ಲಖನೌ, ಜೂ. 2: ಅಕ್ರಮವಾಗಿ ನಿರ್ವಹಿಸಲ್ಪಡುತ್ತಿದ್ದ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ಗರ್ಭಿಣಿ ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಹೊಟ್ಟೆಯನ್ನು ಕತ್ತರಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಮೃತಳ ಕುಟುಂಬ ಆರೋಪಿಸಿದೆ. ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಮೃತಪಟ್ಟಿದ್ದು, ಆಕೆಯ ಮಗು ಬದುಕುಳಿದಿದೆ (Crime News).
ಈ ಘಟನೆಗೆ ಸಂಬಂಧಿಸಿದಂತೆ ಓರ್ವ ಸ್ಟಾಫ್ ನರ್ಸ್ ಮತ್ತು ಓರ್ವ ದಾದಿಯನ್ನು ಬಂಧಿಸಲಾಗಿದೆ. ಆಸ್ಪತ್ರೆಯ ನಿರ್ವಾಹಕನಾಗಿರುವ ಪ್ರಮುಖ ಆರೋಪಿ ನಸೀಂ ಅಹ್ಮದ್ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾನೆ. ನಸೀಂ ಅಹ್ಮದ್ನ ಪತ್ತೆಗೆ 25,000 ರುಪಾಯಿ ಹಾಗೂ ಸ್ಟಾಫ್ ನರ್ಸ್ ಬಂಧನಕ್ಕೆ 10,000 ರುಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ. ಇದೀಗ ಸ್ಟಾಫ್ ನರ್ಸ್ ಬಲೆಗೆ ಬಿದ್ದಿದ್ದಾಳೆ.
ಶನಿವಾರ (ಮೇ 30) ರಾತ್ರಿ ಗರ್ಭಿಣಿ ಆಶಾ ಕಾರ್ಯಕರ್ತೆಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಅವರನ್ನು ಕಾನ್ನಲ್ಲಿರುವ ಗ್ಲೋಬಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ಕುಟುಂಬ ಸದಸ್ಯರ ಪ್ರತಿಭಟನೆಯ ನಂತರ ಪೊಲೀಸರು ಪರಿಶೀಲಿಸಿದಾಗ, ಆಸ್ಪತ್ರೆಯು ಅಗತ್ಯ ಅನುಮತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿದುಬಂತು. ಚಿಕಿತ್ಸೆಯಲ್ಲಿ ತೊಡಗಿರುವವರ ಅರ್ಹತೆಗಳ ಬಗ್ಗೆಯೂ ಪ್ರಶ್ನೆಗಳು ಎದ್ದವು. ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಹಾಕಲಾಯಿತು. ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.
80 ವರ್ಷದ ವೃದ್ಧೆ ಮೇಲೆ ಅತ್ಯಾಚಾರಗೈದ 28 ವರ್ಷದ ಕಾಮಾಂಧ
ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಅವರನ್ನು ಆರಂಭದಲ್ಲಿ ಕಚ್ನರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ವೈದ್ಯರು ಕಾನ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಅವರನ್ನು ಗೊತ್ತುಪಡಿಸಿದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಕಾನ್ನಲ್ಲಿರುವ ಖಾಸಗಿ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಸ್ತ್ರಚಿಕಿತ್ಸೆಯಲ್ಲಿ ನಡೆದ ನಿರ್ಲಕ್ಷ್ಯ ಮತ್ತು ವೈದ್ಯಕೀಯ ದೋಷದಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆಯ ವೇಳೆ ತೊಂದರೆಗಳು ಉಂಟಾದ ಬಳಿಕ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.