ಉತ್ತರಪ್ರದೇಶ: ಹಾನಿಗೊಳಗಾದ ರಸ್ತೆಯ ಗುಂಡಿಯಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಆಂಬ್ಯುಲೆನ್ಸ್ (Ambulance Gets Stuck) ಸಿಲುಕಿ ನವಜಾತ ಶಿಶುವೊಂದು (Newborn death) ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar pradesh) ಬಹ್ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆ ಸೆಪ್ಟೆಂಬರ್ 2ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಹ್ ಪ್ರದೇಶದ ಗಧ್ವರ್ ಗ್ರಾಮದಲ್ಲಿ ಪ್ರದೀಪ್ ಸಿಂಗ್ ಅವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಬಹ್ ಪ್ರದೇಶದ ಗಧ್ವರ್ ಗ್ರಾಮದ ಪ್ರದೀಪ್ ಸಿಂಗ್ ಅವರ ಪತ್ನಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್ ಹಾನಿಗೊಳಗಾದ ರಸ್ತೆಯ ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಗ್ರಾಮಸ್ಥರೆಲ್ಲ ಸೇರಿ ಅದನ್ನು ಹೊರತೆಗೆಯಲು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದರು. ಆದರೆ ಸಾಧ್ಯವಾಗದೆ ಕೊನೆಗೆ ಟ್ರ್ಯಾಕ್ಟರ್ಗೆ ಕಟ್ಟಿ ಅದನ್ನು ಮೇಲೆತ್ತಬೇಕಾಯಿತು. ಆದರೆ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸುವ ವೇಳೆಗೆ ನವಜಾತ ಶಿಶು ಸಾವನ್ನಪ್ಪಿದೆ.
ಈ ಕುರಿತು ಸೋಮವಾರ ಮಾಹಿತಿ ನೀಡಿದ ಅಧಿಕಾರಿಗಳು, ಬಹ್ ಪ್ರದೇಶದ ಹಳ್ಳಿಯೊಂದರಲ್ಲಿ ಆಂಬ್ಯುಲೆನ್ಸ್ ಸುಮಾರು ಎರಡು ಗಂಟೆಗಳ ಕಾಲ ಹಾನಿಗೊಳಗಾದ ರಸ್ತೆಯಲ್ಲಿ ಸಿಲುಕಿಕೊಂಡಿದ್ದರಿಂದ ನವಜಾತ ಶಿಶುವೊಂದು ಸಾವನ್ನಪ್ಪಿದೆ. ಈ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ರಸ್ತೆ ನಿರ್ವಹಣೆಗೆ ಕಾರಣರಾದ ಜನರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರದೀಪ್ ಕುಮಾರ್ ಅವರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್, ಸೆಪ್ಟೆಂಬರ್ 5 ರಂದು ತಹಸಿಲ್ ದಿವಸ್ ಸಂದರ್ಭದಲ್ಲಿ ಈ ಕುರಿತು ದೂರು ಸ್ವೀಕರಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಅದನ್ನು ರವಾನಿಸಲಾಗಿದ್ದು, ಸಂಪೂರ್ಣ ತನಿಖಾ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ವರದಿ ಬಂದ ಬಳಿಕ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ನವಜಾತ ಶಿಶುವಿನ ಸಾವಿಗೆ ಭ್ರಷ್ಟಾಚಾರ ಕಾರಣ. ಇದಕ್ಕಿಂತ ದುರದೃಷ್ಟಕರವಾದದ್ದು ಏನಿದೆ. ಬಿಜೆಪಿ ಭ್ರಷ್ಟಾಚಾರಕ್ಕೆ ಹುಟ್ಟಿಲ್ಲದವರು ಕೂಡ ಸಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.