ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಏರ್‌ ಇಂಡಿಯಾ, ಫೇರ್‌ ಇಂಡಿಯಾ ಆಗುವುದು ಯಾವಾಗ ?

ಭೂಮಿ ಬಿಟ್ಟು ಬಾನಿಗೆ ನೆಗೆದು ನಿಮಿಷವಾಗುವುದರ ಒಳಗೆ ವಿಮಾನ ಭಸ್ಮವಾಗಿತ್ತು. ಪೈಲಟ್ ಬೆವರುವುದಕ್ಕಿಂತ ಮೊದಲೇ ಪ್ರಯಾಣಿಕರೂ ಬೆಂಕಿಯಲ್ಲಿ ಬೆಂದು ಹೋದರು. ನೀವು ಲಂಡನ್ನಿಗೇ ಹೊರಡಿ, ಆಕಾಶಕ್ಕೇ ಹಾರಿ, ಕಾಲ ಬಂದಾಗ ತಾನು ಮಾತ್ರ ಬೆನ್ನು ಬಿಡುವುದಿಲ್ಲ ಎಂದು ಕಾಲ ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾನೆ.

ಏರ್‌ ಇಂಡಿಯಾ, ಫೇರ್‌ ಇಂಡಿಯಾ ಆಗುವುದು ಯಾವಾಗ ?

ವಿದೇಶವಾಸಿ

dhyapaa@gmail.com

ವಿಮಾನದ ಮುಂದೆ ಇರುವ ಫ್ಯಾನ್ ತಿರುಗುವಷ್ಟೂ ಹೊತ್ತು ಪೈಲಟ್ ತಣ್ಣಗಿರುತ್ತಾನೆ. ಒಮ್ಮೆ ಅದು ತಿರುಗುವುದು ನಿಂತರೆ ಆತ ಬೆವರುತ್ತಾನೆ’ ಎನ್ನುವ ಮಾತಿದೆ. ಆದರೆ ಮೊನ್ನೆ ಅಹಮದಾ ಬಾದ್‌ ನಿಂದ ಲಂಡನ್‌ಗೆ ಹೋಗಬೇಕಾಗಿದ್ದ ವಿಮಾನದ ಫ್ಯಾನ್ ತಿರುಗುತ್ತಿತ್ತೋ, ನಿಂತಿತೋ ಎಂಬುದು ಗೊತ್ತಾಗುವುದರ ಒಳಗೆ ಎಲ್ಲವೂ ಮುಗಿದು ಹೋಗಿತ್ತು.

ಭೂಮಿ ಬಿಟ್ಟು ಬಾನಿಗೆ ನೆಗೆದು ನಿಮಿಷವಾಗುವುದರ ಒಳಗೆ ವಿಮಾನ ಭಸ್ಮವಾಗಿತ್ತು. ಪೈಲಟ್ ಬೆವರುವುದಕ್ಕಿಂತ ಮೊದಲೇ ಪ್ರಯಾಣಿಕರೂ ಬೆಂಕಿಯಲ್ಲಿ ಬೆಂದು ಹೋದರು. ನೀವು ಲಂಡನ್ನಿಗೇ ಹೊರಡಿ, ಆಕಾಶಕ್ಕೇ ಹಾರಿ, ಕಾಲ ಬಂದಾಗ ತಾನು ಮಾತ್ರ ಬೆನ್ನು ಬಿಡುವುದಿಲ್ಲ ಎಂದು ಕಾಲ ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾನೆ.

ಸದ್ಯ ಯಮನ ವಿರುದ್ಧ ನಾವು ಮಾಡಲು ಸಾಧ್ಯವಾಗಬಹುದಾದದ್ದು ಎಂದರೆ, ಮೃತರಿಗೆ ಶ್ರದ್ಧಾಂ ಜಲಿ ಸಲ್ಲಿಸುವುದು ಮಾತ್ರ. ವಿಮಾನ ಅಪಘಾತಕ್ಕೆ ಪ್ರಮುಖವಾಗಿ ಮೂರು ಕಾರಣಗಳು. ಒಂದು ಮನುಷ್ಯ ಮಾಡುವ ತಪ್ಪಿನಿಂದ ನಡೆಯುವುದು, ಇನ್ನೊಂದು ತಂತ್ರಜ್ಞಾನದ ತೊಡಕಿನಿಂದ ಸಂಭವಿಸುವುದು, ಮತ್ತೊಂದು ಹವಾಮಾನದ ವೈಪರೀತ್ಯದಿಂದ ಆಗುವುದು. ಪೈಲಟ್‌ಗಳ ತಪ್ಪಿನಿಂದ ಶೇ.50ಕ್ಕೂ ಹೆಚ್ಚು ವಿಮಾನ ಅಪಘಾತಗಳು ಸಂಭವಿಸಿದರೆ, ಶೇ.25ರಷ್ಟು ತಂತ್ರಜ್ಞಾನ, ಶೇ.12ರಷ್ಟು ಹವಾಮಾನದಿಂದಾಗಿ ಅಪಘಾತ ಸಂಭವಿಸುತ್ತದೆ ಎಂದು ವರದಿ ಹೇಳುತ್ತದೆ.

ಮೊನ್ನೆಯ ಅಪಘಾತ ಪೈಲಟ್‌ಗಳ ತಪ್ಪಿನಿಂದ ಆದದ್ದೇ? ತಂತ್ರಜ್ಞಾನದ ವಿಫಲತೆಯಿಂದ ಆದದ್ದೇ? ಇನ್ನೂ ತಿಳಿಯಬೇಕಾಗಿದೆ. ಮೊನ್ನೆಯ ಘಟನೆಗೆ ಹವಾಮಾನ ಕಾರಣವಲ್ಲ ಎನ್ನುವುದು ಯಾರ ಕಣ್ಣಿಗಾದರೂ ಕಾಣುವಷ್ಟು ಸ್ಪಷ್ಟವಾಗಿದೆ. ಇನ್ನು ಪೈಲಟ್‌ಗಳ ತಪ್ಪಿನಿಂದ ಆಗಿದೆಯೇ ಎಂದರೆ, ಆ ವಿಮಾನದಲ್ಲಿದ್ದ ಇಬ್ಬರ ಪೈಕಿ, ಒಬ್ಬ ಪೈಲಟ್‌ಗೆ ಎಂಟು ಸಾವಿರಕ್ಕೂ ಹೆಚ್ಚು ತಾಸು ವಿಮಾನ ಹಾರಿಸಿದ ಅನುಭವವಿದ್ದರೆ, ಜತೆಯಲ್ಲಿದ್ದ ಪೈಲಟ್‌ಗೆ ಒಂದು ಸಾವಿರಕ್ಕೂ ಹೆಚ್ಚು ಗಂಟೆ ವಿಮಾನ ಹಾರಿಸಿದ ಅನುಭವವಿತ್ತು.

ಇದನ್ನೂ ಓದಿ: Kiran Upadhyay Column: ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ಆದ್ದರಿಂದ, ಆ ಕಾರಣವೂ ಇರಲಿಕ್ಕಿಲ್ಲ ಎಂದೇ ಅನಿಸುತ್ತದೆ. ಇನ್ನು ಉಳಿದಿರುವುದು ತಂತ್ರಜ್ಞಾನ ಮಾತ್ರ. ವಿಮಾನ 16 ಗಂಟೆಗಳಿಗಿಂತಲೂ ಹೆಚ್ಚು ಹಾರಾಡಿ ಬಂದಿತ್ತು, ಪುನಃ ಅದನ್ನು ಹಾರಾಟಕ್ಕೆ ಅಣಿಗೊಳಿಸಲಾಯಿತು, ವಿಮಾನದ ಎಂಜಿನ್ ನಿಂತುಹೋಯಿತು, ವಿಮಾನದ ಪೆಟ್ರೋಲ್ ಟ್ಯಾಂಕಿನಲ್ಲಿ ಒಂದೂವರೆ ಲಕ್ಷ ಲೀಟರ್ ಗಿಂತಲೂ ಹೆಚ್ಚು ಪೆಟ್ರೋಲ್ ಇತ್ತು ಇತ್ಯಾದಿ ವರದಿಗಳು ಬರುತ್ತಿದ್ದರೂ ನಿಜವಾದ ಕಾರಣ ಇನ್ನು ಮುಂದೆ ತಿಳಿಯಬೇಕು.

ಒಂದು ವಿಮಾನದಲ್ಲಿ ಎರಡು ಎಂಜಿನ್ ಇರುತ್ತವೆ, ಇತ್ತೀಚೆಗೆ ಏರ್‌ಬಸ್ ತಯಾರಿಸುತ್ತಿರುವ ವಿಮಾನದಲ್ಲಿ ನಾಲ್ಕು ಎಂಜಿನ್ ಅಳವಡಿಸಲಾಗುತ್ತಿದೆ. ಅಂಥದ್ದರಲ್ಲಿ ಎರಡೂ ಎಂಜಿನ್ ಒಟ್ಟಿಗೇ ನಿಂತುಹೋದವೇ? ಅದೂ ಟೇಕ್ ಆಫ್ ಆದ ನಿಮಿಷದ ಒಳಗೆ? ಈ ನಡುವೆ ‘ವಿಮಾನದಲ್ಲಿ ವಿದ್ಯುತ್ ಸಂಪರ್ಕ ನಿಂತು ಹೋಗಿದೆ, ಮೇಲೆ ಏರಲು ಆಗುತ್ತಿಲ್ಲ’ ಎಂದು ಪೈಲಟ್ ಸಂದೇಶ ಕಳಿಸಿದ್ದ ಎಂದೂ ಕೇಳಿ ಬರುತ್ತಿದೆ. ‌

ಏನೇ ಆದರೂ ಅಪಘಾತವಂತೂ ಆಗಿದೆ. ಅದೂ ಏರ್ ಇಂಡಿಯಾ ಸಂಸ್ಥೆಯ ವಿಮಾನದ್ದೇ ಆಗಿದೆ. ಯಾಕೋ ಏನೋ ಬಹಳ ವರ್ಷಗಳಿಂದ ಏರ್ ಇಂಡಿಯಾ ಸಂಸ್ಥೆಗೂ ಒಳ್ಳೆಯ ಹೆಸರಿಗೂ ಒಂದಕ್ಕೊಂದು ಆಗಿ ಬರುತ್ತಿಲ್ಲ ಎನ್ನುವುದಂತೂ ಸತ್ಯ.

2014ರಲ್ಲಿ ಮಲೇಷಿಯನ್ ಏರ್‌ಲೈನ್ಸ್ ಕಾಣೆಯಾದ ವಿಷಯ ನಿಮಗೆ ತಿಳಿದಿರಬಹುದು. ಅದೇ ಏರ್‌ಲೈನ್ಸ್ ವಿಮಾನ ರಷ್ಯಾದ ಮಿಸೈಲ್‌ಗೆ ಬಲಿಯಗಿ ಸುಮಾರು ಮುನ್ನೂರು ಜನ ಪ್ರಾಣ ಕಳೆದು‌ ಕೊಂಡದ್ದು ನಿಮಗೆ ಗೊತ್ತಿರಬಹುದು. ಐದು ವರ್ಷದ ಹಿಂದೆ, ಏರ್ ಜಮೈಕ ವಿಮಾನ ವೊಂದು ಅಪಘಾತಕ್ಕೆ ಒಳಗಾದ ಕಾರಣ ಇಡೀ ಸಂಸ್ಥೆಯೇ ಮುಚ್ಚಿಹೋದ ವಿಷಯವನ್ನೂ ನೀವು ಕೇಳಿರ‌ ಬಹುದು.

ಇದನ್ನೆಲ್ಲ ನೋಡಿದಾಗ ಏರ್ ಇಂಡಿಯಾ ಸಂಸ್ಥೆಯ ಭವಿಷ್ಯ ಏನು ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗುತ್ತದೆ. ಹಾಗಾದರೆ ಈ ಮೊದಲು ವಿಮಾನ ಅಪಘಾತಗಳು ನಡೆದೇ ಇಲ್ಲವೇ? ಕಳೆದ 50 ವರ್ಷದಲ್ಲಿ 50000ಕ್ಕೂ ಹೆಚ್ಚು ಜನ ವಿಮಾನ ಅಪಘಾತದಲ್ಲಿ ಮೃತಪಟ್ಟಿ ದ್ದಾರೆ. 40000ಕ್ಕೂ ಹೆಚ್ಚು ಜನ ಗಾಯಾಳುಗಳಾಗಿದ್ದಾರೆ.

ಒಂದು ವಿಮಾನದ ಆಯುಷ್ಯ 30 ವರ್ಷಗಳು ಎಂದು ಹೇಳುತ್ತಾರೆ. ಅದೇ ಹೌದಾದರೆ, ಮೊನ್ನೆ ಅಪಘಾತಕ್ಕೆ ಒಳಗಾದ ವಿಮಾನ ಇನ್ನೂ ಅರ್ಧ ಅಯುಷ್ಯವನ್ನೂ ಮುಗಿಸಿರಲಿಲ್ಲ. ಆದರೆ, ಏರ್ ಇಂಡಿಯಾದ ವಿಮಾನ ಅಪಘಾತಕ್ಕೊಳಗಾದಷ್ಟು, ತಾಂತ್ರಿಕ ದೋಷಕ್ಕೆ ಒಳಪಟ್ಟಷ್ಟು ಬೇರೆ ಯಾವುದೇ ಸಂಸ್ಥೆಯ ವಿಮಾನವೂ ಇರಲಿಕ್ಕಿಲ್ಲ. ಇದು ನಿಜವಾಗಿಯೂ ಚಿಂತೆಯ ವಿಚಾರ. ಇದಕ್ಕೆ ಕಾರಣ ಮತ್ತು ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವೂ ಹೌದು, ಸದ್ಯಕ್ಕೆ ಅವಶ್ಯಕವೂ ಹೌದು.

ಏಕೆಂದರೆ ಏರ್ ಇಂಡಿಯಾ ಕೇವಲ ಒಂದು ಸಂಸ್ಥೆಯ ವಿಮಾನವಲ್ಲ, ಭಾರತದ ‘ನ್ಯಾಷನಲ್ ಕ್ಯಾರಿಯರ್’! ಏರ್ ಇಂಡಿಯಾ ‘ಫೇರ್ ಇಂಡಿಯಾ’ ಆಗುವುದು ಯಾವಾಗ? ನಾನು fare (ದರ) ಬಗ್ಗೆ ಹೇಳುತ್ತಿಲ್ಲ, fair (ಒಳಿತು) ಬಗ್ಗೆ ಹೇಳುತ್ತಿದ್ದೇನೆ. ಕಾಲ್ತುಳಿತದಲ್ಲಿ ಮೃತಪಟ್ಟರೆ ಹತ್ತು ಲಕ್ಷ, ಬಸ್ ಅಪಘಾತದಲ್ಲಿ ಮೃತಪಟ್ಟರೆ ಐದು ಲಕ್ಷ, ರೇಲ್ವೆ ಅವಘಡದದರೆ ಇಪ್ಪತ್ತು ಲಕ್ಷ, ಯಾವುದೋ ಸೇತುವೆ ಬಿದ್ದು ಹೋದರೆ, ಅಗ್ನಿ ಅವಘಡಕ್ಕೆ ಸಿಕ್ಕಿ ಸತ್ತರೆ, ಮಳೆ, ಗಾಳಿ ಇತ್ಯಾದಿ ನೈಸರ್ಗಿಕ ವಿಕೋಪಕ್ಕೆ ಬಲಿಯಾದರೆ ಇಂತಿಷ್ಟು ಲಕ್ಷ, ಆದರೆ ವಿಮಾನ ಅಪಘಾತದಲ್ಲಿ ಸತ್ತವರ ಮನೆಯವರಿಗೆ ಕೋಟಿ ಲೆಕ್ಕದಲ್ಲಿ ಪರಿಹಾರ ಯಾಕೆ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

“ಉಳಿದವರ ಜೀವಕ್ಕಿಂತ ವಿಮಾನದಲ್ಲಿ ಕುಳಿತವರ ಅಥವಾ ಹಾರಾಡುವವರ ಜೀವದ ಬೆಲೆ ಹೆಚ್ಚೇ?" ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ. ಅದು ಸಹಜವೇ ಬಿಡಿ. ಯಾವುದೇ ಜೀವಕ್ಕಾದರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲಿ ತೊಂಬತ್ತು ವರ್ಷದ, ಇಂದೋ ನಾಳೆಯೋ ಲೋಕ ತ್ಯಜಿಸಬಹು ದಾದ ವೃದ್ಧರೇ ಇರಬಹುದು ಅಥವಾ ಮೂರು ತಿಂಗಳಿನ, ಇನ್ನೂ ಜಗತ್ತನ್ನು ಕಾಣಬೇಕಾದ ಶಿಶುವೇ ಇರಬಹುದು. ಇಂತಿಷ್ಟು ವಯಸ್ಸಿನ ಜೀವಕ್ಕೆ ಅಥವಾ ಇಂಥಲ್ಲಿ ಬದುಕುವ ಜೀವಕ್ಕೆ ಇಂತಿಷ್ಟೇ ಬೆಲೆ ಎಂದು ಹೇಳುವ ಯಾವುದೇ ಮಾಪನ ಇದುವರೆಗೆ ಭೂಮಿಯ ಯಾವ ಭಾಗದಲ್ಲೂ ಇಲ್ಲ.

ಆದರೆ ವಿಮಾನ ಅಪಘಾತದಲ್ಲಿ ಸತ್ತರೆ ಲೆಕ್ಕಾಚಾರ ಬೇರೆ. ಸತ್ತವರ ಸಂಬಂಧಿಗಳಿಗೆ ಸುಮಾರು ಒಂದೂವರೆ ಕೋಟಿ ರುಪಾಯಿಗಳ ಪರಿಹಾರವನ್ನು ಪಾವತಿಸಲೇಬೇಕಾಗುತ್ತದೆ. ಇದಕ್ಕೆ ಕಾರಣ, 1999ರ ‘ಮಾನ್ಟ್ರಿಯಲ್ ಕನ್ವೆನ್ಷನ್’. ICAO (ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ) ಒಪ್ಪಂದದ ಪ್ರಕಾರ, ವಿಮಾನ ಅಪಘಾತದಲ್ಲಿ ಬಲಿಯಾದವರ ಕುಟುಂಬಕ್ಕೆ ಒಂದೂವರೆ ಕೋಟಿ ರುಪಾಯಿಗಳ ಪರಿಹಾರವನ್ನು ಪಾವತಿಸಬೇಕಾಗುತ್ತದೆ.

ವಿಮಾನದ ನಷ್ಟಕ್ಕೆ ವಿಮಾ ಕಂಪನಿಗಳಿಂದ ಸಾಕಷ್ಟು ಪರಿಹಾರವನ್ನು ಕಂಪನಿಗಳು ಪಡೆಯುತ್ತವೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಆರಂಭಿಕವಾಗಿ ಅಥವಾ ಮಧ್ಯಂತರವಾಗಿ ಒಂದಷ್ಟು ಪರಿಹಾರವನ್ನು ಘೋಷಿಸಿದರೂ, ಅಂತಿಮ ಪರಿಹಾರದ ಮೊತ್ತವಾಗಿ ಒಂದೂವರೆ ಕೋಟಿ ರುಪಾಯಿ ಕೊಡಲೇಬೇಕಾಗುತ್ತದೆ.

ಇಂಥ ಒಂದು ಒಪ್ಪಂದಕ್ಕೆ ಭಾರತ 2009ರಲ್ಲಿ ಸಹಿ ಹಾಕಿತ್ತು. ಇದು ಕೂಡ ಸುಮ್ಮನೆ ಬಾಯಿಗೆ ಬಂದಂತೆ ಹೇಳುವ ಲೆಕ್ಕವಲ್ಲ. ಇದಕ್ಕೆ SDR (ಸ್ಪೆಷಲ್ ಡ್ರಾಯಿಂಗ್ ರೈಟ್ಸ್) ಗಳನ್ನು ಬಳಸಿಕೊಂಡು ಪರಿಹಾರದ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಇದರ ಪ್ರಕಾರ, ಒಂದು SDR ಗೆ 1.33 ಅಮೆರಿಕನ್ ಡಾಲರ್‌ಗಳನ್ನು ಪರಿಹಾರವಾಗಿ ಕೊಡಬೇಕಾಗುತ್ತದೆ.

2024 ರ ಅಂತ್ಯದ ವೇಳೆಗೆ SDR ಸುಮಾರು ಒಂದು ಲಕ್ಷದ ಮೂವತ್ತು ಸಾವಿರದಷ್ಟಿತ್ತು. ಇದೇ ಲೆಕ್ಕವನ್ನು ಹಿಡಿದು ಹೊರಟರೆ, ಮೊನ್ನೆ ನಡೆದ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವರ ಮನೆಯವರಿಗೆ ಅಥವಾ ಸಂಬಂಧಿಕರಿಗೆ ಸುಮಾರು ಮುನ್ನೂರ ಅರವತ್ತು ಕೋಟಿ ರುಪಾಯಿ ಗಳನ್ನು ನೀಡಬೇಕಾಗುತ್ತದೆ.

ಆದರೆ ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ಏಕೆಂದರೆ ಮೊನ್ನೆ ವಿಮಾನ ಅಪಘಾತವಾದಾಗ ಕಟ್ಟಡಗಳು, ಇನ್ನೂ ಕೆಲವು ಪ್ರಾಣಹಾನಿಯೂ ಆಗಿದೆ. ಅಂತೆಯೇ ಕೆಲವು ಗಾಯಾಳುಗಳು ಆಸ್ಪತ್ರೆಯಲ್ಲಿದ್ದಾರೆ. ಇಲ್ಲಿ ಮೂರನೇ ವ್ಯಕ್ತಿಯ, ಆಸ್ತಿ ಹಾನಿಯ ಹೊಣೆಗಾರಿಕೆಯೂ ವಿಮಾನ ಸಂಸ್ಥೆಯ ಜವಾಬ್ದಾರಿ ಯಾಗುತ್ತದೆ. ಅದು ಎಷ್ಟು, ಏನು ಎಂಬುದು ಇನ್ನೂ ನಿರ್ಧಾರವಾಗಬೇಕು. ಏರ್ ಇಂಡಿಯಾ ಸಂಸ್ಥೆ ಇದೇ ಏಪ್ರಿಲ್ ಒಂದನೇ ತಾರೀಖಿನಂದು ಬಹುರಾಷ್ಟ್ರೀಯ AIG ಸಂಸ್ಥೆಯೊಂದಿಗೆ ಇಪ್ಪತ್ತು ಬಿಲಿಯನ್ ಡಾಲರ್ (ಸುಮಾರು ಒಂದು ಲಕ್ಷದ ಎಪ್ಪತ್ತು ಸಾವಿರ ಕೋಟಿ ರೂಪಾಯಿ) ವಿಮೆಯ ಪಾಲಿಸಿಯನ್ನು ನವೀಕರಿಸಿತ್ತು.

ಆದ್ದರಿಂದ ಇಲ್ಲಿ ಏರ್ ಇಂಡಿಯಾಕ್ಕೆ ಹಣದ ಪೆಟ್ಟು ಬೀಳುವುದಿಲ್ಲ. ಆದರೆ ಹೆಸರಿಗೆ ಅಂಟುವ ಕಳಂಕ ತೊಳೆದುಕೊಳ್ಳುವುದು ಹೇಗೇ? ಈಗಲೂ ಹೇಳುತ್ತೇನೆ, ರಸ್ತೆ, ರೈಲು, ಜಲ ಈ ಎಲ್ಲಾ ಸಾರಿಗೆ ಸಂಪರ್ಕಗಳಿಗಿಂತಲೂ ವಿಮಾನ ಹೆಚ್ಚು ಸುರಕ್ಷಿತ. ಅಷ್ಟೇ ಅಲ್ಲ, ನನಗಂತೂ ವಿಮಾನ ಮನುಷ್ಯನ ಬದುಕಿಗೆ ಸ್ಪೂರ್ತಿಯಾಗಿಯೇ ಕಾಣುತ್ತದೆ. ‘ನಾವು ಎಣಿಸಿದಂತೆ ಏನೂ ಆಗುತ್ತಿಲ್ಲ, ಇಲ್ಲಿ ಪ್ರತಿಯೊಂದು ಹೆಜ್ಜೆಗೂ ಅಡೆತಡೆಗಳಿವೆ, ನಾವು ಮಾಡುವ ಕಾರ್ಯದಲ್ಲಿ ಸಾಕಷ್ಟು ಕಂಟಕಗಳು ಎದುರಾಗುತ್ತವೆ’ ಎಂದು ಅನಿಸಿದರೆ, ಒಮ್ಮೆ ವಿಮಾನವನ್ನು ನೆನಪಿಸಿಕೊಂಡರೆ ಸಾಕು.

ನೋಡಿ, ಒಂದು ವಿಮಾನ ತಯಾರಿಸಲು ಒಂದು ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು ಕೆಲಸ ಮಾಡುತ್ತಾರೆ. ಎರಡು ಸಾವಿರಕ್ಕೂ ಹೆಚ್ಚು ಉಳಿದ ತಾಂತ್ರಿಕ ಸಿಬ್ಬಂದಿ ವರ್ಗ ಕೆಲಸ ಮಾಡುತ್ತದೆ. ವಿಮಾನದ ಒಂದೊಂದು ಭಾಗ ಒಂದೊಂದು ಕಡೆ ತಯಾರಾಗುತ್ತದೆ, ಇವನ್ನೆಲ್ಲ ಜೋಡಿಸಲು ಲಕ್ಷಗಟ್ಟಲೆ ರಿವೆಟ್ ಬಳಸಲಾಗುತ್ತದೆ. ‘ಎ-350’ ಮಾದರಿಯ ಒಂದು ವಿಮಾನದಲ್ಲಿ ಸುಮಾರು 25 ಲಕ್ಷ ರಿವೆಟ್ ಮತ್ತು ಸ್ಕ್ರೂ ಬಳಸುತ್ತಾರೆ.

ಎಂಜಿನ್ ತಯಾರಿಸುವುದರಿಂದ ಹಿಡಿದು, ಗಾಜು ತಯಾರಿಸುವುದು, ಕ್ಯಾಬಿನೆಟ್ ತಯಾರಿಸುವುದು, ಹೀಗೆ ಒಟ್ಟೂ ಒಂಬತ್ತು ವಿಭಾಗದ ಜನರು ಒಟ್ಟಿಗೇ ಒಂದು ವಿಮಾನ ಕಟ್ಟುವ ಕೆಲಸದಲ್ಲಿ ತೊಡಗು ತ್ತಾರೆ. ಒಂದು ವಿಮಾನ ತಯಾರಿಸಲು ಸುಮಾರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಪೂರೈಕೆ ದಾರರು ಸರಕು ತಯಾರಿಸಿ ಕಳುಹಿಸುತ್ತಾರೆ.

ನೂರರಿಂದ ನೂರೈವತ್ತು ಅಡಿ ಉದ್ದವಿರುವ ಒಂದು ವಿಮಾನದಲ್ಲಿ ಹೆಚ್ಚು ಕಮ್ಮಿ ಹನ್ನೆರಡು ಕಿಲೋಮೀಟರ್‌ನಷ್ಟು ಇಲೆಕ್ಟ್ರಿಕಲ್ ವೈರಿಂಗ್ ಇರುತ್ತದೆ. ಒಂದು ವಿಮಾನಕ್ಕೆ ಬಣ್ಣ ಬಳಿಯಬೇಕು ಎಂದರೆ ಒಂದು ಟನ್ ಪೇಂಟ್ ಬೇಕಾಗುತ್ತದೆ. ಬಣ್ಣ ಬಡಿಯಲು ಸುಮಾರು ಹದಿನೈದು ದಿನ ಬೇಕಾಗುತ್ತದೆ. ಅಂದರೆ ಸುಮಾರು ಹನ್ನೆರಡರಿಂದ ಹದಿನೈದು ಜನರ ತೂಕದಷ್ಟು ಬಣ್ಣವೇ ಬೇಕು!

ಒಂದು ವಿಮಾನ ತಯಾರಿಸಲು ಎಂಟರಿಂದ ಒಂಬತ್ತು ತಿಂಗಳು ಸಮಯ ಬೇಕಾಗುತ್ತದೆ. ಸುಮಾರು ಒಂಬತ್ತು ತಿಂಗಳ ನಂತರ ಒಂದು ವಿಮಾನದ ಹೆರಿಗೆ ಆಗುತ್ತದೆ. ಹುಟ್ಟಿದ ಮಗು ಒಮ್ಮೆಲೆ ನಡೆಯುವುದಿಲ್ಲ, ಓಡುವುದಿಲ್ಲ. ಮೊದಲು ಬೋರಲು ಮಲಗುತ್ತದೆ, ನಂತರ ಅಂಬೆಗಾಲಿಡುತ್ತದೆ,

ಆಮೇಲೆ ನಿಧಾನವಾಗಿ ಕೈ ಹಿಡಿದು, ಗೋಡೆ ಹಿಡಿದು ನಡೆಯುತ್ತದೆ. ನಂತರವೇ ಓಡುತ್ತದೆ. ಹಾಗೆಯೇ ಕಾರ್ಖಾನೆಯಿಂದ ತಯಾರಾಗಿ ಹೊರಬಂದ ವಿಮಾನ ಕೂಡ ಒಮ್ಮೆಲೇ ಪ್ರಯಾಣಿಕ ರನ್ನು ಹೊತ್ತು ಹಾರುವುದಿಲ್ಲ. ವಿಮಾನ ತಯಾರಿಸಿದ ಸಂಸ್ಥೆಯವರು ಖರೀದಿಸಿದ ಸಂಸ್ಥೆಯವರಿಗೆ ಪ್ರತಿನಿತ್ಯ ಮೂರು ಗಂಟೆಗಳ ಕಾಲ ಒಂದು ವಾರದವರೆಗೆ ಆ ವಿಮಾನದ ಕುರಿತಾಗಿ ತರಬೇತಿ ನೀಡುತ್ತಾರೆ.

ಅದರ ವಿಶೇಷತೆ, ತಂತ್ರಜ್ಞಾನವನ್ನು ತಿಳಿಸಿಕೊಡುತ್ತಾರೆ. ಆ ನಂತರವೇ ಅದು ಪ್ರಯಾಣಿಕರನ್ನು ಹೊತ್ತೊಯ್ಯಲು ಸಿದ್ಧವಾದಂತೆ. ವಿಮಾನವೆಂದರೆ, ಅಲ್ಲಿ ನಿಖರತೆ, ಖಚಿತತೆ, ಕಾರ್ಯದಕ್ಷತೆ, ಎಲ್ಲವೂ ನೂರಕ್ಕೆ ನೂರರಷ್ಟಿರಬೇಕು. ಒಂದಿಂಚೂ ಆಚೆ ಈಚೆ ಆಗುವಂತಿಲ್ಲ. ಅಷ್ಟು ಇರುವುದ ರಿಂದಲೇ, ಪ್ರತಿನಿತ್ಯ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ವಿಮಾನ ಆಕಾಶದಲ್ಲಿ ಹಾರಾಡು ತ್ತಿರುತ್ತವೆ.

ಅವೆಲ್ಲವೂ ಮಳೆ, ಮೋಡ, ಬಿರುಗಾಳಿ ಇತ್ಯಾದಿ ಹವಾಮಾನ ವೈಪರೀತ್ಯಗಳನ್ನು ಎದುರಿಸಿ ಸಾಗುತ್ತವೆ. ಕೆಲವೊಮ್ಮೆ ಹಕ್ಕಿ ಬಂದು ಅಪ್ಪಳಿಸುವುದೂ, ಆಲಿಕಲ್ಲು ಬಡಿಯುವುದೂ ಇರುತ್ತವೆ. ಎಲ್ಲವನ್ನೂ ಎದುರಿಸಿ ತಲುಪಬೇಕಾದ ಗುರಿಯನ್ನು ವಿಮಾನ ತಲುಪುತ್ತದೆ. ತಂತ್ರಜ್ಞಾನ, ನಿಖರತೆ, ಖಚಿತತೆ ಎಲ್ಲವೂ ಒಟ್ಟಾಗಿ ಸೇರಿದಾಗ ಮಾತ್ರ ಇದು ಸಾಧ್ಯ. ಇಲ್ಲವಾದರೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಕಾಶದಲ್ಲಿ ಹಾರುವ ವಿಮಾನಗಳು ತರಗೆಲೆಯಂತೆ ಪಟಪಟನೆ ಧರೆಗೆ ಉದುರಿ ಬೀಳಬೇಕಿತ್ತು. ಈಗ ಮನುಷ್ಯನನ್ನು ನೋಡಿ, ಹುಟ್ಟಿದಾಗಿನಿಂದ ಬೆಳೆಯುವವರೆಗೆ ನೂರಾರು ವ್ಯಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರುತ್ತಾರೆ. ನಮ್ಮ ಅಕ್ಕ ಪಕ್ಕದ ವಾತಾವರಣ, ಪರಿಸರ ನಮ್ಮನ್ನು ಆವರಿಸಿಕೊಳ್ಳುತ್ತವೆ.

ಸಾವಿರಾರು ವಿಚಾರಗಳನ್ನು ನಾವು ಗ್ರಹಿಸುತ್ತೇವೆ, ನಮ್ಮೊಳಗೆ ಇಳಿಸಿಕೊಳ್ಳುತ್ತೇವೆ. ಶಿಕ್ಷಣ ಮುಗಿಸಿ ಮುಂದಿನ ಬದುಕನ್ನು ಕಟ್ಟಿಕೊಳ್ಳಲು ಜಗತ್ತಿನೊಂದಿಗೆ ಪೈಪೋಟಿಗೆ ಜಿಗಿಯುತ್ತೇವೆ. ಮನುಷ್ಯನಿಗೂ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಸಮಸ್ಯೆ ಇಲ್ಲದ ಒಬ್ಬನೇ ಒಬ್ಬ ಮನುಷ್ಯ ಈ ಪ್ರಪಂಚ ದಲ್ಲಿ ಇರಲಿಕ್ಕಿಲ್ಲ. ಅವುಗಳ ಗಾತ್ರದಲ್ಲಿ, ಪ್ರಮಾಣದಲ್ಲಿ ಹೆಚ್ಚು ಕಮ್ಮಿ ಇರಬಹುದಷ್ಟೇ. ಕೆಲವರಿಗೆ ಸಮಸ್ಯೆ ಅರ್ಥ ಆಗದೇ ಇರಬಹುದು, ಅದು ಬೇರೆ ವಿಷಯ.

ಎದುರಿನಿಂದ ನೂರಾರು ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿಯನ್ನು ಭೇದಿಸಿಕೊಂಡು ವಿಮಾನ ಮುನ್ನುಗ್ಗುವಂತೆ ಮನುಷ್ಯನ ಬದುಕಿನಲ್ಲಿ ಬರುವ ಕಷ್ಟಗಳಿಗೂ ಜಗ್ಗದೆ ಮುನ್ನುಗ್ಗಬೇಕು ಎನ್ನುವುದಕ್ಕೆ ವಿಮಾನ ಒಂದು ಒಳ್ಳೆಯ ಉದಾಹರಣೆ. ಆಗೊಮ್ಮೆ ಈಗೊಮ್ಮೆ ಆಯತಪ್ಪಿ ಒಂದೋ ಎರಡೋ ಅಪಘಾತಗಳಾಗುತ್ತವೆ.

ಅಪಘಾತ ತಪ್ಪಿಸಿ ಹಾರಾಟ ಮುಂದುವರಿಸಬೇಕೇ ವಿನಾ ಹಾರಾಟ ನಿಲ್ಲಿಸಬಾರದು. ಏರ್ ಇಂಡಿಯಾ ಆದರೂ ಸರಿ, ಮನುಷ್ಯ ಆದರೂ ಸರಿ.