R T Vittalmurthy Column: ಕೃಷ್ಣಭೈರೇಗೌಡ ಅಂದ್ರೆ ರಾಹುಲ್ʼಗೇಕೆ ಇಷ್ಟ?
ಇಷ್ಟಾದರೂ ಈ ಬಾರಿ ದಿಲ್ಲಿಗೆ ಹೋಗುವಾಗ ಸಿದ್ದರಾಮಯ್ಯ ಅವರ ಕ್ಯಾಂಪಿನಲ್ಲಿ ಬೇರೆಯೇ ಲೆಕ್ಕಾಚಾರ ಇತ್ತು. ಅದೆಂದರೆ, ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರಲ್ಲಿ ಅಧಿಕಾರ ಬಿಟ್ಟುಕೊಡುವ ಬಗ್ಗೆ ಪ್ರಸ್ತಾಪ ಮಾಡಬಹುದು ಮತ್ತು ಅವರು ಮನವಿ ಮಾಡಿಕೊಂಡರೆ ಸಿದ್ದರಾಮಯ್ಯ ಇಲ್ಲ ಎನ್ನಲಾರರು ಎಂಬುದು.


ಮೂರ್ತಿಪೂಜೆ
ಕಳೆದ ವಾರ ದಿಲ್ಲಿಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾಧಾನದಿಂದಲೇ ವಾಪಸ್ಸಾದರು. ಕಾರಣ? ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ನಾಯಕತ್ವದ ಪರವಾಗಿ ಮಾತನಾಡಿದರೆ, ಸೋನಿಯಾ ಗಾಂಧಿ ಯವರು ‘ಸ್ವಲ್ಪ ಕಾಲ ತಾಳ್ಮೆಯಿಂದಿರಿ’ ಅಂತ ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ತಲುಪಿಸಿದ್ದಾರಂತೆ. ಉಳಿದಂತೆ ಸಂಪುಟ ಪುನರ್ ರಚನೆಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ತನಕ ಯಾವುದಕ್ಕೂ ರಾಹುಲ್ ಗಾಂಧಿಯವರೇ ಆಗಲಿ, ಖರ್ಗೆ, ವೇಣು ಗೋಪಾಲ್ ಅವರೇ ಆಗಲಿ ಉತ್ಸುಕತೆ ತೋರಿಸಿಲ್ಲ. ಕಾರಣ? ಕರ್ನಾಟಕದಲ್ಲಿರುವ ಪಕ್ಷದ ಸರಕಾರವನ್ನು ಸ್ಥಿರವಾಗಿಸುವುದು ಹೇಗೆ ಎಂಬುದೇ ಈ ಎಲ್ಲರ ಚಿಂತೆ.
ಹೀಗಾಗಿ ಸದ್ಯದ ಪರಿಸ್ಥಿತಿ ಹಾಗೇ ಮುಂದುವರಿಯಲಿ. ಅಗತ್ಯ ಬಿದ್ದಾಗ ಸಣ್ಣ ಪುಟ್ಟ ಬದಲಾ ವಣೆ ಮಾಡಿಕೊಂಡರಾಯಿತು ಎಂಬುದು ಅವರ ಎಣಿಕೆ. ಇದ್ದುದರ ಹನಿಟ್ರ್ಯಾಪ್ ವಿವಾ ದದ ಬಗ್ಗೆ ಮಾತನಾಡುವಾಗ, ‘ಅದನ್ನು ಕೂಲಾಗಿ ಬಗೆಹರಿಸಿ’ ಅಂತ ಸಿದ್ದರಾಮಯ್ಯ ಅವರಿಗೆ ವರಿಷ್ಠರು ಹೇಳಿದ್ದಾರೆ. ಇದರರ್ಥ, ಮೇಲೆದ್ದಾಗ ಸುನಾಮಿಯಂತೆ ಕಂಡ ಹನಿ ಟ್ರ್ಯಾಪ್ ವಿವಾದ ಆದಷ್ಟು ಬೇಗ ರಗ್ಗು ಹೊದ್ದು ಮಲಗುವುದು ಗ್ಯಾರಂಟಿ.
ಇಷ್ಟಾದರೂ ಈ ಬಾರಿ ದಿಲ್ಲಿಗೆ ಹೋಗುವಾಗ ಸಿದ್ದರಾಮಯ್ಯ ಅವರ ಕ್ಯಾಂಪಿನಲ್ಲಿ ಬೇರೆ ಯೇ ಲೆಕ್ಕಾಚಾರ ಇತ್ತು. ಅದೆಂದರೆ, ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರಲ್ಲಿ ಅಧಿಕಾರ ಬಿಟ್ಟುಕೊಡುವ ಬಗ್ಗೆ ಪ್ರಸ್ತಾಪ ಮಾಡಬಹುದು ಮತ್ತು ಅವರು ಮನವಿ ಮಾಡಿ ಕೊಂಡರೆ ಸಿದ್ದರಾಮಯ್ಯ ಇಲ್ಲ ಎನ್ನಲಾರರು ಎಂಬುದು.
ಇದನ್ನೂ ಓದಿ: R T Vittal Murthy Column: ನಿಖಿಲ್ ಇಲ್ಲಿಗೆ, ಕುಮಾರಣ್ಣ ದಿಲ್ಲಿಗೆ
ಕಾರಣ? ಸೋನಿಯಾ ಗಾಂಧಿ ಅವರ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ಅಪಾರ ಗೌರವವಿದೆ. ಯಾಕೆಂದರೆ 2006ರಲ್ಲಿ ಜೆಡಿಎಸ್ನಿಂದ ಹೊರ ಬಿದ್ದು, ಅಖಿಲ ಭಾರತ ಪ್ರಗತಿಪರ ಜನತಾದಳದಲ್ಲಿ ಹೊಯ್ದಾಡುತ್ತಿದ್ದ ಸಿದ್ದರಾಮಯ್ಯ ಅವರನ್ನು ಕೈ ನೀಡಿ ಕಾಂಗ್ರೆಸ್ ಹಡಗಿಗೆ ಹತ್ತಿಸಿಕೊಂಡವರು ಸೋನಿಯಾ ಗಾಂಧಿ.
ವಸ್ತುಸ್ಥಿತಿ ಎಂದರೆ ಸಿದ್ದರಾಮಯ್ಯ ಅವರ ಪಕ್ಷ ಸೇರ್ಪಡೆಗೆ ಅವತ್ತು ರಾಜ್ಯ ಕಾಂಗ್ರೆಸ್ನ ಬಹುತೇಕ ನಾಯಕರ ವಿರೋಧವಿತ್ತು. ಕಾರಣ? ಜನಸಮುದಾಯದ ನಾಯಕರಾಗಿ ಬೆಳೆದಿದ್ದ ಸಿದ್ದರಾಮಯ್ಯ ಪಕ್ಷಕ್ಕೆ ಬಂದರೆ ತಮ್ಮ ಶಕ್ತಿ ಕುಸಿಯುತ್ತದೆ ಎಂಬ ಆತಂಕ. ಆದರೆ ಇದನ್ನು ಲೆಕ್ಕಿಸದ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡರು.
ಮುಂದೆ ಅನಿವಾರ್ಯ ಸನ್ನಿವೇಶಗಳಲ್ಲಿ ಸಿದ್ದರಾಮಯ್ಯ ಅವರಿಗೆ ಅಕಾಮಡೇಟ್ ಮಾಡಿ ಕೊಡಲು ಕೆಲವು ರಾಜಿಗಳನ್ನು ಮಾಡಿಕೊಂಡರು. ಇದೆಲ್ಲ ಸಿದ್ದರಾಮಯ್ಯ ಅವರಿಗೆ ಗೊತ್ತಲ್ಲ? ಹೀಗಾಗಿ ಸೋನಿಯಾ ಗಾಂಧಿ ಬಗ್ಗೆ ಅವರಿಗೆ ತುಂಬ ಗೌರವವಿದೆ. ಆದ್ದರಿಂದ, ಸೋನಿಯಾ ಅವರು ಸಿದ್ದರಾಮಯ್ಯ ಅವರ ಬಳಿ, “ನಾನು ಡಿ.ಕೆ.ಶಿವಕುಮಾರ್ ಅವರಿಗೆ ಮಾತು ಕೊಟ್ಟಿದ್ದೇನೆ.
ಹೀಗಾಗಿ ಅಧಿಕಾರ ಬಿಟ್ಟುಕೊಟ್ಟು ನನ್ನ ಮಾತು ನಡೆಸಿಕೊಡಿ" ಅಂತ ಹೇಳಿದರೆ ಸಿದ್ದರಾ ಮಯ್ಯ ಇಲ್ಲ ಅನ್ನಲಾರರು. ಆದರೆ ಅಧಿಕಾರ ಬಿಟ್ಟು ಕೊಡಲು ನಾನು ಸಿದ್ದ ಎನ್ನುತ್ತಲೇ ಸೋನಿಯಾ ಗಾಂಧಿ ಅವರಿಗೆ ಸ್ಪಷ್ಟ ಸಂದೇಶ ನೀಡಲು ಸಿದ್ದರಾಮಯ್ಯ ತಯಾರಾಗಿದ್ದಾರೆ. ಅದೆಂದರೆ, ‘ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲಿಯೇ ನಡೆಯಲಿ.
ಇಲ್ಲದಿದ್ದರೆ ಪಕ್ಷ ಹೋಳಾಗಿ, ಸರಕಾರ ಉರುಳುವ ಅಪಾಯವಿದೆ’ ಎನ್ನುವುದು. ಒಂದು ಸಲ ಸಿದ್ದರಾಮಯ್ಯ ಈ ಸಂದೇಶ ನೀಡಿ ಬಂದರೆ ಸೋನಿಯಾ ಗಾಂಧಿ ಯೋಚಿಸುತ್ತಾರೆ. ಎಲ್ಲ ಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ಜತೆ ಚರ್ಚಿಸುತ್ತಾರೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಕತ್ವ ಬದಲಾವಣೆಗೆ ಒಪ್ಪುವುದಿಲ್ಲ ಎಂಬುದು ಸಿದ್ದರಾಮಯ್ಯ ಕ್ಯಾಂಪಿನ ಲೆಕ್ಕಾಚಾರ.
ಹಾಗಂತ, ಇಂಥ ಬೆಳವಣಿಗೆ ಯಾವಾಗ ನಡೆಯುತ್ತದೆ ಎಂಬುದರ ನಿಖರ ಅಂದಾಜೂ ಅವರಿಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ದಿಲ್ಲಿ ಭೇಟಿಯ ಸಂದರ್ಭದಲ್ಲಿ ಇಂಥ ಬೆಳವಣಿಗೆ ಆಗಬಹುದು ಅಂತ ಅವರು ಯೋಚಿಸುತ್ತಾರೆ. ಈ ಬಾರಿಯೂ ಇಂಥ ಯೋಚನೆ ಆ ಕ್ಯಾಂಪಿನ ಪ್ರಮುಖರಲ್ಲಿ ಸುಳಿದಿತ್ತು. ಆದರೆ ಎಂದಿನಂತೆ ಈ ಬಾರಿಯೂ ಅದು ನಿಜವಾ ಗಲಿಲ್ಲ.
ಕುತೂಹಲದ ಸಂಗತಿ ಎಂದರೆ ಇಂಥ ಕಾಲಘಟ್ಟದ ರಾಜ್ಯ ಕಾಂಗ್ರೆಸ್ನ ಬಹುತೇಕ ನಾಯಕ ರಿಗೆ ರಾಹುಲ್ ಗಾಂಧಿಯವರ ನಿಜ ಕನಸುಗಳ ಮಾಹಿತಿ ಸಿಗುತ್ತಿದೆ. ಮತ್ತದು ಸಖತ್ತು ಇಂಟರೆಸ್ಟಿಂಗ್ ಆಗಿದೆ. ಕೃಷ್ಣ ಭೈರೇಗೌಡ ಅಂದ್ರೆ ರಾಹುಲ್ಗಿಷ್ಟ ಈ ಮಾಹಿತಿಗಳ ಪ್ರಕಾರ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸುವ ಇರಾದೆ ರಾಹುಲ್ ಗಾಂಧಿ ಅವರಿಗಿಲ್ಲ.
ಕಾರಣ? ಸ್ಥಿರವಾಗಿರುವ ಸರಕಾರ ಅಲುಗಾಡುವುದು ಅವರಿಗೆ ಬೇಕಿಲ್ಲ. ಇವತ್ತು ಅಹಿಂದ ವರ್ಗಗಳ ನಾಯಕರಾಗಿ ಸಿದ್ದರಾಮಯ್ಯ ಎಮರ್ಜ್ ಆಗಿರುವ ರೀತಿ ಹೇಗಿದೆ ಎಂದರೆ, ಅವರನ್ನು ಬದಲಿಸುವ ಯೋಚನೆ ಸರಕಾರಕ್ಕೆ ಮಾರಕವಾಗಬಹುದು ಎಂಬುದು ರಾಹುಲ್ ಆತಂಕ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುವ ವಿಷಯದಲ್ಲಿ ಅವರಿಗೆ ಸುತರಾಂ ಒಪ್ಪಿಗೆಯಿಲ್ಲ. ಆದರೆ ಮುಂದಿನ ದಿನ ಗಳಲ್ಲಿ ಅವರಾಗಿಯೇ ಕೆಳಗಿಳಿಯುವ ಬಯಕೆ ವ್ಯಕ್ತಪಡಿಸಿದರೆ ಆ ಜಾಗಕ್ಕೆ ಯಾರು ಬರಬೇಕು ಅಂತ ಅವರು ಯೋಚಿಸಿದ್ದಾರೆ.
ಮೂಲಗಳ ಪ್ರಕಾರ, ಹಾಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರೇ ರಾಹುಲ್ ಗಾಂಧಿ ಕಣ್ಣ ಮುಂದಿರುವ ಪರ್ಯಾಯ ನಾಯಕ. ಕಾರಣ? ಕೃಷ್ಣ ಭೈರೇಗೌಡ ಯುವಕರು. ‘ಮಿಸ್ಟರ್ ಕ್ಲೀನ್’ ಇಮೇಜ್ ಇರುವವರು. ಅದೇ ಕಾಲಕ್ಕೆ ಸುಶಿಕ್ಷಿತರಾಗಿರುವ ಕೃಷ್ಣ ಭೈರೇಗೌಡ ಕರ್ನಾಟಕದ ಜನಸಂಖ್ಯೆಯ ಶೇ.40ರಷ್ಟಿರುವ ನಗರ ಪ್ರದೇಶದ ಮತದಾರರಿಗೆ ಒಪ್ಪಿಗೆಯಾ ಗುವ ನಾಯಕ. ಈ ಮಧ್ಯೆ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಪಾಕೆಟ್ಟಿನ ಸುಮಾರು ಐವತ್ತು ಕ್ಷೇತ್ರಗಳಲ್ಲಿ ಮರಸು ಒಕ್ಕಲಿಗರು ಪ್ರಬಲರು. ಅವರು ಸಹಜವಾಗಿಯೇ ಕೃಷ್ಣ ಭೈರೇಗೌಡರ ನಾಯಕತ್ವವನ್ನು ಒಪ್ಪುತ್ತಾರೆ.
ಈ ಮಧ್ಯೆ ಕೃಷ್ಣ ಭೈರೇಗೌಡರು ಪರ್ಯಾಯ ನಾಯಕರಾಗಿ ಹೊರಹೊಮ್ಮಿದರೆ ಸಿದ್ದರಾಮಯ್ಯ ಕೂಡಾ ಬೆಂಬಲಿಸುತ್ತಾರೆ. ಹಾಗಾದಾಗ ಪ್ರಬಲ ಕುರುಬ ಸಮುದಾಯ ಸಾಲಿಡ್ಡಾಗಿ ಕಾಂಗ್ರೆಸ್ ಜತೆ ಉಳಿಯುತ್ತದೆ. ಅದೇ ಕಾಲಕ್ಕೆ ಹಾಲಿ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ತಂದರೆ ಒಕ್ಕಲಿಗ ಪ್ಲಸ್ ಅಹಿಂದ ಮತದಾರರು ಕನ್ಸಾಲಿಡೇಟ್ ಆಗುತ್ತಾರೆ.
ಇವತ್ತು ಬಿಜೆಪಿ ಮತ್ತು ಸಂಘಪರಿವಾರವನ್ನು ಪ್ರಿಯಾಂಕ್ ಖರ್ಗೆ ಎಷ್ಟು ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದರೆ ಈ ಅಂಶ ಕೈ ಪಾಳಯಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಹೀಗೆ ಕೃಷ್ಣ ಭೈರೇಗೌಡ-ಪ್ರಿಯಾಂಕ್ ಖರ್ಗೆ ಜೋಡಿಯನ್ನು ಮುಂದಿಟ್ಟುಕೊಂಡು ಅವರ ಜತೆಗೆ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ, ಜಮೀರ್ ಅಹ್ಮದ್, ಸಂತೋಷ್ ಲಾಡ್ ಸೇರಿದಂತೆ ರಣಕಲಿಗಳ ದಂಡು ನಿಂತರೆ ತಮ್ಮ ಕನಸಿನ 2029 ಮತ್ತು 2034ಕ್ಕೆ ತಾವು ದಿಲ್ಲಿ ಗದ್ದುಗೆಯನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಪ್ಲಸ್ ಆಗಬಹುದು ಎಂಬುದು ರಾಹುಲ್ ಗಾಂಧಿ ಲೆಕ್ಕಾಚಾರ.
ಆದರೆ ಅದು ವರ್ಕ್ಔಟ್ ಆಗಬೇಕೆಂದರೆ ಸದ್ಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಸ್ಥಿರವಾಗಿರಬೇಕು. ಹಾಗಂತಲೇ ಮೊನ್ನೆ ದಿಲ್ಲಿ ದಂಡಯಾತ್ರೆ ಮಾಡಿದ ನಾಯಕರಿಗೆ ರಾಹುಲ್ ಗಾಂಧಿ ಕೊಡಬೇಕಾದ ಮೆಸೇಜನ್ನೇ ಕೊಟ್ಟು ಕಳಿಸಿದ್ದಾರೆ.
ಜೆಡಿಎಸ್ ಬಗ್ಗೆ ಬಿಜೆಪಿಗೆ ಆತಂಕವೇ?
ಈ ಮಧ್ಯೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರ ಮನೆಯಲ್ಲಿ ಶನಿವಾರ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ಭಾಗವಹಿಸಿದ ಜೆಡಿಎಸ್ ಶಾಸಕರು ಮತ್ತಿತರ ನಾಯಕರು ಬಿಜೆಪಿಯ ರಾಜ್ಯ ನಾಯಕರ ಬಗ್ಗೆ ಕೋಪದಿಂದ ಮಾತನಾಡಿದ್ದಾರೆ. ‘ಮೈತ್ರಿ ಅಂತ ಮಾತನಾಡುವ ಬಿಜೆಪಿಗರು ನಮ್ಮನ್ನು ದೂರ ಇಟ್ಟು ಬೆಲೆ ಏರಿಕೆಯ ಬಗ್ಗೆ ಹೋರಾಟ ಮಾಡಿದ್ದಾರೆ.
ನಮ್ಮನ್ನು ದೂರವಿಡುವ ಅವರ ಲೆಕ್ಕಾಚಾರಕ್ಕೆ ಅವರಲ್ಲಿರುವ ಆತಂಕವೇ ಕಾರಣ’ ಎಂದಿದ್ದಾರೆ. ‘ರಾಜ್ಯ ಸರಕಾರದ ವೈಫಲ್ಯದ ಲಾಭ ನಮಗಿಂತ ಹೆಚ್ಚಾಗಿ ಜೆಡಿಎಸ್ಗೆ ಸಿಕ್ಕರೆ ಅವರು ನಮ್ಮ ಮೇಲೆ ಸವಾರಿ ಮಾಡಬಹುದು, ಹೀಗಾಗಿ ಅವರನ್ನು ದೂರವಿಟ್ಟು ನಾವು ಪ್ರತ್ಯೇಕವಾಗಿ ಹೋರಾಟ ಮಾಡೋಣ’ ಅಂತ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಆದ್ದರಿಂದ ನಾವು ಕೂಡಾ ಬಿಜೆಪಿಗರನ್ನು ದೂರವಿಟ್ಟು ಬೆಲೆ ಏರಿಕೆಯ ಬಗ್ಗೆ ಹೋರಾಟ ಮಾಡೋಣ ಎಂದು ಜೆಡಿಸ್ ಶಾಸಕರು-ನಾಯಕರು ಆರ್ಭಟಿಸಿದ್ದಾರೆ. ಅವರ ಆಕ್ರೋಶಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಅವರು “ಆಯಿತು ಬಿಡಿ ಬ್ರದರ್. ನಾವೂ ಪ್ರತ್ಯೇಕವಾಗಿ ಹೋರಾಡೋಣ" ಎಂದಿದ್ದಾರೆ. ಅಲ್ಲಿಗೆ ಬಿಜೆಪಿ-ಜೆಡಿಎಸ್ ಪಾಳಯದಲ್ಲೂ ಭವಿಷ್ಯದ ಸಿಎಂಗಿರಿಗಾಗಿ ಪೈಪೋಟಿ ಶುರುವಾಗಿದೆ ಅಂತಲೇ ಅರ್ಥ.
ವಿಜಯೇಂದ್ರ ಇರಲಿ ಅಂದ್ರು ಭಿನ್ನರು
ಇನ್ನು ವಿಜಯೇಂದ್ರ ಅವರ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಯತ್ನಾಳ್ ಅವರನ್ನು ಕಳೆದುಕೊಂಡ ಭಿನ್ನರ ಪಡೆ, ಈಗ ವರಸೆ ಬದಲಿಸಿದೆ. ಬಿಜೆಪಿ ಮೂಲಗಳ ಪ್ರಕಾರ, ಕರ್ನಾಟಕ ಬಿಜೆಪಿಯ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್ ಏಪ್ರಿಲ್ 10ರಂದು ಬೆಂಗಳೂರಿಗೆ ಬರಲಿದ್ದು, ಈ ಸಂದರ್ಭದಲ್ಲಿ ಭಿನ್ನರ ಪಡೆ ಅವರನ್ನು ಭೇಟಿ ಮಾಡಲಿದೆ. ಈ ಭೇಟಿಯ ಸಂದರ್ಭದಲ್ಲಿ ಎರಡು ಬೇಡಿಕೆಗಳನ್ನು ಮುಂದಿಡಲಿರುವ ಪಡೆ, ಒಂದೋ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಿ. ಇಲ್ಲವೇ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನದಲ್ಲಿ ಮುಂದುವರಿಸಿ ಅಂತ ಹೇಳಲಿದೆ.
ಅದರ ಈ ಬೇಡಿಕೆಯಲ್ಲಿ ಒಂದು ಸೂಕ್ಷ್ಮವಿದೆ. ಅದೆಂದರೆ ವಿಜಯೇಂದ್ರ ಪಕ್ಷದ ರಾಜ್ಯಾ ಧ್ಯಕ್ಷರಾಗಿ ಆಗಸ್ಟ್ ಅಂತ್ಯಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಸಹಜವಾಗಿಯೇ ಈ ಅವಧಿ ಪೂರ್ಣಗೊಳ್ಳಲು ಬಿಡಿ. ಇದಾದ ನಂತರ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಿ. ಆದರೆ ಈಗ ಮಾತ್ರ ಯಾವ ಕಾರಣಕ್ಕೂ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಘೋಷಿಸಬೇಡಿ.
ಹಾಗೆ ಘೋಷಿಸಿದರೆ ವಿಜಯೇಂದ್ರ ಪುನಃ ಇನ್ನೆರಡು ವರ್ಷದ ಅವಧಿಗೆ ಅಧ್ಯಕ್ಷರಾಗುತ್ತಾರೆ. ಇದು ಸರಿಯಲ್ಲ ಎಂಬುದು ಭಿನ್ನರ ವಾದ. ಇದನ್ನೇ ಅವರು ಬೆಂಗಳೂರಿಗೆ ಬರಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೇಳಲಿದ್ದಾರೆ.
ರೇಣುಕಾಚಾರ್ಯ ಉಚ್ಚಾಟನೆ ಆಗ್ಲೇಬೇಕ್!
ಈ ಮಧ್ಯೆ ಶುಕ್ರವಾರ ಬೆಳಗ್ಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ್ದ ಬಿಜೆಪಿ ಭಿನ್ನರ ಪಡೆ ಪಕ್ಷದ ವರಿಷ್ಠರಿಗೆ ಹೊಸ ಸಂದೇಶ ರವಾನಿಸಿದೆ. ಯಾವ ಕಾರಣಕ್ಕಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತೋ, ಅದೇ ಕಾರಣಕ್ಕಾಗಿ ವಿಜಯೇಂದ್ರ ಪಡೆಯ ನಾಯಕ ಎಂ.ಪಿ.ರೇಣುಕಾ ಚಾರ್ಯ ಅವರನ್ನೂ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂಬುದು ಈ ಸಂದೇಶ.
“ಯತ್ನಾಳ್ ಅವರು ಮಾಡುತ್ತಿದ್ದ ಆರೋಪಗಳ ಬಗ್ಗೆ ನಮಗೆ ಸಹಮತವಿದ್ದರೂ ಅವರು ಹೇಳಿದ್ದನ್ನೆಲ್ಲ ನಾವು ಒಪ್ಪುವುದಿಲ್ಲ. ಆದರೆ ಕಳೆದ ಹಲವು ತಿಂಗಳುಗಳಿಂದ ರೇಣುಕಾ ಚಾರ್ಯ ಆಡಿದ ಮಾತುಗಳನ್ನು ಕೇಳಿದರೆ ಅವು ಯತ್ನಾಳ್ ಅವರ ಮಾತುಗಳಿಗಿಂತ ಕಠೋರವಾಗಿವೆ. ಹೀಗಾಗಿ ಯತ್ನಾಳ್ ಅವರಿಗಾದ ಶಿಕ್ಷೆ ರೇಣುಕಾಚಾರ್ಯ ಅವರಿಗೂ ಆಗಬೇಕು. ಇಲ್ಲದಿದ್ದರೆ ಇದು ಒನ್ ಸೈಡೆಡ್ ತೀರ್ಮಾನವಾಗುತ್ತದೆ. ಆದ್ದರಿಂದ ಪರಿಸ್ಥಿತಿ ಯನ್ನು ಬ್ಯಾಲೆನ್ಸ್ ಮಾಡಲು ರೇಣುಕಾಚಾರ್ಯ ಅವರನ್ನೂ ಪಕ್ಷದಿಂದ ಉಚ್ಚಾಟಿಸಬೇಕು. ಯಾವಾಗ ಈ ಕೆಲಸ ಆಗುತ್ತದೋ, ಆಗ ಶಿಸ್ತು ಉಲ್ಲಂಘನೆಯ ವಿಷಯ ಬಂದಾಗ ಎಲ್ಲರಿಗೂ ಒಂದೇ ನ್ಯಾಯ ಎಂಬ ಸಂದೇಶ ರವಾನೆಯಾಗುತ್ತದೆ. ಇಲ್ಲವಾದರೆ ವರಿಷ್ಠರು ವಿಜಯೇಂದ್ರರ ಪರವಾಗಿದ್ದಾರೆ ಎಂಬ ಭಾವನೆ ಉಳಿದು ಗೊಂದಲ ಮುಂದುವರಿಯು ತ್ತದೆ" ಎಂಬುದು ಈ ಪಡೆಯ ಸಂದೇಶ.
ಈ ವಾರ ಕರ್ನಾಟಕಕ್ಕೆ ಬರುತ್ತಿರುವ ರಾಜ್ಯ ಬಿಜೆಪಿಯ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್ರಿಗೆ ಈ ವಿಷಯವನ್ನು ನೇರವಾಗಿ ಹೇಳಲು ಭಿನ್ನರು ತೀರ್ಮಾನಿಸಿದ್ದಾರೆ. ಮೂಲಗಳ ಪ್ರಕಾರ, ಯತ್ನಾಳ್ ಉಚ್ಚಾಟನೆಯ ನಂತರ ಭಿನ್ನರ ಪಡೆ ತಬ್ಬಿಬ್ಬಾಗಿರುವುದು ನಿಜವಾದರೂ ಪರಿಸ್ಥಿತಿಯನ್ನು ಕಾದು ನೋಡಲು ಅದು ತೀರ್ಮಾನಿಸಿದೆ. ಹಾಗೆಯೇ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಎಳೆ ತರುವ ಕಾರ್ಯದಿಂದ ಹಿಂದಕ್ಕೆ ಸರಿಯಲು ಯೋಚಿಸಿದೆ.
ಇದಕ್ಕಿರುವ ಮೊದಲ ಕಾರಣವೆಂದರೆ, ಯತ್ನಾಳ್ ಅವರು ಯಡಿಯೂರಪ್ಪ-ವಿಜಯೇಂದ್ರ ಅವರ ವಿರುದ್ಧ ತಮ್ಮ ದಾಳಿ ಮುಂದುವರಿಸಲಿ ಎಂಬುದು. ಮತ್ತೊಂದು ಕಾರಣವೆಂದರೆ, ಯತ್ನಾಳ್ ತಮ್ಮ ನಿಜವಾದ ಶಕ್ತಿಯನ್ನು ಕಂಡುಕೊಳ್ಳಲು ಆಸ್ಪದವಾಗಲಿ ಎಂಬುದು. ಹೀಗೆ ಅವರು ತಮ್ಮ ಶಕ್ತಿಯನ್ನು ಕಂಡುಕೊಂಡು ಮತ್ತಷ್ಟು ಬಲಿಷ್ಠರಾಗಿ ಹೊರಹೊಮ್ಮಿದರೆ ಪಕ್ಷಕ್ಕೆ ಅವರ ಅನಿವಾರ್ಯತೆ ಏನು ಅಂತ ವರಿಷ್ಠರಿಗೆ ತೋರಿಸಬಹುದು. ವೈಭವದಿಂದ ಪಕ್ಷಕ್ಕೆ ವಾಪಸ್ಸು ಕರೆತರಬಹುದು ಎಂಬುದು ಅದರ ಯೋಚನೆ.