ಮೈಸೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ ಅವರು ಇಂದು (ಫೆ. 16 ) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ (Daali Weds Dhanyata) ಅವರೊಂದಿಗೆ ಧನಂಜಯ್ ಅವರ ವಿವಾಹ ಕಾರ್ಯ ನೆರವೇರಿದೆ. ಇವರ ಮದುವೆ ಮೈಸೂರಿನಲ್ಲಿ ನಡೆಯುತ್ತಿದ್ದು, ಮದುವೆಗಾಗಿ ವಸ್ತು ಪ್ರದರ್ಶನ ಮೈದಾನದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ರೀತಿಯಲ್ಲಿ ಸೆಟ್ ನಿರ್ಮಿಸಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಮದುವೆ ಶಾಸ್ತ್ರಗಳು ಶುರುವಾಗಿದೆ. ಮದುವೆಗೆ ಹಲವಾರು ಸಿನಿ ತಾರೆಗಳು ಅಭಿಮಾನಿಗಳು ಸೇರಿದಂತೆ ಹಲವರು ಆಗಮಿಸಿ ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ನಿನ್ನೆ ಅದ್ಧೂರಿ ಆರತಕ್ಷತೆ ನಡೆದಿದ್ದು, ಆರತಕ್ಷತೆಯ ವೇದಿಕೆ ಮೈಸೂರಿನ ಥೀಮ್ನಲ್ಲಿ ನಿರ್ಮಿಸಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕಲಾವಿದರಾದ ಅವಿನಾಶ್-ಮಾಳವಿಕಾ ದಂಪತಿ, ಶ್ರೀಮುರಳಿ, ನವೀನ್ ಶಂಕರ್, ಶರ್ಮಿಳಾ ಮಾಂಡ್ರೆ, ಇಂದ್ರಜಿತ್ ಲಂಕೇಶ್, ರಕ್ಷಿತಾ ಪ್ರೇಮ್, ಉಪೇಂದ್ರ-ಪ್ರಿಯಾಂಕಾ ದಂಪತಿ, ಧ್ರುವ ಸರ್ಜಾ, ಶ್ರುತಿ ಹರಿಹರನ್, ಮಲೈಕಾ ವಸುಪಾಲ್, ಝೈದ್ ಖಾನ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ಕೆ. ಮಂಜು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಜಕಾರಣಿಗಳಾದ ಪ್ರದೀಪ್ ಈಶ್ವರ್, ಬಿ.ಶ್ರೀರಾಮುಲು, ಅಶ್ವತ್ಥ್ ನಾರಾಯಣ್, ಜಮೀರ್ ಅಹಮ್ಮದ್ ಖಾನ್, ಬಿ.ವೈ.ವಿಜಯೇಂದ್ರ ಮತ್ತಿತರರು ಆಗಮಿಸಿದ್ದರು.
ಈ ಸುದ್ದಿಯನ್ನೂ ಓದಿ: Daali Wedding: ವಿವಾಹ ಭೋಜನವಿದು...: ಡಾಲಿ ಧನಂಜಯ್ ಮದುವೆ ಆರತಕ್ಷತೆಯ ಊಟದ ಮೆನುವಿನಲ್ಲಿ ಏನೇನಿದೆ?
ಫೆಬ್ರವರಿ 14ರಂದು ನಂಜನಗೂಡು ಬಳಿಯ ರಿವರ್ ರೇಂಜ್ ರೆಸಾರ್ಟ್ನಲ್ಲಿ ಅದ್ದೂರಿಯಾಗಿ ಅರಿಶಿನ ಶಾಸ್ತ್ರ ನಡೆದಿದ್ದು, ಧನಂಜಯ್ ಹಾಗೂ ಧನ್ಯತಾ ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಇಂದು ಮದುವೆಯ ದಿನ ಅಭಿಮಾನಿಗಳು ಹಾಗೂ ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದ್ದು, ಊಟದಲ್ಲಿ ಮೆನುವಿನಲ್ಲಿ ದಕ್ಷಿಣ ಭಾರತದ ಮಾದರಿಯ ಊಟ ಇರಲಿದೆ.