ನವದೆಹಲಿ: ಆಮದು ಸುಂಕಗಳನ್ನು (Import duties) ಹೆಚ್ಚಿಸಿರುವ ಮೆಕ್ಸಿಕೋದೊಂದಿಗೆ (Mexico) ವ್ಯಾಪಾರ ಒಪ್ಪಂದವನ್ನು (trade deal) ಮುಂದುವರಿಸಲು ನಿರ್ಧರಿಸಿರುವ ಭಾರತ ಆದ್ಯತೆಯ ವ್ಯಾಪಾರ ಒಪ್ಪಂದಕ್ಕೆ (Preferential trade deal) ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ಎರಡು ರಾಷ್ಟ್ರಗಳ ವ್ಯಾಪಾರ ಪಾಲುದಾರರು ತಮ್ಮ ನಡುವೆ ವ್ಯಾಪಾರ ಮಾಡುವ ಸೀಮಿತ ಸಂಖ್ಯೆಯ ಸರಕುಗಳ ಮೇಲಿನ ಆಮದು ಸುಂಕಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದ್ದಾರೆ ಅಥವಾ ಸಂಪೂರ್ಣವಾಗಿ ತೆಗೆದುಹಾಕಲಿದ್ದಾರೆ. ಇದು ಎರಡು ರಾಷ್ಟ್ರಗಳಿಗೆ ಲಾಭದಾಯಕವಾಗಿರಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ (Commerce Secretary Rajesh Agrawal) ತಿಳಿಸಿದ್ದಾರೆ.
ಭಾರತವು ಮೆಕ್ಸಿಕೋ ವಿಧಿಸಿರುವ ಹೆಚ್ಚಿನ ಆಮದು ಸುಂಕದಿಂದ ಹೆಚ್ಚಿನ ನಷ್ಟವಾಗದಿರಲು ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಕುರಿತು ಸೋಮವಾರ ಮಾಹಿತಿ ನೀಡಿರುವ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್, ದೇಶೀಯ ರಫ್ತುದಾರರಿಗೆ ಸಹಾಯ ಮಾಡಲು ಭಾರತವು ಮೆಕ್ಸಿಕೋದೊಂದಿಗೆ ಆದ್ಯತೆಯ ವ್ಯಾಪಾರ ಒಪ್ಪಂದವನ್ನು ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ; ರಾಹುಲ್, ಸೋನಿಯಾ ಗಾಂಧಿಗೆ ಬಿಗ್ ರಿಲೀಫ್
ಮೆಕ್ಸಿಕೋದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಿದ್ದ ಭಾರತ, ಚೀನಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ಸೇರಿದಂತೆ ಇನ್ನು ಹಲವು ರಾಷ್ಟ್ರಗಳಿಗೆ ವ್ಯಾಪಕ ಶ್ರೇಣಿಯ ಸರಕುಗಳ ಮೇಲೆ ಶೇ. 5 ರಿಂದ ಶೇ.50 ರಷ್ಟು ಹೆಚ್ಚಿನ ಆಮದು ಸುಂಕಗಳನ್ನು ವಿಧಿಸಲು ಮೆಕ್ಸಿಕೋ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಇದೀಗ ಆದ್ಯತೆಯ ವ್ಯಾಪಾರ ಒಪ್ಪಂದವನ್ನು ಮೆಕ್ಸಿಕೋದೊಂದಿಗೆ ಪ್ರಸ್ತಾಪ ಮಾಡಿದೆ ಎಂದು ಹೇಳಿದರು.
ಸದ್ಯಕ್ಕೆ ಆದ್ಯತೆಯ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ನಡೆಸಲಾಗುತ್ತಿದೆ. ಇದು ಸದ್ಯ ಇರುವ ಸಮಸ್ಯೆಗಳ ಪರಿಹಾರಕ್ಕೆ ತ್ವರಿತ ಮಾರ್ಗವಾಗಿದೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಇದರ ಕುರಿತು ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲಾಗುವುದು ಎಂದರು.
ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಎರಡು ರಾಷ್ಟ್ರಗಳ ವ್ಯಾಪಾರ ಪಾಲುದಾರರು ವ್ಯಾಪಾರ ಮಾಡುವ ಗರಿಷ್ಠ ಸಂಖ್ಯೆಯ ಸರಕುಗಳ ಮೇಲಿನ ಆಮದು ಸುಂಕಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಾರೆ ಅಥವಾ ತೆಗೆದುಹಾಕುತ್ತಾರೆ. ಆದ್ಯತೆಯ ವ್ಯಾಪಾರ ಒಪ್ಪಂದದಲ್ಲಿ ಸೀಮಿತ ಸಂಖ್ಯೆಯ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿತಗೊಳಿಸಲಾಗುತ್ತದೆ ಅಥವಾ ತೆಗೆದುಹಾಕಲಾಗುತ್ತದೆ ಎಂದು ಅವರು ಹೇಳಿದರು.
ಮೆಕ್ಸಿಕೋ ವಿಧಿಸಿರುವ ಹೆಚ್ಚಿನ ಸುಂಕಗಳ ವಿರುದ್ಧವಾಗಿ ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡುವ ಹಾಗಿಲ್ಲ. ಯಾಕೆಂದರೆ ಅವರು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳನ್ನು ಅನುಸರಿಸಿ ಸುಂಕ ಪರಿಷ್ಕರಣೆ ಮಾಡಿದ್ದಾರೆ. ಅವರು ಭಾರತದ ವಿರುದ್ಧ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನಾವು ಆದ್ಯತೆಯ ವ್ಯಾಪಾರ ಒಪ್ಪಂದವನ್ನು ಪ್ರಸ್ತಾಪ ಮಾಡಿದ್ದೇವೆ ಎಂದರು.
ಆದ್ಯತೆಯ ವ್ಯಾಪಾರ ಒಪ್ಪಂದವು ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಯ ದಾರಿಯಾಗಿದೆ. ಭಾರತೀಯ ಪೂರೈಕೆ ಸರಪಳಿಗಳಿಗೆ ಅಗತ್ಯವಿರುವ ರಿಯಾಯಿತಿಗಳನ್ನು ಇದರಿಂದ ಪಡೆಯಲು ಪ್ರಯತ್ನಿಸಬಹುದು. ಅವರ ಸರಕುಗಳನ್ನು ಭಾರತಕ್ಕೆ ರಫ್ತು ಮಾಡಿದರೆ ನಾವು ಅವರಿಗೂ ಕೆಲವು ರಿಯಾಯಿತಿಗಳನ್ನು ನೀಡಬಹುದು ಎಂದು ಅಗರ್ವಾಲ್ ತಿಳಿಸಿದರು.
ಭಯೋತ್ಪಾದನೆ ನಿಗ್ರಹಕ್ಕೆ ಭಾರತದೊಂದಿಗೆ ಕೈಜೋಡಿಸಿದ ಜೋರ್ಡಾನ್
ಸ್ಥಳೀಯ ಉತ್ಪಾದನೆ ಮತ್ತು ವ್ಯಾಪಾರ ಅಸಮತೋಲನ ತಿದ್ದುಪಡಿಗೆ ಬೆಂಬಲವನ್ನು ಉಲ್ಲೇಖಿಸಿ 2026ರ ಜನವರಿ 1ರಿಂದ ಜಾರಿಗೆ ಬರುವಂತೆ ಮೆಕ್ಸಿಕೋ ಆಮದು ಸುಂಕಗಳನ್ನುಹೆಚ್ಚಿಸಿದೆ. ಇದರಲ್ಲಿ ಅದು ಮುಖ್ಯವಾಗಿ ಮುಕ್ತ ವ್ಯಾಪಾರ ಒಪ್ಪಂದದ ಪಾಲುದಾರರನ್ನು ಅದು ಗುರಿಯಾಗಿಸಿಕೊಂಡಿದೆ.
ಇದು ವಿಶೇಷವಾಗಿ ಭಾರತದ ಸುಮಾರು 2 ಬಿಲಿಯನ್ ಯುಎಸ್ ಡಾಲರ್ ರಫ್ತಿನ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಆಟೋಮೊಬೈಲ್, ದ್ವಿಚಕ್ರ ವಾಹನ, ಆಟೋ ಭಾಗಗಳು, ಜವಳಿ, ಕಬ್ಬಿಣ ಮತ್ತು ಉಕ್ಕು, ಪ್ಲಾಸ್ಟಿಕ್ಗಳು, ಚರ್ಮ ಮತ್ತು ಪಾದರಕ್ಷೆಗಳು ಸೇರಿವೆ. ಆಮದು ಸುಂಕ ಹೆಚ್ಚಳಕ್ಕೆ ಮುಖ್ಯ ಕಾರಣ ಚೀನಾದ ಆಮದುಗಳನ್ನು ತಡೆಯುವುದಾಗಿದೆ ಎನ್ನಲಾಗಿದೆ.