ಲಖನೌ, ಜೂ. 6: 18 ವರ್ಷದ ಸ್ನೇಹ ಕೊಲೆಯಲ್ಲಿ ಕೊನೆಗೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಂಪ್ಯೂಟರ್ ಕೋಚಿಂಗ್ ಸಂಸ್ಥೆಯ ಮಾಲಕ ಪ್ರಕಾಶ್ ಚಂದ್ರ ಗುಪ್ತ ಅವರನ್ನು ಅವರ ಆತ್ಮೀಯ ಸ್ನೇಹಿತ ಮೋಹಿತ್ ದ್ವಿವೇದಿ 5 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಸರಕ್ಕಾಗಿ ಹತ್ಯೆ ಮಾಡಿದ್ದಾನೆ. ಯುಟ್ಯೂಬ್ ನೋಡಿ ಕೊಲೆಯನ್ನು ಸೂಕ್ಷ್ಮವಾಗಿ ಯೋಜಿಸಿದ್ದ ದ್ವಿವೇದಿ, ಬುರ್ಖಾ ಧರಿಸಿ ತನ್ನ ಗುರುತನ್ನು ಮರೆಮಾಚಲು ಯತ್ನಿಸಿದ್ದ. ಆದರೆ ಸಿಸಿಟಿವಿ ಕ್ಯಾಮರಾದ ದೃಶ್ಯಗಳಲ್ಲಿ ಕಂಡುಬಂದ ಅವನ ಅಸಹಜ ನಡಿಗೆಯ ಶೈಲಿಯೇ ಕೊನೆಗೆ ಪೊಲೀಸರಿಗೆ ಸುಳಿವು ನೀಡಿತು. ಇದು ಆರೋಪಿಯನ್ನು ಬಂಧಿಸಲು ಕಾರಣವಾಯಿತು (Crime News) ಎಂದು ವರದಿಯೊಂದು ತಿಳಿಸಿದೆ.
ಮೇ 31ರ ರಾತ್ರಿ, ಐಪಿಎಲ್ ಫೈನಲ್ ಪಂದ್ಯದ ಸಮಯದಲ್ಲಿ ಪ್ರಕಾಶ್ ಚಂದ್ರ ಅವರ ತರಬೇತಿ ಸಂಸ್ಥೆಯಲ್ಲಿ ಮೋಹಿತ್ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದ್ದ. ತನ್ನ ಸ್ನೇಹಿತ ಪಂದ್ಯವನ್ನು ವೀಕ್ಷಿಸಲು ರಾತ್ರಿಯಿಡೀ ಉಳಿದುಕೊಳ್ಳುವುದನ್ನು ತಿಳಿದು, ಮೋಹಿತ್ ತನ್ನ ಗುರುತನ್ನು ಮರೆಮಾಡಲು ಬುರ್ಖಾ ಮತ್ತು ಮಹಿಳೆಯರ ಪಾದರಕ್ಷೆ ಧರಿಸಿ ಬಂದಿದ್ದ.
ಕೋಣೆಯೊಳಗೆ ಮೋಹಿತ್ ಕುಡಿದ ಅಮಲಿನಲ್ಲಿ ಪ್ರಕಾಶ್ ಬಳಿಯಿಂದ ಚಿನ್ನದ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಜಗಳ ಪ್ರಾರಂಭವಾಯಿತು. ಗಲಾಟೆ ವೇಳೆ ಪ್ರಕಾಶ್ ಅವರನ್ನು ಮೋಹಿತ್ ಬಲವಾಗಿ ತಳ್ಳಿದ್ದಾನೆ. ಇದರಿಂದಾಗಿ ಅವರು ನೆಲದ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ನಂತರ, ಆರೋಪಿ ಮೋಹಿತ್ ಚಿನ್ನದ ಸರವನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ.
ಆಸ್ತಿ ಕಲಹಕ್ಕೆ ಕುಟುಂಬವೇ ನಾಶ: ಪೋಷಕರು, ಸೋದರಿಯನ್ನು ಹತ್ಯೆ ಮಾಡಿದ ವ್ಯಕ್ತಿ
ಮರುದಿನ ಬೆಳಗ್ಗೆ, ಕುಟುಂಬದ ಸದಸ್ಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಕಾಶ್ ಅವರ ಮೃತದೇಹವನ್ನು ನೋಡಿ ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು ನೆಲಕ್ಕೆ ಬಿದ್ದ ಪ್ರಕಾಶ್ ಗಂಭೀರ ಗಾಯಗೊಂಡು ಮೃತಪಟ್ಟಿರಬಹುದು ಎಂದು ಶಂಕಿಸಿದ್ದರು. ಆದರೆ ಮೈಮೇಲೆ ಧರಿಸಿದ್ದ ಆಭರಣಗಳು ಕಾಣೆಯಾಗಿದ್ದರಿಂದ ಕೊಲೆ ನಡೆದಿದೆ ಎಂಬ ಶಂಕೆ ಮೂಡಿತು. ಹೀಗಾಗಿ ಪೊಲೀಸರು ತನಿಖೆ ಆರಂಭಿಸಿದರು.
ಆರೋಪಿಯನ್ನು ಪತ್ತೆಹಚ್ಚಲು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ರಘುಬೀರ್ ಲಾಲ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಬುರ್ಖಾ ಧರಿಸಿದ ವ್ಯಕ್ತಿ ಓಡಾಡುತ್ತಿರುವುದು ಕಂಡುಬಂತು. ಆದರೆ ವ್ಯಕ್ತಿಯ ನಡಿಗೆಯಲ್ಲಿ ಏನೋ ಅಸಹಜತೆ ಎದ್ದು ಕಾಣುತ್ತಿತ್ತು.
ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಚುರುಕುಗೊಳಿಸಿದರು. 100 ಸಿಸಿಟಿವಿ ಕ್ಯಾಮರಾಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ಬುರ್ಖಾ ಧರಿಸಿದ ವ್ಯಕ್ತಿಯನ್ನು ಪತ್ತೆಹಚ್ಚಿದರು. ಆರೋಪಿ ಮೋಹಿತ್ ಕಾರಿನಲ್ಲಿ ವೇಷ ಬದಲಾಯಿಸುತ್ತಿರುವುದು ಗೊತ್ತಾಯಿತು. ಇದು ಆರೋಪಿಯ ತ್ವರಿತ ಬಂಧನಕ್ಕೆ ಕಾರಣವಾಯಿತು. ಕೊಲೆ ಮಾಡಿದ್ದರೂ ತನಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸಿದ್ದ ಮೋಹಿತ್, ಕುಟುಂಬದ ಜತೆ ತಾನೂ ದುಃಖಿತನಾದಂತೆ ನಟಿಸಿದ್ದ. ಅಪರಾಧ ಸ್ಥಳ ಆಗಮಿಸಿ ತನಿಖಾಧಿಕಾರಿಗಳೊಂದಿಗೆ ಮಾತನಾಡಿದ್ದ.
ಮರುದಿನ ಲಖನೌಗೆ ಪ್ರಯಾಣ ಬೆಳೆಸಿದ್ದ. ಸ್ನೇಹಿತನಿಂದಲೇ ಪ್ರಕಾಶ್ ಹತ್ಯೆಯಾಗಿರುವ ವಿಚಾರ ಮೃತರ ಕುಟುಂಬವು ಆಘಾತಕ್ಕೊಳಗಾಗಿದೆ. ʼʼಮೋಹಿತ್ ಹೀಗೆ ಮಾಡುತ್ತಾನೆಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲʼʼ ಎಂದು ಪ್ರಕಾಶ್ನ ಸಹೋದರ ವಿಕಾಸ್ ಹೇಳಿದ್ದಾರೆ.