Surendra Pai Column: ಅಲುಗಾಡುತ್ತಿದೆ ಮಕ್ಕಳ ಬುನಾದಿಯ ಕಲ್ಲು
ಶಿಕ್ಷಣವು ಮಗುವಿನ ಬೆಳವಣಿಗೆ ಹಾಗೂ ವಿಕಾಸಕ್ಕೆ ಅನುಗುಣವಾಗಿ ರೂಪಿಸಲಾಗಿರುತ್ತದೆ. ಅದರನ್ವಯ ಮಗು ನರ್ಸರಿ ಶಿಕ್ಷಣ ಪಡೆಯಲು 3-4 ವರ್ಷ, ಎಲ್ ಕೆ ಜಿ ಸೇರಲು 4-5 ವರ್ಷ ಹಾಗೂ ಯುಕೆಜಿಗೆ ದಾಖಲಾತಿ ಪಡೆಯಲು 5-6 ವಯಸ್ಸಿನ ಮಿತಿಗೆ ಒಳಪಟ್ಟಿರಬೇಕು ಎಂಬ ನಿಯಮವಿದೆ.


ಪ್ರಸ್ತುತ
ಸುರೇಂದ್ರ ಪೈ, ಭಟ್ಕಳ
ಈ ವರ್ಷ 1ನೇ ತರಗತಿಯ ದಾಖಲಾತಿಗೆ ಸಂಬಂಧಿಸಿದ ಗೊಂದಲಗಳಿಗೆ ಈಗಾಗಲೇ ಶಿಕ್ಷಣ ಇಲಾಖೆಯು ಪ್ರಸುತ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ 5.5 ವರ್ಷ ವಯೋಮಿತಿ ಸಡಿಲಿಕೆ ನೀಡಿದೆ. ಆದರೆ ಮಕ್ಕಳು ಕಡ್ಡಾಯವಾಗಿ ಪೂರ್ವ ಪ್ರಾಥಮಿಕ (ಎಲ್ಕೆ ಜಿ, ಯುಕೆ ಜಿ ) ಶಿಕ್ಷಣವನ್ನು ಕಡ್ಡಾಯವಾಗಿ ಮಾಡಿರಲೇಬೇಕು ಎಂಬ ನಿಯಮವನ್ನು ಆದೇಶದ ರೂಪದಲ್ಲಿ ಹೊರಡಿಸಿದೆ. ಈ ಆದೇಶವು ಮೇಲ್ನೋಟಕ್ಕೆ ಪಾಲಕರಲ್ಲಿ ವಯೋಮಿತಿಯ ಗೊಂದಲ ನಿವಾರಿಸಿ ನಿರಾಳತೆಯನ್ನು ನೀಡಿದೆ ಎಂದೆನಿಸುವುದು ಸಹಜ. ಆದರೆ ವಾಸ್ತವದಲ್ಲಿ ಈ ವಯೋಮಿತಿ ಸಡಿಲಿ ಕೆಯು ಪುಟಾಣಿ ಕಂದಮ್ಮಗಳಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತಿದೆ.
ಶಿಕ್ಷಣವು ಮಗುವಿನ ಬೆಳವಣಿಗೆ ಹಾಗೂ ವಿಕಾಸಕ್ಕೆ ಅನುಗುಣವಾಗಿ ರೂಪಿಸಲಾಗಿರುತ್ತದೆ. ಅದರನ್ವಯ ಮಗು ನರ್ಸರಿ ಶಿಕ್ಷಣ ಪಡೆಯಲು 3-4 ವರ್ಷ, ಎಲ್ ಕೆ ಜಿ ಸೇರಲು 4-5 ವರ್ಷ ಹಾಗೂ ಯುಕೆಜಿ ಗೆ ದಾಖಲಾತಿ ಪಡೆಯಲು 5-6 ವಯಸ್ಸಿನ ಮಿತಿಗೆ ಒಳಪಟ್ಟಿರಬೇಕು ಎಂಬ ನಿಯಮವಿದೆ. ಆದರೆ ಪಾಲಕರು ಈ ವರ್ಷ ನೀಡಲಾಗಿರುವ ವಯೋಮಿತಿ ಸಡಿಲಿಕೆಯನ್ನೇ ಅವಕಾಶವೆಂಬಂತೆ ಬಳಸಿಕೊಂಡು ತಮ್ಮ ಮಕ್ಕಳಿಗೆ 5.5 ವರ್ಷವಾಗಿದೆ ಎಂಬ ಕಾರಣಕ್ಕೆ ಎಲ್ಕೆಜಿ, ಯುಕೆಜಿ ಕಲಿಯದಿದ್ದರೂ ಸಹ ತಮಗೆ ತಿಳಿದಿರುವ ಪೂರ್ವ ಪ್ರಾಥಮಿಕ ಶಾಲೆಯಿಂದ ನಕಲಿ ತೇರ್ಗಡೆ ಪ್ರಮಾಣ ಪತ್ರ ಖರೀದಿಸಿ 1ನೇ ತರಗತಿಗೆ ದಾಖಲಾತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Surendra Pai Column: ಸಿಹಿ ಜಡೆ ಈರುಳ್ಳಿ ಬಲ್ಲಿರಾ ?
ನಮ್ಮ ಮಗುವಿಗೆ ಎಲ್ಲಾ ಬರುತ್ತೆ, ಮನೆಯ ಎಲ್ಲಾ ನಾವು ಹೇಳಿಕೊಟ್ಟಿದ್ದೀವಿ, ನಮ್ಮ ಮಗು ರ್ಯಾಂಕ್ ಸ್ಟುಡೆಂಟ್, ದಾಖಲಾತಿ ಮಾಡಿಕೊಳ್ಳಿ ಎಂದು ಪಾಲಕರು ಸಮರ್ಥಿಸಿಕೊಳ್ಳುವ ದೃಶ್ಯಗಳು ದಾಖಲಾತಿ ಸಮಯದಲ್ಲಿ ಕಾಣಸಿಗುತ್ತದೆ. ಅದು ಹಾಗಲ್ಲ ಮಗುವಿಗೆ ಫೌಂಡೇಶನ್ ಹಂತದ ಕಲಿಕೆ ಆಗದೇ ನೇರವಾಗಿ ಒಂದನೇ ತರಗತಿ ಬಂದರೆ ಕಲಿಕಾ ಹಿನ್ನಡೆಯನ್ನು ಅನುಭವಿಸುತ್ತಾರೆ. ಜೊತೆಗೆ ಮಗುವಿನ ಆತ್ಮವಿಶ್ವಾಸವು ತುಸು ಕುಗ್ಗಬಹುದು. ಮಗು ಯುಕೆಜಿ ವಿದ್ಯಾಭ್ಯಾಸ ಕಲಿಯಲಿ, ಒಂದನೇ ತರಗತಿಗೆ ಸರಿ ಹೊಂದುವ ವಯೋಮಿತಿಗೆ ಇನ್ನು ಅವಕಾಶವಿದೆ ಎಂದು ಪುಟಾಣಿ ಕಂದಮ್ಮಗಳ ಮನಸ್ಥಿತಿ ಹಾಗೂ ಪ್ರಾಯೋಗಿಕ ಸಮಸ್ಯೆಗಳನ್ನು ಕುರಿತು ಪ್ರಾಂಶುಪಾಲರು ಮನವರಿಕೆ ಮಾಡಿದರೂ ಕ್ಯಾರೆ ಎನ್ನದೇ ಸುಳ್ಳು ದಾಖಲೆಯನ್ನು ಸೃಷ್ಟಿಸಿ ದಾಖಲಾತಿ ಪಡೆದುಕೊಳ್ಳುತ್ತಿದ್ದಾರೆ. ಸುಳ್ಳು ದಾಖಲೆ ಗಮನಿಸಿ ದಾಖಲಾತಿ ನೀಡುವುದಿಲ್ಲ ಎಂದರೆ ಆಡಳಿತ ಮಂಡಳಿಯವರಿಂದಲೋ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಲ್ಲಿ ಕೆಲಸ ಮಾಡುವ ಅಧಿಕಾರಿಗಳಿಂದಲೋ ಇನ್ ಫ್ಲುಯೆನ್ಸ್ ಮಾಡಿಸುತ್ತಾರೆ.
ಇಲ್ಲಿ ಹಾಸ್ಯಾಸ್ಪದ ಸಂಗತಿಯೆಂದರೆ ಶಿಕ್ಷಣ ಇಲಾಖೆಯ ಆದೇಶದ ಬಗ್ಗೆ , ವಯೋಮಿತಿ ಹಾಗೂ ಕಲಿಕೆಗೂ ಇರುವ ಸಂಬಂಧದ ಬಗ್ಗೆ ಪಾಲಕರಿಗೆ ತಿಳಿ ಹೇಳಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿ ಗಳೇ ನಿಯಮವನ್ನು ಗಾಳಿಗೆ ತೂರಿ ಪಾಲಕರ ಪರವಾಗಿ ಖಾಸಗಿ ಶಾಲೆಯಲ್ಲಿ ದಾಖಲಾತಿ ಮಾಡಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ.
ಎಲ್ಕೆ ಜಿ , ಯು ಕೆ ಜಿ ಹಂತದಲ್ಲಿ ಮಗುವಿನ ಮನೋವಿಕಾಸಕ್ಕೆ ತಕ್ಕಂತೆ ಸಂಪೂರ್ಣ ಚಟುವಟಿಕೆ ಆಧಾರಿತ ಕಲಿಕೆ ನಡೆಯುತ್ತದೆ. ಶಿಶು ಗೀತೆ ಕಲಿಯುವುದು, ಚಿತ್ರಗಳಿಗೆ ಬಣ್ಣ ತುಂಬುವುದು, ಬಣ್ಣಗಳ ಪರಿಕಲ್ಪನೆ, ಅಕ್ಷರ ಗುರುತಿಸುವಿಕೆ, ಒಂದಂಕಿ ಕಲಿಕೆ, ಸುತ್ತಮುತ್ತಲಿನ ಪ್ರಾಣಿ, ಪಕ್ಷಿ, ಮರ ಗಿಡಗಳ ಹೆಸರು ಅವುಗಳನ್ನು ಗುರುತಿಸುವಿಕೆ ಹೀಗೆ ನಲಿಯುತ್ತಾ ಕಲಿ ವಿಧಾನವನ್ನು ಅಳವಡಿಸ ಲಾಗಿರುತ್ತದೆ.
ಈ ಕುರಿತಂತೆ ಇತ್ತೀಚಿನ ಎನ್ ಇಪಿ-2020 ಸಹ ಬುನಾದಿ ಹಂತದ ಕಲಿಕೆಗೆ ಸಂಬಂಧಿಸಿದಂತೆ ವಿಶೇಷ ಒತ್ತು ನೀಡುತ್ತದೆ. ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳದ ಪಾಲಕರು ಇಂದಿನ ವಿಭಕ್ತ ಕುಟುಂಬದಲ್ಲಿ ಮಗುವನ್ನು ನೋಡಿಕೊಳ್ಳುವುದೇ ಒಂದು ಸಮಸ್ಯೆ ಆಗಿರುವಾಗ, ‘ತಾವು ಕೆಲಸಕ್ಕೆ ಹೋಗುತ್ತೇವೆ, ಮನೆಯಲ್ಲಿ ಮಗುವಿನ ಕಲಿಕೆಗೆ ಒತ್ತು ನೀಡುವವರರು ಯಾರಿಲ್ಲ, ಪಕ್ಕದ ಮನೆಯ ಮಗು ಒಂದನೇ ತರಗತಿಯಲ್ಲಿದೆ’ ಇತ್ಯಾದಿ ವೈಯಕ್ತಿಕ ಕಾರಣಕ್ಕಾಗಿ ಅಕ್ರಮ ಮಾರ್ಗದ ಮೂಲಕ ದಾಖಲಾತಿ ಮಾಡುತ್ತಾರೆ.
ಇದರ ಪರಿಣಾಮವಾಗಿ ಮಗು ಆಯಾಯ ಹಂತದಲ್ಲಿ ಕಲಿಕೆಯಲ್ಲಿ ಹಿಂದುಳಿದು, ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾ ಅದನ್ನು ಯಾರೊಂದಿಗೂ ಹೇಳಿಕೊಳ್ಳದ ಪರಿಸ್ಥಿತಿಗೆ ತಲುಪುತ್ತದೆ. ಇಲ್ಲಿ ಪಾಲಕರ ಎಡವಟ್ಟಿನ ನಿರ್ಧಾರಕ್ಕೆ ಬಲಿಯಾಗುವುದು ಮಗು. ಇವಕ್ಕೆಲ್ಲ ದೂರದರ್ಶಿತ್ವ ವಿಲ್ಲದ ಸರಕಾರಿ ಆದೇಶಗಳೇ ಕಾರಣ. ಇಂದು ಕನ್ನಡ ಭಾಷೆಯಲ್ಲಿ 1.32 ಲಕ್ಷ ಮಕ್ಕಳು ಫೇಲಾಗಿದ್ದಾರೆ ಏಕೆ? ಇದು ಒಂದು ಕಾರಣ. ನಮ್ಮಲ್ಲಿ ನಿಯಮಗಳು ಶಿಶು ಕೇಂದ್ರಿತವಾಗಿಲ್ಲ. ತಮ್ಮ ಆದೇಶಗಳಲ್ಲಿ ಲೂಪ್ ಹೋಲ್ ಏನಾದರೂ ಇದೆಯಾ? ರಂಗೋಲಿಯ ಕೆಳಗೆ ನುಸುಳಿ ಅಕ್ರಮ ಎಸಗಲು ಅವಕಾಶ ನೀಡುತ್ತಿದೇವೆಯೇ? ಎಂಬಿತ್ಯಾದಿ ಅಂಶಗಳನ್ನು ಚರ್ಚೆ ಮಾಡಿದಿದ್ದರೆ ಯಾವ ಪುಟಾಣಿ ಕಂದಮ್ಮಗಳು ಒತ್ತಡ ಅನುಭವಿಸುತ್ತಿರಲಿಲ್ಲ.