ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Parekat Column: ಬೈಕ್‌ ಆಟೋ ತಾಕಲಾಟ, ಪ್ರಯಾಣಿಕರಿಗೆ ಪೀಕಲಾಟ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧ ಸೋಮವಾರದಿಂದ ಅಧಿಕೃತವಾಗಿ ಜಾರಿಯಾಗಿದೆ. ಬೈಕ್ ಟ್ಯಾಕ್ಸಿ ಸೇವೆ ನೀಡಲು ಗೈಡ್ ಲೈನ್ಸ್ ಜಾರಿಯಾಗುವವರೆಗೂ ಸೇವೆಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಬೈಕ್ ಟ್ಯಾಕ್ಸಿ ಕಂಪನಿಗಳು ಕೋರಿದ್ದ ಆರು ವಾರಗಳ ಕಾಲಾವಕಾಶ ಭಾನುವಾರದಂದು ಮುಕ್ತಾಯಗೊಂಡಿದ್ದು, ಸೇವೆ ಮುಂದುವರಿಸುವ ಕುರಿತು ನ್ಯಾಯಾಲಯವು ಮಧ್ಯಂತರ ಅನುಮತಿಯನ್ನೂ ನಿರಾಕರಿಸಿದೆ.

ಬೈಕ್‌ ಆಟೋ ತಾಕಲಾಟ, ಪ್ರಯಾಣಿಕರಿಗೆ ಪೀಕಲಾಟ

Profile Ashok Nayak Jun 17, 2025 5:35 PM

ನರೇಂದ್ರ ಪಾರೆಕಟ್

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧ ಸೋಮವಾರದಿಂದ ಅಧಿಕೃತವಾಗಿ ಜಾರಿಯಾಗಿದೆ. ಬೈಕ್ ಟ್ಯಾಕ್ಸಿ ಸೇವೆ ನೀಡಲು ಗೈಡ್ ಲೈನ್ಸ್ ಜಾರಿಯಾಗುವವರೆಗೂ ಸೇವೆಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಬೈಕ್ ಟ್ಯಾಕ್ಸಿ ಕಂಪನಿ ಗಳು ಕೋರಿದ್ದ ಆರು ವಾರಗಳ ಕಾಲಾವಕಾಶ ಭಾನುವಾರದಂದು ಮುಕ್ತಾಯಗೊಂಡಿದ್ದು, ಸೇವೆ ಮುಂದುವರಿಸುವ ಕುರಿತು ನ್ಯಾಯಾಲಯವು ಮಧ್ಯಂತರ ಅನುಮತಿಯನ್ನೂ ನಿರಾಕರಿಸಿದೆ.

ರ‍್ಯಾಪಿಡೋ, ಊಬರ್ ಮತ್ತಿತರ ಕಂಪನಿಗಳು ತಮ್ಮ ಆಪ್‌ನಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಆಯ್ಕೆಯನ್ನು ತೆಗೆದು ಹಾಕಿವೆ. ಆಪ್‌ನ ಮೂಲಕ ತನ್ನ ಬಳಕೆದಾರರಿಗೆ ಮಾಹಿತಿ ನೀಡಿರುವ ರ‍್ಯಾಪಿಡೋ ಕಂಪನಿ, ‘ಹೈಕೋರ್ಟ್‌ನ ಇತ್ತೀಚಿನ ಆದೇಶದ ಅನುಸಾರವಾಗಿ ಕರ್ನಾಟಕದಲ್ಲಿ ನಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಬೈಕ್ ಟ್ಯಾಕ್ಸಿಗಳಿಂದ ದೈನಂದಿನ ಪ್ರಯಾಣಿಕರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ನಮಗೆ ಹೆಮ್ಮೆ ಇದೆ, ಆದರೆ ನಾವು ಕಾನೂನನ್ನು ಗೌರವಿಸುತ್ತೇವೆ ಮತ್ತು ರಾಜ್ಯ ಸರಕಾರದ ನಿರ್ದೇಶನವನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ. ಬೈಕ್ ಟ್ಯಾಕ್ಸಿಗಳನ್ನು ಶೀಘ್ರದಲ್ಲೇ ಪುನಃ ರಸ್ತೆಗಿಳಿಸಲು ಸರಕಾರದೊಂದಿಗೆ ಮುಂದಿನ ಹಾದಿಯಲ್ಲಿ ನಾವೂ ಸಾಗುತ್ತೇವೆ’ ಎಂದೂ ತಿಳಿಸಿದೆ.

ಇದನ್ನೂ ಓದಿ: Narendra Parekat Column: ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ

ಬೈಕ್ ಟ್ಯಾಕ್ಸಿ ಓಡಾಡಕ್ಕೆ ಕಾನೂನಿನ ಕುಣಿಕೆ: ಬೈಕ್ ಟ್ಯಾಕ್ಸಿಗಳಿಗೆ ಹೊಸ ನಿಯಮಗಳ ಅಗತ್ಯವಿಲ್ಲ, ಬದಲಿಗೆ 1988ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಅವು ಕಾರ್ಯನಿರ್ವಹಿಸ ಬಹುದು ಎಂದು ಅಗ್ರಿಗೇಟರ್‌ಗಳ ಪರವಾಗಿ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಪ್ರತಿಪಾದಿಸಿದ್ದರು, ಆದರೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯದ ರಕ್ಷಣೆಯಲ್ಲಿ ಬೈಕ್ ಟ್ಯಾಕ್ಸಿಗಳು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಸರಕಾರ ವಾದಿಸಿತ್ತು.

bike 1 R

ಹೀಗಾಗಿ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ 24ರಂದು ನಿಗದಿಪಡಿಸಿ, ಅಲ್ಲಿಯವರೆಗೂ ಬೈಕ್ ಟ್ಯಾಕ್ಸಿ ಸೇವೆಗಳಿಗೆ ನಿರ್ಬಂಧ ಹೇರಿದೆ.

ರಾಜ್ಯ ಸರಕಾರದ ಸಾರಿಗೆ ಇಲಾಖೆ, ಆಟೋ-ರಿಕ್ಷಾ ಹಾಗೂ ಟ್ಯಾಕ್ಸಿ ಒಕ್ಕೂಟಗಳು ಬೈಕ್ ಟ್ಯಾಕ್ಸಿ ಗಳನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿವೆ. 2021ರಲ್ಲಿ ಆರಂಭವಾಗಿದ್ದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನೂ ಸಹ ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಉಲ್ಲಂಘನೆಗಳ ಕಾರಣ ದಿಂದ 2024ರಲ್ಲಿ ಸರಕಾರ ಹಿಂತೆಗೆದುಕೊಂಡಿತ್ತು. ಆದರೆ ಬೈಕ್ ಟ್ಯಾಕ್ಸಿಗಳು ಕಾರ್ಯಾ ಚರಣೆ ಮುಂದುವರಿಸಿದ್ದವು.

2022ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಅನ್ವಯ ಅವು ಕಾರ್ಯಾ ಚರಣೆ ನಡೆಸುತ್ತಿದ್ದವು. ಈ ಆದೇಶದಲ್ಲಿ, ಕಾನೂನು ಸಮಸ್ಯೆಗಳು ಇತ್ಯರ್ಥವಾಗುವವರೆಗೂ ಬೈಕ್ ಟ್ಯಾಕ್ಸಿ ಆಪರೇಟರ್‌ಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸರಕಾರಕ್ಕೆ ನಿರ್ಬಂಧ ಹೇರಿತ್ತು. ಆದರೆ ಏಪ್ರಿಲ್‌ನಲ್ಲಿ ಆದೇಶವನ್ನು ಮಾರ್ಪಡಿಸಿ, ಬೈಕ್ ಟ್ಯಾಕ್ಸಿ ನಿಷೇಧಿಸುವ ಸರಕಾರದ ಹಕ್ಕನ್ನು ಎತ್ತಿ ಹಿಡಿದಿತ್ತು.

ಹೈಕೋರ್ಟ್ ಆದೇಶ ಏನಿತ್ತು?: ಮೋಟಾರು ವಾಹನ ಕಾಯ್ದೆ-1988ರ ಕಲಂ 93ರ ಅನುಸಾರ ರಾಜ್ಯ ಸರಕಾರವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ತನಕ ಸಂಬಂಧಿತ ಸಂಸ್ಥೆಗಳಾದ ಓಲಾ, ಉಬರ್ ಮತ್ತು ರಾಪಿಡೊ ತಮ್ಮ ಬೈಕ್ ಟ್ಯಾಕ್ಸಿ ಸೇವೆಯನ್ನು ಆರು ವಾರಗಳ ಒಳಗಾಗಿ ನಿರ್ಬಂಧಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು.

ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವ ಅನುಮತಿಗೆ ನಿರ್ದೇಶನ ನೀಡಬೇಕು ಎಂದು ಕೋರಿ, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್, ರೊಪೈನ್ ಟ್ರಾನ್ಸ್ ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿತ್ತು.

ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮಗಳನ್ನು ರೂಪಿಸಲು ಮತ್ತು ಸಾರಿಗೆ ಯೇತರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ಪರಿವರ್ತಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸ ಲಾಗದು. ಹೀಗಾಗಿ ಈ ಕುರಿತು ಮಾರ್ಗದರ್ಶಿ ಸೂತ್ರಗಳು ಜಾರಿಯಾಗುವ ತನಕ ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಓಲಾ, ಉಬರ್ ಮತ್ತಿತರ ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ನ್ಯಾಯಪೀಠ ಆದೇಶಿಸಿತು.

ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧಕ್ಕೆ ಕಾರಣವೇನು?

ಬೈಕ್ ಟ್ಯಾಕ್ಸಿ ಸೇವೆಗಳ ನಿಯಂತ್ರಣಕ್ಕೆ ಸರಕಾರ ಇದುವರೆಗೂ ಯಾವುದೇ ಮಾರ್ಗಸೂಚಿಯನ್ನು ಹೊಂದಿಲ್ಲ. ಪ್ರಯಾಣಿಸುವವರ ಸುರಕ್ಷತೆ, ಹೆಲ್ಮೆಟ್ ಬಳಕೆ ಹಾಗೂ ಅವುಗಳ ಗುಣಮಟ್ಟ, ಚಾಲಕನ ಪರವಾನಗಿ, ಅಪಘಾತ, ಇನ್ಶುರೆನ್ಸ್ ಕುರಿತು ಬೈಕ್ ಟ್ಯಾಕ್ಸಿ ವಿರುದ್ಧ ಆರೋಪಗಳಿವೆ. ಬೈಕ್ ಟ್ಯಾಕ್ಸಿ ಸೇವೆಗಳಿಗೆ ಆರಂಭದಿಂದಲೂ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ಆಟೋ, ಟ್ಯಾಕ್ಸಿ ಚಾಲಕರು, ಕೋವಿಡ್ ಬಳಿಕ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಅದರ ನಡುವೆ ಬೈಕ್ ಟ್ಯಾಕ್ಸಿ ಸೇವೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿರುವ ರಾಜ್ಯ ಸರಕಾರದ ಶಕ್ತಿ ಯೋಜನೆ ಗಳಿಂದ ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದೇವೆ ಎನ್ನುತ್ತಿದ್ದಾರೆ. ಇದರ ನಡುವೆ ಸುರಕ್ಷತಾ ಕಾಳಜಿ ಮತ್ತು ಪರವಾನಗಿಗಳಿಲ್ಲದೆ ಕಾರ್ಯನಿರ್ವಹಿಸುವುದು ಕಾನೂನುಬಾಹಿರ ಎಂದು ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಪರವಾನಗಿ, ತರಬೇತಿ ಮತ್ತು ವಿಮೆಗಾಗಿ ಸ್ಪಷ್ಟ ನಿಯಮಗಳನ್ನು ರೂಪಿಸುವ ಬದಲು ಸೇವೆಯನ್ನೇ ನಿಷೇಧ ಮಾಡುವ ನಿರ್ಧಾರ ಸೂಕ್ತವಲ್ಲ, ಇದು ಸಾವಿರಾರು ಚಾಲಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂಬುದು ಬೈಕ್ ಟ್ಯಾಕ್ಸಿ ಸೇವೆಗಳ ಚಾಲಕರ ವಾದ

ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧದಿಂದಾಗುವ ಪರಿಣಾಮ

ರಾಜ್ಯದಲ್ಲಿ ಹಲವರು ಬೈಕ್ ಟ್ಯಾಕ್ಸಿ ಸೇವೆ ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು, ದಿನಗೂಲಿ ನೌಕರರು ಸೇರಿದಂತೆ ಅನೇಕರು ತಮಗೆ ಉದ್ಯೋಗ ಸಿಗದಿದ್ದಾಗ ಅಥವಾ ತಮ್ಮ ಬಿಡುವಿನ ಸಮಯದಲ್ಲಿ ಬೈಕ್ ಟ್ಯಾಕ್ಸಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಾಂಕ್ರಾ ಮಿಕ ರೋಗದ ನಂತರ ಬೈಕ್ ಟ್ಯಾಕ್ಸಿ ಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಬೈಕ್ ಟ್ಯಾಕ್ಸಿ ಬಳಕೆದಾರರ ಸಂಖ್ಯೆಯೂ ಹೆಚ್ಚಾ ಗಿದೆ. ಬಸ್, ಆಟೋ ಸೇವೆಗಳು ವಿರಳವಾಗಿರುವ ಅನೇಕ ಸ್ಥಳಗಳಲ್ಲಿ ಬೈಕ್ ಟ್ಯಾಕ್ಸಿ ಕಂಪನಿಗಳು ಸೇವೆಯನ್ನು ಒದಗಿಸುತ್ತಿವೆ. ಆಟೋ, ಟ್ಯಾಕ್ಸಿಗಳಲ್ಲಿ ವಿಧಿಸುವ ಶುಲ್ಕಗಳಿಗಿಂತಲೂ ತುಸು ಕಡಿಮೆ ಹಾಗೂ ತ್ವರಿತವೆಂದು ಬೈಕ್ ಟ್ಯಾಕ್ಸಿ ಸೇವೆಯನ್ನು ಆಯ್ಕೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಈಗ ಬೈಕ್ ಟ್ಯಾಕ್ಸಿಗಳ ಸ್ಥಗಿತದಿಂದ ಅವರೆಲ್ಲರೂ ಸಹ ಪರ್ಯಾಯ ವೃತ್ತಿ ಆಯ್ಕೆಗಳನ್ನು ನೋಡಬೇಕಾದ ಅನಿವಾರ್ಯತೆ ಎದುರಾಗಿದೆ.

*

ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತವಾಗಿರುವುದರಿಂದ ಕರ್ನಾಟಕದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಪ್ರತಿನಿತ್ಯ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಮನೆ ಬಾಡಿಗೆ, ವೈದ್ಯಕೀಯ ಶುಲ್ಕ, ಮಕ್ಕಳ ಶಾಲಾ ಶುಲ್ಕಗಳನ್ನೂ ಪಾವತಿಸು ತ್ತಿದ್ದರು. ಆದ್ದರಿಂದ ನಿಷೇಧ ಹಿಂಪಡೆಯುವ ಮೂಲಕ ನಿತ್ಯದ ಸಂಪಾದನೆಗೆ ಅವಕಾಶ ನೀಡುವಂತೆ ರಾಹುಲ್ ಗಾಂಧಿ, ಸಿದ್ಧರಾಮಯ್ಯ ಅವರ ಬಳಿ ಮನವಿ ಮಾಡಿದ್ದೇನೆ.

-ಮೊಹಮ್ಮದ್ ಸಲೀಂ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ

ಸಚಿವ ಡಿ.ಕೆ ಶಿವಕುಮಾರ್, ದಯವಿಟ್ಟು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಿ. ಅವು ನಾಗರಿಕರಿಗೆ ಬಹಳ ಉಪಯುಕ್ತ ಸೇವೆ ನೀಡುತ್ತಿವೆ. ನಮ್ಮ ಮೆಟ್ರೋ ವೇಳಾಪಟ್ಟಿಯಲ್ಲಿ ಬಹಳ ಹಿಂದಿದೆ, ಬಸ್ ಸೇವೆ ಅಸಮರ್ಪಕವಾಗಿದೆ, ಜನಸಾಮಾನ್ಯರು ವೈಯಕ್ತಿಕ ವಾಹನಗಳನ್ನು ಹೆಚ್ಚು ಬಳಸುವುದೂ ಸಾಧ್ಯವಿಲ್ಲ. ದಯವಿಟ್ಟು ಮಧ್ಯಪ್ರವೇಶಿಸಿ ಮತ್ತು ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿಕೊಡಿ.

-ಮೋಹನದಾಸ್ ಪೈ, ಆರಿನ್ ಕ್ಯಾಪಿಟಲ್ ಅಧ್ಯಕ್ಷ ಮತ್ತು ಬೈಕ್ ಟ್ಯಾಕ್ಸಿಗಳ ಬೆಂಬಲಿಗರು

ಸರಕಾರದ ಈ ಆದೇಶದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಸುಮಾರು ಒಂದು ಲಕ್ಷ ಮಂದಿ ತಮ್ಮ ಆದಾಯದ ಮೂಲವನ್ನು ಕಳೆದುಕೊಳ್ಳಲಿದ್ದಾರೆ. ಹಾಗಾಗಿ ಉಳಿದ ರಾಜ್ಯ ಗಳಲ್ಲಿ ಚಾಲ್ತಿಯಲ್ಲಿ ಇರುವಂತೆ ತಕ್ಷಣವೇ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮುತುವರ್ಜಿಯ ಕ್ರಮ ವಹಿಸಬೇಕೆಂನ ವಿನಂತಿ ನಮ್ಮದು.

-ಮೊಹಮ್ಮದ್ ಸಲೀಮ್, ಅಧ್ಯಕ್ಷರು, ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಶ

ಪ್ರಯಾಣಿಕರಿಗೇನು ಲಾಭ?

ಇತರ ಸಂಚಾರಿ ವ್ಯವಸ್ಥೆಗೆ ಹೋಲಿಸಿದರೆ ಅಗ್ಗದ ಪ್ರಯಾಣ ದರ

ಬಹುದೂರವನ್ನು ಬೇಗ ತಲುಪಲು ಸಾಧ್ಯ

ಒಂಟಿ ಪ್ರಯಣಕ್ಕೆ ಉತ್ತಮ ವ್ಯವಸ್ಥೆ ಸರಕಾರದಿಂದ ಮಾರ್ಗಸೂಚಿ

ಸ್ಪಷ್ಟತೆ ಏಕಿಲ್ಲ?

ಆಟೋ ರಿಕ್ಷಾ ಸಂಘಗಳಿಂದ ಸರಕಾರಕ್ಕೆ ಒತ್ತಡದ ಲಾಬಿ

ಸರಕಾರಕ್ಕೆ ಹೆಚ್ಚುವರಿ ತೆರಿಗೆ ಆದಾಯ ಇಲ್ಲ

ಬೈಕ್ ಟ್ಯಾಕ್ಸಿಯ ವ್ಯವಸ್ಥೆಯ ಮೇಲೆ ಹಿಡಿತ ಅಸಾಧ್ಯ