ರಮೇಶ್ ಹೆಗಡೆ ಗುಂಡೂಮನೆ
ಸಾಗರದ ಖಂಡಿಕಾ ಗ್ರಾಮದ ನವೀನ್ ಹೆಗಡೆಯಿಂದ ಅಮೆರಿಕ ಸೇರಿ ಮತ್ತಿತರ ಕಡೆ ಯಕ್ಷಗಾನ ಪ್ರದರ್ಶನ
ಸಾಗರ: ಕನ್ನಡ ಭಾಷೆಯ ಪರಿಶುದ್ದ ಕಲೆ ಎಂಬ ಶ್ರೀಮಂತಿಕೆ ಹೊಂದಿರುವ ಯಕ್ಷಗಾನ ಕಲೆ ಕರಾವಳಿ ಮತ್ತು ಮಲೆನಾಡು ಸೇರಿ ಕೇವಲ ಮೂರು ಜಿಲ್ಲೆಗೆ ಸೀಮಿತವಾಗಿದೆ ಎನ್ನುವ ಮಾತು ಗಳಿದ್ದರೂ ಇದೇ ಭಾಗದ ಯಕ್ಷಗಾನ ಪ್ರೇಮಿಗಳ ಆಸಕ್ತಿಯಿಂದ ಸಾಗರದಾಚೆಗೂ ಎಂದರೆ ವಿದೇಶ ದಲ್ಲಿಯೂ ಅದರ ಕಂಪು ಹರಡುತ್ತಿರುವುದು ಸುಳ್ಳಲ್ಲ.
ತಮ್ಮ ಉದ್ಯೋಗ ನಿಮಿತ್ತ ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲಿರುವ ನಮ್ಮವರು ಅನೇಕರು ಯಕ್ಷಗಾನದ ಮೇಲಿನ ಪ್ರೀತಿಯಿಂದ ತಮ್ಮ ವೃತ್ತಿಯ ನಡುವೆಯೂ ಅಲ್ಲಿ ಯಕ್ಷ ಸಂಘಟನೆಯನ್ನು ಕಟ್ಟಿ ಪ್ರದರ್ಶನ ನೀಡುವ ಮತ್ತು ಇಲ್ಲಿಯ ಕಲಾವಿದರನ್ನೂ ಕರೆಸಿ ವೇದಿಕೆ ಕಲ್ಪಿಸುವ ಕೆಲಸ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ ಈಗಲೂ ಮುಂದುವರಿದಿದೆ.
ಆದರೆ ಅಪರೂಪದ ಸಂಗತಿ ಎಂದರೆ ವಿದೇಶದಲ್ಲಿ ಪೂರ್ಣ ಪ್ರಮಾಣದ ಯಕ್ಷಗಾನ ಮೇಳವೊಂದ ನ್ನು ಕಟ್ಟಿ ಕನ್ನಡಿಗರು ಹೆಮ್ಮೆಪಡುವ ಸಾಧನೆ ಮಾಡಿರುವ ವಿವಿ ಪ್ರೊಫೆಸರ್ ನವೀನ್ ರವರ ಸಾಧನೆಗೆ ನಾವುಗಳೆಲ್ಲರೂ ಶರಣು ಎನ್ನಲೇಬೇಕು.
ಹೌದು. ಸಾಗರದ ಖಂಡಿಕಾ ಗ್ರಾಮದಲ್ಲಿ ಹುಟ್ಟಿ ಇಲ್ಲಿ ವಿದ್ಯಾಭ್ಯಾಸ ಪೂರೈಸಿ ಪ್ರಸ್ತುತ ಕೆನಡಾದಲ್ಲಿ ವಿವಿಯ ಪ್ರೊಫೆಸರ್ ಹುದ್ದೆಯಲ್ಲಿ ಕರ್ತವ್ಯ ಮಾಡುತ್ತಿರುವ ಖಂಡಿಕಾದ ನವೀನ್ ಹೆಗಡೆ ಕೆ.ಸಿ. ಯವರ ಕಾರ್ಯಅತ್ಯಂತ ಶ್ಲಾಘನೀಯವಾದದ್ದು. ಕಾರಣ ವಿಶ್ವವಿದ್ಯಾಲಯದ ಪ್ರೊಫೆಸರ್ ಹುದ್ದೆಯ ತಮ್ಮ ಜವಾಬ್ದಾರಿಯ ನಡುವೆ ಪೂರ್ಣ ಪ್ರಮಾಣದ ಹಿಮ್ಮೇಳ ಮತ್ತು ಮುಮ್ಮೇಳ ಹಾಗೂ ಯಕ್ಷಗಾನ ಪ್ರದರ್ಶನಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಹೊಂದಿರುವ ವಿದೇಶದ ಏಕೈಕ ಯಕ್ಷಗಾನ ಮೇಳ ಕಟ್ಟಿ ಬಿಡುವು ಇದ್ದಾಗ ಆ ಸಮಯದಲ್ಲಿ ಅಮೆರಿಕಾ, ಕೆನಡಾ ಸುತ್ತಮುತ್ತಲ ಜಾಗದಲ್ಲಿ ವರ್ಷಕ್ಕೆ ಹತ್ತಾರು ಯಕ್ಷಗಾನ ಪ್ರದರ್ಶನವನ್ನು ವಿದೇಶಿ ಪ್ರೇಕ್ಷಕರಿಗೆ ನೀಡುತ್ತಿರುವ ನವೀನ್ ಅವರ ಕಾರ್ಯ ಸಣ್ಣ ವಿಷಯವಲ್ಲ.
2009 ರಿಂದ ಆರಂಭಿಸಿ ಕಳೆದ 16 ವರ್ಷಗಳಿಂದ ವಿದೇಶದಲ್ಲಿ ಯಕ್ಷಗಾನ ಕಾರ್ಯಕ್ರಮ ನೀಡುತ್ತಿರುವ ಜತೆಗೆ ಪ್ರತಿ ವರ್ಷ ಸ್ವದೇಶಕ್ಕೆ ಬಂದು ಹೋಗುವ ಅವರು ಹುಟ್ಟೂರು ಖಂಡಿಕಾದ ತಮ್ಮ ಮನೆಯಲ್ಲಿ ತಂದೆ ತಾಯಿಗಳಾದ ಚಂದ್ರಶೇಖರ್ಮತ್ತು ಭಗೀರಥಿ ಚಂದ್ರಶೇಖರ್ರವರ ಆಶೀರ್ವಾದದ ನೆರಳಿನಲ್ಲಿ ಪ್ರಸಿದ್ದ ಕಲಾವಿದರನ್ನು ಸೇರಿಸಿ ಅದರಲ್ಲಿ ತಾವೂ ಪಾಲ್ಗೊಂಡು ಯಕ್ಷಗಾನ ಪ್ರದರ್ಶನ ಏರ್ಪಡಿಸುತ್ತ ಬಂದಿದ್ದಾರೆ.
ಇದನ್ನೂ ಓದಿ: Lakshmikanth L V Column: ಟೀಕೆಗಳಿಗಿಲ್ಲ ಆಯುಷ್ಯ, ಕೆಲಸಕ್ಕಿದೆ ಭವಿಷ್ಯ
ಈ ಮೂಲಕ ಯಕ್ಷಗಾನ ಕಲೆಯ ಬೆಳೆವಣಿಗೆಗೆ ಮಲೆನಾಡ ಇಲ್ಲಿಂದ ಆರಂಭಗೊಂಡ ಸಮುದ್ರ ದಾಚೆಗೂ ತಮ್ಮ ಕೊಡುಗೆ ನೀಡುತ್ತ ಬಂದಿರುವ ಅವರ ಪ್ರಯತ್ನ ಮತ್ತು ಆಸಕ್ತಿ ಅತಿ ವಿಶೇಷ ವಾದದ್ದು. ಇಲ್ಲಿಯೂ ಪ್ರತಿ ವರ್ಷ ತಾವೂ ವೇಷ ಮಾಡಿ ಸಂಭ್ರಮಿಸುವುದು ಅವರ ಹಿರಿಮೆ ಎನ್ನಲೇಬೇಕು.
ಹೀಗೊಂದು ಮನಸ್ಥಿತಿಯುಳ್ಳ ಅನೇಕರು ಯಕ್ಷಗಾನ ಕಲೆಯ ಬೆಳವಣಿಗೆಯಲ್ಲಿ ಎಲೆಯ ಮರೆ ಯಂತೆ ಕೆಲಸ ಮಾಡುತ್ತಿರುವುದು ಸಹಜವಾದರೂ ನಿಜಕ್ಕೂ ಇವರ ಪ್ರಯತ್ನವನ್ನು ಯಕ್ಷಗಾನದ ಪ್ರೇಮಿಗಳಾದ ನಾವುಗಳೆಲ್ಲರೂ ಗೌರವಿಸಲೇಬೇಕು. ವಿದೇಶದಲ್ಲಿ ಉನ್ನತ ಹುದ್ದೆ ಯಲ್ಲಿದ್ದು ಕೈ ತುಂಬಾ ಸಂಬಳ ಬರುತ್ತಿರುವಾಗ ಸಹಜವಾಗಿ ಆ ಒತ್ತಡದಲ್ಲಿ ಕಲೆ ಇನ್ನಿತರ ಸಂಗತಿಗಳನ್ನು ಮರೆತು ಬಿಡುವ ಈ ಕಾಲಘಟ್ಟದಲ್ಲಿ ನಿರಂತರವಾಗಿ ತಮ್ಮ ವೃತ್ತಿಯ ಒತ್ತಡದ ನಡುವೆಯೂ ವಿದೇಶದಲ್ಲಿ ಕನ್ನಡದ ಕಲೆ ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ಮತ್ತು ಹುಟ್ಟೂರಿಗೆ ಬಂದಾಗ ವರ್ಷವೂ ಮನೆಯಲ್ಲಿ ಯಕ್ಷಗಾನದ ಕಲೆಯನ್ನು ಆರಾಧಿಸುವ ನವೀನ್ ಹೆಗಡೆಯವರು ಯಾವುದೇ ಪ್ರಚಾರ ಪ್ರಸಾರದ ಉದ್ದೇಶ ಹೊಂದದೆ ತಮ್ಮೊಳಗಿರುವ ಆಸಕ್ತಿಗಾಗಿ ಮಾತ್ರ ಮಾಡುತ್ತ ಬಂದಿರುವುದು ನಿಜಕ್ಕೂ ಮಾದರಿ.
ಇವರ ಯಕ್ಷಮಿತ್ರ ಟೊರಾಂಟೊ ಮೇಳದ ಕಾರ್ಯವನ್ನು ಗಮನಿಸಿ ಕರ್ನಾಟಕದ ಯಕ್ಷಗಾನ ಅಕಾಡೆಮಿಯ ಉಡುಪಿ ಯಕ್ಷಗಾನ ಸಮ್ಮೇಳನದಲ್ಲಿ ಗುರುತಿಸಿ ಗೌರವಿಸಿದ್ದಾರೆ ಎಂಬ ಸಮಾಧಾನ ವಿದ್ದರೂ ಅವರ ನಿಸ್ವಾರ್ಥ ಕೊಡುಗೆಯನ್ನು ಯಕ್ಷಗಾನ ಪ್ರೇಮಿಗಳೆಲ್ಲರು ಹೃದಯ ಪೂರ್ವಕವಾಗಿ ಗೌರವಿಸಲೇಬೇಕು.
ಪ್ರಯತ್ನ, ಆಸಕ್ತಿ ವಿಶೇಷವಾದದ್ದು
ಈ ಮೂಲಕ ಯಕ್ಷಗಾನ ಕಲೆಯ ಬೆಳೆವಣಿಗೆಗೆ ಮಲೆನಾಡ ಇಲ್ಲಿಂದ ಆರಂಭಗೊಂಡ ಸಮುದ್ರ ದಾಚೆಗೂ ತಮ-- ಕೊಡುಗೆ ನೀಡುತ್ತ ಬಂದಿರುವ ನವೀನ್ ಹೆಗಡೆ ಅವರ ಪ್ರಯತ್ನ ಮತ್ತು ಆಸಕ್ತಿ ಅತಿ ವಿಶೇಷವಾದದ್ದು. ಇಲ್ಲಿಯೂ ಪ್ರತಿ ವರ್ಷ ತಾವೂ ವೇಷ ಮಾಡಿ ಸಂಭ್ರಮಿಸುವುದು ಅವರ ಹಿರಿಮೆ ಎನ್ನಲೇಬೇಕು.