅಂಚೆ ಖರ್ಚನ್ನು ಹೊಂದಿಸುವುದು ಬಹಳ ಕಷ್ಟವಾಗುತ್ತಿತ್ತು. ಆ ಹಂತದಲ್ಲಿ ಜಯದೇವರು ತಮ್ಮ ಸಾಹಸವಂತಿಕೆ ತೊಡಗಿಸಬೇಕಾಗುತ್ತಿತ್ತು.
ಚಿತ್ರ 2: 1983 ಜೂನ್ ತಿಂಗಳಲ್ಲಿ ಕೇಶವಶಿಲ್ಪ ಸಭಾಂಗಣದ ಉದ್ಘಾಟನೆಯಾಯಿತು. ಆ ಸಂದರ್ಭಕ್ಕೆ ಪರಿಷತ್ತಿನ ಆವರೆಗಿನ ಸಾಧನೆಗಳನ್ನು ದಾಖಲೆ ಮಾಡಿ ಒಂದು ಪ್ರಕಟಣೆ ಸಿದ್ಧಮಾಡಬೇಕೆಂದು ಜಯದೇವ ಅವರ ಮನಸ್ಸಿಗೆ ಬಂತು. ಅದಕ್ಕೆ ಸಿದ್ಧತೆ ಮಾಡಿ ಎಂದು ನಮಗೆ ಹೇಳಿದರು. ಆ ದಿನಗಳಲ್ಲಿ ಪರಿಷತ್ ನಡೆಸುತ್ತಿದ್ದದ್ದು ಒಂದೇ ಶಾಲೆ, ಹಗರಿ ಬೊಮ್ಮನಹಳ್ಳಿಯ ಶಾಲೆ. ಇನ್ನು ರಾಷ್ಟ್ರೋತ್ಥಾನ ಸಾಹಿತ್ಯ, ಭಾರತ-ಭಾರತಿ ಪುಸ್ತಕ ಮಾಲೆ, ಅಲ್ಲಿಯವರೆಗೆ ನಡೆದಿದ್ದ ಕೆಲವು ಉಪನ್ಯಾಸಮಾಲೆಗಳು, ಶಾರೀರಿಕ ಶಿಕ್ಷಣ ಕೇಂದ್ರ, ಆಗತಾನೇ ಶುರುವಾಗಿದ್ದ ರಾಷ್ಟ್ರೋತ್ಥಾನ ಬಳಗಗಳು - ಹೀಗೆ ನಮ್ಮ ಹತ್ತಿರ ಇದ್ದ ಅಷ್ಟೂ ಸರಕನ್ನು ಶ್ರಮಪಟ್ಟು ಒಟ್ಟುಮಾಡಿದಾಗ ಒಂದು ಹದಿನಾಲ್ಕು ಪುಟಗಳ ಸೂವನಿರ್ ಸಿದ್ಧವಾಯಿತು.
ಅದಕ್ಕೆ ಹೋಲಿಸಿ: ಕಳೆದ ವರುಷ ಅಂದರೆ 2015-16ರಲ್ಲಿ ಪರಿಷತ್ತಿನ ಬೇರೆ ಬೇರೆ ಭಾಗದ ವರದಿಗಳನ್ನು ಆದಷ್ಟು ಒಂದು-ಎರಡು ವಾಕ್ಯಕ್ಕೆ ಸಂಗ್ರಹಮಾಡಿ ಅನಿವಾರ್ಯವಾದ ಸಂಗತಿಗಳನ್ನು ಮಾತ್ರ ಉಲ್ಲೇಖ ಮಾಡಿ ತಯಾರುಮಾಡಿದ ಅಸಮಗ್ರ ವರದಿಯೇ ಎಂಬತ್ತು ಪುಟ ದಾಟಿತ್ತು. ಈಗ ನಮ್ಮ full fledged ಶಾಲೆಗಳ ಸಂಖ್ಯೆಯೇ 30 ದಾಟಿದೆ, ಶಿಶುಮಂದಿರ ಗಳು 26 ಇವೆ,
ಅನೌಪಚಾರಿಕ ಶಿಕ್ಷಣಕೇಂದ್ರಗಳು 210 ಇವೆ, ಇನ್ನು 24/7 ಕೆಲಸ ಮಾಡುತ್ತಿರುವ ನಮ್ಮ ಆರೋಗ್ಯ ಸೇವಾ ಚಟುವಟಿಕೆಗಳು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿವೆ. ನಾವು ಎಂದಾ ದರೂ ಮಾಡಿಯೇವು ಎನ್ನುವ ಕಲ್ಪನೆಯೇ ಐದಾರು ವರುಷಗಳ ಹಿಂದೆ ಇರದಿದ್ದ, ದೊಡ್ಡ ಪ್ರಮಾಣದ, ದೇಸೀತಳಿಗಳ ಐನೂರು ಗೋವುಗಳು ಇರುವ ದೊಡ್ಡ ಗೋಶಾಲೆ, ಪ್ರತಿಭಾ ವಂತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ಮೂಲದ ವಿದ್ಯಾರ್ಥಿಗಳಿಗೆ ನಿಃಶುಲ್ಕ ಶಿಕ್ಷಣ ಕೊಡುತ್ತಿರುವ ‘ತಪಸ್’ ಪ್ರಕಲ್ಪ, ರಾಜ್ಯದ ಅನನ್ಯ ಎನ್ನಿಸಿಕೊಂಡಿರುವ ರಕ್ತನಿಧಿ, ‘ತಲಸ್ಸೇಮಿಯಾ’ ಮಕ್ಕಳ ಚಿಕಿತ್ಸೆ ಮತ್ತು ಆರೈಕೆ ಕೇಂದ್ರ - ಹೀಗೆ ಎಲ್ಲಾ ಮುಖ ಗಳಲ್ಲಿ ಪರಿಷತ್ತಿನ ಚಟುವಟಿಕೆಗಳು ವಿಸ್ತರಿಸುತ್ತಿರುವುದು ತಿಳಿದೇ ಇದೆ.
ಜಯದೇವ ಅವರು ಆಗಿಂದಾಗ ಹೇಳುತ್ತಿದ್ದ ಒಂದು ಮಾತು: ಸಂಸ್ಥೆ ಎಂದರೆ ಕಟ್ಟಡ ಗಳಲ್ಲ, ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ನಿಜಾರ್ಥದಲ್ಲಿ ನಮ್ಮ ಕಾರ್ಯಪ್ರಗತಿಯ ಸೂಚಕ ಎಂದರೆ ಜನಸಮುದಾಯದಲ್ಲಿ ನಮ್ಮ ಬಗ್ಗೆ ನಿರ್ಮಾಣವಾಗಿರುವ Goodwill. ಹೊರಗಿನ ಸಂರಚನೆಗಳು ಎಷ್ಟು ದೊಡ್ಡ ಪ್ರಮಾಣದ್ದಾಗಿದ್ದರೂ ಅದಕ್ಕೆ ಜೀವ ತುಂಬು ವವರು ವ್ಯಕ್ತಿಗಳು, ಎಂದರೆ ಕಾರ್ಯಕರ್ತರು, ಸಹಕಾರಿಗಳು, ಹಿತೈಷಿಗಳು ಮತ್ತು ವಿಶಾಲ ವಾದ ಸಮಾಜ.
ಇಂತಹ ದೃಷ್ಟಿಯನ್ನೂ ಕಾರ್ಯಪದ್ಧತಿಯನ್ನೂ ಕಾರ್ಯಕರ್ತರ ತಂಡಗಳನ್ನೂ ನಿರ್ಮಾಣ ಮಾಡಿದವರು ಜಯದೇವ ಅವರು. ಇನ್ನೊಂದು ಉದಾಹರಣೆಯನ್ನು ಸ್ಮರಿಸ ಬಹುದಾದರೆ, ಈಗ ಒಂದೂವರೆ ವರ್ಷ ಹಿಂದೆ ‘ಅಂತಾರಾಷ್ಟ್ರೀಯ ಯೋಗ ದಿನ’ ನಿಮಿತ್ತ ದೊಡ್ಡ ಕಾರ್ಯಕ್ರಮವನ್ನು ಮಾಡಿದೆವು.
ಆರಂಭದಲ್ಲಿ ಅದನ್ನೊಂದು ಸರಳ ಕಾರ್ಯಕ್ರಮವಾಗಿ ಮಾಡುವುದೆಂದು ಅಂದು ಕೊಂಡಿದ್ದೆವು; ಆದರೆ ಅದಕ್ಕೆ ಕೈಯಿಟ್ಟ ಮೇಲೆ ದೈತ್ಯಾಕಾರ ಬರಲು ಪ್ರಾರಂಭವಾಯಿತು. 50 ಯೋಗಶಿಬಿರಗಳು ಎಂದುಕೊಂಡಿzವು ನಗರದಲ್ಲಿ. ಐವತ್ತು ನೂರಾಯಿತು, ನೂರು ಇನ್ನೂರಾಯಿತು, ಇನ್ನೂರೈವತ್ತು ಶಿಬಿರಗಳನ್ನೂ ದಾಟಿತ್ತು. ಅದೆಷ್ಟು ದೊಡ್ಡ ಕಾರ್ಯ ಕ್ರಮವಾಯಿತೆಂದರೆ ಬಹುಶಃ ಕರ್ನಾಟಕದ ಮಟ್ಟಿಗೆ ಅಷ್ಟು ದೊಡ್ಡ ಯೋಗದಿನ ಆಚರಣೆ ಬೇರೆಲ್ಲಿಯೂ ನಡೆದ ಬಗ್ಗೆ ನಮಗೆ ಮಾಹಿತಿಯಿಲ್ಲ. ಅದರಲ್ಲಿ ಭಾಗವಹಿಸಿದವರ ಸಂಖ್ಯೆ ಹನ್ನೆರಡು ಸಾವಿರದಷ್ಟಾಯಿತು.
ಮಾಧ್ಯಮಮಿತ್ರರೂ ದೂರದರ್ಶನದವರೂ ನಮ್ಮನ್ನು ಕೇಳಿದರು - ‘ಇವರೆ ನಿಮ್ಮ ಯೋಗಕೇಂದ್ರಗಳಲ್ಲಿ ಅಭ್ಯಾಸ ಮಾಡುವವರಾ?’ ಎಂದು. ಹೇಳಿದೆವು - ‘ಇಲ್ಲ ಸ್ವಾಮಿ, ಇವರಲ್ಲಿ ಒಂದೆರಡು ಸಾವಿರ ಮಾತ್ರ ನಮ್ಮಲ್ಲಿ ಅಭ್ಯಾಸ ಮಾಡುವವರು.
ಉಳಿದ ಹತ್ತುಸಾವಿರ ಜನರನ್ನು ನಾವು ಬೇರೆ ಬೇರೆಡೆ ಸಂಪರ್ಕ ಮಾಡಿ, ಯೋಗಾ ಭ್ಯಾಸದಲ್ಲಿ ತೊಡಗಿಸಿ, ಒಂದು ತಿಂಗಳು ಅವರಿಗೆ ಶಿಕ್ಷಣ ಕೊಡಿಸಿ, ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ’ ಎಂದಾಗ ಮಾಧ್ಯಮದವರೆಲ್ಲ ಆಶ್ಚರ್ಯಪಟ್ಟರು. ಅದರ ಭಾಗಲಬ್ಧ ಅಂದರೆ ನಮ್ಮ ಅಂತಃಶಕ್ತಿಯ ಪ್ರಮಾಣ ನಮಗೇ ಗೋಚರವಾಗು ವಂತಾಯಿತು.
ಕಲಿಯುವುದನ್ನು ಕಲಿಸಿಕೊಟ್ಟರು
ಜಯದೇವ ಅವರು ನಮಗೆ ಕಲಿಯುವುದನ್ನು ಕಲಿಸಿಕೊಟ್ಟರು. ಅವರ ಕಾರ್ಯರೀತಿ ಯನ್ನು ನೋಡಿಯೇ ನಾವೆ ವರುಷಗಳುದ್ದಕ್ಕೂ ಬೆಳೆದಿದ್ದೇವೆ. ಅವರು ಆರಂಭದಿಂದ ಒತ್ತಿಹೇಳುತ್ತಿದ್ದ ಸಂಗತಿಗಳು ನಾಲ್ಕು: ಮೊದಲನೆಯದು, ಹೊರಗಿನ ಆಕಾರಕ್ಕಿಂತ ಒಳಗಿನ ಸತ್ತ ಮಹತ್ತ್ವದ್ದು. ಎರಡನೆಯದು, ವಹಿವಾಟಿಗಿಂತ ಮಹತ್ತದ್ದು ಮೌಲ್ಯಗಳ ಅನುಸಂಧಾನ. ಮೂರನೇ ಸಂಗತಿ, ಸಾಧನೆಯಷ್ಟೇ ಅದರ ಪ್ರಕ್ರಿಯೆಯೂ ಮುಖ್ಯ.
ನಾವು ಯಾರಿಗೂ ಪ್ರತಿಸ್ಪರ್ಧಿಗಳಲ್ಲ ಎನ್ನುವುದು ನಾಲ್ಕನೆಯದು. ಈ ನಾಲ್ಕು ಅಂಶಗಳನ್ನು ಪದೇ ಪದೇ ಒತ್ತಿ ಹೇಳುತ್ತಿದ್ದರು. ರಾಷ್ಟ್ರೋತ್ಥಾನ ಸಂಸ್ಥೆಯ ಬೆಳವಣಿಗೆ ಯಲ್ಲಿ ರಹಸ್ಯ ಎಂದೇನಾದರೂ ಇದ್ದರೆ ಅದು ಜಯದೇವ ಅವರು ಪದೇ ಪದೇ ಒತ್ತಿಹೇಳುತ್ತಿದ್ದ ಈ ನಾಲ್ಕು ಮೂಲಕಲ್ಪನೆಗಳೇ. ಒಟ್ಟಿನಲ್ಲಿ ಹೇಳುವುದಾದರೆ, ನಮ್ಮದು ಹಲವು ಪ್ರಕಲ್ಪಗಳ ಒಟ್ಟಿಲು ಮಾತ್ರವಲ್ಲ, ನಮ್ಮದೊಂದು ಮಿಷನ್.
ಇದೊಂದು ಧ್ಯೇಯಪ್ರೇರಿತವಾದ ಮೌಲ್ಯಾನು ಸಂಧಾನ. ಇದು ಜಯದೇವ ಅವರು ಪದೇ ಪದೇ ನೆನಪು ಮಾಡಿಕೊಡುತ್ತಿದ್ದ ಆಧಾರಸಂಗತಿ. ಜಯದೇವ ಅವರು ಪ್ರತಿ ಸಂದರ್ಭ ದಲ್ಲೂ ಒತ್ತಿ ಹೇಳುತ್ತಿದ್ದುದು ‘ನಾವು ಆರಿಸಿಕೊಂಡಿರುವ ಲಕ್ಷ ಹೇಗಿದೆಯೆಂದರೆ, ನಾವು ಏನೋ ಸಂಕಲ್ಪ ಮಾಡಿದೆವು, ಮುಗಿಸಿದೆವು ಅನ್ನುವ ಸಂತೃಪ್ತ ಸ್ಥಿತಿ ಯಾವಾಗಲೂ ಬರದಿರಲಿ’ ಎಂದು. ಮತ್ತು ಅದರ ಸತ್ಯತೆ ದಿನದಿಂದ ದಿನಕ್ಕೆ ಅರಿವಾಗುತ್ತಿದೆ.
ನಾವು ಅನಾಥಮಕ್ಕಳಿಗಾಗಿ ನಡೆಸುವ ‘ನಂದಗೋಕುಲ’ ಆಸುಪಾಸಿನವರ ಪ್ರೀತಿಗೆ ಪಾತ್ರ ವಾಗಿದ್ದು ಮಾತ್ರವಲ್ಲದೆ, ಅಲ್ಲಿರುವ ಮಕ್ಕಳು ಶಾಲೆಗಳ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿರುವುದು, ನಮ್ಮ ತಲಸ್ಸೇಮಿಯಾ ಆರೈಕೆ ಕೇಂದ್ರದ ಮಕ್ಕಳು ಉತ್ಸಾಹದ ಚಿಲುಮೆಗಳಾಗಿ ಲವಲವಿಕೆಯಿಂದ ತಮ್ಮ ದೈನಂದಿನ ಓದಿನಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ.
ಬಿಟ್ಟುಹೋದ ವಾರಸಿಕೆ
ಜಯದೇವ ಅವರ ಅನುಪಮವಾದ ನೇತೃತ್ವದಲ್ಲಿ ಲಕ್ಷದ ಸ್ಪಷ್ಟತೆ ಮತ್ತು ಸಮಾಜದಲ್ಲಿ ಭರವಸೆ - ಈ ಅಮೂರ್ತ ಬಂಡವಾಳದಿಂದ ಎಷ್ಟು ದೊಡ್ಡ ಸೇವಾಸಾಮ್ರಾಜ್ಯ ಸೃಷ್ಟಿಯಾ ಗಿದೆ ಎಂಬುದನ್ನು ನಾವೆ ಕಣ್ಣಿನಿಂದ ನೋಡಿರುವುದರಿಂದ ನಂಬಬೇಕಾಗಿದೆ. ಸಂಘಪ್ರೇರಿತವಾದ ಹತ್ತಾರು ಸಂಘಟನೆಗಳಲ್ಲಿ, ಸಂಸ್ಥೆಗಳಲ್ಲಿ ಜಯದೇವ ನಿವೇಶಗೊಳಿಸಿದ ವ್ಯವಸ್ಥಾ ನಿಬದ್ಧತೆ ತುಂಬಾ ದೊಡ್ಡ ಕೊಡುಗೆ. ಅಸ್ಖಲಿತವಾದ ಧ್ಯೇಯ ಒಂದು ಬದಿ; ಅದರ ಇನ್ನೊಂದು ಬದಿ ವ್ಯವಸ್ಥಾನಿಬದ್ಧತೆ.
ವ್ಯವಸ್ಥಾನಿಬದ್ಧತೆಗೆ ಇನ್ನೊಂದು ಹೆಸರು ಮಾನ್ಯ ಮೈ.ಚ.ಜಯದೇವ ಅವರು. ಅವರ ಈ ದೀರ್ಘಕಾಲದ ಸೇವೆಯ ನೆನಪು ನಮ್ಮ ಎರಡು ಪೀಳಿಗೆಗಳ ಹಿತೈಷಿಗಳ ಮತ್ತು ಇಡೀ ಸಮಾಜದ ಮನಃಪಟಲದಲ್ಲಿ ಚಿರಕಾಲ ಉಳಿಯುತ್ತದೆ.