Kuladalli keelyavudo Movie: ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ಶತಾಯುಷಿ ಸಾಲುಮರದ ತಿಮ್ಮಕ್ಕ
Kuladalli keelyavudo Movie title song released: ಕೆ. ರಾಮನಾರಾಯಣ್ ನಿರ್ದೇಶನದಲ್ಲಿ ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ.ಕೆ. ಮತ್ತು ವಿದ್ಯಾ ಅವರು ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೋʼ ಚಿತ್ರದ (Kuladalli keelyavudo Movie) ಶೀರ್ಷಿಕೆ ಗೀತೆಯನ್ನು ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಮೇ 23 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ʼಕುಲದಲ್ಲಿ ಕೀಳ್ಯಾವುದೋʼ ಸರ್ವಕಾಲಿಕ ಜನಪ್ರಿಯ ಗೀತೆ. ಇಂತಹ ಜನಪ್ರಿಯ ಗೀತೆಯ ಸಾಲನಿಟ್ಟುಕೊಂಡು ಹಾಡು ಬರೆಯುವುದು ಅಷ್ಟು ಸುಲಭದ ಮಾತಲ್ಲ. ಈ ಹಾಡನ್ನು ಯೋಗರಾಜ್ ಭಟ್ ಅವರ ಹತ್ತಿರ ಬರೆಸುವುದು ಅಂತ ನಿರ್ಧಾರವಾಯಿತು. ಆದರೆ ಅವರು ʼಮನದ ಕಡಲುʼ ಚಿತ್ರದ ಬಿಡುಗಡೆಯ ಬ್ಯುಸಿಯಲ್ಲಿದ್ದರು. ಹಾಗಾಗಿ ಅವರೆ ನನಗೆ ಈ ಹಾಡನ್ನು ಬರೆಯುವಂತೆ ಹೇಳಿದರು. ಆನಂತರ ನಾನೇ ಈ ಹಾಡು ಬರೆದೆ. ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಗೂ ಈ ಹಾಡು ಇಷ್ಟವಾಯಿತು. ಚೇತನ್ ಅವರು ಹಾಡಿರುವ ಈ ಶೀರ್ಷಿಕೆ ಗೀತೆಯಲ್ಲಿ ಯೋಗರಾಜ್ ಭಟ್ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ಮೇ 23 ರಂದು ನಿಮ್ಮ ಮುಂದೆ ಬರೆಲಿದೆ ಎಂದು ನಿರ್ದೇಶಕ ರಾಮ್ ನಾರಾಯಣ್ ತಿಳಿಸಿದರು.
ಡಾ.ರಾಜಕುಮಾರ್ ಅವರ ಜನ್ಮದಿನದಂದು ಹಿರಿಯರಾದ ಸಾಲುಮರದ ತಿಮ್ಮಕ್ಕ ಅವರು ಈ ಹಾಡನ್ನು ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಅವರಿಗೆ ವಿಶೇಷ ಧನ್ಯವಾದ ಎಂದು ಮಾತನಾಡಿದ ಯೋಗರಾಜ್ ಭಟ್, ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಅವರ ಸೂಪರ್ ಹಿಟ್ ಗೀತೆಯನ್ನೇ ಶೀರ್ಷಿಕೆಯಾಗಿ ಹೊಂದಿರುವ ಈ ಚಿತ್ರದ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಿದೆ. ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ಏನು ಹೇಳಿದ್ದಾರೊ ಅದನ್ನು ಮಾಡಿದ್ದೇನೆ. ಇತ್ತೀಚೆಗೆ ಈ ಚಿತ್ರವನ್ನು ನೋಡಿದಾಗ ಎಲ್ಲಾ ಕಲಾವಿದರ ಅಭಿನಯ ಮನಸ್ಸಿಗೆ ಹತ್ತಿರವಾಯಿತು. ತಂತ್ರಜ್ಞರ ಕಾರ್ಯವೈಖರಿಯೂ ಇಷ್ಟವಾಯಿತು. ರಾಮ್ ನಾರಾಯಣ್ ಅವರ ನಿರ್ದೇಶನದ ಬಗ್ಗೆ ಹೇಳುವ ಹಾಗೆ ಇಲ್ಲ. ಇನ್ನೂ, ಗ್ರಾಮೀಣ ಪ್ರತಿಭೆ ಮಡೆನೂರ್ ಮನು. ಆತನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿರುವ ನಿರ್ಮಾಪಕರಾದ ಸಂತೋಷ್ ಕುಮಾರ್ ಹಾಗೂ ವಿದ್ಯಾ ಅವರಿಗೆ ಧನ್ಯವಾದ ಎಂದರು.
ಚಿತ್ರ ಆರಂಭದಿಂದಲೂ ನಮಗೆ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇಂದು ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಚಿತ್ರ ಮೇ 23 ತೆರೆಗೆ ಬರಲಿದೆ. ನಿಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸಂತೋಷ್ ಕುಮಾರ್. ಇಂದು ನಮ್ಮ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ಚಿತ್ರ ಮೇ 23 ಬಿಡುಗಡೆಯಾಗಲಿದೆ. ಯೋಗರಾಜ್ ಭಟ್ ಹಾಗೂ ನಿರ್ಮಾಪಕರ ಸಂತೋಷ್ ಕುಮಾರ್ ಅವರಿಗೆ ನಾನು ಆಬಾರಿ. ನಿರ್ದೇಶಕ ರಾಮ್ ನಾರಾಯಣ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಮಡೆನೂರ್ ಮನು. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಒಂದೊಳ್ಳೆ ಚಿತ್ರದಲ್ಲಿ ಅಭಿನಯಿಸಿರುವ ಖುಷಿಯಿದೆ ಎಂದರು ನಾಯಕಿ ಮೌನ ಗುಡ್ಡಮನೆ.
ಈ ಸುದ್ದಿಯನ್ನೂ ಓದಿ | Akshaya Trutiya Special: ಅಕ್ಷಯ ತೃತೀಯಾ ಪ್ರಯುಕ್ತ ಬಂಗಾರ ಖರೀದಿಸುವವರು ತಿಳಿದುಕೊಳ್ಳಬೇಕಾದ ಅಂಶಗಳಿವು
ಹಿರಿಯ ನಟರಾದ ಉಮೇಶ್, ಕರಿಸುಬ್ಬು, ಡ್ರ್ಯಾಗನ್ ಮಂಜು, ಸೀನ, ಸಂಭಾಷಣೆ ಬರೆದಿರುವ ವಿಜಯಾನಂದ್ ಹಾಗೂ ಹಾಡಿನಲ್ಲಿ ಅಭಿನಯಿಸಿರುವ ನಟಿ ಯಶಸ್ವಿನಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮಡೆನೂರ್ ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.