Vinayaka M Bhatta Column: ಮಾತು ಮನಸ್ಸಿನ ಕೈಗನ್ನಡಿ, ಅಲ್ಲವೇ...?
ವಿಶಿಷ್ಟ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗ್ರಾಜ್ಗೆ ಭೇಟಿ ನೀಡಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯೋಗಗುರು ಬಾಬಾ ರಾಮ್ದೇವ್ ಮತ್ತು ಅನೇಕ ಸಾಧುಗಳೊಂದಿಗೆ ತ್ರಿವೇಣಿ ಸಂಗಮದಲ್ಲಿ ಧಾರ್ಮಿಕಸ್ನಾನ ಮಾಡಿದರು. ಈ ಬೆಳವಣಿಗೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಡಂಬಿಸಿದರು
ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
144 ವರ್ಷಗಳಿಗೊಮ್ಮೆ ಸಂಭವಿಸುವ ಮಹಾಕುಂಭಮೇಳವು ಪ್ರಯಾಗ್ರಾಜ್ನಲ್ಲಿ ನಡೆಯು ತ್ತಿದ್ದು, ವಿಶ್ವಾದ್ಯಂತದ ಆಸ್ತಿಕರು, ಶ್ರದ್ಧಾವಂತರು, ಕುತೂಹಲಿಗಳು ಅತ್ತ ಹರಿದುಬರುತ್ತಿದ್ದಾರೆ, ಈಗಾಗಲೇ 20 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನದ ಅನುಭೂತಿ ಪಡೆದಿದ್ದಾರೆ. ಒಂದು ಸಣ್ಣ ಊರಿನಲ್ಲಿ 45 ದಿನಗಳಲ್ಲಿ 50 ಕೋಟಿಗೂ ಹೆಚ್ಚು ಜನರು ಶಾಂತವಾಗಿ ಬಂದುಹೋಗುವ ವ್ಯವಸ್ಥೆ ಹೇಗಾಗುತ್ತದೆ ಎಂಬುದನ್ನು ಶೋಧಿಸಲು ವಿಶ್ವದ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಂಶೋ ಧಕರು ಅಲ್ಲಿಗೆ ಬಂದು ಅಧ್ಯಯನ ನಡೆಸುತ್ತಿದ್ದಾರೆ.
ಇಂಥ ವಿಶಿಷ್ಟ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗ್ರಾಜ್ಗೆ ಭೇಟಿ ನೀಡಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯೋಗಗುರು ಬಾಬಾ ರಾಮ್ದೇವ್ ಮತ್ತು ಅನೇಕ ಸಾಧುಗಳೊಂದಿಗೆ ತ್ರಿವೇಣಿ ಸಂಗಮದಲ್ಲಿ ಧಾರ್ಮಿಕಸ್ನಾನ ಮಾಡಿದರು. ಈ ಬೆಳವ ಣಿಗೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಡಂಬಿಸಿದರು.
“ಅಮಿತ್ ಶಾ ಅವರ ಗಂಗಾಸ್ನಾನವು ದೇಶದ ಬಡತನವನ್ನು ತೊಡೆದು ಹಾಕುವುದಿಲ್ಲ. ಕ್ಯಾಮೆರಾ ಗಳಿಗಾಗಿ ಗಂಗಾನದಿಯಲ್ಲಿ ಸ್ನಾನ ಮಾಡಲು ಬಿಜೆಪಿ ನಾಯಕರು ಪರಸ್ಪರ ಸ್ಪರ್ಧಿಸುತ್ತಿದ್ದಾರೆ" ಎಂಬುದು ಖರ್ಗೆಯವರ ಆರೋಪ. ಧರ್ಮದ ಇಂಥ ಆಚರಣೆಗಳ ಹೆಸರಿನಲ್ಲಿ ಬಡವರನ್ನು ಶೋಷಿ ಸುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಕೂಡ ಅವರು ಹೇಳಿದರು.
ಇದನ್ನೂ ಓದಿ: Vinayaka M Bhatta Column: ಅಧಿಕಾರ, ತ್ಯಾಗ ಮತ್ತು ರಾಜಕೀಯ ಅನಿವಾರ್ಯತೆ
ಮಧ್ಯಪ್ರದೇಶದ ಮೋವ್ ನಲ್ಲಿ ನಡೆದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, “ನಾನು ಯಾರ ನಂಬಿಕೆಯನ್ನೂ ನೋಯಿಸಲು ಬಯಸುವುದಿಲ್ಲ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದೂ ಹೇಳಿದರು. ಕ್ಷಮೆ ಕೇಳುವುದಾದರೆ, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ನೋವುಂಟುಮಾಡಬಹುದಾದ ಇಂಥ ಹೇಳಿಕೆಯನ್ನು ಕೊಡುವ ಅಗತ್ಯವೇನಿತ್ತು? ಎಂಬುದು ಪ್ರಶ್ನೆ. ಮಾತ್ರವಲ್ಲ, ಖರ್ಗೆಯವರ ಈ ಹೇಳಿಕೆಗಳನ್ನು ಯಾವ ಹಿರಿಯ ಕಾಂಗ್ರೆಸ್ಸಿಗರೂ ಇನ್ನೂ ಖಂಡಿಸದಿರುವುದನ್ನು ನೋಡುವಾಗ, ಇದು ಕೇವಲ ಖರ್ಗೆಯವರ ವೈಯಕ್ತಿಕ ಹೇಳಿಕೆ ಎಂದು ಭಾವಿಸುವುದಾದರೂ ಹೇಗೆ? ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡ ಖರ್ಗೆ, “ಮೋದಿ ಮತ್ತು ಶಾ ಅವರು 100 ಜನ್ಮಗಳಲ್ಲಿ ಸ್ವರ್ಗಕ್ಕೆ ಹೋಗಲು ಸಾಧ್ಯವಾಗದಷ್ಟು ಪಾಪಗಳನ್ನು ಮಾಡಿದ್ದಾರೆ" ಎಂದೂ ಹೇಳಿದರು.
“ತಾವು ಮಾಡಿದ ಕರ್ಮಗಳಿಂದ ಸ್ವರ್ಗಪ್ರಾಪ್ತಿಯಾಗುವುದೇ ವಿನಾ, ಸಂಗಮ ಸ್ನಾನದಿಂದ ಅಲ್ಲ ಮತ್ತು ಇಂಥ ಆಚರಣೆಗಳು ಹಸಿದ ಹೊಟ್ಟೆಗಳಿಗೆ ಅನ್ನ ನೀಡುವುದಿಲ್ಲ" ಎನ್ನುವುದು ಅವರ ಭಾಷ ಣದ ಸಾರವಾಗಿತ್ತು. ನಂತರ, ಸ್ವಾಭಾವಿಕವಾಗಿ ಅನೇಕ ಕಾಂಗ್ರೆಸ್ಸಿಗರು ಮತ್ತು ಕರ್ನಾಟಕದ ಕೆಲವು ಮಂತ್ರಿಗಳು ತಮ್ಮ ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆಗಳನ್ನು ವಿವಿಧ ಮಾರ್ಗಗಳಿಂದ ಸಮರ್ಥಿ ಸಿಕೊಳ್ಳುವುದರಲ್ಲಿ ತೊಡಗಿದರು.
ಅವರ ಪುತ್ರ ಪ್ರಿಯಾಂಕ್ ಖರ್ಗೆಯವರಂತೂ ಶರಣರ ವಚನಗಳನ್ನು ಬಳಸಿಕೊಂಡು ತಮ್ಮ ‘ಎಕ್ಸ್’ ಖಾತೆಯಲ್ಲಿ ತಂದೆಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಬಿಜೆಪಿ ಸೇರಿದಂತೆ ಸಮಸ್ತ ಹಿಂದೂ ಸಂಘಟನೆಗಳು ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ಖರ್ಗೆ ಅವರ ಹೇಳಿಕೆ ಗಳು ಕೋಟ್ಯಂತರ ಹಿಂದೂಗಳ ನಂಬಿಕೆಯ ಮೇಲಿನ ದಾಳಿಯಾಗಿದೆ; ಕಾಂಗ್ರೆಸ್ ಪಕ್ಷವು ಸನಾತನ-ವಿರೋಧಿ ಚಿಂತನೆಯನ್ನು ಪೋಷಿಸುತ್ತಿದೆ" ಎಂದು ಆರೋಪಿಸಿದವು.
ಇನ್ನು ಆಸ್ಥೆಯುಳ್ಳ ಹಿಂದೂಗಳು, “ಇಡೀ ಜಗತ್ತು ಮಹಾಕುಂಭದ ಬಗ್ಗೆ ಮಾತನಾಡುತ್ತಿದ್ದರೆ, ಭಾರ ತದ ಅತಿದೊಡ್ಡ ವಿಪಕ್ಷವು ಅದನ್ನು ನಿರಾಕರಿಸುತ್ತಿದೆ. ಮಹಾಕುಂಭಮೇಳದ ಬಗೆಗಿನ ಖರ್ಗೆಯವರ ಹೇಳಿಕೆಯಿಂದ ಕೋಟ್ಯಂತರ ಜನರಿಗೆ ನೋವಾಗಿದೆ. ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುವು ದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ? ಜನರಿಗೆ ಉದ್ಯೋಗ ಸಿಗುತ್ತದೆಯೇ? ಎಂದು ಕೇಳುವ ಖರ್ಗೆಯವರು, ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಹಾಗೂ ಕಾಂಗ್ರೆಸ್ ಪಕ್ಷ ಬೇರಾವುದೇ ಧರ್ಮಕ್ಕೆ ಹೀಗೆಯೇ ಕೇಳಲು ಸಾಧ್ಯವೇ? ಸನಾತನ ಧರ್ಮದ ವಿರುದ್ಧದ ಇಂಥ ಹೇಳಿಕೆಗಳು ನಾಚಿಕೆಗೇಡಿನ ಸಂಗತಿ" ಎಂದು ಕಿಡಿಕಾರಿದರು.
ಸನಾತನ ಧರ್ಮದಲ್ಲಿ ನಂಬಿಕೆಯಿರುವ ಪ್ರತಿಯೊಬ್ಬ ವ್ಯಕ್ತಿಯ ಮತ್ತು ಇಡೀ ದೇಶದ ಕ್ಷಮೆ ಯಾಚಿ ಸುವಂತೆ ದೇಶವಿಂದು ಸೋನಿಯಾ ಮತ್ತು ರಾಹುಲ್ ಗಾಂಧಿಯವರನ್ನು ಆಗ್ರಹಿಸುತ್ತಿದೆ. ಖರ್ಗೆಯ ವರ ಒಂದು ಅನಗತ್ಯ ಹೇಳಿಕೆಯು, ಸೋನಿಯಾ, ರಾಹುಲ್ ಮತ್ತು ಇಡೀ ಕಾಂಗ್ರೆಸ್ ಪಕ್ಷವು ಉತ್ತರ ಹೇಳಬೇಕಾಗುವಂಥ ಸಂದರ್ಭವನ್ನು ತಂದೊಡ್ಡಿದೆ.
ಖರ್ಗೆಯವರಿಗಾಗಿ ಮತ್ತು ಅವರ ಇತ್ತೀಚಿನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿರುವವರಿಗಾಗಿ, ನದಿಗಳು, ಸಂಗಮ ಮತ್ತು ಅವುಗಳ ಹಿಂದಿರುವ ಹಿಂದೂಗಳ ಭಾವನೆ, ಮಹಾಕುಂಭದಂಥ ಅಪರೂಪದ ಆಚರಣೆಗಳ ಕುರಿತಾದ ಪ್ರಬಲ ನಂಬಿಕೆಗಳ ಬಗೆಗಿನ ಕೆಲವು ಮಾಹಿತಿಯನ್ನು ಇಲ್ಲಿಒದಗಿಸುತ್ತಿರುವೆ. ಎಲ್ಲಾ ಪ್ರಯಾಗಗಳ ಪೈಕಿ ‘ಪ್ರಮುಖ’ ಎಂದು ಪರಿಗಣಿಸಲ್ಪಟ್ಟಿರುವಂಥದ್ದು ಪ್ರಯಾಗ್ರಾಜ್. ‘ಯಾ’ ಎಂದರೆ ‘ಚಲಿಸುವ’, ‘ಗಾ’ ಎಂದರೆ ‘ಜ್ಞಾನ’, ‘ಪ್ರಯಾಗ’ ಎಂದರೆ ‘ಜ್ಞಾನ ದೊಂದಿಗೆ ಮುನ್ನಡೆಯುವುದು’.
ಅಂದರೆ, ಆಧ್ಯಾತ್ಮಿಕ ಜ್ಞಾನದ ಬೆಳಕಿನಲ್ಲಿ ಮುಂದೆ ಸಾಗುವುದು ಎಂಬುದು ‘ಪ್ರಯಾಗ’ ಎಂಬ ಪದದ ಅರ್ಥ. ಪ್ರಯಾಗ್ ರಾಜ್ ಕ್ಷೇತ್ರವನ್ನು ‘ತೀರ್ಥರಾಜ್’ ಎಂದೂ ಕರೆಯುತ್ತಾರೆ. ತೀರ್ಥ ಎಂದರೆ ವ್ಯಕ್ತಿಯೊಬ್ಬರ ಆಂತರಿಕ ಆಧ್ಯಾತ್ಮಿಕ ಪ್ರಯಾಣದ ಗುರಿಯಾಗಿದೆ ಅಥವಾ ವ್ಯಕ್ತಿಯೊಬ್ಬರು ತಲು ಪಲು ಬಯಸುವ ಚರಮಸ್ಥಿತಿಯಾಗಿದೆ. ಹಿಮಾಲಯ ಪ್ರದೇಶದಲ್ಲಿನ ಎಲ್ಲಾ 5 ಪ್ರಯಾಗಗಳಲ್ಲಿ (ಪಂಚ ಪ್ರಯಾಗ) ಎರಡು ನದಿಗಳ ಸಂಗಮವಿದ್ದರೆ, ಆ ವಿಷಯದಲ್ಲಿ ಪ್ರಯಾಗ್ ರಾಜ್ ವಿಶಿಷ್ಟವಾಗಿದೆ.
ಏಕೆಂದರೆ, ಗಂಗಾ ಮತ್ತು ಯಮುನಾ ನದಿಗಳಷ್ಟೇ ಅಲ್ಲದೆ ಆ ಸಂಗಮಸ್ಥಳದಲ್ಲಿ ಅವೆರಡನ್ನು ಸೇರುವ ಮೂರನೇ ಗುಪ್ತನದಿ ಸರಸ್ವತಿಯೂ ಇದೆ. ಪಾವನನದಿ ಗಂಗೆಯು ಯಮುನೆಯೊಂದಿಗೆ ತನ್ನೆಲ್ಲಾ ಉಪನದಿಗಳ ಸತ್ವ ಮತ್ತು ಪ್ರಯೋಜನಗಳನ್ನು ಹೊತ್ತೊಯ್ಯುತ್ತಾಳೆ. ಆದ್ದರಿಂದ, ಗಂಗಾ-ಯಮುನಾ-ಸರಸ್ವತಿಯರ ಸಂಗಮದಲ್ಲಿನ ಸ್ನಾನವು ಮನುಷ್ಯನ ಅಂತರಂಗ-ಬಹಿರಂಗವನ್ನು ಪುನೀತಗೊಳಿಸುವ ಕಾರಣಕ್ಕೆ ಅತ್ಯಂತ ಪ್ರಯೋಜನಕಾರಿಯೆನಿಸಿದೆ.
ಈ ಕ್ಷೇತ್ರದಲ್ಲಿ ಎರಡು ನದಿಗಳು ವಿಭಿನ್ನ ದಿಕ್ಕುಗಳಿಂದ ಬರುತ್ತವೆ ಮತ್ತು ಅವುಗಳ ವೇಗ, ಆಳ, ಬಣ್ಣದಲ್ಲೂ ವಿಭಿನ್ನತೆಯಿದೆ. ಈ ಸ್ಥಳದ ನೀರಿನಲ್ಲಿದ್ದಾಗ ನಾವು ತೇಲುವಿಕೆಯ ವ್ಯತ್ಯಾಸವನ್ನೂ ಅನುಭವಿಸಬಹುದಾಗಿದೆ. ಗಂಗಾ ಎಂದರೆ ಜ್ಞಾನದ ಹರಿವು, ಅವಳ ಬಿಳಿಬಣ್ಣವು ಶುದ್ಧತೆಯನ್ನು ಸಂಕೇತಿಸುತ್ತದೆ. ಧರ್ಮ ಅಥವಾ ಜ್ಞಾನದ ಮೂರ್ತರೂಪವಾಗಿರುವ ಭಗವಂತನೊಂದಿಗೆ ಗಂಗೆ ಯು ನೇರ ಸಂಬಂಧ ಹೊಂದಿದ್ದಾಳೆ.
ಅವಳ ವಾಹನವಾಗಿರುವ ಮೊಸಳೆಗಳು ಅವಳ ನೀರಿನಲ್ಲಿ ಇರುತ್ತವೆ. ಮೊಸಳೆಯು ಅಜ್ಞಾನವನ್ನು ಸಂಕೇತಿಸುತ್ತದೆ. ಆದ್ದರಿಂದ, ಮೊಸಳೆಯ ಮೇಲೆ ಗಂಗೆಯು ಸವಾರಿ ಮಾಡುವುದು, ಆಧ್ಯಾತ್ಮಿಕ ಜ್ಞಾನದ ಸಹಾಯದಿಂದ ಅಜ್ಞಾನದ ನಾಶವಾಗುವುದನ್ನು ಪ್ರತಿನಿಧಿಸುತ್ತದೆ. ಯಮುನಾ ಎಂದರೆ ಸ್ವಯಂ-ಸಂಯಮ ಅಥವಾ ವೈರಾಗ್ಯದ ಸ್ವರೂಪ. ಅವಳು ಭಕ್ತಿಯನ್ನೂ ಪ್ರತಿನಿಧಿಸುತ್ತಾಳೆ.
ಅವಳ ನೀಲಿಬಣ್ಣವು ಭಕ್ತಿಯ ಆಳ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಪರಿತ್ಯಾಗವು ಕೇವಲ ಬಾಹ್ಯ ವಾಗಿರಬಾರದು. ಆಂತರಿಕ ತ್ಯಾಗವೊಂದೇ ನಿಜವಾದ ಪರಿತ್ಯಾಗ. ಹಾಗೆ ತ್ಯಜಿಸಿದವರಿಗೆ ಮಾತ್ರ ಅಮೃತತ್ವ ಪ್ರಾಪ್ತಿಯಾಗುತ್ತದೆ (ತ್ಯಾಗೇನ ಏಕೇ ಅಮೃತತ್ವ ಮಾನುಷು) ಎನ್ನುವ ಸಂದೇಶ ನೀಡುತ್ತದೆ. ಆಮೆಯು ಯಮುನೆಯ ವಾಹನವಾಗಿದ್ದು ಅದು ಅವಳ ನೀರಿನಲ್ಲಿ ಕಂಡುಬರುತ್ತದೆ.
ಆಮೆಯು ಗಟ್ಟಿಯಾದ ಚಿಪ್ಪನ್ನು ಹೊಂದಿದೆ, ಆದ್ದರಿಂದ ಇದು ಅಚಲವಾದ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಭಕ್ತಿಯನ್ನು ಬಲಪಡಿಸುವುದು ನಂಬಿಕೆ ಮಾತ್ರ. ಆಮೆಯು ಸ್ವಯಂ ನಿಯಂತ್ರಣ ಅಥವಾ ಸ್ವಯಂ ಸಂಯಮವನ್ನೂ ಪ್ರತಿನಿಧಿಸುತ್ತದೆ. ವೈರಾಗ್ಯ ಮತ್ತು ಪ್ರೀತಿಯ ಮೂರ್ತರೂಪ ವಾಗಿರುವ ಭಗವಾನ್ ಕೃಷ್ಣನೊಂದಿಗೆ ಯಮುನೆಯು ಸಂಬಂಧ ಹೊಂದಿದ್ದಾಳೆ.
ಆಧ್ಯಾತ್ಮಿಕ ಅನ್ವೇಷಕನಲ್ಲಿ, ಜ್ಞಾನವು (ಗಂಗಾ) ವೈರಾಗ್ಯ ಮತ್ತು ಭಕ್ತಿಯನ್ನು (ಯಮುನಾ) ಸಂಧಿಸಿ ದಾಗ, ಆತನ ಸ್ವಂತ ಮತ್ತು ನಿಜಸ್ವಭಾವದ ದೈವಿಕ ಅನುಭವವು ಉಂಟಾಗುತ್ತದೆ. ಇದು ಸರಸ್ವತಿ ನದಿಯಿಂದ ಪ್ರತಿನಿಧೊಸಲ್ಪಡುವ ಜ್ಞಾನೋದಯದ ಸ್ಥಿತಿ (ಮುಕ್ತಿ). ‘ಸರ’ ಪದದ ಅರ್ಥ ಸಾರ ಮತ್ತು ‘ಸ್ವಾ’ ಎಂದರೆ ಒಬ್ಬರ ಸ್ವಂತದ್ದು. ಆದ್ದರಿಂದ, ಸರಸ್ವತಿ ಎಂದರೆ ‘ಒಬ್ಬರ ಸ್ವಂತದ, ನಿಜ ವಾದ ಸ್ವಭಾವದ ಸಾಕ್ಷಾತ್ಕಾರ’ ಎಂದರ್ಥ. ಸರಸ್ವತಿಯು ಶ್ರೀ ಗೋವಿಂದನೊಂದಿಗೆ ಸಂಬಂಧ
ಹೊಂದಿದ್ದಾಳೆ.
‘ಗೋ’ ಎಂದರೆ ಜ್ಞಾನ ಮತ್ತು ‘ವಿದ್’ ಎಂದರೆ ತಿಳಿಯುವುದು. ಗೋವಿಂದ ಎಂದರೆ ‘ಜ್ಞಾನದ
ಮೂಲಕ ತಿಳಿಯಬೇಕಾದವನು’ ಎಂದರ್ಥ. ಇದು ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಇರುವ ಆತ್ಮಪ್ರಜ್ಞೆ. ಸರಸ್ವತಿಯ ವಾಹನ ಹಂಸ. ಹಂಸ ಎಂದರೆ, (ಅ)ಹಂ-ಸ ಅಥವಾ ಸ-(ಅ)ಹಂ ಎಂದರೆ “ನಾನೇ ಅವನು ಸಚ್ಚಿದಾನಂದ" ಎನ್ನುವುದಿದೆ. ಆದ್ದರಿಂದ ಯಾತ್ರೆಗಳ ಪೈಕಿ ಪ್ರಯಾಗ್ರಾಜ್ಗೆ ಪ್ರಾಮುಖ್ಯ ವಿದೆ.
‘ಯಾತ್ರಾ’ (ಯಾನ+ತ್ರಯತೆ) ಎಂದರೆ ‘ಸಂಸಾರ ಸಾಗರವನ್ನು ದಾಟಲು ನಮಗೆ ಸಹಾಯಮಾಡುವ ಆ ಚಲನೆ ಅಥವಾ ಪ್ರಯಾಣ’. ಇದು ಜ್ಞಾನ, ವೈರಾಗ್ಯ ಮತ್ತು ಭಕ್ತಿಯ ಮೂಲಕ ಸಂಪೂರ್ಣ ಪರಿಪೂರ್ಣತೆಯ ಸ್ಥಿತಿಗೆ ತೆರಳುವ ನಮ್ಮದೇ ಆದ ಆಂತರಿಕ ಆಧ್ಯಾತ್ಮಿಕ ಪ್ರಯಾಣವನ್ನು ಪ್ರತಿ ನಿಧಿಸುತ್ತದೆ ಎಂದಿದ್ದಾರೆ ಋಷಿಮುನಿಗಳು.
ಭಾರತದಲ್ಲಿ ನದಿಗಳಿಗೆ ಮಾತೃಸ್ಥಾನವನ್ನು ಕೊಟ್ಟಿದ್ದು, ಅಲ್ಲಿಗೆ ತೆರಳಿ ಸ್ನಾನ ಮಾಡುವುದೆಂದರೆ ತಾಯಿಯ ಮಡಿಲಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದು ಎಂಬುದು ಆಸ್ತಿಕರ ಭಾವನೆ. ಕೇವಲ ಶರೀರದ ಕೊಳೆ ತೊಳೆದುಕೊಳ್ಳಲು ಕೋಟ್ಯಂತರ ಜನ ಅಲ್ಲಿಗೆ ಹೋಗುವುದಲ್ಲ; ಪ್ರಯಾಗಸ್ನಾನ ಎನ್ನುವುದು ಅನಾದಿ ಕಾಲದಿಂದಲೂ ಹಿಂದೂಗಳು ಪಾಲಿಸಿಕೊಂಡು ಬಂದ ಆಚರಣೆಯಾಗಿದೆ. ಇದು ನದಿನೀರಿನ ಸಂಗಮ ಮಾತ್ರವಾಗಿರದೆ, ಹಿಮಾಲಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ತಪೋನಿರತರಾಗಿರುವ ಕೋಟ್ಯಂತರ ಸಂತರುಗಳ ಸಮಾಗಮವೂ ಆಗಿದೆ.
ಹಾಗಾಗಿ ಆಸ್ತಿಕರು ಈ ಅಮೃತ ಕಾಲಕ್ಕಾಗಿ ದೀರ್ಘವಾದ 12 ವರ್ಷಗಳನ್ನು ಎದುರುನೋಡುವುದು. ಹಿಂದೂ ಧಾರ್ಮಿಕ ಆಚರಣೆಗಳು ಕೇವಲ ಉದರಂಭರಣೆಯ ಮತ್ತು ಭೌತಿಕ ಬದುಕಿನ ಉದ್ದೇಶ ವನ್ನು ಹೊಂದಿರುವುದಿಲ್ಲ. ವ್ಯಕ್ತಿಯೊಬ್ಬ ಈ ಬದುಕಿಗೆ ಬರುವಾಗ ತಾನು ಕಟ್ಟಿಕೊಂಡು ಬಂದ ಪಾಪರಾಶಿಗಳನ್ನು ಕಳೆದುಕೊಂಡು, ಪುಣ್ಯವನ್ನು ಸಂಪಾದಿಸಿ ಅಮೃತತ್ವವನ್ನು ಸಾಧಿಸುವುದು ಈ ಆಚರಣೆಗಳ ಉದ್ದೇಶ. ಅಮೃತತ್ವವೆಂದರೆ ಸಾವಿಲ್ಲದ ಸ್ಥಿತಿ, ಸಾಯಬಾರದು ಎಂದರೆ ಮತ್ತೆ ನಾವು ಹುಟ್ಟಬಾರದು. ಹಾಗೆ, ಜನನ-ಮರಣ ಚಕ್ರದಿಂದ ಈಚೆ ಬಂದು, ಮೋಕ್ಷ ಸಾಮ್ರಾಜ್ಯದತ್ತ ದಾಪು ಗಾಲಿಡುವುದೇ ಈ ಎಲ್ಲ ಆಚರಣೆಗಳ ಹಿಂದಿರುವ ಉದ್ದೇಶವಾಗಿರುತ್ತದೆ.
ಖರ್ಗೆಯವರ ಹೇಳಿಕೆಯಿಂದ ಆಸ್ತಿಕರ ಮೇಲೆ ಯಾವುದೇ ಗಂಭೀರ ಪರಿಣಾಮವಾದಂತೇನೂ ಕಂಡುಬರುತ್ತಿಲ್ಲ. ಪ್ರಯಾಗರಾಜ್ಗೆ ಬರುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಇವರ ಹೇಳಿಕೆ ಯಿಂದ ಸಮಸ್ತ ಆಸ್ತಿಕರಿಗೆ ನೋವಾಗಿರುವುದು ನಿಜವಾದರೂ, ಯಾರೂ ಇದನ್ನು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿಲ್ಲ. ‘ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ’ ಅಂದರೆ, ಯಾವುದೇ ಪರೋಪಕಾರದ ಕಾರ್ಯಗಳು ಪುಣ್ಯಸಂಪಾದನೆಗೆ ಸಾಧನವಾದರೆ, ಅನ್ಯರಿಗೆ ಪೀಡನೆ
ಉಂಟು ಮಾಡುವುದು ಪಾಪಕಾರ್ಯ ಎನ್ನುವುದು ಸನಾತನ ಸಂಸ್ಕೃತಿಯ ನಂಬಿಕೆ.
ಈ ನಂಬಿಕೆಯ ಪ್ರಕಾರ ಕೋಟ್ಯಂತರ ಹಿಂದೂ ಭಾವನೆಗಳಿಗೆ ಪೀಡನೆ ಉಂಟುಮಾಡಿದ ಖರ್ಗೆ ಯವರ ಹೇಳಿಕೆ ಪಾಪಕಾರಕವಾಗುತ್ತದೆ. ಅದರ ಮಾರ್ಜನೆಗೆ ಅವರು ಯಾವ ತೀರ್ಥದಲ್ಲಿ ಡುಬುಕಿ
ಹೊಡೆಯುತ್ತಾರೋ ತಿಳಿಯದು. ಇನ್ನು, ಈ ಮಹಾಕುಂಭದಿಂದ ಆಗುವ ಲಾಭ-ನಷ್ಟದ ಕುರಿತು
ಮಾತನಾಡಿದ ಖರ್ಗೆಯವರಿಗೆ, ಸರಕಾರದಿಂದ ಈ ಮಹಾಕುಂಭಕ್ಕೆ ಅನುದಾನಿಸಿದ ಮೊತ್ತವೆಷ್ಟು, ಸರಕಾರಕ್ಕೆ ಬರುವ ಆದಾಯವೆಷ್ಟು ಎಂಬುದನ್ನೂ, ಈ ಮೇಳವು ಎಷ್ಟು ಸಹಸ್ರ ಕುಟುಂಬಗಳಿಗೆ ಆದಾಯಮೂಲವಾಗಿ ಅನ್ನ ನೀಡಲಿದೆ ಎಂಬುದನ್ನೂ ಮಾಧ್ಯಮಗಳ ಮೂಲಕ ಅನೇಕರು ಬಿಡಿಸಿ ತಿಳಿಸಿದ್ದಾರೆ.
ಇನ್ನು, ಕರ್ಮಸಿದ್ಧಾಂತದ ಬಗ್ಗೆ ಮಾತನಾಡುತ್ತಿರುವ ತಥಾಕಥಿತ ಜ್ಞಾನಿಗಳಿಗೆ ಹೇಳಬಹು ದಾದದ್ದು, ‘ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಮ’, ಅಂದರೆ ನಾವು ಮಾಡಿದ ಒಳ್ಳೆಯ ಕರ್ಮಗಳಿಗೆ ಒಳ್ಳೆಯ ಫಲವನ್ನೂ, ಕೆಟ್ಟ ಕರ್ಮಗಳಿಗೆ ಕೆಟ್ಟ ಫಲವನ್ನೂ ಅವಶ್ಯವಾಗಿ ಅನುಭವಿಸಬೇಕಾಗುತ್ತದೆ ಎಂದರ್ಥ.
ಭಾರತದ ಭೂಪಟದಲ್ಲಿ ಇಂದು ಕಾಂಗ್ರೆಸ್ಗೆ ಒದಗಿರುವ ಸ್ಥಿತಿಗೆ, ಅದರ ಹಿಂದಿನ ಕರ್ಮಗಳೇ ಕಾರಣ ಎನ್ನಬಹುದೇನೋ! ಕರ್ಮಸಿದ್ಧಾಂತದಲ್ಲಿ ನಂಬಿಕೆಯಿರುವವರೇ ಇದನ್ನು ಹೇಳಬೇಕು. ಒಂದಂತೂ ಸತ್ಯ, ಒಂದು ವರ್ಗದವರನ್ನು ಮೆಚ್ಚಿಸಲೆಂದು ಬಹುಸಂಖ್ಯಾತರನ್ನು ಕೆಣಕುತ್ತಾ ಸಾಗಿದರೆ ಖರ್ಗೆಯವರ ಪಕ್ಷಕ್ಕೆ ಅಧಿಕಾರವು ತಿರುಕನ ಕನಸಾಗಿಯೇ ಉಳಿಯುತ್ತದೆ. ಕೊನೆಗೊಂದು ಮಾತು: ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರೂ ಹಿಂದೆ ಕುಂಭಮೇಳದ ಸಂದರ್ಭದಲ್ಲಿ ಪ್ರಯಾಗ್ರಾಜ್ಗೆ ಭೇಟಿಯಿತ್ತಿದ್ದರು ಎಂದು ತಿಳಿದುಬಂದಿದೆ. ಇವರೆಲ್ಲ ಯಾವ ಉದ್ದೇಶದಿಂದ ಬಂದಿದ್ದರು ಎಂಬುದನ್ನು ಖರ್ಗೆಯವರೇ ಹೇಳಬೇಕು.