ಶಶಾಂಕಣ
ಬೃಹದಾಕಾರ, ನೇರವಾಗಿ ಅರವತ್ತರಿಂದ ಎಂಬತ್ತು ಅಡಿ ಎತ್ತರ ಬೆಳೆಯುವ ಕಪ್ಪನೆಯ ಕಾಂಡ, ತುದಿಯಲ್ಲಿ ಭಾರಿ ಗಾತ್ರದ ಹಸಿರು ಎಲೆ; ದೂರದಿಂದ ಕಂಡಾಗ, ಹಳ್ಳಿಯ ಕಾವಲು ಕಾಯುವ ದೈತ್ಯ ಮರಗಳಿವೆ ಎಂಬ ಭಾವನೆಯೂ ಮೂಡಬಹುದು! ನಮ್ಮೂರಲ್ಲಿ ಇದನ್ನು ಹಣೆ ಮರ ಎನ್ನುವರು.
ಕನ್ನಡದಲ್ಲಿ ತಾಳೆ ಮರ ಎಂಬ ಹೆಸರು ಸ್ಥಿರವಾಗಿದೆ. ಇಂಗ್ಲಿಷರು ಮಾತ್ರ ಇದಕ್ಕೆ ಬಹು ಸುಂದರ ಹೆಸರು ಇಟ್ಟಿದ್ದಾರೆ ‘ಐಸ್ ಆಪಲ್!’ ಥಂಡಾ ಸೇಬು! ನಿಜಕ್ಕೂ ಇದು ತಂಪಾದ ಮರ. ನೆರಳಿನ ತಂಪಿಗಿಂತಲೂ, ಇದರ ಹಣ್ಣನ್ನು ಸೇವಿಸಿದರೆ, ದೇಹಕ್ಕೆ ತಂಪು; ನೋಡಲು ಐಸ್ ರೀತಿ ಕಾಣಿಸುವು ದರಿಂದಾಗಿ, ಇದನ್ನು ಆಂಗ್ಲರು ಐಸ್ ಆಪಲ್ ಎಂದು ಕರೆದಿರಬೇಕು!
ಹಣೆ ಮರಗಳು ನಮ್ಮೂರಿನ ಅವಿಭಾಜ್ಯ ಅಂಗಗಳಾಗಿದ್ದವು. ಈಚಿನ ದಿನಗಳಲ್ಲಿ ಇವುಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿರುವುದು ನಿಜ. ಅದಕ್ಕೆ ಕಾರಣವೆಂದರೆ, ಇಂದಿನವರಲ್ಲಿ ಇದರ ಮೇಲಿರುವ ನಿರ್ಲಕ್ಷ್ಯ. ಬಾಲ್ಯದಲ್ಲಿ ಈ ಹಣೆ ಮರವು ಹಲವು ಕಾರಣಗಳಿಗಾಗಿ ನಮಗೆಲ್ಲಾ ಹೆಚ್ಚು ಪರಿಚಿತ. ‘ಹಣೆ ಕಣ್ಣು’ ಎಂಬ ರುಚಿಕರ ಹಣ್ಣುಗಳನ್ನು ನೀಡುವ ಹಣೆ ಮರಗಳು ಬಹುದೂರ ದಿಂದಲೇ ಕಾಣಿಸುವಂಥ ನಿಲುವಿನವುಗಳು.
ನಮ್ಮೂರಿನಲ್ಲಿ ಮಾತ್ರವಲ್ಲ, ನಮ್ಮ ರಾಜ್ಯದಾದ್ಯಂತ ಹಲವು ಪ್ರದೇಶಗಳಲ್ಲಿ ಹಣೆ ಮರಗಳ ಸಾಲು ಗಳೇ ಬೆಳೆದಿರುತ್ತಿದ್ದವು. ಭಾರಿ ಎತ್ತರ ಬೆಳೆಯುವ ಆ ಮರದ ದೊಡ್ಡ ಗಾತ್ರದ ಗರಿಗಳು ಬೇಸಗೆಯಲ್ಲಿ ಗಾಳಿ ಬೀಸಿದಾಗ ಮಾಡುವ ‘ಬರಬರ’ ಸದ್ದು ಮಕ್ಕಳಿಗೆ ಭಯ ಹುಟ್ಟಿಸುವಂಥದ್ದು. ತಾಳೆ ಮರ ಎಂದು ಈಗ ಹೇಳಿದರೆ, ಮೊದಲಿಗೆ ನೆನಪಾಗುವುದು ಪಾಮ್ ಆಯಿಲ್!
ಇದನ್ನೂ ಓದಿ: Shashidhara Halady Column: ಸೋಲೋ ಟ್ರಿಪ್ʼನಲ್ಲಿ ಕಂಡ ಮಳೆಕೋಂಗಿಲ !
ಅದೇ, ನಮ್ಮೆಲ್ಲರ ಆರೋಗ್ಯವನ್ನು ದಿನನಿತ್ಯ ನಿಧಾನವಾಗಿ ತಿಂದು ಹಾಕುತ್ತಿರುವ ಎಣ್ಣೆ; ಬಿಸ್ಕಿಟ್, ಬೇಕರಿ ತಿನಿಸು, ಚಾಕೊಲೇಟ್ ಮೊದಲಾದ ಎಲ್ಲಾ ತಿನಿಸುಗಳಲ್ಲಿ ಪಾಮ್ ಆಯಿಲ್ ಹೇರಳವಾಗಿದೆ ಯಂತೆ!
ಆದರೆ, ನಮ್ಮೂರಿನ ಹಣೆ ಮರ ಅಥವಾ ತಾಳೆ ಮರ ಎಂದಾಗ, ಮೊದಲಿಗೆ ನೆನಪಾಗುವುದೇ ಅದು ನೀಡುವ ತಂಪಾದ ಹಣ್ಣುಗಳು. ಇದನ್ನು ಬೇರೆ ಬೇರೆ ಹೆಸರಿನಿಂದಲೂ ಗುರುತಿಸುವುದುಂಟು. ಬೆಂಗಳೂರು ಸೀಮೆಯವರಿಗೆ ಇಂದು ‘ತಾಳೆ ಮರದ ಹಣ್ಣು’ ಅಥವಾ ‘ಹಣೆ ಕಣ್ಣು’ ಎಂದರೆ ಸುಲಭ ವಾಗಿ ಅರ್ಥವಾಗುವುದಿಲ್ಲ; ಬದಲಿಗೆ ‘ಅದೇ ಕಣ್ರಿ, ತಾಟಿ ನಿಂಗು’ ಎಂದರೆ ಕಣ್ಣಲ್ಲಿ ಹೊಳಪು ಮೂಡಿಸಿಕೊಂಡು, ‘ಹೌದು, ಅದರ ಹಣ್ಣು ಬಹಳ ರುಚಿ’ ಎಂದಾರು!
ಬೆಂಗಳೂರು, ಮೈಸೂರು ಮೊದಲಾದ ಕಡೆ ತಮಿಳುನಾಡಿನಿಂದ ತರಿಸಿದ ‘ಹಣೆ ಕಣ್ಣು’ಗಳನ್ನು ಮಾರುತ್ತಾರೆ. ಆ ಹಣ್ಣಿನ ಜತೆಯೇ, ಅಲ್ಲಿನ ಹೆಸರನ್ನೂ ಇಲ್ಲಿಗೆ ವರ್ಗಾಯಿಸಿರುವುದರಿಂದಲೇ, ಬೆಂಗಳೂರಿನಲ್ಲಿ ಇಂದು ‘ತಾಟಿ ನಿಂಗು’ ಎಂಬ ಹೆಸರಿನಿಂದ ತಾಳೆ ಹಣ್ಣು ಪ್ರಸಿದ್ಧ!
ನಮ್ಮ ಮನೆಯ ಹಿಂಭಾಗದಲ್ಲೇ ಎರಡು ಬೃಹದಾಕಾರದ ಹಣೆ ಮರಗಳಿದ್ದವು. ಅವುಗಳ ಎತ್ತರ, ದಪ್ಪನೆಯ ಕಪ್ಪನೆಯ ಆ ಕಾಂಡ, ತುದಿಯಲ್ಲಿ ಚೂಪಾಗಿ ಅರಳಿಕೊಂಡಿರುವ ದೊಡ್ಡ ದೊಡ್ಡ ಎಲೆಗಳು- ಎಲ್ಲವೂ ಮಕ್ಕಳಲ್ಲಿ ದಿಗಿಲು ಹುಟ್ಟಿಸುವಂಥವುಗಳೇ ಸರಿ.
ಜತೆಗೆ ‘ರಾತ್ರಿ ಹೊತ್ತು ಬೆಳದಿಂಗಳಿದ್ದರೆ, ಹಣೆ ಮರದ ತುದಿಯಲ್ಲಿ ಒಂದು ಭೂತ ಹಕ್ಕಿ ಬಂದು ಕುಳಿತುಕೊಂಡು, ಕೂಗುತ್ತಿರುತ್ತೆ’ ಎಂದು ನಮ್ಮ ಅಮ್ಮಮ್ಮ ಆಗಾಗ ಹೇಳುತ್ತಿದ್ದು, ಹಣೆ ಮರಗಳ ಕುರಿತು ಒಂದು ನಿಗೂಢ ಭಯಮಿಶ್ರಿತ ಪ್ರಭಾವಳಿಯನ್ನೇ ಸೃಷ್ಟಿಸಿತ್ತು. ನಮ್ಮ ಮನೆ ಸುತ್ತಲೂ ಹರಡಿದ್ದ ಆರೆಂಟು ತೆಂಗಿನ ಮರ, ಎರಡು ತೇಗದ ಮರ, ದಟ್ಟವಾಗಿ ಎಲೆ ಬಿಟ್ಟುಕೊಂಡಿದ್ದ ಹಲಸಿನ ಮರ, ಅಲ್ಲಲ್ಲಿ ಬೆಳೆದಿದ್ದ ಕೆಲವು ಅಡಕೆ ಮರಗಳು- ಇವೆಲ್ಲಕ್ಕಿಂತಲೂ 20-30 ಅಡಿ ಎತ್ತರ ವಿದ್ದ, ಭವ್ಯ ನಿಲುವಿನ ಆ ಎರಡು ಹಣೆಮರಗಳು, ಮಕ್ಕಳಲ್ಲಿ ಭಯ-ಭಕ್ತಿ-ಗೌರವ ಮೂಡಿಸಿ ದ್ದರೆ, ಅದರಲ್ಲಿ ಅಚ್ಚರಿಯೇನಿದೆ!
ಆ ಎರಡು ಬೃಹತ್ ಹಣೆ ಮರಗಳು ಪ್ರತಿ ವರ್ಷ ಶಿಸ್ತಾಗಿ ನೂರಾರು ತಾಳೆ ಹಣ್ಣುಗಳನ್ನು ಬಿಡು ತ್ತಿದ್ದರೂ, ಆ ಮರಗಳ ಎತ್ತರಕ್ಕೆ ಹೆದರಿ, ಯಾರೂ ಅವುಗಳನ್ನೇರುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ಕಡಿಮೆ ಎತ್ತರದ ಹಲವು ತಾಳೆ ಮರಗಳು ನಮ್ಮ ಫಾಸಲೆಯಲ್ಲಿದ್ದು, ಅವುಗಳಿಂದ ಹಣ್ಣನ್ನು ಕೆಲವರು ಕೀಳುತ್ತಿದ್ದರು.
ನಾನು ಮೊದಲ ಬಾರಿ ‘ಹಣೆ ಕಣ್ಣ’ನ್ನು ತಿಂದದ್ದು ನಾಲ್ಕನೆಯ ತರಗತಿಯಲ್ಲಿದ್ದಾಗ. ದಟ್ಟ ಕಪ್ಪು ಮಿಶ್ರಿತ, ತೆಂಗಿನಕಾಯಿ ಗಾತ್ರದ ಆ ಕಾಯಿಗಳ ಕವಚವನ್ನು ಕೆತ್ತಿದರೆ, ಒಳಗೆ ಮೂರು ‘ಕಣ್ಣು’ ಗಳು. ನಸು ಬೆಳ್ಳಿಯ ಬಣ್ಣ, ಅರೆ ಪಾರದರ್ಶಕ, ಮಿದುವಾದ ದುಂಡಗಿನ ಹಣ್ಣುಗಳು, ಒಳಗೆ ಸಿಹಿಸಿಹಿ ನೀರು ಜಿನುಗುವ ಪರಿ ವಿಶಿಷ್ಟ.
ಮೇಲ್ನೋಟಕ್ಕೆ ಐಸ್ ಅನ್ನು ಹೋಲುವ ಸ್ವರೂಪ. ಬಿಸಿಲಿನ ದಿನಗಳಲ್ಲಿ ಈ ಹಣ್ಣುಗಳನ್ನು ತಿಂದರೆ, ಬಾಯಾರಿಕೆ ಮಾಯ; ಜತೆಗೆ ಸಾಕಷ್ಟು ಲವಣಾಂಶಗಳು ದಕ್ಕಿ, ದೇಹಕ್ಕೆ ಶಕ್ತಿ. ಎಳೆಯ ಹಣೆ ಕಣ್ಣು ಗಳನ್ನು ತಿನ್ನುವುದೆಂದರೆ, ಮಕ್ಕಳಿಗೆ ತುಂಬಾ ಇಷ್ಟ. ರಥೋತ್ಸವ ಮತ್ತು ಜಾತ್ರೆಗಳಲ್ಲಿ ಅವುಗಳನ್ನು ಮಾರುತ್ತಿದ್ದರು. ಹಣ್ಣುಗಳು ತುಸು ಬಲಿತರೆ, ಗಟ್ಟಿಯಾಗುತ್ತಾ ಹೋಗುತ್ತದೆ, ರುಚಿಯೂ ಕಡಿಮೆ. ಹಣೆ ಮರಗಳು ಹಣ್ಣು ನೀಡುವುದರ ಜತೆಗೇ, ಹಿಂದಿನ ದಶಕಗಳಲ್ಲಿ, ಬೇರೊಂದಕ್ಕೂ ಉಪಯೋಗ ವಾಗುತ್ತಿದ್ದವು. ಅದೇ, ಪಾನೀಯ ತಯಾರಿಕೆಗಾಗಿ!
ನಮ್ಮ ಹಳ್ಳಿ ಮನೆಯ ಹಿಂದೆ ಇದ್ದ ಆ ಎರಡು ಭಾರಿ ಎತ್ತರದ ಹಣೆ ಮರದ ಕಾಂಡದುದ್ದಕ್ಕೂ ಅರ್ಧ ಅಡಿ ಅಗಲದ ಮೆಟ್ಟಿಲುಗಳನ್ನು ಕೆತ್ತಿದ ಗುರುತುಗಳಿದ್ದವು. ಎಂಬತ್ತು ಅಡಿ ಎತ್ತರವಿದ್ದ ಆ ಕಾಂಡದ ಮೇಲೆ, ಸುಮಾರು ನಲವತ್ತು ಅಡಿ ಎತ್ತರದ ತನಕ, ಯಾರೋ ಕತ್ತಿಯಿಂದ ಮೆಟ್ಟಿಲು ಗಳನ್ನು ಕೆತ್ತಿದ್ದು ದೂರದಿಂದಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಲವು ವರ್ಷ ಹಳೆಯದಾದ ಆ ಗುರುತುಗಳು ತುಸು ಮಾಸಿದ್ದರೂ, ಮರ ಹತ್ತುವಲ್ಲಿ ನುರಿತವರು ಅದನ್ನು ಆಧರಿಸಿ ಮರವನ್ನು ಏರಬಹುದಿತ್ತು. ಆದರೆ ಆ ಗುರುತುಗಳು ನಲವತ್ತು ಅಡಿಗಳಿಗಿಂತ ಮೇಲ್ಭಾಗದಲ್ಲಿ ಇರಲಿಲ್ಲ.
ಆ ನಂತರ, ಯಾವುದೇ ಗಚ್ಚಿನ ಗುರುತಿಲ್ಲದೇ ಆ ಕಪ್ಪನೆಯ, ದಪ್ಪನೆಯ ಕಾಂಡಗಳು ಮೇಲಕ್ಕೇರಿ ಹೋಗಿದ್ದವು. ಮರ ಹತ್ತಲು ಅನುಕೂಲವಾಗುವಂತೆ ಆ ಗುರುತುಗಳನ್ನು ಯಾರು, ಏಕೆ ಮತ್ತು ಯಾವಾಗ ಮಾಡಿದ್ದರು? ಇಂಥ ಪ್ರಶ್ನೆಗಳಿಗೆ ನಮ್ಮ ಅಮ್ಮಮ್ಮನ ಬಳಿ ಉತ್ತರ ಸಿದ್ಧವಿತ್ತು.
‘ಅಷ್ಟೂ ಗೊತ್ತಾಗುವುದಿಲ್ಲವೆ? ಹಣೆ ಮರದಿಂದ ಕಳ್ಳು (ಶೇಂದಿ) ತೆಗೆಯುವವರು ಮಾಡಿದ ಗುರುತು ಅದು. ಪ್ರತಿದಿನ ಬೆಳಗ್ಗೆ ಮರ ಏರಿ, ಪ್ರತಿ ಮರದಿಂದಲೂ ಕಳ್ಳನ್ನು ಸಂಗ್ರಹಿಸುತ್ತಿದ್ದರು. ಅದಕ್ಕೆ ನಮ್ಮ ಹಳ್ಳಿಯಲ್ಲಿ ಸಾಕಷ್ಟು ಬೇಡಿಕೆಯೂ ಇತ್ತು’. ‘ಆ ರೀತಿ ಕಳ್ಳು ಸಂಗ್ರಹಿಸುತ್ತಿದ್ದುದು ಯಾರು?’‘ ಕಳ್ಳು ಸಂಗ್ರಹಿಸುವ ಕೆಲವು ಕುಟುಂಬಗಳು ನಮ್ಮೂರಿನಲ್ಲಿದ್ದವು. ಈಗ ಇಲ್ಲ ಅಷ್ಟೆ. ಆ ಕಳ್ಳನ್ನು ಮಾರಾಟ ಮಾಡುತ್ತಿದ್ದರು, ಹಳ್ಳಿಯ ಕೆಲವರು ಕುಡಿಯುತ್ತಿದ್ದರು’.
‘ಈಗ ಯಾಕೆ ಅದನ್ನು ಸಂಗ್ರಹಿಸುವುದಿಲ್ಲ? ನಲವತ್ತು ಅಡಿಗಳಿಗಿಂತ ಮೇಲ್ಭಾಗದ ಮರದ ಕಾಂಡದ ಮೇಲೆ ಯಾವುದೇ ಗುರುತುಗಳಿಲ್ಲವಲ್ಲ?’‘ಹೌದು, ಆ ಮೇಲೆ ಕಳ್ಳು ತೆಗೆಯುವುದನ್ನು ನಿಲ್ಲಿಸಿದರು’‘ಯಾಕೆ?’‘ಮರ ಎತ್ತರವಾದ ನಂತರ, ಮರ ಹತ್ತಲು ಹೆದರಿಕೆ ಆಗಿರಬೇಕು’.
ಇದು ಅಮ್ಮಮ್ಮನ ಉತ್ತರ. ಆದರೆ ಆ ಕೊನೆಯ ಉತ್ತರ ಭಾಗಶಃ ನಿಜವಾಗಿರಬಹುದು; ಕಳ್ಳನ್ನು ಸಂಗ್ರಹಿಸುವ ಕೆಲಸ ನಿಂತು ಹೋಗಲು ಇತರ ಹಲವು ಸಾಮಾಜಿಕ, ರಾಜಕೀಯ ಕಾರಣಗಳೂ ಇವೆ ಅನಿಸುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ನಮ್ಮ ಹಾಲಾಡಿಗೂ ಸಾರಾಯಿ ಅಂಗಡಿ ಬಂದ ನಂತರ, ಶೇಂದಿಯ ಮೇಲಿನ ಬೇಡಿಕೆ ಕಡಿಮೆಯಾಯಿತು.
ಜತೆಗೆ, ಶೇಂದಿ ಸಂಗ್ರಹಿಸಲು ಸಹ ನಿಯಂತ್ರಣ ಹೇರಲಾಯಿತು. ಸರಕಾರವು ಈ ಗೃಹಕೈಗಾರಿಕೆಯ ಮೇಲೆ ಕಣ್ಣು ಹಾಕಿತು. ರಾಜ್ಯದ ಜನರು ಸೇವಿಸುವ ಇಂಥ ಪಾನೀಯಗಳ ಮೇಲೆ ತೆರಿಗೆ ಹಾಕಿ, ಅದರಿಂದ ದೊರಕುವ ಆದಾಯವೆಲ್ಲವೂ ತನ್ನದು ಎಂದು ಸಾರಿತು. ಹಳ್ಳಿಯ ಜನರು ಇಂಥ ಪಾನೀಯಗಳನ್ನು ತಯಾರಿಸುವುದು ಕಾನೂನುಬಾಹಿರ ಎನಿಸಿತು.
ಆದ್ದರಿಂದಲೇ, ಈ ಎರಡು ಮರಗಳಿಂದ ಶೇಂದಿ ಸಂಗ್ರಹ ನಿಂತು ಹೋಗಿರಬೇಕು. ನಮ್ಮ ಮನೆಯ ಹಿಂದಿನ ಮರಗಳನ್ನು ಏರಲು ಅನುಕೂಲ ಮಾಡಿದ್ದ ಮೆಟ್ಟಿಲುಗಳಂಥ ಗಚ್ಚುಗಳು, ಆಗಲೇ ನಿಂತು ಹೋಗಿರಲೂಬಹುದು. ಇವುಗಳ ಜತೆಗೇ, ನಮ್ಮೂರಿನಲ್ಲಿ ಕಡಿಮೆ ಎತ್ತರದ, ಕಡಿಮೆ ವಯಸ್ಸಿನ ಇನ್ನೂ ಕೆಲವು ಹಣೆ ಮರಗಳು ಇದ್ದು, ಅವುಗಳಿಂದಲೂ ಶೇಂದಿ ಸಂಗ್ರಹ ನಡೆಯುತ್ತಿರಲಿಲ್ಲ.
ನಮ್ಮ ದೇಶದಲ್ಲಿ ಪ್ರಾದೇಶಿಕವಾಗಿ ಕಳ್ಳು ಅಥವಾ ಶೇಂದಿ ಸಂಗ್ರಹ, ಸೇವನೆಯ ಕಥನವೇ ಕುತೂಹಲಕಾರಿ, ಅಧ್ಯಯನಯೋಗ್ಯ. ಸಮುದ್ರಕ್ಕೆ ತಾಗಿಕೊಂಡಿರುವ ಕೆಲವು ಹಳ್ಳಿಗಳಲ್ಲಿ ಇಂದಿಗೂ ತೆಂಗಿನ ಮರಗಳಿಂದ ಶೇಂದಿ ಸಂಗ್ರಹ ನಡೆಯುತ್ತಿದೆ. ಹಳೆಯ ಮೈಸೂರಿನ ಭಾಗದಲ್ಲಿ ತೆಂಗಿನ ಮರದಿಂದ ಸಂಗ್ರಹಿಸುವ ‘ನೀರಾ’ವನ್ನು ಆರೋಗ್ಯವರ್ಧಕ ಪಾನೀಯವಾಗಿ ಪರಿಚಯಿಸುವ ಪ್ರಯತ್ನ ನಿರಂತರ ಸಾಗಿದೆ.
ನಮ್ಮೂರಿನ ಕಳ್ಳಿನ ವಿಚಾರಕ್ಕೆ ಬಂದರೆ, ಬೆಳಗ್ಗೆ ಏಳು ಗಂಟೆಗೂ ಮುಂಚೆ ಅದನ್ನು ಕುಡಿದರೆ, ಶಕ್ತಿ ವರ್ಧಕ; ನಂತರ ಹುಳಿ ಬರುವುದರಿಂದ ಅಮಲು ಪದಾರ್ಥ ಎನ್ನುತ್ತಾರೆ. ನಮ್ಮೂರಿನಲ್ಲಿ ತೆಂಗು, ತಾಳೆ ಮತ್ತು ಬಗನೆ ಮರದಿಂದ ಕಳ್ಳು ಸಂಗ್ರಹಿಸುವ ಪರಿಪಾಠ ಇತ್ತು. ಈಚಿನ ವರ್ಷಗಳಲ್ಲಿ ಇದು ಬಹುಮಟ್ಟಿಗೆ ನಿಂತುಹೋಗಿದೆ. ಮರದ ತುದಿಯಲ್ಲಿ ಹೊರಬರುವ ಹೂವಿನ ಕೊನೆಯನ್ನು ಕತ್ತರಿಸಿ, ಅಲ್ಲೊಂದು ಮಡಕೆಯನ್ನು ಕಟ್ಟಿ, ಪ್ರತಿದಿನ ಬೆಳಗ್ಗೆ ಒಂದೊಂದು ಮರದಿಂದಲೂ ಒಂದೆರಡು ಲೋಟ ದ್ರವವನ್ನು ಸಂಗ್ರಹಿಸಿ, ಅದನ್ನು ಮಾರುವ ವೃತ್ತಿಯೇ ಕುತೂಹಲಕಾರಿ.
ನಮ್ಮ ಹಳ್ಳಿ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಎರಡು ಬೃಹತ್ ತಾಳೆ ಮರಗಳು ಬಹೂಪಯೋಗಿ. ಆ ಎತ್ತರವಾದ ಮರಗಳನ್ನು ಯಾರೂ ಏರುತ್ತಿರಲಿಲ್ಲವಾದರೂ, ಕಡಿಮೆ ಎತ್ತರದ ಇನ್ನೂ ಕೆಲವು ತಾಳೆ ಮರಗಳು ನಮ್ಮ ಹಳ್ಳಿಯಲ್ಲಿ ಅಲ್ಲಲ್ಲಿ ಅವುಗಳ ಪಾಲಿಗೆ ಬೆಳೆದಿದ್ದವು. ಇವುಗಳ ಗರಿಗಳಿಂದ ಬೀಸಣಿಗೆ ಮಾಡುವ ಕಲೆಯೂ ನಮ್ಮೂರನಲ್ಲಿತ್ತು.
ಒಪ್ಪವಾಗಿ ಕತ್ತರಿಸಿ, ದಾರದಿಂದ ಪೋಣಿಸಿ, ಎರಡೂ ಕೊನೆಯಲ್ಲಿ ಬಿದಿರಿನ ಕಡ್ಡಿಗಳನ್ನು ಸಿಕ್ಕಿಸಿ, ಮಡಚುವ ಬೀಸಣಿಗೆ ಮಾಡುವ ಪರಿ ನಿಜಕ್ಕೂ ಕಲಾತ್ಮಕ. ತಾಳೆ ಗರಿಗಳ ಇನ್ನೊಂದು ಉಪಯೋಗ ವೆಂದರೆ ಕೊಡೆ ಅಥವಾ ಛತ್ರಿ ತಯಾರಿಸಲು!
ಮೂರನೆಯ ತರಗತಿಗೆ ನಾನು ನಮ್ಮೂರಿನ ಶಾಲೆಗೆ ಸೇರಿಕೊಂಡಾಗ, ನಮ್ಮ ಅಮ್ಮಮ್ಮ ನನಗೆ ಕೊಡಿಸಿದ್ದು ‘ಓಲಿ ಕೊಡೆ’- ತಾಳೆಗರಿಗಳನ್ನು ಬೇಯಿಸಿ, ಒಣಗಿಸಿ, ಬಿದಿರಿನಿಂದ ಮಾಡಿದ ವೃತ್ತಾ ಕಾರದ ರೂಪಕ್ಕೆ ಸಿಕ್ಕಿಸಿ ಆ ಕೊಡೆಯನ್ನು ತಯಾರಿಸಲಾಗಿತ್ತು. ಬಟ್ಟೆಯ ಕೊಡೆಗಿಂತ ಇದು ಬಲಶಾಲಿ ಮತ್ತು ಎಂಥದ್ದೇ ಮಳೆ ಬಂದರೂ, ಅದರೊಳಗೆ ನೀರು ಸಿಡಿಯುತ್ತಿರಲಿಲ್ಲ ಎಂದು ಆ ಕೊಡೆಯನ್ನು ಶಿಫಾರಸು ಮಾಡುತ್ತಿದ್ದರು ನಮ್ಮ ಅಮ್ಮಮ್ಮ!
ಎರಡು ವರ್ಷ ‘ಓಲಿ ಕೊಡೆ’ಯನ್ನೇ ಹಿಡಿದು, ಕಾಡಿನ ನಡುವೆ ಸಾಗುವ ದಾರಿಯಲ್ಲಿ ನಡೆದು, ಶಾಲೆಗೆ ಹೋದ ಸಾಹಸ ನನ್ನದು. ಅಂಥ ತಾಳೆಗರಿಗಳ ಕೊಡೆಯನ್ನು ಈಗ ಮಠದ ಸ್ವಾಮಿಗಳು ಉಪಯೋಗಿಸುತ್ತಾರೆ!
ಈಚೆಗೆ ನಮ್ಮೂರಿಗೆ ಹೋಗಿ, ಆ ತಾಳೆ ಮರಗಳಿದ್ದ ಜಾಗದತ್ತ ಕಣ್ಣು ಹಾಯಿಸಿದರೆ, ಆ ಜಾಗವು ಬೋಳು ಬೋಳಾಗಿ ಕಂಡಿತು. ಆ ಬೃಹತ್ ತಾಳೆಮರಗಳು ಎಂದೋ ಬಿದ್ದುಹೋಗಿದ್ದವು. ಮಾತ್ರ ವಲ್ಲ, ನಮ್ಮೂರಲ್ಲಿ ಅಲ್ಲಲ್ಲಿ ಬೆಳೆದುಕೊಂಡಿದ್ದ ತಾಳೆಮರಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಈ ಮರಗಳು ಬೆಳೆಯುವುದು ಬಹಳ ಎಂದರೆ ಬಹಳ ನಿಧಾನ. ಈಗಿನ ದಿನಗಳಲ್ಲಿ ಕೃಷಿಕರ ಅಭಿರುಚಿ, ಸಂಪ್ರದಾಯ, ಪದ್ಧತಿಗಳು ಬದಲಾಗಿವೆ.
ಬಹುಬೇಗನೆ ಬೆಳೆಯುವ ಗಿಡ, ಮರ, ಬಳ್ಳಿ, ಬೆಳೆಗಳನ್ನು ಇಂದಿನ ಕೃಷಿಕರು ಇಷ್ಟಪಡುತ್ತಾರೆ. ಆದ್ದರಿಂದಲೇ ಇರಬೇಕು, ಹಣೆ ಮರ ಅಥವಾ ತಾಳೆ ಮರದಂಥ, ಬಹು ನಿಧಾನವಾಗಿ ಬೆಳೆಯುವ ಮರಗಳಿಗೆ ಇಂದಿನ ಕೃಷಿ ದಿನಚರಿಯಲ್ಲಿ ಪ್ರಾಮುಖ್ಯ ಕಡಿಮೆಯಾಗಿದೆ.