Vishweshwar Bhat Column: ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !
ನಮ್ಮ ಮನೆಯಲ್ಲಿ ಹುಟ್ಟಿದರೆ ಯುದ್ಧಕ್ಕೆ ಕಳಿಸಬೇಕಾಗುತ್ತದೆ. ಅದೇ ರೀತಿ, ಸಂಕೇಶ್ವರರ ಉದಾ ಹರಣೆ ಯನ್ನು ಪಠ್ಯ-ಪುಸ್ತಕಗಳಲ್ಲಿ ಓದಲು, ಭಾಷಣಗಳಲ್ಲಿ ಕೇಳಲು ಚೆಂದ. ಆದರೆ ಅದನ್ನು ಜಾರಿಗೊಳಿಸು ವುದು ಅಸಾಧ್ಯ. ಹಾಗೆಯೇ ಯಾರಾದರೂ, ‘ನೀವು ಬಹಳ ಚೆಂದವಾಗಿ ಬರೆಯುತ್ತೀರಿ, ಪತ್ರಿಕೆಯನ್ನು ಬಹಳ ಸುಂದರವಾಗಿ ತರುತ್ತೀರಿ’ ಎಂದು ಹೇಳಿದರೆ, ಕೇಳಿ ಸುಮ್ಮನಾಗಬೇಕು.


ನೂರೆಂಟು ವಿಶ್ವ
vbhat@me.com
ಪತ್ರಿಕೋದ್ಯಮದಲ್ಲಿ ಕೆಲವು Myth ಗಳಿವೆ. ಆ ಪೈಕಿ ಮಳೆಗಾಲದಲ್ಲಿ ಪತ್ರಿಕೆಯನ್ನು ಆರಂಭಿಸ ಬಾರದು ಎಂಬುದೂ ಒಂದು. ಇದರ ಹಿಂದೆ ಪ್ರಾಕ್ಟಿಕಲ್ ಕಾರಣವೂ ಇದೆ. ಅದೇನೆಂದರೆ, ಮಳೆಗಾಲ ದಲ್ಲಿ ಪತ್ರಿಕೆಗಳ ವಿತರಣೆ ಕಷ್ಟ ಎಂಬುದು. ಉಳಿದ ದಿನಗಳಲ್ಲಿ ಪತ್ರಿಕೆಯನ್ನು ಮನೆಯ ಅಂಗಳ ದಲ್ಲಿ ಬಿಸಾಡಿ ಹೋಗುವಂತೆ ಮಳೆಗಾಲದಲ್ಲಿ ಹಾಗೆ ಮಾಡುವಂತಿಲ್ಲ.
ಪತ್ರಿಕೆ ನೆನೆದು ಒದ್ದೆಯಾಗಿ, ಬಿಡಿಸಲು ಆಗದಂತೆ ಮುದ್ದೆಯಾಗಿ ಬಿಡುತ್ತದೆ. ಹೊಸ ಪತ್ರಿಕೆ ಆರಂಭಿಸಲು ಮಳೆಗಾಲ ಸೂಕ್ತ ಸಮಯವಲ್ಲ ಎಂಬುದನ್ನು ನಾನು ಶಾಮರಾಯರಿಂದ ಹಿಡಿದು ವೈಯೆನ್ಕೆ ಅವರ ಬಾಯಲ್ಲಿ ಕೇಳಿದ್ದಿದೆ. ರವಿ ಬೆಳಗೆರೆ ಕೂಡ ಹಾಗೆ ಹೇಳುತ್ತಿದ್ದ. ಉಳಿದ ದಿನಗಳಲ್ಲಿ ಪತ್ರಿಕೆಗಳನ್ನು ಕಳಿಸಲು ವಿಶೇಷ ತಯಾರಿ ಮಾಡಬೇಕಾಗಿಲ್ಲ. ಆದರೆ ಮಳೆಗಾಲದಲ್ಲಿ ಪತ್ರಿಕೆಗಳು ಒzಯಾಗದಂತೆ ಪ್ಲಾಸ್ಟಿಕ್ ಹೊದಿಕೆ ಅತ್ಯಗತ್ಯ.
ಸಾಮಾನ್ಯವಾಗಿ ದೂರದ ಊರುಗಳಿಗೆ ಪತ್ರಿಕೆಗಳನ್ನು ಸಾಗಿಸುವಾಗ, ಮಧ್ಯದಲ್ಲಿ ಸಿಗುವ ಸಣ್ಣ ಸಣ್ಣ ಊರುಗಳು ಬಂದಾಗ, ಪತ್ರಿಕೆಯ ಬಂಡಲ್ ಗಳನ್ನು ಎಸೆದು ಹೋಗುವುದು ರೂಢಿ. ಆದರೆ ಮಳೆಗಾಲದಲ್ಲಿ ಹೀಗೆ ಎಸೆಯುವಂತಿಲ್ಲ. ಆಗಲೂ ಪತ್ರಿಕೆಗಳ ಬಂಡಲ್ ಗಳಿಗೆ ಪ್ಲಾಸ್ಟಿಕ್ ಹೊದಿಕೆ ಯನ್ನು ತೊಡಿಸಲೇಬೇಕು.
ಹೊಸ ಪತ್ರಿಕೆಯನ್ನು ಆರಂಭಿಸುವುದಕ್ಕೂ, ಈ ರೀತಿ ಪತ್ರಿಕೆಯನ್ನು ವಿತರಿಸುವುದಕ್ಕೂ ಯಾವ ಸಂಬಂಧವೂ ಇಲ್ಲ. ಹೊಸ ಪತ್ರಿಕೆಯಾಗಲಿ, ಹಳೆಯ ಪತ್ರಿಕೆಯಾಗಲಿ, ಮಳೆಗಾಲದಲ್ಲಿ ಪತ್ರಿಕೆ ಯನ್ನು ಸಾಗಿಸುವಾಗ ವಿಶೇಷ ಆರೈಕೆ, ಹೊದಿಕೆ ಬೇಕೇ ಬೇಕು. ಪತ್ರಿಕೆ ತೊಯ್ದು ಮುದ್ದೆ ಯಾಗಬಹುದು ಎಂಬ ಸಾಧ್ಯತೆ ಬಿಟ್ಟರೆ, ಮಳೆಗಾಲಕ್ಕೂ, ಹೊಸ ಪತ್ರಿಕೆಗೂ ಯಾವ ಸಂಬಂಧವೂ ಇಲ್ಲ.
ಇದನ್ನೂ ಓದಿ: Vishweshwar Bhat Column: ಒಂದೇ ವರ್ಷದಲ್ಲಿ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದೇ ? ಅದು ಹೇಗೆ ?
ಆದರೂ ಹೊಸ ಪತ್ರಿಕೆಯನ್ನು ಆರಂಭಿಸಲು ಮಳೆಗಾಲ ಸೂಕ್ತವಲ್ಲ ಎಂಬ ಮಾತು ಬಹಳ ವರ್ಷಗಳಿಂದ ಚಾಲ್ತಿಯಲ್ಲಿ ಇರುವುದಂತೂ ನಿಜ. ಹಾಗೆ ನೋಡಿದರೆ, ಹೊಸ ಪತ್ರಿಕೆಯನ್ನು ಆರಂಭಿಸಲು ಮಳೆಗಾಲವೇ ಅತ್ಯಂತ ಸೂಕ್ತ ಸಮಯ. ಬೆಳಗಿನ ಸಮಯದಲ್ಲಿ ಹೊರಗೆ ಮಳೆ ಸುರಿಯುತ್ತಿದ್ದರೆ, ಬಿಸಿ ಬಿಸಿ ಕಾಫಿ ಕುಡಿಯುತ್ತಾ, ಪತ್ರಿಕೆ ಓದುವುದು ಒಂದು ಹಿತವಾದ ಅನುಭವವೇ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಓಡಾಟ, ತಿರುಗಾಟ ಕಮ್ಮಿ. ಹೊರಗೆ ಮಳೆ ಸುರಿಯುತ್ತಿದ್ದರೆ, ಎಲ್ಲರೂ ಮನೆಯಲ್ಲಿಯೇ ಇರುವುದು ಜಾಸ್ತಿ. ಹೀಗಾಗಿ ಪತ್ರಿಕೆ ಓದಲು ಮೊದಲಿಗಿಂತ ಹೆಚ್ಚು ಸಮಯ ಸಿಗುತ್ತದೆ. ಅದರಲ್ಲೂ ಒಂದೇ ಪತ್ರಿಕೆಯನ್ನು ತರಿಸುವವರು, ಪತ್ರಿಕೆಯ ಹೆಸರಿನಿಂದ ಆರಂಭ ಮಾಡಿ, ಕೊನೆ ಪುಟದಲ್ಲಿ ಸಣ್ಣಕ್ಷರಗಳಲ್ಲಿ ಮುದ್ರಿತವಾಗುವ ಸಂಪಾದಕರ ಹೆಸರಿನ ತನಕ ಒಂದೂ ಅಕ್ಷರ ಬಿಡದಂತೆ ಓದಬಹುದು.
ಮಳೆಗಾಲದಲ್ಲಿ ಮಾರುಕಟ್ಟೆ ಗತಿ ನಿಧಾನವಾಗಿರುವುದರಿಂದ ಜಾಹೀರಾತುಗಳ ಒಳಹರಿವು ಕಮ್ಮಿ. ಆದರೆ ಹಿಂದಿನ ಕಾಲದ ಸಂಪಾದಕರು ಪತ್ರಿಕೆಯ ಹೂರಣದ ಬಗ್ಗೆ ಯೋಚಿಸುತ್ತಿದ್ದರೇ ಹೊರತು, ಜಾಹೀರಾತುಗಳ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲ. ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾದ ರೇನು, ಬಿಟ್ಟರೇನು ಎಂಬುದು ಅವರ ಧೋರಣೆಯಾಗಿತ್ತು.
ಕೆಲವು ಸಂಪಾದಕರಂತೂ ಜಾಹೀರಾತು ಬಂದರೆ ಸಿಡಿಮಿಡಿಗೊಳ್ಳುತ್ತಿದ್ದರು. ಅದರಲ್ಲೂ ಮಹತ್ವದ ಸುದ್ದಿ ಇರುವ ದಿನ ಮುಖಪುಟದಲ್ಲಿ ಜಾಹೀರಾತು ಬಂದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಒಳಪುಟ ಗಳಿಗೆ ತಳ್ಳಿಬಿಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಸಂಪಾದಕರು ಜಾಹೀರಾತನ್ನು ರದ್ದುಪಡಿಸು ತ್ತಿದ್ದರು.
ಆದರೆ ಈಗಿನ ಸಂಪಾದಕನಿಗೆ ಆ ಸ್ವಾತಂತ್ರ್ಯ ಇಲ್ಲ. ಆತ ಸುದ್ದಿಗೆ ಮಹತ್ವ ಕೊಡುವಷ್ಟೇ ಜಾಹೀರಾತಿಗೂ ಮಹತ್ವ ಕೊಡಬೇಕೆಂದು ಪತ್ರಿಕೆಯ ಮಾಲೀಕ ಬಯಸುತ್ತಾನೆ. ಒಂದು ವೇಳೆ ಸುದ್ದಿಯನ್ನು ಬಿಟ್ಟರೆ ಯಾವ ಮಾಲೀಕನೂ ಕೇಳುವುದಿಲ್ಲ. ಆದರೆ ಒಂದಂಗುಲ ಜಾಹೀರಾತು ಬಿಟ್ಟರೆ ಸಂಪಾದಕನನ್ನು ಪ್ರಶ್ನಿಸದೇ ಬಿಡುವುದಿಲ್ಲ.
ಒಬ್ಬ ಸಂಪಾದಕ ತನ್ನ ಸ್ಥಾನದಲ್ಲಿ ಮುಂದುವರಿಯಲು ಆತ ಜಾಹೀರಾತು ತರಲು ಎಷ್ಟು ಸಹಕರಿಸಿದ್ದಾನೆ ಎಂಬ ಅಂಶವೂ ಮುಖ್ಯ ಕಾರಣವಾಗಿರುತ್ತದೆ. ಹೀಗಾಗಿ ಕೆಲವು ಸಂಪಾದಕರು ಮಾಲೀಕರನ್ನು ಓಲೈಸಲು, ಸಂಪಾದಕೀಯ ಕೆಲಸ ಮಾಡುವುದಕ್ಕಿಂತ, ಜಾಹೀರಾತು ಸಂಗ್ರಹಿಸು ವುದರಲ್ಲಿಯೇ ಮಗ್ನರಾಗುವುದು ಹೆಚ್ಚು. ಕೋವಿಡ್ ಬಳಿಕ ಮಾಲೀಕನ ಬವಣೆ ಎಂಥದ್ದು ಎಂಬು ದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳುವಂತಾಯ್ತು.
ಈಗಿನ ಪತ್ರಿಕಾ ಮಾಲೀಕರು, ಪತ್ರಿಕೆಯನ್ನು ಆರಂಭಿಸಲು ಮಳೆಗಾಲ ಸೂಕ್ತವಲ್ಲ ಎಂದು ಹೇಳಿದ್ದರೆ ನಂಬಬಹುದಿತ್ತು. ಜಾಹೀರಾತನ್ನು ಲೆಕ್ಕಿಸದ ಆ ಕಾಲದಲ್ಲಿ ಹಾಗೆ ಹೇಳಿದ್ದು ಯಾಕೋ. ನಾನು ಪ್ರವಾಸಿ ಪ್ರಪಂಚ ಪತ್ರಿಕೆ’ಯನ್ನು ಮಳೆಗಾಲದಲ್ಲಿ ಆರಂಭಿಸಿದಾಗ, ನನ್ನ ಮನಸ್ಸಿನಲ್ಲಿ ಆ ಮಾತುಗಳು ಸುಮ್ಮನೆ ಹಾದು ಹೋದವು. ಸಾಮಾನ್ಯವಾಗಿ ಯಾರೂ ಪತ್ರಿಕೆಯನ್ನು ಆರಂಭಿಸಿ ಎಂಬ ಉಪದೇಶ ಕೊಡುವುದಿಲ್ಲ.
ಅದರಲ್ಲೂ ಒಬ್ಬ ಪತ್ರಕರ್ತನಿಗೆ ಯಾರೂ ಅಂಥ ಮಾತುಗಳನ್ನು ಹೇಳಲಾರರು. ’ನೀನು ಹಣ ಹೂಡುತ್ತೀಯ?’ ಎಂದು ಕೇಳಬಹುದು ಎಂಬ ಭಯವೂ ಇದ್ದಿರಬಹುದು. ಯಾರನ್ನಾದರೂ ನಮ್ಮ ಸಲಹೆ ಅಥವಾ ಉಪದೇಶಗಳಿಂದ ಹಾಳು ಮಾಡಬೇಕು ಎಂಬ ಮನಸ್ಸಿದ್ದರೆ ಅಂಥವರಿಗೆ ಪತ್ರಿಕೆ ಯನ್ನು ಆರಂಭಿಸು ಎಂದು ಹೇಳಬೇಕಂತೆ.
ಕಾರಣ ಪತ್ರಿಕೆಯನ್ನು ಆರಂಭಿಸಿ, ಉದ್ಧಾರವಾದವರು ಕಮ್ಮಿ. ನಷ್ಟ ಅನುಭವಿಸುವುದು ನಿಶ್ಚಿತ ವಾಗಿದ್ದರಿಂದ ಅಂಥ ಉಪದೇಶವನ್ನು ಧಾರಾಳವಾಗಿ ಕೊಡುತ್ತಾರೆ. ನೂರರಲ್ಲಿ ಒಬ್ಬನೋ, ಇಬ್ಬರೋ ಉದ್ಧಾರವಾಗಿರಬಹುದು. ಅದರಲ್ಲೂ ಒಬ್ಬನನ್ನು ಸಂಪೂರ್ಣ ಹಳ್ಳಕ್ಕೆ ಕೆಡವಲೇಬೇಕು ಎಂದು ನಿರ್ಧರಿಸಿದರೆ, ಅಂಥವನಿಗೆ ‘ಪತ್ರಿಕೆಯನ್ನು ಆರಂಭಿಸು ಮತ್ತು ಜತೆಯಲ್ಲಿ ಟ್ರಕ್ ಬಿಜಿನೆಸ್ ನ್ನು ಮಾಡು’ ಎಂದು ಹೇಳಬೇಕಂತೆ.
ಈ ಪೈಕಿ ಒಂದನ್ನೇ ಮಾಡಿ ಬಚಾವ್ ಆದವರು, ಉದ್ಧಾರ ಆದವರು ಇಲ್ಲ. ಹೀಗಿರುವಾಗ ಎರಡನ್ನೂ ಮಾಡಿ ಉದ್ಧಾರವಾಗುವುದುಂಟೇ? ಸಾಧ್ಯವೇ ಇಲ್ಲ. ಆತ ಪಡ್ಚಾ! ಆದರೆ ದೇಶದಲ್ಲಿಯೇ (ಜಗತ್ತಿನಲ್ಲಿಯೇ?) ಇವೆರಡನ್ನೂ ಮಾಡಿ ಜಯಿಸಿದ ಏಕಮೇವ ವ್ಯಕ್ತಿ ಅಂದ್ರೆ ಅದು ವಿಜಯ ಸಂಕೇಶ್ವರ! ಅವರು ಟ್ರಕ್ ಮಾಲೀಕರಾಗಿ ಮತ್ತು ಪತ್ರಿಕಾ ಮಾಲೀಕರಾಗಿ ಗೆದ್ದರು. ಒಂದು ಕಾಲಿಗೆ ಕಲ್ಲು ಕಟ್ಟಿಕೊಂಡು ನೀರಿಗೆ ಜಿಗಿದರೆ ಬಚಾವಾಗಿ ಬರುವುದು ಕಷ್ಟ.
ಅವರು ಎರಡೂ ಕಾಲಿಗೆ ಚಪ್ಪಡಿಕಲ್ಲು ಕಟ್ಟಿಕೊಂಡು ಸಮುದ್ರಕ್ಕೆ ಜಿಗಿದವರು. ಈಜಿ ಸುರಕ್ಷಿತವಾಗಿ ದಡ ಸೇರಿದವರು. ಅವರು ಒಂದು ಅಪವಾದ, ಬಿಡಿ. ಸಂಕೇಶ್ವರರ ನಿಯಮವನ್ನು ಬೇರೆ ಯಾರಿಗೂ ಅನ್ವಯಿಸಲು ಸಾಧ್ಯವಿಲ್ಲ. ಅದನ್ನು ಥಿಯರಿಯಾಗಿ ಅಭ್ಯಸಿಸಬೇಕೇ ಹೊರತು, ಜಾರಿಗೆ ತರುವ ಉಸಾಬರಿಗೆ ಹೋಗಬಾರದು. ಶಿವಾಜಿ ಪಕ್ಕದ ಮನೆಯಲ್ಲಿ ಹುಟ್ಟಿದರೇ ಒಳ್ಳೆಯದಂತೆ.
ನಮ್ಮ ಮನೆಯಲ್ಲಿ ಹುಟ್ಟಿದರೆ ಯುದ್ಧಕ್ಕೆ ಕಳಿಸಬೇಕಾಗುತ್ತದೆ. ಅದೇ ರೀತಿ, ಸಂಕೇಶ್ವರರ ಉದಾ ಹರಣೆಯನ್ನು ಪಠ್ಯ-ಪುಸ್ತಕಗಳಲ್ಲಿ ಓದಲು, ಭಾಷಣಗಳಲ್ಲಿ ಕೇಳಲು ಚೆಂದ. ಆದರೆ ಅದನ್ನು ಜಾರಿಗೊಳಿಸುವುದು ಅಸಾಧ್ಯ. ಹಾಗೆಯೇ ಯಾರಾದರೂ, ‘ನೀವು ಬಹಳ ಚೆಂದವಾಗಿ ಬರೆಯುತ್ತೀರಿ, ಪತ್ರಿಕೆಯನ್ನು ಬಹಳ ಸುಂದರವಾಗಿ ತರುತ್ತೀರಿ’ ಎಂದು ಹೇಳಿದರೆ, ಕೇಳಿ ಸುಮ್ಮನಾಗಬೇಕು.
ಹೆಚ್ಚೆಂದರೆ, ಆ ದಿನ ಒಂದು ಪೆಗ್ ಜಾಸ್ತಿ ಹೀರಿ, ತೆಪ್ಪಗೆ ಮಲಗಿ, ಬೆಳಗಾಗುತ್ತಿದ್ದಂತೆ ಹಿಂದಿನ ದಿನ ನಿಮ್ಮ ಬಗ್ಗೆ ಹೇಳಿದ ಹೊಗಳಿಕೆಯ ಮಾತುಗಳನ್ನು ಮರೆತು ಬಿಡುವುದು ಜಾಣತನ. ಆದರೆ ಅಷ್ಟಕ್ಕೇ ಪತ್ರಿಕೆ ಆರಂಭಿಸಲು ಹೋಗಬಾರದು. ಅದು ಒಂಥರಾ, ‘ನೀನು ವಿಮಾನವನ್ನು ಚೆನ್ನಾಗಿ ಹಾರಿಸುತ್ತೀಯಾ’ ಎಂದು ಹೇಳಿದ ಮಾತ್ರಕ್ಕೆ ವಿಮಾನವನ್ನು ಖರೀದಿಸಲು ಮುಂದಾದ ಪೈಲಟ್ ನ ಕಥೆ ಥರ ಆಗಬಹುದು. ಕೆಲವರ ಮಾತುಗಳನ್ನು ಕೇಳಲಷ್ಟೇ ಹಿತವಾಗಿರುತ್ತವೆ. ಆದರೆ ಅದೇ ನಿಜ ಎಂದು ಭಾವಿಸಬಾರದು.
‘ಯಾರಾದರೂ ನೀವು ವಿಪರೀತ ಖಾರ ತಿನ್ನುತ್ತೀರಿ, ನಿಮಗೆ ಅದು ಬಹಳ ಇಷ್ಟ ಅಂತ ತೋರುತ್ತದೆ’ ಎಂದು ಹೇಳಿದರೆ, ಕೇಳಿ ಸುಮ್ಮನಾಗಬೇಕೇ ಹೊರತು, ಮತ್ತಷ್ಟು ಖಾರ ಹಾಕಿಸಿದ ಪದಾರ್ಥ ತಿಂದು, ನವರಂಧ್ರಗಳಲ್ಲಿ ನೀರು ಸುರಿಯುವಂಥ ಪರಿಸ್ಥಿತಿಯನ್ನು ತಂದುಕೊಳ್ಳಬಾರದು.
ಆದರೆ ನಾನು ಆ ಪೈಲಟ್ ಥರ, ಮತ್ತಷ್ಟು ಖಾರ ತಿಂದವನ ಥರ, ನನ್ನ ಕೈಯಾರೆ ಅಂಥ ಪರಿಸ್ಥಿತಿ ಯನ್ನು ತಂದುಕೊಂಡಿದ್ದೆ. ಪತ್ರಿಕೆ ಸಂಪಾದಕನಾಗುವುದೇ ಬೇರೆ, ಪತ್ರಿಕೆಯ ಮಾಲೀಕನಾಗುವುದೇ ಬೇರೆ. ಅವೆರಡೂ ಬೇರೆ ಬೇರೆ ಗುಣಧರ್ಮ, ಸ್ವಭಾವವನ್ನು ಅಪೇಕ್ಷಿಸುತ್ತದೆ. ಮಾಲೀಕ ಎಂದೂ ಸಂಪಾದಕನಂತೆ ಯೋಚಿಸುವುದಿಲ್ಲ. ಸಂಪಾದಕ ಎಂದೂ ಮಾಲೀಕನಂತೆ ವರ್ತಿಸುವು ದಿಲ್ಲ ಮತ್ತು ವರ್ತಿಸಬಾರದು.
ಸಂಪಾದಕನಾದವನು ಸಂಪಾದಕನಾಗಿದ್ದರೆ ಚೆಂದ. ಉತ್ತಮ ಸಂಪಾದಕ ಉತ್ತಮ ಮಾಲೀಕ ನಾಗಲಾರ. ಮೂಲತಃ ಅವೆರಡೂ ವಿಭಿನ್ನ ಮನಸ್ಥಿತಿ. ಹತ್ತು ವರ್ಷಗಳ ಹಿಂದೆ, ನಾನು ದ್ವಿಪಾತ್ರ ದಲ್ಲಿ ನಟಿಸಲು ಬಣ್ಣ ಹಚ್ಚಿಕೊಂಡಾಗ, ನಾನು ಅದೆಂಥ ಚಪ್ಪಡಿಕಲ್ಲನ್ನು ನನ್ನ ಮೇಲೆ ಎಳೆದು ಕೊಳ್ಳಲು ಹೊರಟಿದ್ದೆ ಎಂಬುದು ನನ್ನ ಯೋಚನೆಯ ಪಲುಕಿಗೆ ಸಿಕ್ಕಿರಲಿಲ್ಲ.
ಈಜು ಬರುವುದೆಂದು ಎರಡೂ ಕಾಲಿಗೆ ಕಲ್ಲು ಕಟ್ಟಿಕೊಂಡು ಸುಮ್ಮನೆ ನೀರಿಗೆ ಜಿಗಿದಿದ್ದೆ. ಕಾಲು ಬಡಿಯಲು ಸಾಧ್ಯವಾಗುತ್ತಾ ಎಂಬುದರ ಸಣ್ಣ ಪರಿವೆಯೇ ಇಲ್ಲದೆ. ಯಾವುದೇ ಪತ್ರಿಕೆ ಇರಲಿ, ಅದು ವಿಪರೀತ ಬಂಡವಾಳವನ್ನು ಅಪೇಕ್ಷಿಸುತ್ತದೆ. ಮೊದಲ ಎರಡು-ಮೂರು ವರ್ಷಗಳ ಕಾಲ ಹಣ ಸುರಿಯುತ್ತಲೇ ಇರಬೇಕು. ನಂತರ ಹಣ ವಾಪಸ್ ಬರಲಾರಂಭಿಸುತ್ತದೆ, ಹನಿ ಹನಿಯಾಗಿ. ಅಷ್ಟರಲ್ಲಿ ಹಣ ಸುರಿದವ ಅಸ್ಥಿಪಂಜರದಂತೆ ನಿತ್ರಾಣನಾಗಿರುತ್ತಾನೆ.
ಕೇವಲ ಮೂರು-ನಾಲ್ಕು ತಿಂಗಳಿಗೆ ಕೈಯೆತ್ತಿ ಬಿಡುವಷ್ಟು ನಿರಾಸೆ, ಹತಾಶೆ ಹಾಗೂ ಹಣಕಾಸಿನ ಜಂಜಾಟಗಳು ಬಂಡವಾಳ ತೊಡಗಿಸಿದವನನ್ನು ಹೈರಾಣ ಮಾಡಿಬಿಡುತ್ತವೆ. ಈ ಜಗತ್ತಿನಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಮೂರ್ನಾಲ್ಕು ಪಟ್ಟು ಕಡಿಮೆ ಬೆಲೆಗೆ ಮಾರಾಟವಾಗುವ ಯಾವುದಾದರೂ ವಸ್ತುವಿದ್ದರೆ ಪತ್ರಿಕೆಯೊಂದೇ.
ಉಳಿದ ಎಲ್ಲ ವಸ್ತುಗಳು ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ. ಉದಾಹರಣೆಗೆ, ಆಪಲ್ ಫೋನ್ ತಗೊಳ್ಳೋಣ. ಒಂದು ಐಫೋನನ್ನು ಉತ್ಪಾದಿಸಲು ಹೆಚ್ಚೆಂದರೆ 15 ರಿಂದ 20 ಸಾವಿರ ರುಪಾಯಿ ತಗುಲಬಹುದು. ಆದರೆ ಅದನ್ನು ಮಾರಾಟ ಮಾಡುವುದು ಒಂದು ಮುಕ್ಕಾಲು ಲಕ್ಷ ರುಪಾಯಿಗೆ. ಅಂದರೆ ಅದನ್ನು ಉತ್ಪಾದಿಸಲು ವೆಚ್ಚವಾಗುವ ಹಣಕ್ಕಿಂತ ಎಂಟು ಪಟ್ಟು ಜಾಸ್ತಿ ಬೆಲೆಗೆ ಅದನ್ನು ಮಾರಾಟ ಮಾಡಲಾಗುತ್ತದೆ.
ಇದು ಪತ್ರಿಕೆ ವಿಷಯದಲ್ಲಿ ಸರಿ ಉಲ್ಟಾ. ಒಂದು ಪತ್ರಿಕೆಯನ್ನು ಸಿದ್ಧಪಡಿಸಿ, ಮುದ್ರಿಸಿ, ಓದುಗರ ಮನೆ ಬಾಗಿಲಿಗೆ ತಲುಪಿಸಲು ಕನಿಷ್ಠ 15 ರುಪಾಯಿ ಖರ್ಚಾಗುತ್ತದೆ. ಆದರೆ ಪತ್ರಿಕೆಯ ಮುಖಬೆಲೆ ಕೇವಲ ಐದು ರುಪಾಯಿ. ಪತ್ರಿಕೆಯನ್ನು ವಿತರಿಸುವ ಏಜೆಂಟ್ಗೆ ಮೂರು ರುಪಾಯಿ ಕಮಿಷನ್ ಕೊಟ್ಟರೆ ಮಿಕ್ಕುವುದು ಬರೀ ಎರಡು ರುಪಾಯಿ ಮಾತ್ರ. ಅಂದರೆ ಪತ್ರಿಕಾ ಮಾಲೀಕ ತನ್ನ ಜೇಬಿ ನಿಂದ 12 ರುಪಾಯಿ ನಷ್ಟ ಮಾಡಿಕೊಂಡು, ಒಂದು ಪತ್ರಿಕೆಯನ್ನು ಓದಿಸುತ್ತಾನೆ. ಈ ನಷ್ಟವನ್ನು ಭರಿಸುವುದಕ್ಕೆ ಇರುವ ಏಕ ಮಾತ್ರ ಮಾರ್ಗವೆಂದರೆ ಜಾಹೀರಾತು.
ಅದು ಒಂಥರಾ ಬಸ್ಸಿನ ಸೀಟುಗಳಿದ್ದಂತೆ. ಬಸ್ಸಿನ ಮೂರ್ನಾಲ್ಕು ಸೀಟು ಭರ್ತಿಯಾದರೂ ಓಡಿಸಬೇಕು, ಎಲ್ಲ ಸೀಟು ಖಾಲಿಯಿದ್ದರೂ ಓಡಿಸಬೇಕು. ಈ ಮಾತು ಜಾಹೀರಾತಿಗೂ ಅನ್ವಯ. ಒಂದು ಅಂಗುಲ ಜಾಹೀರಾತು ಇಲ್ಲದಿದ್ದರೂ ಪತ್ರಿಕೆಯನ್ನು ಮುದ್ರಿಸಲೇಬೇಕು.
ಪತ್ರಿಕೆ ನಡೆಸುವುದು ಅಂಥ ಕಠಿಣ ಸವಾಲಿನ, ತಲೆ ಕೆಟ್ಟವರು ಮಾತ್ರ ಮಾಡಬಹುದಾದ, ಮಹಾ ಪಿರ್ಕಸ್ ದಂಧೆ. ಒಳ್ಳೆಯ ಪತ್ರಿಕೆಯನ್ನು ಮಾಡುವುದು ಕಷ್ಟವಲ್ಲ, ಆದರೆ ವ್ಯಾವಹಾರಿಕವಾಗಿ ಒಳ್ಳೆಯ ಪತ್ರಿಕೆ ಮಾಡುವುದು ಭಲೇ ಕಷ್ಟ. ಹೆಚ್ಚು ಹೆಚ್ಚು ಮಾರಾಟವಾದರೆ ಹೆಚ್ಚು ಹೆಚ್ಚು ಲಾಭ ಎಂಬುದು ಯಾವುದೇ ವ್ಯಾಪಾರ-ವಹಿವಾಟಿನ ಸಾರ್ವತ್ರಿಕ ನಂಬಿಕೆ. ಆದರೆ ಈ ನಿಯಮ ಪತ್ರಿಕೆ ಅನ್ವಯಿಸುವುದಿಲ್ಲ.
ಹೆಚ್ಚು ಹೆಚ್ಚು ಮಾರಾಟವಾದಷ್ಟೂ ಹೆಚ್ಚು ಹೆಚ್ಚು ನಷ್ಟವಾಗುವುದು ಪತ್ರಿಕೆ ಮಾರಾಟದಲ್ಲಿ ಮಾತ್ರ. ಅಂದರೆ ವ್ಯಾಪಾರ-ವಾಣಿಜ್ಯ ಜಗತ್ತಿನ ಯಾವ ನಿಯಮ, ನಂಬಿಕೆ, ಪಟ್ಟುಗಳು ಕೆಲಸಕ್ಕೆ ಬರದಿರುವುದು ಪತ್ರಿಕೋದ್ಯಮದಲ್ಲಿ ಮಾತ್ರ.
ಇವೆಲ್ಲ ಗೊತ್ತಿದ್ದು ಗೊತ್ತಿದ್ದೂ ನಾನು ‘ವಿಶ್ವವಾಣಿ’ಯನ್ನು ರಾಜ್ಯಮಟ್ಟದಲ್ಲಿ ಏಕಾಂಗಿಯಾಗಿ ಆರಂಭಿಸಿದ್ದು, ಅದನ್ನು ಮುನ್ನಡೆಸಲು ಹೆಣಗಿದ್ದು, ಈ ವ್ಯವಹಾರವೇ ಸಾಕು ಎಂದು ನಿರ್ಧರಿಸಿದ್ದು, ನಗುವವರ ಮುಂದೆ ಎಡವಿ ಬಿದ್ದಂತೆ ಎಲ್ಲರ ಟೀಕೆ-ಮೂದಲಿಕೆಯನ್ನು ಸಹಿಸಿಕೊಂಡಿದ್ದು, ಯಾವ ಕಾರಣಕ್ಕೂ ಸೋತೆ ಎನ್ನಬಾರದು ಎಂದು ಎದ್ದು ಕುಳಿತು ಮತ್ತೆ ಸಜ್ಜಾಗಿದ್ದು, ಪ್ರತಿ ಸಲ ಬಿದ್ದಾಗಲೂ ಕೊಡವಿ ಎದ್ದು ನಿಂತಿದ್ದು, ನಂತರ ಪತ್ರಿಕೆಯನ್ನು ತನ್ನ ಕಾಲ ಮೇಲೆ ನಿಲ್ಲುವಂತೆ ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಿದ್ದು, ಒಂದು ದೊಡ್ಡ ಯಶೋಗಾಥೆ.
ಹಿಂತಿರುಗಿ ನೋಡಿದರೆ ಇವೆಲ್ಲ ಹೇಗೆ ಸಾಧ್ಯವಾಯಿತು ಎಂದು ನನಗೆ ವಿಸ್ಮಯವಾಗುವುದುಂಟು. ಅದಾದ ಬಳಿಕ, ನಲವತ್ತೆರಡು ವರ್ಷಗಳ ‘ಲೋಕಧ್ವನಿ’ ಪತ್ರಿಕೆಗೆ ಕೈ ಹಾಕಿದ್ದು, ನಂತರ ವಿಶ್ವವಾಣಿ ಟಿವಿ ಚಾನೆಲ, ವಿಶ್ವವಾಣಿ ಪುಸ್ತಕ ಪ್ರಕಾಶನ, ವಿಶ್ವವಾಣಿ ವಿದ್ಯಾಪೀಠ, ವಿಶ್ವವಾಣಿ ಗ್ಲೋಬಲ್ ಫಾರಂ ಹಾಗೂ ಮೊನ್ನೆ ಮೊನ್ನೆ ‘ಪ್ರವಾಸಿ ಪ್ರಪಂಚ’.. ಹೀಗೆ ಬೆಕ್ಕು ಮರಿ ಹಾಕಿದಂತೆ ಸಂಸಾರ ದೊಡ್ಡದಾ ಗುತ್ತಾ ಹೋಗುತ್ತಿದೆ.
ಕರ್ನಾಟಕದಲ್ಲಿ ಬಹುತೇಕ ಎಲ್ಲ ರಾಜ್ಯಮಟ್ಟದ ಪತ್ರಿಕೆಗಳನ್ನು ಉದ್ಯಮಪತಿಗಳು, ಬಂಡವಾಳ ದಾರರು, ಕೈಗಾರಿ ಕೋದ್ಯಮಿಗಳು, ದತ್ತಿ ಸಂಸ್ಥೆಗಳು ನಡೆಸುತ್ತಿವೆ. ಆದರೆ ‘ಬರೆಯುವ ಪತ್ರಕರ್ತ’ ನೊಬ್ಬ ನಡೆಸುತ್ತಿರುವ ರಾಜ್ಯಮಟ್ಟದ ಪತ್ರಿಕೆಯೊಂದಿದ್ದರೆ ಅದು ‘ವಿಶ್ವವಾಣಿ’ ಮಾತ್ರ!
ಅದೇ ಪತ್ರಕರ್ತನ ಮತ್ತೊಂದು ಸಾಹಸವೇ ‘ಪ್ರವಾಸಿ ಪ್ರಪಂಚ’. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ಅಕ್ಷರದ ಮೇಲಾಣೆ, ನೀವು ಕೊಡುವ ಕಾಸಿಗೆ ಮೋಸ ಮಾಡುವುದಿಲ್ಲ. ಕೈ ಸವೆದು ಹೋಗುವ ತನಕ ಬರೆಯುತ್ತೇನೆ. ಪ್ರಾಮಿಸ್!