Shashidhara Halady Column: ಎಲ್ಲೆಲ್ಲೂ ಎಲ್ ನಿನೋ ತಂದಿಟ್ಟಿರುವ ಎಡವಟ್ಟು !
ನಮ್ಮ ಹಳ್ಳಿಯಲ್ಲಿ ವಾಸವಿರುವ ಕೃಷಿಕರೊಬ್ಬರು ಇತ್ತೀಚೆಗೆ ಮಾತುಕತೆಗೆ ಸಿಕ್ಕಿದ್ದರು; ಪ್ರತಿದಿನ ದಿನಪತ್ರಿಕೆಯನ್ನೋದುವ, ಸಾಕಷ್ಟು ತಿಳಿವಳಿಕೆ ಇರುವ ಅವರು, ಈ ವರ್ಷದ ಮಳೆಯ ಕುರಿತು ತುಸು ಕಳವಳ ವ್ಯಕ್ತಪಡಿಸಿದರು. ‘ಯಾಕೆ?’ ಎಂದೆ. ‘ಈ ವರ್ಷ ಎಲ್'ನಿನೋ ಪ್ರಭಾವ ಉಂಟು ಎಂದು ಟಿವಿಯಲ್ಲಿ ಹೇಳುತ್ತಿದ್ದಾರಲ್ಲ, ಅದರಿಂದ, ಮಳೆ ಏರುಪೇರಾಗುತ್ತದೆಂತೆ.
-
ಶಶಾಂಕಣ
ನಮ್ಮ ಹಳ್ಳಿಯಲ್ಲಿ ವಾಸವಿರುವ ಕೃಷಿಕರೊಬ್ಬರು ಇತ್ತೀಚೆಗೆ ಮಾತುಕತೆಗೆ ಸಿಕ್ಕಿದ್ದರು; ಪ್ರತಿದಿನ ದಿನಪತ್ರಿಕೆಯನ್ನೋದುವ, ಸಾಕಷ್ಟು ತಿಳಿವಳಿಕೆ ಇರುವ ಅವರು, ಈ ವರ್ಷದ ಮಳೆಯ ಕುರಿತು ತುಸು ಕಳವಳ ವ್ಯಕ್ತಪಡಿಸಿದರು. ‘ಯಾಕೆ?’ ಎಂದೆ. ‘ಈ ವರ್ಷ ಎಲ್'ನಿನೋ ಪ್ರಭಾವ ಉಂಟು ಎಂದು ಟಿವಿಯಲ್ಲಿ ಹೇಳುತ್ತಿದ್ದಾರಲ್ಲ, ಅದರಿಂದ, ಮಳೆ ಏರುಪೇರಾಗುತ್ತದೆಂತೆ.
ಸೆಖೆ ಜಾಸ್ತಿಯಾಗುತ್ತದಂತೆ; ನಮ್ಮ ಕೃಷಿಕೆಲಸ ಹೇಗಾಗುತ್ತದೋ ಎಂಬ ಚಿಂತೆ ಮಾರಾಯ್ರೆ’ ಎಂದು ಅವರು ಹೇಳಿದಾಗ, ತುಸು ಅಚ್ಚರಿಯಾಯಿತು; ಈಚಿನ ದಿನಗಳಲ್ಲಿ ಹಳ್ಳಿಯಲ್ಲಿರು ವವರು ಸಹ ಎಲ್ನಿನೋ ಕುರಿತು ತಲೆಕೆಡಿಸಿಕೊಂಡು, ಆ ಕುರಿತು ಚರ್ಚಿಸುತ್ತಿದ್ದಾರಲ್ಲ ಎಂಬ ಅಚ್ಚರಿ ಅದು.
‘ಎಲ್ನಿನೋ’ ಎಂದರೇನು? ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮಾಧ್ಯಮಗಳು ಆಗಾಗ ಎಲ್ನಿನೋ ಪರಿಣಾಮದ ಕುರಿತು ವರದಿಗಳನ್ನು ಪ್ರಸಾರ ಮಾಡುತ್ತಿವೆ. ಇದು ಹವಾ ಮಾನಕ್ಕೆ ಸಂಬಂಧಿಸಿದ ವಿದ್ಯಮಾನ; ಹಾಗೆ ನೋಡಿದರೆ, ಇಡೀ ಜಗತ್ತಿನ ಹವಾಮಾನ ವನ್ನು ಮತ್ತು ಆ ಮೂಲಕ ಕೃಷಿಯನ್ನು, ಜನರ ಬದುಕನ್ನು ಏರುಪೇರು ಮಾಡುವ ತಾಕತ್ತು ಹೊಂದಿರುವ ವಿದ್ಯಮಾನವಿದು.
ನಮ್ಮ ದೇಶದಲ್ಲಿ ಕೆಲವು ದಶಕಗಳ ಹಿಂದೆ, ಕಳೆದ ಶತಮಾನದಲ್ಲಿ ಸಹ, ‘ಬರಗಾಲ’ ಒಕ್ಕರಿ ಸಿದ್ದು, ಅದರಿಂದಾಗಿ, ದೇಶದಲ್ಲಿ ಆಹಾರದ ಕೊರತೆಯುಂಟಾಗಿ, ತೀವ್ರ ಸಂಕಷ್ಟ ಎದುರಾಗಿ ದ್ದನ್ನು ಗಮನಿಸಿದ್ದೇವೆ; ಅಂತಹ ಕೆಲವು ಬರಗಾಲಗಳು ಎಲ್ನಿನೋ ಅಥವಾ ಅಂತಹದ್ದೇ ಇತರ ವಾತಾವರಣದ ಏರುಪೇರು ಎಂದೇ ಹೇಳಬಹುದು.
ಈಚಿನ ದಶಕಗಳಲ್ಲಿ, ಅದರಲ್ಲೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ, ಬರಗಾಲಗಳು ಆಗಾಗ ಬಂದಿದ್ದರೂ, ಸರಕಾರ ಮತ್ತು ಪ್ರಭುತ್ವವು ಜನರ ನೆರವಿಗೆ ಒದಗಿ, ಬರಗಾಲದ ತೀವ್ರತೆಯು ಜನಸಾಮಾನ್ಯರನ್ನು ಹೆಚ್ಚು ಕಾಡದಂತೆ ನೋಡಿ ಕೊಂಡಿದ್ದ ರಿಂದಾಗಿ, ಅಷ್ಟರ ಮಟ್ಟಿಗೆ ಕಷ್ಟಗಳು ಕಡಿಮೆಯಾದವು; ಆದರೂ, ಈ ವರ್ಷದ ಎಲ್ ನಿನೋ ಸಾಕಷ್ಟು ತೀವ್ರವಾಗಿರುತ್ತದೆ ಎಂದು ಹವಾಮಾನ ತಜ್ಞರು ಅದಾಗಲೇ ಎಚ್ಚರಿಸಿ ದ್ದಾರೆ.
ಎಲ್ನಿನೋ ಎಂಬುದು ಸ್ಪಾನಿಷ್ ಪದ; ಪೆರು ಮತ್ತು ಈಕ್ವೆಡಾರ್ ದೇಶಗಳಲ್ಲಿ, ಹವಾ ಮಾನದ ಏರುಪೇರನ್ನು ವರ್ಣಿಸಲು ಅಲ್ಲಿನ ಜನ ಸಾಮಾನ್ಯರು ಬಹು ಹಿಂದಿನಿಂದಲೂ ಬಳಸುತ್ತಿದ್ದ ಪದ ಅದು; ಅಲ್ಲಿ ಚಳಿಗಾಲದಲ್ಲಿ, ಕ್ರಿಸ್ಮಸ್ ಸಮಯದಲ್ಲಿ ಒಂದೊಂದು ವರ್ಷ ಕಾಣಿಸುತ್ತಿದ್ದ ಹೆಚ್ಚಿನ ತಾಪಮಾನವನ್ನು, ಹವಾಮಾನದ ಏರು ಪೇರನ್ನು ಗುರುತಿಸಲು ಆ ಪದವನ್ನು ಬಳಸುತ್ತಿದ್ದರು.
ಇದನ್ನೂ ಓದಿ: Shashidhara Halady Column: ಕಾಡಿನಲ್ಲಿ ಬೆಳೆಯುವ ದ್ರಾಕ್ಷಿ ಹಣ್ಣುಗಳು !
ಅದೇ ಪದವು ಈಗ ಜಗತ್ತಿನ ತಾಪಮಾನದ ಏರುಪೇರನ್ನು ಪ್ರತಿನಿಧಿಸುವ ವಿದ್ಯಮಾನ ಎನಿಸಿದೆ. ವಿಶೇಷವೆಂದರೆ, ಅಮೆರಿಕ ಖಂಡಗಳನ್ನು ಪೂರ್ವದಲ್ಲಿ ಆವರಿಸಿರುವ ಶಾಂತ ಮಹಾಸಾಗರದ ಉಷ್ಟವಲಯದ ಭಾಗಗಳಲ್ಲಿ, ಸಮುದ್ರದ ಮೇಲ್ಮೈ ತಾಪಮಾನವು ಅತಿ ಹೆಚ್ಚು ಕಂಡುಬರುವುದನ್ನು ಎಲ್ನಿನೋ ಎಂದು ಕರೆದಿದ್ದಾರೆ.
ಅಮೆರಿಕ ಖಂಡಗಳ ಬಳಿ ಕಾಣಬರುವ ಈ ಹವಾಮಾನ ವೈಪರಿತ್ಯವು, ಇಡೀ ಜಗತ್ತನ್ನು, ಅದರಲ್ಲೂ ಮುಖ್ಯವಾಗಿ ಏಷ್ಯಾದ ಹಲವು ದೇಶಗಳನ್ನು ಮತ್ತು ನಮ್ಮ ದೇಶವನ್ನು ಕಾಡುವುದು ವಿಶೇಷ. ಎಲ್ಲಿಯ ಪೆರು, ಎಲ್ಲಿಯ ಈಕ್ವೆಡಾರ್, ಎಲ್ಲಿಯ ಕರ್ನಾಟಕ!
ಆದರೇನು ಮಾಡುವುದು, ಎಲ್-ನೀನೋ ವ್ಯತ್ಯಯವು ಈ ವರ್ಷ ನಮ್ಮ ರಾಜ್ಯದ ಕೃಷಿಕ ರನ್ನು, ಅದರಲ್ಲೂ ಮುಖ್ಯವಾಗಿ, ನೀರಾವರಿ ವ್ಯವಸ್ಥೆ ಹೆಚ್ಚು ಲಭ್ಯವಿಲ್ಲದ ಉತ್ತರ ಮತ್ತು ಮಧ್ಯ ಕರ್ನಾಟಕದ ಕೃಷಿಕರನ್ನು ಕಾಡುತ್ತದೆ ಎಂದೇ ತಜ್ಞರು ಅದಾಗಲೇ ಹೇಳಿದ್ದಾರೆ. ಜತೆಗೆ, ಮಳೆ ಕಡಿಮೆಯಾಗುವುದರಿಂದಾಗಿ, ನಮ್ಮ ರಾಜ್ಯದ ಇತರ ಭಾಗಗಳಲ್ಲಿರುವ ಅಣೆಕಟ್ಟುಗಳಿಗೆ ನೀರು ಸಾಕಷ್ಟು ಬರದೇ ಇರುವುದರಿಂದ, ವಿದ್ಯುತ್ ಸಮಸ್ಯೆ ಮತ್ತು ನೀರಾವರಿಯನ್ನು ಅವಲಂಬಿಸಿದ ಬೆಳೆಗಳಿಗೆ ನೀರು ದೊರಕದೇ ಉಂಟಾಗುವ ಸಮಸ್ಯೆ ಮೊದಲಾದವುಗಳನ್ನು, 2026-27ರಲ್ಲಿ ಕಾಣಬೇಕಾದೀತು ಎಂದೇ ಎಚ್ಚರಿಸಿದ್ದಾರೆ.
ಮತ್ತೂ ಗಮನಿಸಬೇಕಾದ ವಿಚಾರವೆಂದರೆ, 2026ರ ಎಲ್ನಿನೋ ಹೆಚ್ಚು ತೀವ್ರವಾಗಿರುವು ದಂತೆ. ಎಲ್ನಿನೋ ಎಂದರೆ ಬರಗಾಲದ ಛಾಯೆ ಎಂದು ಹೇಳಿದರೆ ತಪ್ಪಿಲ್ಲ; ಏಕೆಂದರೆ, ಎಲ್ನಿನೋ ಪರಿಣಾಮ ಇರುವ ವರ್ಷಗಳಲ್ಲಿ, ಸಾಮಾನ್ಯವಾಗಿ ಏಷ್ಯಾ ಮತ್ತು ಆಸ್ಟ್ರೇಲಿ ಯಾದ ವಿವಿಧ ಭಾಗಗಳಲ್ಲಿ ಹೆಚ್ಚಿನ ಬಿಸಿಲು ಇರುತ್ತದೆ; ಮಳೆಯು ಕಡಿಯಾಗುತ್ತದೆ. ಈ ವರ್ಷದ ಎಲ್ನಿ ನೋ ತೀವ್ರವಾಗಿರುವುದರಿಂದ, 2026 ಮುಗಿಯುವುದರೊಳಗೆ, ಸಾಕಷ್ಟು ಕ್ಷೋಭೆ ಎದುರಾಗಲಿದ್ದು, ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿರುವವರಿಗೆ ಬೇಗನೆ ನೇರ ಪರಿಣಾಮ ವನ್ನುಂಟುಮಾಡಬಲ್ಲದು.
ದೂರದ ಅಮೆರಿಕದ ಒಂದು ತೀರದಲ್ಲಿರುವ ಶಾಂತ ಸಾಗರದಲ್ಲಿನ ತಾಪಮಾನ ಹೆಚ್ಚಳವು, ನಮ್ಮಲ್ಲಿ ತೀವ್ರ ಬರಗಾಲ ಸೃಷ್ಟಿಸಿದರೂ, ಅಮೆರಿಕದ ಖಂಡಗಳಲ್ಲಿ ಮಾತ್ರ ಮಳೆ ಜಾಸ್ತಿ ಯಾಗಬಹುದಂತೆ!
ಆದರೆ, ಅದರಿಂದ, ನಾವು ಹೊಟ್ಟೆ ಉರಿ ಪಟ್ಟುಕೊಳ್ಳಬೇಕಿಲ್ಲ; ಏಕೆಂದರೆ, ಅಮೆರಿಕದ ಹಲವು ದೇಶಗಳಲ್ಲಿ ಅಧಿಕ ಮಳೆ ಎಂದರೆ, ಇನ್ನಷ್ಟು ಪ್ರಾಕೃತಿಕ ಸಮಸ್ಯೆಗಳೇ ಹೊರತು, ಹೆಚ್ಚಿನ ಲಾಭವಿರಲಾರದು. ಎಲ್ನಿನೋ ನೇರವಾಗಿ ಪರಿಣಾಮ ಬೀರುವುದು ಕೃಷಿ ಕ್ಷೇತ್ರದ ಮೇಲೆ; ಜತೆಗೆ, ಹಲವು ಕಡೆ ಕುಡಿಯುವ ನೀರನ ಲಭ್ಯತೆಯ ಮೇಲೂ ಪರಿಣಾಮ ಬೀರಬಲ್ಲದು.
ಮಳೆಯ ಕೊರತೆಯಿಂದಾಗಿ, ಆಹಾರ ಉತ್ಪಾದನೆ ಕಡಿಮೆಯಾಗಬಲ್ಲದು; ನೀರಾವರಿ ವ್ಯವಸ್ಥೆಯು ಏರುಪೇರಾದೀತು; ಉದಾಹರಣೆಗೆ ನೀರಾವರಿ ಬೆಳೆ ಬೆಳೆಯುವ ರೈತರು, ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದವರು, ಮುಂದಿನ ವರ್ಷ ಒಂದೇ ಬೆಳೆ ಬೆಳೆಯಬೇಕಾದ ಅನಿವಾರ್ಯ ಸ್ಥಿತಿ ಎದುರಾದೀತು.
ಇವೆಲ್ಲವುಗಳ ಒಟ್ಟು ಪರಿಣಾಮವಾಗಿ, ಜಾಗತಿಕ ಆಹಾರ ಸರಬರಾಜು ಮತ್ತು ಬೆಲೆಗಳಲ್ಲಿ ಅಸ್ಥಿರತೆ ಉಂಟಾಗಬಹುದು. ಈಗಾಗಲೇ, 2026ರ ಆರಂಭದ ತಿಂಗಳುಗಳಲ್ಲಿ, ಇರಾನ್ ಸುತ್ತಲೂ ಯುದ್ಧ ನಡೆಯುತ್ತಿರುವುರಿಂದಾಗಿ, ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇಡೀ ಜಗತ್ತಿನ ತೈಲ ಕ್ಷೇತ್ರವೇ ಸಣ್ಣ ಭೂಕಂಪವನ್ನು ಎದುರಿಸಿದಂತಾಗಿದೆ; ನಮ್ಮ ದೇಶದಲ್ಲಿ ಈ ತನಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚು ಏರಿಕೆ ಕಂಡಿಲ್ಲವಾದರೂ, ಯುದ್ಧದ ಸ್ಥಿತಿ ಮುಂದುವರಿದರೆ, ಹೊರ್ಮುಜ್ ಜಲಸಂಧಿಯಲ್ಲಿನ ದಿಗ್ಬಂಧನ ಮತ್ತು ಕಲ್ಲೋಗಳು ಮುಂದುವರಿದರೆ, ಎಲ್ಲ ತೈಲೋತ್ಪನ್ನಗಳ ಬೆಲೆ ನಮ್ಮಲ್ಲೂ ಏರುವುದು ಖಚಿತ.
2026ರ ಆರಂಭದಲ್ಲಿ ಹೀಗಿರುವಾಗ, ಈ ವರ್ಷದ ಮುಂದಿನ ತಿಂಗಳುಗಳಲ್ಲಿ, ಎಲ್ನಿನೋ ಪರಿಣಾಮದಿಂದ, ಮಳೆ ಕಡಿಯಾದರೆ, ಆಹಾರ ಪದಾರ್ಥಗಳ ಉತ್ಪನ್ನವೂ ಕುಂಠಿತ ಗೊಂಡು, ಒಟ್ಟಾರೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಬಹುದು. ನಮ್ಮ ದೇಶಕ್ಕೆ ಮಾನ್ಸೂನ್ ಮಾರುತಗಳು ತರುವ ಮಳೆ ಅತಿ ಅಮೂಲ್ಯ; ಬಹುಪಾಲು ರಾಜ್ಯಗಳು ಮಾನ್ಸೂನ್ ಮಳೆಯನ್ನೇ ಅವಲಂಬಿಸಿ, ಕೃಷಿ ಚಟುವಟಿಕೆ ನಡೆಸುತ್ತಿವೆ; ಮಾನ್ಸೂನ್ ಮಾರುತ ತಂದು ಮಳೆಯು, ಅಣೆಕಟ್ಟುಗಳಲ್ಲಿ ಸಂಗ್ರಹ ಗೊಂಡು ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಒದಗಿ ಬರುತ್ತದೆ.
ಆದ್ದರಿಂದ, ಮಾನ್ಸೂನ್ ಏರು ಪೇರಾದರೆ, ಕಷ್ಟ ಖಚಿತ; ಈ ವರ್ಷ, ಎಲ್-ನೀನೋ ವಿದ್ಯಮಾನವು, ಈ ಮಳೆಯ ಮೇಲೆ ತೀವ್ರ ಮತ್ತು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ ತಜ್ಞರು. 2026ರಲ್ಲಿ ಭಾರತದಲ್ಲಿ ಮಳೆ ಸರಾಸರಿಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅದಾಗಲೇ ಹೇಳಿದ್ದಾರೆ.
ವಾಡಿಕೆಗಿಂತ ಶೇ.8ರಿಂದ 10ರಷ್ಟು ಕಡಿಮೆ ಮಳೆಯಾಗುವ ಸಾಧ್ಯತೆ ಇದೆ; ಇದು ಗಮನಾರ್ಹ ಇಳಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ ಎಲ್ ನಿನೋ ಎದುರಾದ ವರ್ಷಗಳೆಂದರೆ, ಎಲ್ಲರಿಗೂ ತುಸು ನಡುಕ, ಹೆಚ್ಚು ಸಂಕಷ್ಟ. ಎಲ್ ನಿನೋ ದಿಂದಾಗಿ, ಮಳೆ ಕಡಿಮೆಯಾಗುತ್ತದೆ, ಬರುವ ಮಳೆಯು ಅಕಾಲದಲ್ಲಿ ಸುರಿದೀತು ಅಥವಾ ಎಲ್ಲೆಲ್ಲೋ ಸುರಿದೀತು (ಅಂದರೆ, ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಹೆಚ್ಚು ಮಳೆ ಯಾದೀತು), ಬರಗಾಲದ ಅವಧಿ ದೀರ್ಘವೂ ಆಗಿರಬಹುದು, ಆ ಮೂಲಕ ಒಟ್ಟಾರೆ ಕೃಷಿ ಕ್ಷೇತ್ರಕ್ಕೆ ತೀವ್ರ ಹಾನಿ, ಸಂಕಷ್ಟ.
ಎಲ್ನಿನೋದಿಂದ ಎದುರಾಗುವ ಇನ್ನೊಂದು ಸಂಕಷ್ಟ ಎಂದರೆ, ಹೀಟ್ ವೇವ್! ಈ ವರ್ಷ ಬಿಸಿಲಿನ ತಾಪ ಅಧಿಕವಿರುತ್ತದೆ ಎಂದು ನಮ್ಮ ದೇಶದ ಹವಾಮಾನ ತಜ್ಞರು ಅದಾಗಲೇ ಎಚ್ಚರಿಸಿದ್ದಾರೆ; ಅವರ ಭವಿಷ್ಯ ನಿಜವಾಗಿದೆಯೋ ಎಂಬಂತೆ, ಬೆಂಗಳೂರಿನಂತಹ ತಂಪು ನಗರಗಳಲ್ಲಿ ಈ ವರ್ಷ ಏಪ್ರಿಲ್ನಲ್ಲಿ 37 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿ, ಉದ್ಯಾನಗಳ ನಗರವು, ‘ಬಿಸಿಲಿನ ನಗರ’ ಎಂದು ಉದ್ಗಾರಗಳನ್ನು ಹೊರಡಿಸಿತು!
ಬೆಂಗಳೂರಿನ ಕಥೆ ಇಷ್ಟಾದರೆ, ನಮ್ಮದೇ ರಾಜ್ಯದ ವಿಜಯಪುರ, ಶಿವಮೊಗ್ಗ, ಮಂಗಳೂರು ಮೊದಲಾದ ಕಡೆ 40 ಡಿಗ್ರಿ ತಾಪಮಾನ ದಾಖಲಾಗಿ, ಜನಜೀವನವೇ ನಲುಗಿತು; ಹೆಚ್ಚು ಹೆಚ್ಚು ಜನ ಫೋನ್, ಫ್ರಿಜ್, ಏರ್ ಕಂಡಿಷನರ್ಗಳನ್ನು ಖರೀದಿಸಿ, ಹಗಲು ರಾತ್ರಿ ಅವು ಗಳನ್ನು ಓಡಿಸಿದ್ದರಿಂದ, ವಿದ್ಯುತ್ ಬಳಕೆಯೂ ದಾಖಲೆ ಮಟ್ಟಕ್ಕೆ ಏರಿತು! ಅವುಗಳಿಂದ ಹೊರಬರುವ ಬಿಸಿಯು, ಸುತ್ತಲಿನ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ! ಈ ವರ್ಷದ ಎಲ್ನಿನೋ ಪ್ರಭಾವವೋ ಎಂಬಂತೆ, ಇದೇ ಮೊದಲ ಬಾರಿ, ಬೆಂಗಳೂರಿನಂತಹ ತಂಪು ನಗರಗಳಲ್ಲಿ ಹೀಟ್ವೇವ್ ಬರಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ನಮ್ಮ ದೇಶದಲ್ಲಿ ಒಡಿಶಾ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಕೆಲವು ಭಾಗಗಳು ಆಗಾಗ ಹೀಟ್ ವೇವ್ ಸಂಕಷ್ಟಕ್ಕೆ ಗುರಿಯಾಗುವುದು ವರದಿಯಾಗುತ್ತಲೇ ಇರುತ್ತದೆ; ಈ ವರ್ಷ, ಎಲ್ ನಿನೋ ಪ್ರಭಾವದಿಂದಾಗಿ, ಅಲ್ಲೆಲ್ಲಾ, ಜತೆಗೆ, ದೇಶದ ಹಲವು ಭಾಗಗಳಲ್ಲಿ ಹೀಟ್ ವೇವ್ ತಾಪ ತೀವ್ರವಾಗಲಿದ್ದು, ಹಲವು ಜನರು ಪ್ರಾಣಹಾನಿಗೊಳಗಾಲೂಬಹುದು.
‘ಸರಿಯಪ್ಪ, ಎಲ್ನಿನೋದಿಂದಾಗಿ, ಬರಗಾಲ ಬರುತ್ತದೆ, ಅದಕ್ಕೆ ನಾವೇನು ಮಾಡಬೇಕು, ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು?’ ಎಂದು ನೀವು ಪ್ರಶ್ನೆ ಮಾಡಬಹುದು. ಇದು ಬಹಳ ಮಹತ್ವದ ಪ್ರಶ್ನೆ. 2026ರಲ್ಲಿ ಎಲ್ನಿನೋ ಪರಿಣಾಮ ಉಂಟಾಗಿದ್ದು, ಅದು ನಮ್ಮ ದೇಶದ ಮತ್ತು ರಾಜ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ ಎಂದು ಈಗಾಗಲೇ ಹವಾಮಾನ ತಜ್ಞರು ಹೇಳಿದ್ದಾರೆ, ಮಾತ್ರವಲ್ಲ ಎಚ್ಚರಿಸಿಯೂ ಇದ್ದಾರೆ. ಆದ್ದರಿಂದ ಎಲ್ನಿನೋ ಎದುರಿಸಲು ಸೂಕ್ತ ತಯಾರಿ ಮಾಡಿಕೊಳ್ಳಲು ನಮಗೀಗ ಸಾಕಷ್ಟು ಕಾಲಾವ ಕಾಶ ಇದೆ ಎಂದೇ ಹೇಳಬಹುದು.
ಸರಳವಾದ ಭಾಷೆಯಲ್ಲಿ ಹೇಳುವುದಾದರೆ, ಎಲ್ನಿನೋ ವಿದ್ಯಮಾನ ಉಂಟಾದ ವರ್ಷ ಗಳಲ್ಲಿ ಮಳೆ ಕಡಿಮೆಯಾಗುತ್ತದೆ, ಬಿಸಿಲು ಅಧಿಕವಾದೀತು ಮತ್ತು ಮಳೆ ಬಂದಾಗ ಸಹಜವಾಗಿ ಬರದೇ, ಎಲ್ಲೆಲ್ಲೋ, ಹೇಗ್ಹೇಗೋ ಬರುತ್ತದೆ. ಇಂತಹ ವಿಚಾರಗಳನ್ನು ಟಾರ್ಗೆಟ್ ಮಾಡಿಕೊಂಡು, ತಕ್ಕ ಸಿದ್ಧತೆ ಮಾಡಿಕೊಳ್ಳವುದು ಸೂಕ್ತ.
ಎಲ್ನಿನೋ ಎದುರಿಸಲು ವೈಯಕ್ತಿಕ ಮಟ್ಟದ ಸಿದ್ಧತೆಯ ಜತೆಗೆ, ಪ್ರಭುತ್ವದ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಿ, ಜನರಿಗೆ ಮಾರ್ಗದರ್ಶನ ನೀಡಬೇಕು ಮತ್ತು ಲಭ್ಯವಿರುವ ನೀರನ್ನು ವೈಜ್ಞಾನಿಕವಾಗಿ ವಿತರಿಸಿ, ಕೃಷಿಕರಿಗೆ ಮತ್ತು ಜನಸಾಮಾನ್ಯ ರಿಗೆ ಹೆಚ್ಚು ತೊಂದರೆಯಾಗದಂತೆ ನೋಡಕೊಳ್ಳಬೇಕು ಎನ್ನುತ್ತಾರೆ ತಜ್ಞರು.ಇಂದಿನ ವ್ಯವಸ್ಥೆಯಲ್ಲಿ ಎಲ್ ನಿನೋ ದಂತಹ ವಾತಾವರಣ ವ್ಯತ್ಯಯವನ್ನು ಎದುರಿಸಲು ಪ್ರಭುತ್ವದ ವಿವಿಧ ಇಲಾಖೆಗಳ ಕೊಡುಗೆ ಅತಿ ಮಹತ್ವದ್ದು!
ಸಣ್ಣ ಮತ್ತು ಮಧ್ಯಮ ಪ್ರಮಾಣದ ಜಮೀನು ಇರುವ ಕೃಷಿಕರು, ವೈಯಕ್ತಿಕ ನೆಲೆಯಲ್ಲಿ ಕೈಗೊಳ್ಳಬಹುದಾದ ಒಂದು ಕ್ರಮವೆಂದರೆ, ಹೆಚ್ಚು ನೀರು ಅಗತ್ಯವಿಲ್ಲದ ಬೆಳೆಗಳಿಗೆ ಪ್ರಾಮುಖ್ಯತೆ ನೀಡಬೇಕು; ಮತ್ತು ಈಗ ಲಭ್ಯವಿರುವ ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸಿಕೊಳ್ಳಬೇಕು. ಆದರೆ ಈ ಕುರಿತು ಮಾಹಿತಿ, ಮಾರ್ಗದರ್ಶನ ಮತ್ತು ನೀತಿನಿಯಮ ಗಳನ್ನು ರೂಪಿಸುವುದು ಪ್ರಭುತ್ವದ ಕೈಕೆಳಗಿರುವ ಇಲಾಖೆಗಳು!
ಉದಾಹರಣೆಗೆ, ಮುಂದಿನ ಆರೆಂಟು ತಿಂಗಳುಗಳಲ್ಲಿ ‘ಇಂತಹ ಬೆಳೆಯು ನಮ್ಮ ರಾಜ್ಯಕ್ಕೆ ಸೂಕ್ತ, ಇದರಿಂದಾಗಿ, ಕಡಿಮೆ ನೀರನ್ನು ಬಳಸಿಯೂ, ತಕ್ಕಮಟ್ಟಿಗಿನ ಆದಾಯ ಪಡೆಯ ಬಹುದು’ ಎಂದು ಅಧ್ಯಯನ ಮಾಡಿ, ಶಿಫಾರಸು ಮಾಡುವುದು, ಇಂತಹ ಇಲಾಖೆ ಗಳಿಂದ ಮಾತ್ರ ಸಾಧ್ಯ; ಅದು ಅವುಗಳ ಕರ್ತವ್ಯವೂ ಹೌದು. ಈ ಇಲಾಖೆಗಳು ಜನಸ್ನೇಹಿ ಯಾಗಿ ಕೆಲಸ ಮಾಡಲು, ಸೂಕ್ತ ಕಾಲದಲ್ಲಿ ಸಮನ್ವಯದಿಂದ ನಿರ್ಧಾರ ತೆಗೆದುಕೊಳ್ಳಲು ರಾಜಕಾರಣಿಗಳು ಮತ್ತು ಅಧಿಕಾರದ ಸೂತ್ರ ಹಿಡಿದವರು ಸಹಕರಿಸಬೇಕು, ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಅದು ಅವರ ಕರ್ತವ್ಯವೂ ಹೌದು.
ಏಕೆಂದರೆ, ಎಲ್ಲ ನಾಗರಿಕರ ಹಿತ ಕಾಯುವುದು ಪ್ರಭುತ್ವದ ಕೆಲಸ ತಾನೆ? ಇಲ್ಲಿ ಇನ್ನೂ ಒಂದು ಸೂಕ್ಷ್ಮ ಸಮಸ್ಯೆಯನ್ನು ಗುರುತಿಸಲೇಬೇಕು: ಪ್ರಭುತ್ವವು ಜನರ ಹಿತ ಕಾಯ ಬೇಕಾದರೆ, ಅದರ ಸೂತ್ರ ಹಿಡಿದವರು ಸಕಾಲದಲ್ಲಿ ತಕ್ಕ ನಿರ್ಣಯ ತೆಗೆದುಕೊಳ್ಳಬೇಕು; ಅದಕ್ಕೆ ರಾಜಕೀಯ ಸ್ಥಿರತೆಯೂ ಮುಖ್ಯ!
ರಾಜಕೀಯ ಸ್ಥಿರತೆ ಇಲ್ಲದೇ ಹೋದಾಗ, ವಿವಿಧ ಇಲಾಖೆಗಳ ನಿರ್ಣಯಗಳ ನಡುವೆ ಸಮನ್ವಯ ಸಾಧಿಸುವಲ್ಲಿ ತೊಡಕುಂಟಾಗಿ, ಜನರ ಮೇಲೆ ನೇರ ಪರಿಣಾಮ ಬೀರಬಲ್ಲದು.
2026ರಲ್ಲಿ ಅಧಿಕ ತಾಪಮಾನ, ಹೀಟ್ವೇವ್ ಮತ್ತು ಕಡಿಮೆ ಮಳೆ ಎಂದು ಈಗಾಗಲೇ ಹವಾಮಾನ ತಜ್ಞರು ಎಚ್ಚರಿಸಿದ್ದಾರೆ; ನಿಜ ಹೇಳಬೇಕೆಂದರೆ, ‘ಎಲ್ ನಿನೋ ಎಂಬ ಗುಮ್ಮ ಎಲ್ಲರನ್ನೂ ಕಾಡುತ್ತದೆ’ ಎಂದೇ ಸ್ಪಷ್ಟವಾಗಿ ಹೇಳಿದ್ದಾರೆ.
ಅದೃಷ್ಟವೆಂದರೆ, ಎಲ್ನಿನೋ ವಿದ್ಯಮಾನವು ನಮ್ಮನ್ನೆಲ್ಲಾ ಈ ವರ್ಷದ ಇನ್ನುಳಿದ ತಿಂಗಳುಗಳಲ್ಲಿ ಕಾಡುತ್ತದೆ ಎಂದು ಮುಂಚಿತವಾಗಿಯೇ, ಈಗಾಗಲೇ ತಿಳಿದಿದೆ; ವಾತಾ ವರಣದ ವ್ಯತ್ಯಯದ ಈ ಪ್ರಮುಖ ಮತ್ತು ಖಚಿತ ಮಾಹಿತಿಯನ್ನು ಸೂಕ್ತವಾಗಿ ಬಳಸಿಕೊಂಡು, ಜನಸಾಮಾನ್ಯರ ಮತ್ತು ನಾಗರಿಕರ ಹಿತ ಕಾಯುವ ಕೆಲಸವನ್ನು ಜನನಾಯಕರು, ಪ್ರಾಜ್ಞರು ಮತ್ತು ಪ್ರಭುತ್ವದ ವಿವಿಧ ಇಲಾಖೆಗಳು ಮಾಡಬೇಕಾಗಿದೆ. ಎಲ್ಲರೂ ಎದ್ದೇಳಿ, 2026ರ ಎಲ್-ನೀನೋ ತರಲಿರುವ ಸಂಕಷ್ಟ ಎದುರಿಸಲು ಸಿದ್ಧರಾಗಿ, ಪ್ಲೀಸ್!