Kamal Haasan: ಕಮಲ್ ಹಾಸನ್ಗೆ ಕನ್ನಡದ ಬಗ್ಗೆ ಅರಿವಿಲ್ಲ: ನಟ ಶ್ರೀನಾಥ್, ನಾಗತಿಹಳ್ಳಿ ಚಂದ್ರಶೇಖರ್ ತಿರುಗೇಟು
Kamal Haasan: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವರ ಹೇಳಿಕೆ ಬಗ್ಗೆ ಹಿರಿಯ ನಟ ಶ್ರೀನಾಥ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದು, ಕನ್ನಡ ಎಲ್ಲಿಂದ ಹುಟ್ಟಿತು ಎಂಬುವುದನ್ನು ಬೇರೆಯವರಿಂದ ತಿಳಿದುಕೊಳ್ಳಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.


ಬೆಂಗಳೂರು: ತಮಿಳಿನಿಂದಲೇ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡುವುದರ ಮೂಲಕ ಕನ್ನಡಿಗರ ಆಕ್ರೋಶಕ್ಕೆ ನಟ ಕಮಲ್ ಹಾಸನ್ (Kamal Haasan) ತುತ್ತಾಗಿದ್ದಾರೆ. ಈ ಬಗ್ಗೆ ರಾಜ್ಯದ ಹಲವು ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಹಿರಿಯ ನಟ ಶ್ರೀನಾಥ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ಕನ್ನಡ ಹೇಗೆ ಹುಟ್ಟಿತು ಎಂಬುವುದು ಕನ್ನಡಿಗರಿಗೆ ಗೊತ್ತಿದೆ. ಕಮಲ್ ಹಾಸನ್ಗೆ ಭಾಷೆ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಇಲ್ಲ ಅನ್ನಿಸುತ್ತೆ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಹಿರಿಯ ನಟ ಶ್ರೀನಾಥ್ ಮಾತನಾಡಿ, ಕನ್ನಡ ಎಲ್ಲಿಂದಲೋ ಹುಟ್ಟ ಬೇಕಾಗಿಲ್ಲ, ಅದು ಎಲ್ಲಿಂದ ಹುಟ್ಟಬೇಕೋ ಅಲ್ಲಿಂದ ಹುಟ್ಟಿದೆ. ಬೇಕಾದಷ್ಟು ಭಾಷೆಗಳನ್ನು ಕನ್ನಡ ಬೆಳಸಿದೆ, ಕನ್ನಡ ಎಲ್ಲಿಂದ ಹುಟ್ಟಿತು ಎಂಬುವುದನ್ನು ಬೇರೆಯವರಿಂದ ತಿಳಿದುಕೊಳ್ಳಬೇಕಾಗಿಲ್ಲ. ಯಾವ ವ್ಯಕ್ತಿಯೂ ನಾನು ಗ್ರೇಟ್ ಅಂದುಕೊಳ್ಳಬಾರದು. ನನ್ನ ಭಾಷೆ ಬಗ್ಗೆ ನನಗೆ ಹೆಮ್ಮೆ ಇದೆ, ಯಾರೋ ಬೇರೆಯವರು ಬಂದು ಹೇಳಬೇಕಾಗಿಲ್ಲ ಎಂದು ಟೀಕಿಸಿದ್ದಾರೆ.
ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದೇನೆ, ಎಲ್ಲರೂ ಬನ್ನಿ ಎಂದು ಹೇಳಿದ್ದಾರೆ. ಇದೇ ವೇಳೆ ಅನಂತ್ ನಾಗ್ ಅವರು ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸುವುದು ಸಂತೋಷ ತಂದಿದೆ. ರಾಜಕುಮಾರ್ ನಂತರ ಅನಂತ್ ನಾಗ್ಗೆ ಬಂದಿರುವುದು ಖುಷಿ, ಅವರು ಅರ್ಹ ವ್ಯಕ್ತಿ. ಮೇಲಿರುವ ಶಂಕರ (ಶಂಕರ್ ನಾಗ್) ತುಂಬಾ ಖುಷಿ ಪಡುತ್ತಿರುತ್ತಾನೆ ಎಂದು ಹೇಳಿದ್ದಾರೆ.
ಕನ್ನಡ, ತಮಿಳು ಸೋದರ ಭಾಷೆಗಳು
ಕಮಲ್ ಹಾಸನ್ ಹೇಳಿಕೆ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯಿಸಿ, ಕಮಲ್ ಹಾಸನ್ಗೆ ನೇರವಾಗಿ ಹೇಳುತ್ತೇನೆ. ಅವರು ಪ್ರತಿಭಾವಂತ ನಟ. ಕಮಲ್ಗೆ ಮೂಲಭೂತ ಭಾಷಾ ವಿಜ್ಞಾನದ ಅರಿವು ಯಾಕಿಲ್ಲ. ಕನ್ನಡ, ತಮಿಳು ಸೋದರ ಭಾಷೆಗಳು, ತಾಯಿ ಅಲ್ಲ. ಭಾಷೆ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಇಲ್ಲ ಅನ್ನಿಸುತ್ತೆ ಎಂದು ಕಿಡಿಕಾರಿದ್ದಾರೆ.
ಕನ್ನಡದ ತಾಯಿ ಸ್ಥಾನದ ಬಗ್ಗೆ ಗೊತ್ತಿದ್ದು ಮಾತನಾಡಿದರೋ, ಗೊತ್ತಿಲ್ಲದೇ ಮಾತನಾಡಿದರೋ ತಿಳಿಯದು. ಈ ಬಗ್ಗೆ ವಿಷಾದ ವ್ಯಕ್ತಪಡಿಸಬೇಕು. 3 ಸಾವಿರ ವರ್ಷದ ಹಿಂದಿನ ಗ್ರೀಕ್ ನಾಟಕದಲ್ಲಿ ಕನ್ನಡ ಇದೆ ಅಂತ ಹೇಳಲಾಗಿದೆ. ಈಗ ಕನ್ನಡಕ್ಕೆ ಬೂಕರ್ ಪ್ರಶಸ್ತಿ ಬಂದಿದೆ. ಈ ರೀತಿ ಮಾತನಾಡಿರುವುದು ನೋವು ತಂದಿದೆ. ಪ್ಲೀಸ್ ಲಿಂಗ್ವಿಸ್ಟಿಕ್ ಸೈನ್ಸ್ ಓದಿ ಎಂದ ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | TA Narayana Gowda: ಕಮಲ್ ಹಾಸನ್ ಹೇಳಿಕೆ ಸಂಪೂರ್ಣ ಸುಳ್ಳು; ಕರವೇ ನಾರಾಯಣ ಗೌಡ ಕಿಡಿ
ನಿಮ್ಮ ಭಾಷೆ ದೊಡ್ಡದು ಅಂತ ಹೇಳೋಕೆ ಇನ್ನೊಂದು ಭಾಷೆ ಚಿಕ್ಕದು ಮಾಡಬೇಡಿ. ತುಟಿ ಮೀರಿದ ಮಾತೋ, ಉನ್ಮಾದದ ಮಾತೋ ಗೊತ್ತಿಲ್ಲ, ಅದನ್ನ ಸರಿ ಪಡಿಸಿಕೊಳ್ಳಿ. ಇನ್ನು ಸೋನು ನಿಗಮ್ ಬಗ್ಗೆ ಕನ್ನಡ ಪರ ಹೋರಾಟಗಾರರು ಮಾಡಿದ್ದೂ ಸರಿ ಇತ್ತು. ಕನ್ನಡ ಪರ ಹೋರಾಟಕ್ಕೆ ನನ್ನ ಸಹಮತ ಇದೆ. ಒಳ್ಳೆ ಕೆಲಸ ಮಾಡಿದ್ದಾರೆ, ನಾನು ಅವರ ಜತೆ ಧ್ವನಿಗೂಡಿಸುವೆ ಎಂದು ಹೇಳಿದ್ದಾರೆ.