ನವದೆಹಲಿ, ಫೆ. 4: ಕ್ಷುಲ್ಲಕ ಕಾರಣದ ಜಗಳಗಳು ಕೆಲವೊಮ್ಮೆ ಅತಿರೇಕದ ವರ್ತನೆಗೆ ಕಾರಣವಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿಯ ಕನ್ನಾಟ್ನಲ್ಲಿ ಸಣ್ಣ ವಿಚಾರಕ್ಕೆ ನಡೆದ ಜಗಳ ಒಬ್ಬರು ಪ್ರಾಣವನ್ನೇ ತೆಗೆದಿದೆ. ರಾತ್ರಿ ಪಾರ್ಟಿಗೆ ಹೋಗಿದ್ದ 36 ವರ್ಷದ ಉದ್ಯಮಿಯನ್ನು ಮೂವರು ಡೆಲಿವರಿ ಸಿಬ್ಬಂದಿ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೆಲ್ಮೆಟ್ನಿಂದ ಆತನನ್ನು ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮೃತ ಉದ್ಯಮಿಯನ್ನು ಉದ್ಯಮಿ ಶಿವಂ ಗುಪ್ತಾ ಎಂದು ಗುರುತಿಸಲಾಗಿದೆ. ಪಾರ್ಟಿಯೊಂದಕ್ಕೆ ಹೋಗಿದ್ದ ಶಿವಂಗೆ ಮೂವರು ಫುಡ್ ಡೆಲಿವರಿ ಏಜೆಂಟ್ಗಳೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಡೆಲಿವರಿ ಸಿಬ್ಬಂದಿ ಹೆಲ್ಮೆಟ್ಗಳನ್ನು ಬಳಸಿ ಗುಪ್ತಾ ಅವರನ್ನು ಹೊಡೆದಿದ್ದಾರೆ. ನಂತರ ಗಂಭೀರ ಗಾಯಗೊಂಡ ಅವರನ್ನು ಜನಪ್ರಿಯ ಶಾಪಿಂಗ್ ಪ್ರದೇಶದ ಪಾದಚಾರಿ ಮಾರ್ಗದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಈ ದೇಶದ ಮಹಿಳೆಯರಿಗೆ ಬಾಡಿಗೆ ಗಂಡ ಬೇಕಂತೆ! ಸರ್ಕಾರವೇ ವಿದೇಶಿ ಹುಡುಗರಿಗೆ ಆಹ್ವಾನ ನೀಡುತ್ತೆ
ಘಟನೆ ನಡೆದ ಕೂಡಲೇ ಪೊಲೀಸರು ಶಿವಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಜನವರಿ 3ರ ರಾತ್ರಿ ಈ ಘಟನೆ ನಡೆದಿದ್ದು ಉದ್ಯಮಿ ಶಿವಂ ಗುಪ್ತಾ ಎರಡು ವಾರಗಳಿಗೂ ಹೆಚ್ಚು ಕಾಲ ಆಸ್ಪತ್ರೆ ಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ತೀವ್ರ ಗಾಯಗಳಿಂದಾಗಿ ಜನವರಿ 19ರಂದು ಅವರು ಸಾವನ್ನಪ್ಪಿದರು. ಸದ್ಯ ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಗುಪ್ತಾ ಅವರ ರಕ್ತಸಿಕ್ತ ಬಟ್ಟೆಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ತೆಗೆದುಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರನೇ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ದೆಹಲಿಯ ಪಹರ್ಗಂಜ್ನಲ್ಲಿ ಎರಡು ಅಂಗಡಿಗಳನ್ನು ನಡೆಸುತ್ತಿರುವ ಶಿವಂ ಅವರ ತಂದೆ ಅನಿಲ್ ಕಾಂತ್ ಗುಪ್ತಾ, ತಮ್ಮ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.