ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madhabi Puri: ಭ್ರಷ್ಟಾಚಾರ ಆರೋಪ: ಸೆಬಿ ಮಾಜಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

ಹಿಂಡೆನ್‌ಬರ್ಗ್ ವರದಿಯ ಆಧಾರದ ಮೇಲೆ ದಾಖಲಿಸಿರುವ ಭ್ರಷ್ಟಾಚಾರ ಆರೋಪಗಳಲ್ಲಿ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯ (ಸೆಬಿ) ಮಾಜಿ ಮುಖ್ಯಸ್ಥೆ ಮಾಧಾಬಿ ಪುರಿ ಬುಚ್ ಅವರಿಗೆ ಲೋಕಪಾಲ್ ಬುಧವಾರ ಕ್ಲೀನ್ ಚಿಟ್ ನೀಡಿದೆ. ಅವರ ವಿರುದ್ಧ ದಾಖಲಾಗಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ಲೋಕಪಾಲ್ ಹೇಳಿದೆ.

ಮಾಧಬಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

ನವದೆಹಲಿ: ಸೆಕ್ಯುರಿಟೀಸ್ ಆ್ಯಂಡ್‌ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India) ಮಾಜಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ (Madhabi Puri Buch) ವಿರುದ್ಧ ಹಿಂಡೆನ್‌ಬರ್ಗ್ ವರದಿಯ (Hindenburg Report) ಆಧಾರದ ಮೇಲೆ ದಾಖಲಾಗಿರುವ ಭ್ರಷ್ಟಾಚಾರ ಆರೋಪಗಳಿಂದ ಕ್ಲೀನ್ ಚಿಟ್ ನೀಡಿ ಲೋಕಪಾಲ್ (Lokpal) ಬುಧವಾರ ಆದೇಶ ನೀಡಿದೆ. ಪುರಿ ಬುಚ್ ವಿರುದ್ಧದ ದೂರುಗಳನ್ನು ಪರಿಶೀಲಿಸಿದ ಲೋಕಪಾಲ್, ಈ ಆರೋಪಗಳು ಆಧಾರರಹಿತ ಎಂದು ತೀರ್ಮಾನಿಸಿದೆ. ದೂರುಗಳಿಗೆ ಸಂಬಂಧಿಸಿ ಸಲ್ಲಿಸಲಾದ ಸಾಕ್ಷ್ಯಾಧಾರಗಳು ಕಾನೂನಿನಲ್ಲಿ ಮಾನ್ಯವಾಗಿಲ್ಲ ಎಂದು ಲೋಕಪಾಲ್ ತನ್ನ ಆದೇಶದಲ್ಲಿ ತಿಳಿಸಿದೆ.

ಒದಗಿಸಲಾಗಿರುವ ದಾಖಲೆಗಳು ಕಾನೂನಲ್ಲಿ ಮಾನ್ಯವಾಗಿಲ್ಲ. ಹೀಗಾಗಿ ಅವರ ವಿರುದ್ಧದ ತನಿಖೆಗೆ ಯಾವುದೇ ಕಾರಣವಿಲ್ಲ ಎಂದು ಲೋಕಪಾಲ್ ಹೇಳಿದೆ.

ಏನು ಆರೋಪ?

ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಜತೆ ಮಾಧವಿ ಪುರಿ ಅವರಿಗೆ ನಂಟಿದೆ ಎಂದು ಹೇಳಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಭ್ರಷ್ಟಾಚಾರ ವಿರೋಧಿ ತನಿಖಾ ಸಂಸ್ಥೆಯಾದ ಲೋಕಪಾಲ್​​ನಲ್ಲಿ ಮೂರು ದೂರುಗಳನ್ನು ದಾಖಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ಲೋಕಪಾಲ್ ನ್ಯಾಯಪೀಠ ಮಾಧವಿ ಪುರಿ ಬುಚ್ ವಿರುದ್ಧ ತನಿಖೆಯ ಅಗತ್ಯ ಇಲ್ಲವೆಂದು ಅಭಿಪ್ರಾಯಪಟ್ಟಿದೆ.

ಮೊದಲ ಆರೋಪ

ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳ (REIT) ಬಗ್ಗೆ ಬುಚ್ ಮಾಡಿರುವ ಪ್ರಚಾರವು ಅವರ ಪತಿ ಸಂಬಂಧ ಹೊಂದಿದ್ದ ಜಾಗತಿಕ ಹೂಡಿಕೆ ಸಂಸ್ಥೆ ಬ್ಲಾಕ್‌ಸ್ಟೋನ್‌ಗೆ ಲಾಭವನ್ನುಂಟು ಮಾಡಿತು. ಸೆಬಿ ಅಧ್ಯಕ್ಷೆಯಾಗಿ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿದ್ದಾರೆ.

ಎರಡನೇ ಆರೋಪ

ಬುಚ್ ಐಸಿಐಸಿಐ ಬ್ಯಾಂಕ್‌ ಖಾತೆ ಬಗ್ಗೆ ಸರಿಯಾಗಿ ವಿವರಣೆ ನೀಡಿಲ್ಲ. ಇದರಿಂದ ಅವರು ಹಿಂದಿನ ಸೇವೆಯಿಂದ ಪಡೆದ ಆದಾಯದ ಬಗ್ಗೆ ಘೋಷಣೆ ಮಾಡಿಕೊಂಡಿಲ್ಲ. ಆದರೆ ಈ ಕುರಿತು ಸರ್ಕಾರ ನಡೆಸಿದ ತನಿಖೆಯಲ್ಲಿ ಯಾವುದೇ ಕಾನೂನುಬಾಹಿರ ವಹಿವಾಟು ಕಂಡುಬಂದಿಲ್ಲ. ಬುಚ್ ಎಲ್ಲ ಅಗತ್ಯ ತೆರಿಗೆಗಳನ್ನು ಪಾವತಿಸಿದ್ದಾರೆ ಎಂದು ದೃಢೀಕರಿಸಲಾಗಿದೆ. ಬ್ಯಾಂಕ್ ಸ್ಪಷ್ಟಪಡಿಸಿದಂತೆ 2013ರ ಅಕ್ಟೋಬರ್‌ನಲ್ಲಿ ಅವರು ನಿವೃತ್ತಿಯಾದ ಮೇಲೆ ವೇತನ ದೊರೆತಿಲ್ಲ. ನಿವೃತ್ತಿ ಪ್ರಯೋಜನಗಳನ್ನು ಮಾತ್ರ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Bangalore palace grounds: ಮೈಸೂರು ರಾಜಮನೆತನಕ್ಕೆ ಟಿಡಿಆರ್:‌ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ರಿಲೀಫ್‌

ಮೂರನೇ ಆರೋಪ

ಬುಚ್ ನಾಯಕತ್ವದ ಬಗ್ಗೆ ಸೆಬಿಯೊಳಗಿನ ನೌಕರರು ಹಣಕಾಸು ಸಚಿವಾಲಯಕ್ಕೆ ದೂರು ಸಲ್ಲಿಸಿದ ಬಳಿಕ ಸೆಬಿ ಮತ್ತು ರಾಜಕೀಯ ವಲಯಗಳಲ್ಲಿ ಕಳವಳ ವ್ಯಕ್ತವಾಯಿತು. ಅವರ ವಿರುದ್ಧ ಸಿಬ್ಬಂದಿ ಕಿರುಕುಳದ ಆರೋಪ ಮಾಡಿದರು. ನೌಕರರನ್ನು ನಿಂದಿಸುತ್ತಾರೆ ಎಂದು ದೂರಿದರು. ಈ ಕುರಿತು ಕೂಡ ತನಿಖೆ ನಡೆದಿದ್ದು, ಬುಚ್ ಸೆಬಿಯೊಳಗೆ ಜಾರಿಗೆ ತಂದಿರುವ ವ್ಯಾಪಕ ಸುಧಾರಣೆಗಳಿಂದ ಕೆಲವರು ಅತೃಪ್ತಿಗೊಂಡು ದೂರು ನೀಡಿದ್ದಾರೆ ಎನ್ನುವುದು ತಿಳಿದುಬಂದಿತ್ತು. ವ್ಯವಸ್ಥೆಯನ್ನು ಸರಿಪಡಿಸುವ ಅವರ ಪ್ರಯತ್ನಗಳಿಗೆ ಸಂಸ್ಥೆಯೊಳಗೆ ಭಾರಿ ವಿರೋಧ ವ್ಯಕ್ತವಾಗಿತ್ತು.