ಉಂಡೆ ಕೊಬ್ಬರಿಗೆ ಭರ್ಜರಿ ಬೆಲೆ
ಕಳೆದ ಎರಡು-ಮೂರು ವರ್ಷಗಳಿಂದಲೂ ಕುಸಿತ ಕಂಡಿದ್ದ ಉಂಡೆ ಕೊಬ್ಬರಿ ಕ್ವಿಂಟಾಲ್ಗೆ 8 ಸಾವಿರ ರೂ.ಗಳಿಗೆ ತಲುಪಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ತದ ನಂತರ ೨೦೨೪ರ ಮಧ್ಯ ಭಾಗದಿಂದ ಸ್ವಲ್ಪ ಚೇತರಿಕೆ ಕಂಡಿದ್ದ ಕೊಬ್ಬರಿ ಬೆಲೆ ಕಳೆದ ಗುರುವಾರ ಕ್ವಿಂಟಾಲ್ಗೆ ೧೯,೫೬೬ ರೂ.ಗಳಿಗೆ ಟೆಂಡರ್ ಆಗುವ ಮೂಲಕ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.


ರಂಗನಾಥ ಕೆ ಹೊನ್ನಮರಡಿ
ಐತಿಹಾಸಿಕ ದಾಖಲೆ ಬರೆದ ಕೊಬ್ಬರಿ ಬೆಲೆ
ವಿದೇಶಗಳಲ್ಲಿ ತಿಪಟೂರು ಬ್ರಾಂಡ್ ಬೇಡಿಕೆ
ಇಲ್ಲಿಂದ ನೇರ ಹೊರ ರಾಜ್ಯಗಳಿಗೆ ರವಾನೆ
ಎಣ್ಣೆ ತಯಾರಿಕೆ, ಬಳಕೆ ಪ್ರಮಾಣವೂ ಹೆಚ್ಚ
ಕೊಬ್ಬರಿಯ ಕಣಜ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿಯೂ 23 ಸಾವಿರ ರು.ಗಳ ಗಡಿ ದಾಟಿ ಐತಿಹಾಸಿಕ ಬೆಲೆ ದಾಖಲಿಸಿದ್ದು, ಕಲ್ಪವೃಕ್ಷ ನಾಡಿನ ರೈತರು ಸಂತಸ ಗೊಂಡಿದ್ದಾರೆ. ಕಳೆದ ಎರಡು-ಮೂರು ವರ್ಷಗಳಿಂದಲೂ ಕುಸಿತ ಕಂಡಿದ್ದ ಉಂಡೆ ಕೊಬ್ಬರಿ ಕ್ವಿಂಟಾಲ್ಗೆ 8 ಸಾವಿರ ರೂ.ಗಳಿಗೆ ತಲುಪಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ತದ ನಂತರ ೨೦೨೪ರ ಮಧ್ಯ ಭಾಗದಿಂದ ಸ್ವಲ್ಪ ಚೇತರಿಕೆ ಕಂಡಿದ್ದ ಕೊಬ್ಬರಿ ಬೆಲೆ ಕಳೆದ ಗುರುವಾರ ಕ್ವಿಂಟಾ ಲ್ಗೆ ೧೯,೫೬೬ ರೂ.ಗಳಿಗೆ ಟೆಂಡರ್ ಆಗುವ ಮೂಲಕ ತೆಂಗು ಬೆಳೆಗಾರರ ಮೊಗದಲ್ಲಿ ಮಂದ ಹಾಸಕ್ಕೆ ಕಾರಣ ವಾಗಿದೆ.
ಭರ್ಜರಿ ದಾಖಲೆ ಬೆಲೆ
ಕ್ವಿಂಟಾಲ್ ಕೊಬ್ಬರಿ 23000 ರೂ.ಗಳಿಗೆ ಟೆಂಡರ್ ಆಗಿದ್ದು ಐತಿಹಾಸಿಕ ದಾಖಲೆ ಬೆಲೆಯನ್ನು ದಾಖಲಿಸಿದೆ. ತಿಪಟೂರು ತೆಂಗಿನ ನಾಡಾಗಿದ್ದು, ಸ್ಥಳೀಯ ತೆಂಗು ಬೆಳೆಗಾರರು ಕೊಬ್ಬರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ತಿಪಟೂರು ಸುತ್ತ ಮುತ್ತಲಿನ ಕೊಬ್ಬರಿಯಲ್ಲಿ ಸಿಹಿ ಅಂಶವೂ ಹೇರಳವಾಗಿರುತ್ತದೆ. ಹೀಗಾಗಿ ದೇಶ-ವಿದೇಶಗಳಲ್ಲಿ ಈ ಕೊಬ್ಬರಿಗೆ ಬೇಡಿಕೆ ಪಡೆದುಕೊಂಡಿದೆ.
ಇದನ್ನೂ ಓದಿ: Narendra Parekat Column: ಬೈಕ್ ಆಟೋ ತಾಕಲಾಟ, ಪ್ರಯಾಣಿಕರಿಗೆ ಪೀಕಲಾಟ
ಹೊರ ರಾಜ್ಯಗಳಿಗೆ ಉತ್ತರ ಭಾರತ ಮಾತ್ರವಲ್ಲ, ಹೊರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶಗಳಿಗೆ ಇಲ್ಲಿಂದಲೇ ನೇರವಾಗಿ ಕೊಬ್ಬರಿ ರವಾನೆಯಾಗುತ್ತದೆ. ಅಲ್ಲಿನ ಜನರು ಇದನ್ನು ವಿವಿಧ ಬಗೆಗಳಲ್ಲಿ ಬಳಸಿಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಿಂದಲೂ ತೆಂಗಿನ ಬೆಳೆ ಕಡಿಮೆ ಯಾಗಿದೆ. ಹೀಗಾಗಿ ಕೊಬ್ಬರಿ ದಾಸ್ತಾನು ಕಡಿಮೆ ಆಗಿದೆ. ಇತ್ತೀಚಿಗೆ ರೈತರು ಕೊಬ್ಬರಿ ಬೆಲೆಯಲ್ಲಿ ಸ್ಥಿರತೆ ಕಾಣದ ಕಾರಣ ತೆಂಗಿನಕಾಯಿ ಹಾಗೂ ಎಳನೀರಿನ ಮಾರಾಟಕ್ಕೆ ಮುಂದಾಗಿದ್ದರು. ಕೊಬ್ಬರಿ ಉತ್ಪಾದನೆ ಕಡಿಮೆ ಆಗಲು ಇದು ಕೂಡ ಕಾರಣ. ಜತೆಗೆ ತೆಂಗಿನ ಮರಗಳಿಗೆ ತಗುಲುತ್ತಿರುವ ವಿವಿಧ ರೋಗಗಳಿಂದ ತೆಂಗಿನ ಫಸಲು ಇಳುವರಿ ಕುಸಿದಿದೆ.
ಬೆಲೆ ಏರಿಕೆಗೆ ಕಾರಣ
ಕೊಬ್ಬರಿ ಬೆಲೆಯಲ್ಲಿ ಏರಿಕೆ ಕಾಣಲು ಬಹುಮುಖ್ಯವಾದ ಕಾರಣ ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು. ಉತ್ತರ ಭಾರತದಲ್ಲಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ ದೀಪಾವಳಿವರೆಗೂ ಆಚರಿಸುವ ಎಲ್ಲಾ ಹಬ್ಬಗಳಿಗೂ ಕೊಬ್ಬರಿ ಬೇಡಿಕೆ ಹೆಚ್ಚಾಗಿರುತ್ತದೆ. ಅಲ್ಲದೇ ಮಾರುಕಟ್ಟೆಗೆ ನಿರೀಕ್ಷಿತ ಉಂಡೆ ಕೊಬ್ಬರಿ ಆಮದು ಇಳಿಕೆಯಲ್ಲಿದೆ.
ಗಣನೀಯವಾಗಿ ಎಣ್ಣೆ ಕಾಳುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದ್ದಂತೆ ಕೊಬ್ಬರಿ ಎಣ್ಣೆ ತಯಾರಿಕೆ ಯಲ್ಲಿ ಮತ್ತು ಬಳಕೆಯಲ್ಲಿ ಹೆಚ್ಚಳ ಕಂಡಿದೆ. ಕೊಬ್ಬರಿ ಬದಲಿಗೆ ಕಾಯಿಯಲ್ಲಿ ಡೆಸಿಕೆಟೆಡ್ ಕೊಕನಟ್ ಪೌಡರ್ (ಕಾಯಿಯ ಒಣ ತುರಿ) ಮಾಡುವವರ ಸಂಖ್ಯೆ ಹೆಚ್ಚಳವಾಗಿದ್ದರಿಂದಲೂ ಕೊಬ್ಬರಿ ಅಗತ್ಯಕ್ಕಿಂತ ಕಡಿಮೆ ಆವಕ ಕಂಡಿದೆ. ಹೀಗಾಗಿ ಬೇಡಿಕೆ ಹೆಚ್ಚಳವಾಗಿದೆ.
ಕಳೆದ ಹಲವಾರು ತಿಂಗಳುಗಳಿಂದ ಉಂಡೆ ಕೊಬ್ಬರಿ ಎಪಿಎಂಸಿ ಮಾರುಕಟ್ಟೆಗೆ ಬರುವುದು ಗಣನೀಯವಾಗಿ ಇಳಿದಿದೆ. ಅಲ್ಲದೇ ತೆಂಗಿನ ಮರದಲ್ಲಿ ಫಸಲು ಕಡಿಮೆ ಆಗಿರುವ ಬಗ್ಗೆ ರೈತರು ಮಾಹಿತಿ ನೀಡುತ್ತಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣ ಕೊಬ್ಬರಿಯ ದಾಸ್ತಾನು ಇಲ್ಲದ ಕಾರಣ ಬೆಲೆ ಏರಿಕೆ ಆಗುವ - ಸ್ಥಿರತೆ ಕಾಯ್ದು ಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಕಾಣಿಸಲಾರಂಭಿಸಿದೆ.
ಕೆಲ ತಿಂಗಳುಗಳಿಂದ ಕೊಬ್ಬರಿ ಆಗಮನ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಬೆಲೆಯೂ ಏರಿಕೆ ಹಾಗೂ ಸ್ಥಿರತೆ ಕಾಯ್ದುಕೊಂಡಿದೆ. ಇದೆ ಮಾದರಿಯಲ್ಲಿ ಬೆಲೆಯ ಏರಿಕೆ ಸ್ಥಿರತೆಯನ್ನು ಕಾಪಾಡಲು ಸರಕಾರ ಗಳು ಮುಂದಾಗಬೇಕು. ರೈತರ ಬಹುದಿನದ ಬೇಡಿಕೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) 15 ಸಾವಿರಕ್ಕೆ ನಿಗದಿಪಡಿಸಬೇಕೆಂಬ ಬೇಡಿಕೆ ಈಗಲಾದರೂ ಈಡೇರಿಸಬೇಕಿದೆ.
-ಯೋಗೀಶ್ವರಸ್ವಾಮಿ, ರೈತ ಸಂಘದ ಮುಖಂಡರು
ಕಳೆದ 2-3 ವರ್ಷಗಳ ನಂತರದಲ್ಲಿ ಕೊಬ್ಬರಿ ಬೆಲೆಯಲ್ಲಿ ಏರಿಕೆ ಕಂಡಿರುವುದು ಸಂತಸದ ಸಂಗತಿ. ಸಂಕಷ್ಟದಲ್ಲಿ ಇರುವ ರೈತರಿಗೆ ಆರ್ಥಿಕ ಸದೃಢತೆ ದೊರೆಯಲು ಅನುಕೂಲವಾಗಿದೆ. ಕೊಬ್ಬರಿ ಬೆಲೆ ಇನ್ನೂ ಕೆಲ ತಿಂಗಳು ಸ್ಥಿರತೆಯಲ್ಲಿದ್ದರೆ ರೈತರಿಗೆ ಅನುಕೂಲವಾಗಲಿದೆ.
-ತಿಮ್ಲಾಪುರ ದೇವರಾಜು, ಜಿಲ್ಲಾಧ್ಯಕ್ಷರು, ಹಸಿರುಸೇನೆ