Thimmanna Bhagwat Column: ಏಕರೂಪದ ನಾಗರಿಕ ಸಂಹಿತೆ: ಬೆಳಗಲಿ ಹೃದಯ ದೀವಿಗೆ
ಏಕರೂಪ ನಾಗರಿಕ ಸಂಹಿತೆ (UCC) ಅನುಷ್ಠಾನಗೊಂಡರೆ ವಿವಾಹ, ವಿಚ್ಛೇದನ, ಉತ್ತರಾಧಿಕಾರ ಮುಂತಾದ ವೈಯಕ್ತಿಕ ವಿಷಯಗಳಿಗೆ ಕೂಡಾ ಏಕರೂಪದ ನಿಯಮ ಗಳು ಅನ್ವಯವಾಗುತ್ತವೆ. ಶಾಬಾನೋ, ಸರಳಾ ಮುದುಗಲ್, ಶಾಯರಾ ಬಾನೊ, ಜೋಸ್ ಪಾವ್ಲೋ ಮುಂತಾದ ಅನೇಕ ಪ್ರಕರಣ ಗಳಲ್ಲಿ ಸುಪ್ರೀಂ ಕೋರ್ಟು ಏಕರೂಪದ ಕಾನೂನು ತರಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದೆ


ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕಥೆಗಳು’ ಕೃತಿಯ ಅನುವಾದಿತ ವ ಪುಸ್ತಕ ಬುಕರ್ ಪ್ರಶಸ್ತಿಗೆ ಆಯ್ಕೆಯಾದದ್ದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಚಾರ. ಆದರೆ ಆ ಪುಸ್ತಕದಲ್ಲಿರುವ ಕಥೆಗಳೆಲ್ಲಾ ವಾಸ್ತವಕ್ಕೆ ಅತಿ ಹತ್ತಿರದವು ಎನ್ನುವುದು ಅಷ್ಟೇ ದುಃಖದ ಸಂಗತಿ. ಸಾರಾ ಅಬೂಬಕರ್ರ ‘ಸಹನಾ’ ಕೂಡಾ ಯಾತನೆಯ ಅನುಭವವನ್ನೇ ಕೊಡುತ್ತದೆ. ವಿಶೇಷವಾಗಿ ಮುಸ್ಲಿಮ್ ಮಹಿಳೆಯರು ಅನುಭವಿಸುವ ಶೋಷಣೆ ಮತ್ತು ಅವರ ಭಾವನೆಗಳಿಗೆ ಸ್ಪಂದಿಸದ ಸಮಾಜ ಈ ಎಲ್ಲ ಕಥೆಗಳ ಹಿಂದಿರುವ ಕಟು ಸತ್ಯ. ಈಗಲೂ ಶರೀಯತ್ ಅನ್ನೇ ಅಂತಿಮ ಎನ್ನುವರಿರುವಾಗ ಬುಕರ್ ಬರಲಿ ಅಥವಾ ಅಬೂಬಕರ್ ಹೇಳಲಿ, ಏನೂ ವ್ಯತ್ಯಾಸ ಕಾಣುತ್ತಿಲ್ಲ.
ಪವಿತ್ರ ಕುರಾನಿನ 45ನೇ ಅಧ್ಯಾಯದ (ಸುರಾಹ್) 37 ಶ್ಲೋಕಗಳಲ್ಲಿ (ಅಂiiಹ್) ಹೇಳಲಾದ ಸೂತ್ರ ಗಳು, ಪ್ರವಾದಿ ಮುಹಮ್ಮದರ ಜೀವನ ಮತ್ತು ಬೋಧನೆಗಳ ಮೇಲೆ ಆಧಾರಿತವಾದ ‘ಹದಿಸ್’ಗಳು ಮತ್ತು ಶತಮಾನಗಳಿಂದ ವಿವಿಧ ಮುಸ್ಲಿಮ್ ಪಂಡಿತರು ನೀಡಿದ ವ್ಯಾಖ್ಯಾನಗಳ ಒಟ್ಟೂ ಸಂಕಲನವೇ ಶರಿಯಾ ಅಥವಾ ಶರೀಯತ್.
ಶರೀಯತ್ ಅಂದರೆ ಅರೇಬಿಕ್ ಭಾಷೆಯಲ್ಲಿ ‘ಪವಿತ್ರ ನೀರಿನ ಬುಗ್ಗೆಗೆ ಹೋಗಲು ಸರಿಯಾದ ದಾರಿ’ ಎಂದರೆ ನ್ಯಾಯ-ನೀತಿ- ಧರ್ಮ ಎಂಬೆಲ್ಲ ಅರ್ಥಗಳನ್ನೂ ಪಡೆಯುತ್ತದೆ. ಶರೀಯತ್ ನಲ್ಲಿ ವೈಯಕ್ತಿಕ ಸಂಬಂಧಗಳಲ್ಲದೆ, ಧಾರ್ಮಿಕ, ಸಾಮಾಜಿಕ, ವ್ಯಾವಹಾರಿಕ, ಅಪರಾಧ ಮತ್ತು ಶಿಕ್ಷೆ ಮುಂತಾದ ಎಲ್ಲ ವಿಷಯಗಳ ಕುರಿತು ವಿವರಣೆಗಳಿವೆ. ಹಿಂದೂ ಕಾನೂನುಗಳಿಗೆ ಶೃತಿ, ಸ್ಮತಿಗಳು ಹೇಗೆ ಮೂಲವೋ ಹಾಗೆ ಮುಸ್ಲಿಮ್ ಕಾನೂನುಗಳಿಗೆ ಶರೀಯತ್ ಆಧಾರ.
ಇದನ್ನೂ ಓದಿ: Thimmanna Bhagwat Column: ಜನಗಣತಿ ಅಥವಾ ಜಾತಿಗಣತಿಯ ಗಣಿತ ಮತ್ತು ಮೀಸಲಾತಿಯ ತಿಗಣಿ
ಹಿಂದೂ ಪರಂಪರೆಯ ಕೆಲ ಕಾಲಘಟ್ಟಗಳಲ್ಲಿ ಸೇರಿಕೊಂಡಿದ್ದ ಅನೇಕ ಅನಿಷ್ಟಗಳ ನಿವಾರಣೆಗೆ ಕಾನೂನುಗಳನ್ನು ತರಲಾಯಿತು. ಸತಿ ಪದ್ಧತಿ, ಪ್ರಾಣಿಬಲಿ, ಅಸ್ಪಶ್ಯತೆ ಮುಂತಾದವು ಶಿಕ್ಷಾರ್ಹ ಅಪರಾಧವಾದವು. ಹಿಂದುಳಿದವರಿಗೆ ಮೀಸಲಾತಿಯಂಥ ವಿಶೇಷ ಸವಲತ್ತನ್ನು ನೀಡಲಾಯಿತು. ಜಾತಿ, ಲಿಂಗಭೇದವಿಲ್ಲದ ಸಮಾನತೆಯನ್ನು ಅಳವಡಿಸಲಾಯಿತು.
ಹಿಂದೂ ಧರ್ಮ ಪ್ರಗತಿಪರವಾಗಿ ಮಾರ್ಪಾಡಾಗಲು ಮತ್ತು ಮಹಿಳೆಯರು ಹಾಗೂ ಎಲ್ಲಾ ಜಾತಿಯ ಜನರು ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಪಡೆಯಲು ಇಂಥ ಪ್ರಗತಿಪರ ಕಾನೂನುಗಳೇ ಕಾರಣವಾದವು. ಇಂಥ ಯಾವ ಬದಲಾವಣೆಗಳನ್ನೂ ಹಿಂದೂಗಳು ವಿರೋಧಿಸಲಿಲ್ಲ. ಬದಲಾಗಿ ‘ಪ್ರಗತಿಪರ’ ಎಂದು ಒಪ್ಪಿ ಸ್ವಾಗತಿಸಿದರು. ಆದರೆ ಭಾರತದ ಮುಸ್ಲಿಮರು ಶರೀಯತ್ ವಿಧಿಸಿದ ಕಟ್ಟಳೆಗಳನ್ನು ಬದಲಾಯಿಸುವ ಪ್ರಯತ್ನಗಳನ್ನು ಬಹುತೇಕವಾಗಿ ವಿಫಲಗೊಳಿಸಿದ್ದಾರೆ. ಸಂವಿ ಧಾನದ 44ನೇ ವಿಧಿಯ ನಿರ್ದೇಶಕ ತತ್ವಗಳ ಪ್ರಕಾರ ಭಾರತದ ಎಲ್ಲಾ ನಾಗರಿಕರಿಗೆ ಏಕರೂಪದ ಕಾನೂನನ್ನು ತರಲು ಸರಕಾರವು ಪ್ರಯತ್ನಿಸಬೇಕು.
ಈ ಹಿನ್ನೆಲೆಯಲ್ಲಿ ಅಪರಾಧ, ಶಿಕ್ಷೆ, ಸಿವಿಲ್ ವ್ಯಾಜ್ಯಗಳು, ಸಾಕ್ಷ್ಯ ಮತ್ತು ಪುರಾವೆಗಳ ಸಮಾನ ಕಾನೂನುಗಳು ಜಾರಿಯಲ್ಲಿವೆ. ಏಕರೂಪ ನಾಗರಿಕ ಸಂಹಿತೆ (UCC) ಅನುಷ್ಠಾನಗೊಂಡರೆ ವಿವಾಹ, ವಿಚ್ಛೇದನ, ಉತ್ತರಾಧಿಕಾರ ಮುಂತಾದ ವೈಯಕ್ತಿಕ ವಿಷಯಗಳಿಗೆ ಕೂಡಾ ಏಕರೂಪದ ನಿಯಮ ಗಳು ಅನ್ವಯವಾಗುತ್ತವೆ. ಶಾಬಾನೋ, ಸರಳಾ ಮುದುಗಲ್, ಶಾಯರಾ ಬಾನೊ, ಜೋಸ್ ಪಾವ್ಲೋ ಮುಂತಾದ ಅನೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ಏಕರೂಪದ ಕಾನೂನು ತರಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದೆ. ಹಾಗಾದರೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಪರಿಕಲ್ಪನೆ ಎಷ್ಟರಮಟ್ಟಿಗೆ ಕಾರ್ಯಸಾಧ್ಯ? ಅದರಿಂದ ಮುಸ್ಲಿಮ್ ಕಾನೂನಿನ ಮೇಲಾಗುವ ಪರಿಣಾಮ ಏನು ಎಂಬುದನ್ನು ನೋಡೋಣ: ಬಹುಪತ್ನಿತ್ವ: ಪವಿತ್ರ ಕುರಾನಿನ 4ನೇ ಅಧ್ಯಾಯದ (ಸುರಾಹ್) 3ನೇ ಶ್ಲೋಕ (ಅಯಹ್) ‘ಆನ್-ನಿಸಾ’ ಪ್ರಕಾರ ಮುಸಲ್ಮಾನ ಪುರುಷರು 4 ಹೆಂಡತಿಯರನ್ನು ಹೊಂದಬಹುದು.
ಆದರೆ ಉತ್ತರಾಖಂಡದಲ್ಲಿ ತರಲಾದ UCC ಪ್ರಕಾರ ಬಹುಪತ್ನಿತ್ವ ಅಥವಾ ಬಹುಪತಿತ್ವ ಅಪರಾಧ ವಾಗುತ್ತದೆ ಮತ್ತು ಈಗಾಗಲೇ ಪತಿ ಅಥವಾ ಪತ್ನಿ ಇರುವಾಗ ಎರಡನೇ ವಿವಾಹ ಅಸಿಂಧು ವಾಗುತ್ತದೆ.
ವಿವಾಹ: ಉದ್ದೇಶಿತ UCCಯ ಪ್ರಕಾರ ವಿವಾಹವಾಗಲು ಕನಿಷ್ಠ ವಯಸ್ಸು ಗಂಡಸರಿಗೆ 21 ಮತ್ತು ಮಹಿಳೆಯರಿಗೆ 18. ಬಾಲ್ಯವಿವಾಹ ಪ್ರತಿಬಂಧ ಕಾಯಿದೆ 1929 ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆ 2006ರ ಪ್ರಕಾರ ಬಾಲ್ಯವಿವಾಹ ನಡೆಸುವುದು ಶಿಕ್ಷಾರ್ಹ ಅಪರಾಧ. ಮಹಿಳೆಯರ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಹಾಗೂ ಅರೋಗ್ಯದ ದೃಷ್ಟಿಯಿಂದ ಕೂಡಾ 18 ವರ್ಷ ಕ್ಕಿಂತ ಕಡಿಮೆ ವಯಸ್ಸಿಗೆ ಗರ್ಭ ಧರಿಸುವುದು ಸೂಕ್ತವಲ್ಲ ಎಂಬುದು ಅರೋಗ್ಯ ಮತ್ತು ಮಾನಸಿಕ ಶಾಸಜ್ಞರ ಅಭಿಪ್ರಾಯ. ಬಾಲ್ಯವಿವಾಹದಿಂದ ಅವರ ಶಿಕ್ಷಣ ಕೂಡಾ ಪೂರ್ತಿಯಾಗದೇ ಅವರ ಆರ್ಥಿಕ ಸಬಲೀಕರಣಕ್ಕೆ ಧಕ್ಕೆಯಾಗುತ್ತದೆ. ಸುಪ್ರೀಂ ಕೋರ್ಟು ಕೂಡಾ ಮುಸ್ಲಿಮ್ ಮಹಿಳೆಯರಿಗೆ ವಿವಾಹಕ್ಕಿರುವ ಕನಿಷ್ಠ ವಯಸ್ಸನ್ನು ನಿಗದಿಪಡಿಸಲು ಸಲಹೆ ಮಾಡಿದೆ. ಆದರೆ ಮುಸ್ಲಿಮ್ ವೈಯಕ್ತಿಕ ಕಾನೂನಿನ ಪ್ರಕಾರ ಪ್ರೌಢಾವಸ್ಥೆ ತಲುಪಿದ ಯಾವುದೇ ಮಹಿಳೆಯನ್ನು ಮದುವೆ ಯಾಗಲು ವಯಸ್ಸಿನ ನಿರ್ಬಂಧವಿಲ್ಲ.
ಮುಸಲ್ಮಾನರ ವೈಯಕ್ತಿಕ ಕಾನೂನಿನ ಪ್ರಕಾರ ವಿವಾಹವೆಂದರೆ ಹೆಣ್ಣು ಮತ್ತು ಗಂಡಿನ ನಡುವೆ ನಡೆಯುವ ಒಂದು ಒಪ್ಪಂದ. ಅಲ್ಲಿ ಇಜಾಬ್ ( offer) ಮತ್ತು ಕಬೂಲ್ ( acceptance) ಇರಬೇಕು ಮತ್ತು ಆನಂತರ ನಿಕಾಹ್ ಆದರೆ ಒಪ್ಪಂದ ಆದಂತೆ. ವಿವಾಹದ ಒಪ್ಪಂದದ ಷರತ್ತುಗಳು, ಉದಾಹರಣೆಗೆ: ಮೆಹರ್ (ವಧು-ದಕ್ಷಿಣೆ), ವಿಚ್ಛೇದನ, ಜೀವನಾಂಶ ಮುಂತಾದ ವಿಷಯಗಳು ಒಪ್ಪಂದದ ಕರಾರುಪತ್ರ ‘ನಿಕಾಹ್-ನಾಮಾ’ದಲ್ಲಿ ನಮೂದಾಗುತ್ತವೆ. ಆದರೆ UCCಯ ಪ್ರಕಾರ ವಿವಾಹ ಒಂದು ಆಚರಣೆ ಮತ್ತು ವಿವಾಹದ ನೋಂದಣಿ ಕಡ್ಢಾಯ. ಇದು ವಿವಾಹವನ್ನು ಧೃಢೀ ಕರಿಸುತ್ತದೆ. ವಿಚ್ಛೇದನ: ಮುಸ್ಲಿಮ್ ವಿವಾಹದ ರದ್ದತಿ ಅಥವಾ ವಿಚ್ಛೇದನ, ವಿವಾಹ ಒಪ್ಪಂದದ ಅಂತರ್ಗತವಾಗಿರುತ್ತದೆ.
2017ರ ಶಯಾರಾ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ತೀರ್ಪು ಮತ್ತು 2019ರ ಮುಸಲ್ಮಾನ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆಯನ್ವಯ ತ್ರಿವಳಿ ತಲಾಖ್ ಅಸಿಂಧು ವಾಗು ತ್ತದೆ ಮತ್ತು ಅದು ಶಿಕ್ಷಾರ್ಹ ಅಪರಾಧ. ಆದರೆ ಮುಸಲ್ಮಾನರಲ್ಲಿ ‘ತಲಾಖ್-ಉಲ್-ಸುನ್ನತ್’ ನಂಥ ಅನೇಕ ಬಗೆಯ ತಲಾಖ್ಗಳು ಚಾಲ್ತಿಯಲ್ಲಿವೆ. ಅಂಥ ವಿಚ್ಛೇದನಕ್ಕೆ ನ್ಯಾಯಾಲಯದ ಯಾವುದೇ ಆದೇಶದ ಅಗತ್ಯವಿಲ್ಲ.
1939ರ ಮುಸ್ಲಿಮ್ ವಿವಾಹ ರದ್ದತಿ ಕಾಯಿದೆಯೂ ಶರೀಯತ್ ಪ್ರಕಾರವೇ ಇದೆ. ಆದರೆ UCC ಜಾರಿಗೆ ಬಂದರೆ ವಿಚ್ಛೇದನವು ನ್ಯಾಯಾಲಯದ ಡಿಕ್ರಿಯ ಮೂಲಕವೇ ಆಗಬೇಕಾಗುತ್ತದೆ ಮತ್ತು ಮೌಖಿಕ ಅಥವಾ ಇತರ ರೀತಿಯ ತಲಾಖ್ಗಳು ಕಾನೂನುಬಾಹಿರವಾಗುತ್ತವೆ.
ಜೀವನಾಂಶ: 1986ರ ಮುಸ್ಲಿಮ್ ಮಹಿಳೆಯರ (ವಿಚ್ಛೇದ ನೆಯ ನಂತರದ ಹಕ್ಕುಗಳ ರಕ್ಷಣೆ) ಕಾಯಿದೆಯ ಪ್ರಕಾರ ಜೀವನಾಂಶದ ವಿಷಯದಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ 125ನೇ ಕಲಮು ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ. ಮುಸಲ್ಮಾನ ಪುರುಷನೊಬ್ಬ ವಿಚ್ಛೇದಿತ ಪತ್ನಿಗೆ ಕೇವಲ ಇದ್ದತ್ ಅವಧಿಗಷ್ಟೇ (90ದಿನ) ಜೀವನಾಂಶ ಕೊಡಬೇಕಾಗುತ್ತದೆ. ಆದರೆ UCC ಜಾರಿಗೆ ಬಂದರೆ 125ನೇ ಕಲಮು ಮುಸ್ಲಿಮರಿಗೂ ಅನ್ವಯವಾಗುತ್ತದೆ. ಅಲ್ಲದೆ UCC ಅಡಿಯಲ್ಲಿ ಜೀವನಾಂಶದ ವಿಷಯ ಮಹಿಳೆ ಮತ್ತು ಪುರುಷ ಇಬ್ಬರಿಗೂ ಸಮಾನವಾಗಿ ಅನ್ವಯವಾಗುತ್ತದೆ ಮತ್ತು ಅವರು ನ್ಯಾಯಾಲಯದ ಆದೇಶದ ಮೇರೆಗೆ ಜೀವನಾಂಶ ನೀಡಬೇಕಾಗುತ್ತದೆ.
ಉತ್ತರಾಧಿಕಾರ: ಮುಸ್ಲಿಮ್ ವೈಯಕ್ತಿಕ ಕಾನೂನಿನ ಪ್ರಕಾರ ಉಯಿಲು ಇಲ್ಲದ ಸಂದರ್ಭಗಳಲ್ಲಿ ಪುರುಷನೊಬ್ಬ ಮರಣ ಹೊಂದಿದರೆ ಅವನ ತಂದೆ, ತಾಯಿ, ಹೆಂಡತಿ/ಯರು, ಮಗ, ಮಗಳು ಮುಖ್ಯವಾಗಿ ವಾರಸುದಾರರು. ಆದರೆ ಹೆಣ್ಣು ಮಕ್ಕಳಿಗೆ ಗಂಡುಮಕ್ಕಳಿಗೆ ಸಿಗುವ ಪಾಲಿನ ಅರ್ಧ ದಷ್ಟು ಮಾತ್ರ ಆಸ್ತಿ ಸಿಗುತ್ತದೆ. ಮಕ್ಕಳಿಲ್ಲದಿದ್ದರೆ ಹೆಂಡತಿಗೆ 1/4 ಪಾಲು, ಮಕ್ಕಳಿದ್ದರೆ 1/8 ಪಾಲು. ಸುನ್ನಿ ಪಂಥದಲ್ಲಿ ವಾರಸುದಾರರಿಗೆಲ್ಲ ಸಮನಾದ ಹಂಚಿಕೆ.
ಶಿಯಾ ಪಂಥವಾದರೆ ವಾರಸುದಾರರ ಆಯಾ ಕವಲಿಗೆ ಸಿಗುವ ಪಾಲಿನಲ್ಲಿ ಹಂಚಿಕೆ. ಪ್ರಾತಿನಿಧಿತ್ವ ಇಲ್ಲ- ಅಂದರೆ ಮೊದಲೇ ಮೃತರಾದ ಮಗ ಅಥವಾ ಮಗಳ ಸಂತತಿಗೆ ಪಾಲು ಸಿಗದಿರುವುದು- ಹೀಗೆಲ್ಲ ಅನೇಕ ವೈರುಧ್ಯಗಳಿವೆ. ಮುಸಲ್ಮಾನ ವ್ಯಕ್ತಿ ತನ್ನ ಆಸ್ತಿಯ ಮೂರನೇ ಒಂದು ಪಾಲನ್ನು ಮಾತ್ರ ಉಯಿಲಿನ ಮೂಲಕ ಪರಭಾರೆ ಮಾಡಬಹುದು. ಆದರೆ UCCಜಾರಿಗೆ ಬಂದರೆ ಈ ಎಲ್ಲ ವೈರುಧ್ಯಗಳ ಬದಲಾಗಿ ಈಗಿನ ಭಾರತೀಯ ಉತ್ತರಾಧಿಕಾರ ಕಾಯಿದೆಯ ಪ್ರಕಾರ ಗಂಡು ಹೆಣ್ಣು ಭೇದವಿಲ್ಲದ ಸಮಾನ ಉತ್ತರಾಧಿಕಾರದ ನಿಯಮ ಜಾರಿಯಾಗುತ್ತದೆ ಮತ್ತು ಉಯಿಲಿನ ಕುರಿತಾದ ನಿಬಂಧನೆಯೂ ರದ್ದಾಗುತ್ತದೆ.
ಒಟ್ಟಾರೆಯಾಗಿ UCC ಜಾರಿಗೆ ಬಂದರೆ ಮುಸ್ಲಿಮ್ ಮಹಿಳೆಯರಿಗೆ ಅನೇಕ ಪ್ರಗತಿಪರ ಕಾನೂನುಗಳ ಲಾಭ ದೊರಕುತ್ತದೆ. ಅವರಿಗೆ ಬಹುಶಃ ಅಸಹನೀಯವಾಗಿರುವ ಬಹುಪತ್ನಿತ್ವ ಇಲ್ಲವಾಗುತ್ತದೆ. ನಿಖಾಹ್ ಹಲಾಲ ಅಂದರೆ ವಿಚ್ಛೇದಿತ ಗಂಡನನ್ನು ಪುನಃ ಮದುವೆಯಾಗಲು ಇನ್ನೊಬ್ಬರ ಜತೆ ವಿವಾಹವಾಗಿ ತಲಾಖ್ ನೀಡಬೇಕಾದ ಅಮಾನವೀಯ ಪದ್ಧತಿ ರದ್ದಾಗುತ್ತದೆ. ವಿಚ್ಛೇದನಕ್ಕೆ ಕಾನೂನು ಮತ್ತು ನ್ಯಾಯಾಲಯದ ರಕ್ಷಣೆ ಮತ್ತು ಜೀವನಾಂಶದ ನಿಯಮ ಅನ್ವಯವಾಗುತ್ತದೆ. ಉತ್ತರಾಧಿಕಾರದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಜಾರಿಯಾಗುತ್ತದೆ.
ವಿವಾಹದ ನೋಂದಣಿ ಕಡ್ಢಾಯವಾಗುವುದರಿಂದ ಮಹಿಳೆಯೊಬ್ಬಳು ತನ್ನ ಸಂತತಿಯ ಕಾನೂನು ಬದ್ಧತೆ, ಜೀವನಾಂಶ ಮತ್ತು ಉತ್ತರಾಧಿಕಾರದ ಕುರಿತಾಗಿ ವಿವಾಹವನ್ನು ಸಾಬೀತುಮಾಡಲು ಹೋರಾಡುವ ಅಗತ್ಯ ಬರುವುದಿಲ್ಲ. ಬಾಲ್ಯವಿವಾಹದ ರದ್ದತಿಯಿಂದ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಹಾಗೂ ಆರ್ಥಿಕ ಸ್ವಾವಲಂಬನೆ ಪಡೆಯಲು ಸಾಧ್ಯವಾಗುವುದು. ಅಲ್ಲದೆ ಪೂರ್ತಿ ಪ್ರಬುದ್ಧವಾಗುವ ಮೊದಲೇ ಗರ್ಭವತಿಯಾಗುವ ಮಾನಸಿಕ ಮತ್ತು ದೈಹಿಕ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ. ನಾಗರಿಕ ಸಮಾಜ ಒಪ್ಪುವಂತೆ ಹಾಗೂ ಎಲ್ಲರಿಗೆ ಸಮಾನವಾಗಿ ಬದುಕುವ ಅವಕಾಶ ಮುಸ್ಲಿಮ್ ಮಹಿಳೆಯರಿಗೆ ದೊರಕುತ್ತದೆ. ಆದರೆ ಮೂಲಭೂತವಾದಿ ಮುಸಲ್ಮಾನರು ಈ ಎಲ್ಲ ಬದಲಾವಣೆಗಳನ್ನು ವಿರೋಧಿಸುತ್ತಲೇ ಬಂದಿದ್ದಾರೆ ಮತ್ತು UCC ಯನ್ನು ಸುತರಾಂ ಒಪ್ಪಲು ಸಿದ್ಧವಿಲ್ಲ. ಅದು ಧಾರ್ಮಿಕ ವಿಷಯದಲ್ಲಿ ಸರಕಾರದ ಹಸ್ತಕ್ಷೇಪ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ, ರಾಜಕೀಯ ದುರ್ಬಳಕೆ ಮತ್ತು ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯಕ್ಕೆ ವಿರುದ್ಧ ಎಂಬುದು UCC ವಿರೋಧಿಸುವವರ ವಾದ. ವೈಯಕ್ತಿಕ ಕಾನೂನುಗಳ ವಿಷಯದಲ್ಲಿ ಶರೀಯತ್ ಅಂತಿಮ ಎನ್ನುವ ಮುಸ್ಲಿಮರು ಅಪರಾಧ ಮತ್ತು ಶಿಕ್ಷೆಯ ವಿಷಯ ಬಂದಾಗ ಅದನ್ನು ಅಳವಡಿಸಿ ಕೊಳ್ಳುವದಿಲ್ಲ.
ಯಾಕೆಂದರೆ ಅದು ಅಷ್ಟು ಕಠೋರವಾಗಿದೆ. ಭಾರತದ ಸಾಂವಿಧಾನಿಕ ಸಭೆಯಲ್ಲಿ ನಡೆದ ಚರ್ಚೆ ಯ ವೇಳೆ ಡಾ.ಬಿ.ಆರ್.ಅಂಬೇಡ್ಕರ್ರವರು ಹೇಳಿದಂತೆ, ದೇಶದ ಏಕತೆ ಮತ್ತು ಸಮಗ್ರತೆಯ ದೃಷ್ಟಿಯಿಂದ UCC ಅತ್ಯಂತ ಸೂಕ್ತವಾದರೂ, ದೇಶ ಅಂಥ ಸಾಮಾಜಿಕ ಸ್ಥಿತಿಯನ್ನು ಹಾಗೂ ಜನರು ಅಂಥ ಪ್ರಬುದ್ಧತೆಯನ್ನು ತಲುಪುವವರೆಗೆ ಅದು ಅವರವರ ಆಯ್ಕೆಯ ವಿಷಯ ವಾಗಿರು ವುದು ಅನಿವಾರ್ಯ.
ಆದರೆ ಮುಸ್ಲಿಮ್ ಮಹಿಳೆಯರ ಹಿತದೃಷ್ಟಿಯಿಂದ UCC ಯನ್ನು ಒತ್ತಾಯಪೂರ್ವಕವಾಗಿ ಹೇರುವುದು ಒಳ್ಳೆಯದು. ಹಾಗಾದಾಗ ಕರ್ನಲ್ ಸೋಫಿಯಾರಂಥ ಧೀರ ಮಹಿಳೆಯರು ಇನ್ನಷ್ಟು ದೊರಕಬಹುದು ಮತ್ತು ‘ಹೃದಯ ದೀವಿಗೆ’ಯ ಕಥೆಗಳು ಕಥೆಯಾಗಿಯೇ ಇರಬಹುದು.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್ನ
ನಿವೃತ್ತ ಎಜಿಎಂ)