ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ನಿನಗೆ ನೀ ಬೆಳಕಾಗು

ಒಂದು ಸಲ ಬುದ್ಧ ಒಂದು ಊರಿನ ಮೂಲಕ ಹಾದು ಹೋಗುತ್ತಿದ್ದರು. ರಸ್ತೆಯ ಬದಿಯಲ್ಲಿ ಒಂದು ಹಳೆಯ ಪೆಟ್ಟಿಗೆಯ ಮೇಲೆ ಒಬ್ಬ ಭಿಕ್ಷುಕ ಕುಳಿತು ಭಿಕ್ಷೆ ಬೇಡುತ್ತಿದ್ದ. ಆತ ಬುದ್ಧರ ಮುಂದೆ ಭಿಕ್ಷೆ ಗಾಗಿ ಕೈ ಚಾಚಿದೆ. ಅವನಿಗೆ ಭಿಕ್ಷೆ ನೀಡಲು ಬುದ್ಧನ ಬಳಿ ಏನೂ ಇರಲಿಲ್ಲ. ಆದರೆ ಅವರಿಗೆ ಭಿಕ್ಷುಕ ಕುಳಿತಿದ್ದ ಪೆಟ್ಟಿಗೆಯ ಬಗ್ಗೆ ಕುತೂಹಲ ಉಂಟಾಯಿತು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದು ಸಲ ಬುದ್ಧ ಒಂದು ಊರಿನ ಮೂಲಕ ಹಾದು ಹೋಗುತ್ತಿದ್ದರು. ರಸ್ತೆಯ ಬದಿಯಲ್ಲಿ ಒಂದು ಹಳೆಯ ಪೆಟ್ಟಿಗೆಯ ಮೇಲೆ ಒಬ್ಬ ಭಿಕ್ಷುಕ ಕುಳಿತು ಭಿಕ್ಷೆ ಬೇಡುತ್ತಿದ್ದ. ಆತ ಬುದ್ಧರ ಮುಂದೆ ಭಿಕ್ಷೆ ಗಾಗಿ ಕೈ ಚಾಚಿದೆ. ಅವನಿಗೆ ಭಿಕ್ಷೆ ನೀಡಲು ಬುದ್ಧನ ಬಳಿ ಏನೂ ಇರಲಿಲ್ಲ. ಆದರೆ ಅವರಿಗೆ ಭಿಕ್ಷುಕ ಕುಳಿತಿದ್ದ ಪೆಟ್ಟಿಗೆಯ ಬಗ್ಗೆ ಕುತೂಹಲ ಉಂಟಾಯಿತು.

ಈ ಪೆಟ್ಟಿಗೆಯಲ್ಲಿ ಏನಿದೆ? ಎಂದು ಭಿಕ್ಷುಕನನ್ನು ಪ್ರಶ್ನಿಸಿದರು. ಆತ ಇದು ಬಹಳ ಹಳೇ ಕಾಲದ ಪೆಟ್ಟಿಗೆ, ಇದರಲ್ಲಿ ಏನಿರಲು ಸಾಧ್ಯ? ಕೂರಲು ಆರಾಮದಾಯಕವಾಗಿದೆ ಎಂದು ಅದನ್ನು ಇಂದಿನ ವರೆಗೂ ಇಟ್ಟುಕೊಂಡಿದ್ದೇನೆ, ಎಂದು ಉದಾಸೀನದಿಂದ ಉತ್ತರಿಸಿದ. ನೀನು ಎಷ್ಟು ಕಾಲದಿಂದ ಈ ಪೆಟ್ಟಿಗೆ ಮೇಲೆ, ಕುಳಿತು ಭಿಕ್ಷೆ ಬೇಡುತ್ತಿರುವೆ? ಎಂದು ಬುದ್ಧ ಪ್ರಶ್ನಿಸಿದರು.

ಇದನ್ನೂ ಓದಿ: Roopa Gururaj Column: ಮನಸ್ಸು ಮಾಗಿದಾಗ ಗೋಚರವಾಗುವ ಗುರಿ

ಸುಮಾರು ಮೂವತ್ತು ವರ್ಷಗಳಿಂದ ನಾನು ಇದರ ಮೇಲೇ ಕುಳಿತು ಭಿಕ್ಷೆ ಬೇಡುತ್ತಿದ್ದೇನೆ ಎಂದ ಭಿಕ್ಷುಕ. ಒಮ್ಮೆ ಅದರೊಳಗೆ ಏನಿದೆ ಎಂದು ಬೀಗ ಒಡೆದು ನೋಡು ಎಂದರು ಬುದ್ಧ. ಅಯ್ಯೋ ಬಿಡಿ, ಸ್ವಾಮಿ, ಅದರಲ್ಲೇನಿದ್ದೀತು? ಎಂದು ನಿರ್ಲಕ್ಷದಿಂದ ಉತ್ತರ ಕೊಟ್ಟ ಆತ. ಹೇಗಾದರೂ ಆಗಲಿ, ಒಮ್ಮೆ ಅದನ್ನು ಒಡೆದು ನೋಡು ಎಂದು ಬುದ್ಧ ಒತ್ತಾಯಿಸಿದರು.

ಅವರ ಒತ್ತಾಯದ ಮೇರೆಗೆ ಭಿಕ್ಷುಕ ಒಂದು ಕಲ್ಲಿನಿಂದ ಕುಟ್ಟಿ ತುಕ್ಕು ಹಿಡಿದಿದ್ದ ಪೆಟ್ಟಿಗೆಯ ಬೀಗ ವನ್ನು ಒಡೆದ. ನೋಡಿದರೆ, ಪೆಟ್ಟಿಗೆಯ ತುಂಬಾ ಚಿನ್ನದ ನಾಣ್ಯಗಳು! ಅವನಿಗೆ ಆಶ್ಚರ್ಯವಾಯಿ ತು. ಆತ ಇಂತಹ ಅಪಾರ ಸಂಪತ್ತಿನ ಮೇಲೇ ಕುಳಿತು ಮೂವತ್ತು ವರ್ಷಗಳಿಂದ, ದಟ್ಟ ದರಿದ್ರನಂತೆ ಎಲ್ಲರ ಬಳಿ ಭಿಕ್ಷೆ ಬೇಡುತ್ತಿದ್ದಾನೆ!

ನಮ್ಮ ಬದುಕು ಕೂಡಾ ಹೀಗೆ ಅಲ್ಲವೇ? ಎಲ್ಲವೂ ನಮ್ಮಲ್ಲೇ ಇದ್ದರೂ, ನಮ್ಮ ಒಳಗಿರುವ ಅಂತ ರಂಗದ ಐಶ್ವರ್ಯವನ್ನು ನಾವು ಕಣ್ಣು ತೆರೆದು ನೋಡುವುದೇ ಇಲ್ಲ, ಅದು ನಮ್ಮೊಳಗೇ ಇದ್ದರೂ ಅದನ್ನು ಗುರುತಿಸಿ ಪಡೆದುಕೊಳ್ಳಲು ಪ್ರಯತ್ನಿಸದೇ ಬಾಹ್ಯ ಸಂಪತ್ತನ್ನೇ ನಂಬಿ ಅದಕ್ಕಾಗಿ ಬಾಯಿ ಬಿಟ್ಟುಕೊಂಡು, ಎಲ್ಲರೂ ಭಿಕ್ಷುಕರಂತೆ ಕೈ ಚಾಚುತ್ತೇವೆ. ನಾವು ನಮ್ಮೊಳಗಿರುವ ಅಂತರಾಳದ ಅರಿವಿನ ಬೆಳಕನ್ನು ಹುಡುಕುವ ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮನ್ನು ನಾವು ಕಂಡುಕೊಳ್ಳು ವುದಿಲ್ಲ.

ಬುದ್ಧರ ಕೊನೆಯ ಸಂದೇಶವೂ ಇದೇ ಆಗಿತ್ತು. ಅವರು ನಿರ್ವಾಣ ಸ್ಥಿತಿಯಲ್ಲಿದ್ದಾಗ, ಅವರ ಶಿಷ್ಯ ಆನಂದ, ಈ ಜಗತ್ತಿಗೆ ನಿಮ್ಮ ಕೊನೆಯ ಸಂದೇಶವೇನು? ಎಂದು ಕೇಳಿದಾಗ ಬುದ್ಧರು ಹೇಳಿದ್ದು ನಿನಗೆ ನೀನು ಬೆಳಕಾಗು ಎಂದು. ನಮ್ಮ ಆಂತರಿಕ ಶಕ್ತಿಗಳ ಬಗ್ಗೆ, ಗುಣ ಅವಗುಣಗಳ ಬಗ್ಗೆ ನಮಗೇ ಅರಿವಿರುವುದಿಲ್ಲ. ಆದ್ದರಿಂದಲೇ ನಮ್ಮಿಂದ ಏನು ಮಾಡಲಾದೀತು ಎನ್ನುವ ಒಂದು ಉದಾಸೀನತೆ ಜೀವನದಲ್ಲಿ ಬಂದುಬಿಟ್ಟರೆ ಯಾವುದೇ ಮಹತ್ವದ ಕೆಲಸವನ್ನು ಮಾಡಲು ಸಾಧ್ಯವೇ ಆಗುವುದಿಲ್ಲ. ಅದರ ಬದಲಾಗಿ ನಮ್ಮಲ್ಲಿರುವ ಚಿಕ್ಕ ಚಿಕ್ಕ ಗುಣಗಳನ್ನು ಗುರುತಿಸುತ್ತಾ ಅವುಗಳನ್ನು ಮತ್ತಷ್ಟು ಓರೆಗೆ ಹಚ್ಚುತ್ತಾ, ಆತ್ಮವಿಶ್ವಾಸದಿಂದ ಮುಂದಡಿ ಇಟ್ಟಾಗ ಒಂದಲ್ಲ ಒಂದು ದಿನ ನಮ್ಮ ಗುರಿಯತ್ತ ಖಂಡಿತ ಸಾಗುತ್ತೇವೆ.

ಹೊರಗೆ ಯಾರು ನಮ್ಮನ್ನು ಹೊಗಳಿ ನಮ್ಮ ಸಾಮರ್ಥ್ಯವನ್ನು ತಿಳಿಯಪಡಿಸುವುದಕ್ಕಿಂತ ನಮಗೆ ನಮ್ಮ ಸಾಮರ್ಥ್ಯದ ಅರಿವಾದಾಗ ಭಯವೆನ್ನುವ ಶಬ್ದವೇ ನಮ್ಮ ಜೀವನದಲ್ಲಿ ಇರುವುದಿಲ್ಲ. ಯಾವುದಕ್ಕೂ ಹಿಂಜರಿಯದೆ ಮುನ್ನುಗುವ ಮನೋಭಾವ ನಮ್ಮಲ್ಲಿ ಬೆಳೆಯುತ್ತದೆ. ಅದನ್ನೇ ಬುದ್ಧ ಕೂಡ ಹೇಳಿದ್ದು. ಬೆಳಕು ನಮ್ಮೊಳಗೆ ಇದೆ, ಅದನ್ನು ನೋಡುವ ದೃಷ್ಟಿಯನ್ನು ನಾವು ಬೆಳೆಸಿಕೊಳ್ಳ ಬೇಕು ಅಷ್ಟೇ. ಇಂತಹ ಬೆಳಕಿನ ಅರಿವು ನಮಗಾದಾಗ, ಹೊರಗೆ ಎಷ್ಟೇ ಕತ್ತಲೆ ಇದ್ದರೂ ದಾರಿ ಕಂಡುಕೊಂಡು ಮುಂದೆ ಹೋಗುವ ಸಾಮರ್ಥ್ಯ ನಮ್ಮದಾಗುತ್ತದೆ. ಇಂತಹ ಒಂದು ಪುಟ್ಟ ಆತ್ಮ ವಿಶ್ವಾಸದ ಬೆಳಕು ನಮ್ಮೆಲ್ಲರಲ್ಲೂ ಸದಾ ಬೆಳಗುತ್ತಿರಲಿ ಗೆಲ್ಲುವ ಆಶಯ ನನ್ನದು.

ರೂಪಾ ಗುರುರಾಜ್

View all posts by this author