ನವದೆಹಲಿ, ಏ.24: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಐಆರ್ಎಸ್ ಅಧಿಕಾರಿಯ ಪುತ್ರಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು (IRS officer daughter murder case). ಪ್ರಕರಣ ಸಂಬಂಧ ಮನೆಕೆಲಸದಾತ 19 ವರ್ಷದ ರಾಹುಲ್ ಮೀನಾನನ್ನು ಬಂಧಿಸಲಾಗಿದೆ. ತಾನು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಆರೋಪಿ ಹೇಳಿದ್ದಾನೆ. ಹಣ ಪಡೆಯಲು ದಕ್ಷಿಣ ದೆಹಲಿಯಲ್ಲಿರುವ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯ ಮನೆಗೆ ನುಸುಳಿದ್ದೆ ಎಂದು ಹೇಳಿದ್ದಾನೆ. ವಿಚಾರಣೆಯ ಸಮಯದಲ್ಲಿ, ಸಹೋದರಿ ಹಣ ನೀಡಿದ್ದರೆ, ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದವನು ಹೇಳಿದ್ದಾನೆ.
ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರ, ಅಧಿಕಾರಿ ಮಗಳ ಕೊಲೆ
ರಾಹುಲ್ ಮೀನಾ ಐಆರ್ಎಸ್ ಅಧಿಕಾರಿಯ ಮನೆಯಲ್ಲಿ ಎಂಟು ತಿಂಗಳ ಕಾಲ 20,000 ರೂ. ಸಂಬಳ ಮತ್ತು ಬೋನಸ್ನೊಂದಿಗೆ ಕೆಲಸ ಮಾಡಿದ್ದಾನೆ. ನಂತರ ನೆರೆಹೊರೆಯ ಮನೆಕೆಲಸದವರಿಂದ ಸಾಲ ಪಡೆಯುವುದು, ಅಂಗಡಿಯಿಂದ ವಸ್ತುಗಳನ್ನು ಸಾಲವಾಗಿ ಖರೀದಿಸುವ ಚಟ ಬೆಳೆಸಿಕೊಂಡ. ಇದು ಮನೆ ಮಾಲೀಕರಿಗೆ ಗೊತ್ತಾಗಿ ಆತನನ್ನು ಮನೆಯಿಂದ ಹೊರಹಾಕಿದ್ದರು.
ಏಪ್ರಿಲ್ 21ರ ಮಂಗಳವಾರ ಸಂಜೆ, ಆರೋಪಿಯು ಅಲ್ವಾರ್ನಲ್ಲಿ ಸ್ನೇಹಿತನೊಂದಿಗೆ ಮದುವೆಗೆ ಹಾಜರಾಗಲು ಹೋಗಿದ್ದನು. ಆ ರಾತ್ರಿ, ಅವನು ಒಬ್ಬಂಟಿಯಾಗಿ ಹಳ್ಳಿಗೆ ಹಿಂತಿರುಗಿದನು. ಆದರೆ ಅವನು ಹೋಗಿದ್ದು, ಅದೇ ಸ್ನೇಹಿತನ ಮನೆಗೆ. ಅಲ್ಲಿಗೆ ಹೋದ ಆತ ತನ್ನ ಸ್ನೇಹಿತನ ಹೆಂಡತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲಿಂದ ಪರಾರಿಯಾಗುವ ಮುನ್ನ ಆಕೆಯ ಮೊಬೈಲ್ ಫೋನ್ ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಮನೆಯಿಂದ ಹೊರಹೋಗುವ ದೃಶ್ಯದ ವಿಡಿಯೊ ಇಲ್ಲಿದೆ:
ಅನುಮಾನ ಬರದಂತೆ ಮತ್ತು ಪತ್ತೆಹಚ್ಚುವುದನ್ನು ತಡೆಯಲು, ಅವನು ತನ್ನ ಮತ್ತು ತನ್ನ ಕುಟುಂಬ ಸದಸ್ಯರಿಗೆ ಸೇರಿದ ಮೂರು ಮೊಬೈಲ್ ಫೋನ್ಗಳನ್ನು ಮಾರಾಟ ಮಾಡಿದನು. ನಂತರ ದೆಹಲಿಗೆ 6,000 ರೂ.ಗೆ ಕ್ಯಾಬ್ ಬಾಡಿಗೆಗೆ ಪಡೆದನು. ಹಣದ ಒಂದು ಭಾಗವನ್ನು ಆನ್ಲೈನ್ ಬೆಟ್ಟಿಂಗ್ಗೆ ಬಳಸಿದ್ದಾನೆ.
ಐಆರ್ಎಸ್ ಅಧಿಕಾರಿಯ ಪುತ್ರಿ ಅತ್ಯಾಚಾರ, ಕೊಲೆ; 2.5 ಲಕ್ಷ ರೂ. ದೋಚಿದ ಆರೋಪಿ, ತನಿಖೆಯಲ್ಲಿ ಬಯಲಾಗಿದ್ದೇನು?
ದೆಹಲಿ ತಲುಪಿದ ನಂತರ, ಅವನು ಚಾಲಕನಿಗೆ ಹಣ ನೀಡದೆ ಹೊರಟು ತನ್ನ ಮಾಜಿ ಉದ್ಯೋಗದಾತರ ಮನೆಗೆ ನಡೆದುಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ. ಅಲ್ಲಿ ಅವನು ಐಆರ್ಎಸ್ ಅಧಿಕಾರಿಯ 22 ವರ್ಷದ ಮಗಳನ್ನು ಹತ್ಯೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಮನೆಯ ಬಗ್ಗೆ ಹಾಗೂ ಕುಟುಂಬದ ಬೆಳಗ್ಗಿನ ದಿನಚರಿಯ ಬಗ್ಗೆ ಚೆನ್ನಾಗಿ ತಿಳಿದಿದ್ದ ಆರೋಪಿಯು, ಅಡಗಿಸಿಟ್ಟಿದ್ದ ಮನೆ ಕೀಯನ್ನು ಬಳಸಿಕೊಂಡು ಒಳಕ್ಕೆ ಕಾಲಿಟ್ಟಿದ್ದಾನೆ. ಐಐಟಿ ಪದವೀಧರೆಯಾಗಿರುವ ಸಂತ್ರಸ್ತೆ, ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಆರೋಪಿ ಮನೆಯೊಳಗೆ ಬಂದಾಗ ಆತನನ್ನು ಪ್ರಶ್ನಿಸಿದ್ದಾಳೆ. ಆಂಟಿ ನನಗೆ ಕೆಲಸಕ್ಕಾಗಿ ಕರೆ ಮಾಡಿದರು ಎಂದು ಉತ್ತರಿಸಿದ್ದಾನೆ.
ನಂತರ ರಾಹುಲ್ ಮೀನಾ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆಕೆ ಕೊಡಲು ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಅದು ಶೀಘ್ರದಲ್ಲೇ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಮಹಿಳೆಯ ಮುಖ ಮತ್ತು ದೇಹದಾದ್ಯಂತ ಗಾಯಗಳಾಗಿದ್ದವು. ಮೊಬೈಲ್ ಚಾರ್ಜಿಂಗ್ ಕೇಬಲ್ನಿಂದ ಆಕೆಯ ಕುತ್ತಿಗೆ ಹಿಸುಕಿ ಕೊಲ್ಲಲಾಯಿತು.
ನಂತರ ಆರೋಪಿಯು ಯುವತಿ ಪ್ರಜ್ಞಾಹೀನಳಾಗಿದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಆಕೆಯನ್ನು ಮೆಟ್ಟಿಲುಗಳ ಕೆಳಗೆ ಎಳೆದುಕೊಂಡು ಲಾಕರ್ ಇರಿಸಲಾಗಿದ್ದ ಕೋಣೆಗೆ ಕರೆದೊಯ್ದಿದ್ದಾನೆ. ಮೀನಾ ಮಹಿಳೆಯ ರಕ್ತದ ಕಲೆಗಳಿಂದ ಕೂಡಿದ ಬೆರಳನ್ನು ಬಯೋಮೆಟ್ರಿಕ್ ಸ್ಕ್ಯಾನರ್ಗೆ ಒತ್ತಿ ಲಾಕರ್ ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ವಿಫಲನಾದನು.
ಎರಡು ದಿನಗಳಲ್ಲಿ 2 ಅತ್ಯಾಚಾರ, ಒಂದು ಕೊಲೆ; ಮಾಜಿ IRS ಅಧಿಕಾರಿ ಮಗಳನ್ನು ಕೊಂದ ಮನೆಕೆಲಸದವ!
ಪೊಲೀಸ್ ಮೂಲಗಳ ಪ್ರಕಾರ, ಯುವತಿ ಬಹುಶಃ ಆಗಲೇ ಮೃತಪಟ್ಟಿರಬಹುದು. ಹೀಗಾಗಿ ಬಯೋಮೆಟ್ರಿಕ್ ಸ್ಕ್ಯಾನರ್ ಆಕೆಯ ಹೆಬ್ಬೆರಳ ಗುರುತನ್ನು ಗುರುತಿಸದೇ ಇರಬಹುದು ಎಂದು ಹೇಳಿದ್ದಾರೆ. ಅವನು ಸ್ಕ್ರೂಡ್ರೈವರ್ ಬಳಸಿ ಲಾಕರ್ ಮುರಿದು, ನಗದು ಮತ್ತು ಆಭರಣಗಳನ್ನು ದೋಚಿದ್ದಾನೆ. ರಕ್ತಸಿಕ್ತ ಪ್ಯಾಂಟ್ ಮತ್ತು ಬೂಟುಗಳನ್ನು ಬದಲಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ತಾನು ತಪ್ಪು ಮಾಡಿದೆ ಎಂದು ಆರೋಪಿ ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾನೆ. ತಾನು ಕೊಲೆ ಮಾಡುವ ಉದ್ದೇಶ ಇರಲಿಲ್ಲ, ಆ ಘಟನೆ ನಡೆದು ಹೋಯಿತು ಎಂದಿದ್ದಾನೆ. ಆದರೆ, ಆರೋಪಿ ರಾಹುಲ್ ಮೀನಾ ಯಾವುದೇ ಪಶ್ಚಾತ್ತಾಪವನ್ನು ತೋರಿಸುತ್ತಿಲ್ಲ. ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.