ನಿಜಾಮಾಬಾದ್: ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನ ಆರು ವರ್ಷದ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಪಂಚಾಯಿತಿ ಚುನಾವಣೆಯಲ್ಲಿ (panchayat elections) ಸ್ಪರ್ಧಿಸಲು ಎರಡು ಮಕ್ಕಳಿರಬೇಕು. ಆದರೆ, ಆತನಿಗೆ ಮೂರು ಮಕ್ಕಳಿದ್ದುದರಿಂದ ಪುತ್ರಿಯನ್ನು ಕೊಲೆ ಮಾಡಿದ್ದಾನೆ (crime news).
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲ್ಲೂಕಿನ ಕೆರೂರ್ ಗ್ರಾಮದ ನಿವಾಸಿ ಪಾಂಡುರಂಗ್ ಕೊಂಡ್ಮಂಗಲೆ, ತನ್ನ ಆರು ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕಾಲುವೆಗೆ ತಳ್ಳಿದ್ದಾರೆ. ಪಾಂಡುರಂಗ್ (28) ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ನಿಜಾಮಾಬಾದ್ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಯೆಡಪಲ್ಲಿಯ ನಿಜಾಮ್ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ತನಿಖೆಯಲ್ಲಿ ಆಕೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕೆರೂರ್ ಗ್ರಾಮದ ನಿವಾಸಿ ಪ್ರಾಚಿ (6) ಎಂದು ಗುರುತಿಸಲಾಗಿದೆ ಎಂದು ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಹೇಳಿದರು.
ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ: ಖಾಸಗಿ ಕಂಪನಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ 31 ಲಕ್ಷ ರುಪಾಯಿ ದೋಚಿದ ಡಕಾಯಿತರು
ಪೊಲೀಸರು ಬಾಲಕಿಯ ತಂದೆಯನ್ನು ವಿಚಾರಣೆಗಾಗಿ ಕರೆದೊಯ್ದರು. ಆಕೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ. ತನಿಖಾಧಿಕಾರಿ ತೀವ್ರ ವಿಚಾರಣೆ ನಡೆಸಿದಾಗ, ಮಗುವನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡನು.
ವಿಚಾರಣೆಯ ಸಮಯದಲ್ಲಿ ಆತ ಬಹಿರಂಗಪಡಿಸಿದ ವಿಷಯ ಎಲ್ಲರಿಗೂ ಆಘಾತಕಾರಿಯಾಗಿತ್ತು. ತಮ್ಮ ಗ್ರಾಮದಲ್ಲಿ ಕ್ಷೌರಿಕನ ಅಂಗಡಿ ನಡೆಸುತ್ತಿರುವ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದ. ಅವನಿಗೆ ಮೂರು ವರ್ಷದ ಗಂಡು ಮಗು ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಆದರೆ, ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡು ಮಕ್ಕಳ ಮಾನದಂಡದ ದೃಷ್ಟಿಯಿಂದ ಅವನು ಸ್ಪರ್ಧಿಸಲು ಅನರ್ಹನಾಗಿದ್ದ.
ಹೀಗಾಗಿ ಅವನು ತನ್ನ ಸ್ನೇಹಿತ ಮತ್ತು ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ಶಿಂಧೆ ಜೊತೆ ಸಮಾಲೋಚನೆ ನಡೆಸಿದ್ದಾನೆ. ಅವಳಿ ಮಕ್ಕಳಲ್ಲಿ ಹಿರಿಯಳಾದ ಬಾಲಕಿ ಪ್ರಾಚಿಯನ್ನು ಕೊಲ್ಲಲು ಅವರು ಪಿತೂರಿ ನಡೆಸಿದರು.
ಆರಂಭದಲ್ಲಿ ಪ್ರಾಚಿಯನ್ನು ದತ್ತು ಕೊಡಲು ಯೋಜಿಸಿದ್ದರು. ಆದರೆ ಅದು ತ್ರಾಸದಾಯಕ ಕೆಲಸ, ಸಾಧ್ಯವಿಲ್ಲ ಎಂದು ಸುಮ್ಮನಾದರು. ಬಳಿಕ ಮಗುವನ್ನು ಎಲ್ಲಾದರೂ ಬಿಟ್ಟು ಬರುವ ಬಗ್ಗೆ ಪಾಂಡುರಂಗ ಯೋಚನೆ ಮಾಡಿದ್ದಾನೆ. ಆದರೆ, ಅವಳು ಹಿಂತಿರುಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಚಿಂತಿತನಾಗಿದ್ದನು. ನಂತರ ಅವರು ಮಗುವನ್ನು ಕೊಂದು ಅದನ್ನು ಅಪಘಾತದಂತೆ ಬಿಂಬಿಸಲು ಸಂಚು ರೂಪಿಸಿದರು.
ನಿಜಾಮಾಬಾದ್ ಜಿಲ್ಲೆ ತನ್ನ ಗ್ರಾಮದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವುದರಿಂದ, ಪಾಂಡುರಂಗ ತನ್ನ ಪುತ್ರಿ ಪ್ರಾಚಿಯನ್ನು ಬೈಕ್ನಲ್ಲಿ ನಿಜಾಮ್ ಸಾಗರ್ ಕಾಲುವೆಗೆ ಕರೆದೊಯ್ದನು. ಅವನು ಅವಳನ್ನು ಕಾಲುವೆಗೆ ತಳ್ಳಿ ಪರಾರಿಯಾಗಿದ್ದನು. ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಗ್ರಾಮಸ್ಥರು ನೀರಿಗೆ ಏನೋ ಧುಮುಕುವ ಶಬ್ಧ ಕೇಳಿ ಅಲ್ಲಿಗೆ ಧಾವಿಸಿ ನೋಡಿದಾಗ ಬಾಲಕಿಯ ನಿರ್ಜೀವ ದೇಹವು ಕಾಲುವೆಯಲ್ಲಿ ತೇಲುತ್ತಿರುವುದನ್ನು ಕಂಡುಬಂತು. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯಹೊರಬಿತ್ತು.