ಚಂಡೀಗಢ, ಡಿ. 8: ತಂದೆಯಿಂದಲೇ ಕಾಲುವೆಗೆ ತಳ್ಳಲ್ಪಟ್ಟಿದ್ದ 17 ವರ್ಷದ ಬಾಲಕಿಯೊಬ್ಬಳು, 2 ತಿಂಗಳುಗಳ ನಂತರ ಕಾಣಿಸಿಕೊಂಡಿದ್ದಾಳೆ. ಪಂಜಾಬ್ನ (Punjab) ಫಿರೋಜ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆ ತೊರೆದಿದ್ದ ಮತ್ತು ನಾಲ್ವರು ಸಹೋದರಿಯರಲ್ಲಿ ಹಿರಿಯಳಾದ ಬಾಲಕಿಯು ಮಾಧ್ಯಮಗಳ ಮುಂದೆ ಬಂದು, ತಾನು ಅನುಭವಿಸಿದ ಕಷ್ಟದ ಬಗ್ಗೆ ಹಾಗೂ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾಳೆ.
ಸೆಪ್ಟೆಂಬರ್ 29ರಂದು ಬಾಲಕಿಯ ತಂದೆ ಸುರ್ಜಿತ್ ಸಿಂಗ್ ಆಕೆಯ ಸ್ವಭಾವದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಆಕೆಯ ಕೈಗಳನ್ನು ಹಗ್ಗಗಳಿಂದ ಕಟ್ಟಿ, ನಿರ್ದಯವಾಗಿ ಕಾಲುವೆಗೆ ತಳ್ಳಿದ್ದ. ಜತೆಗೆ ಈ ಕ್ರೂರ ಕೃತ್ಯವನ್ನು ವಿಡಿಯೊ ಕೂಡ ಮಾಡಿದ್ದ. ಆ ವಿಡಿಯೊ ವೈರಲ್ ಕೂಡ ಆಗಿತ್ತು. ಹುಡುಗಿಯ ಸೋದರಸಂಬಂಧಿಯ ದೂರಿನ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಫಿರೋಜ್ಪುರ ನಗರ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಸಿಂಗ್ನನ್ನು ಬಂಧಿಸಿದ್ದರು. ಅಂದಿನಿಂದ ಆತ ಕೇಂದ್ರ ಕಾರಾಗೃಹದಲ್ಲಿದ್ದಾನೆ.
25 ವರ್ಷದ ಯುವತಿಯೊಂದಿಗೆ ಮದುವೆಯಾಗಿದ್ದ ರಾಜಕಾರಣಿ ಸಾವು
ಇದೀಗ ಆ ಹದಿಹರೆಯದ ಹುಡುಗಿ ತಾನು ಹೇಗೆ ಬದುಕುಳಿದೆ ಎಂಬುದನ್ನು ಭಾವನಾತ್ಮಕವಾಗಿ ಬಹಿರಂಗಪಡಿಸಿದ್ದಾಳೆ. ಕಾಲುವೆಯ ಉಕ್ಕಿ ಹರಿಯುತ್ತಿದ್ದ ನೀರಿನಿಂದಾಗಿ ತನ್ನ ಮಣಿಕಟ್ಟುಗಳ ಸುತ್ತಲಿನ ಹಗ್ಗಗಳು ಸಡಿಲಗೊಂಡವು ಎಂದು ಆಕೆ ಹೇಳಿದಳು. ಅಸಹಾಯಕಳಾಗಿ ತೇಲುತ್ತಾ ಸಾಗಿದಾಗ, ಅವಳ ತಲೆ ಕಬ್ಬಿಣದ ಸರಳಿಗೆ ಡಿಕ್ಕಿ ಹೊಡೆದಿದೆ. ಆ ನೋವಿನ ಹೊಡೆತವೇ ಅವಳ ಜೀವರಕ್ಷಕವಾಯಿತು. ಅವಳು ಆ ಕಬ್ಬಿಣದ ಸರಳನ್ನು ಹಿಡಿದು ದಡ ತಲುಪಿದಳು.
ಈ ವೇಳೆ ಮೂವರು ದಾರಿಹೋಕರು ಅವಳನ್ನು ಗಮನಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಆದರೆ ಅವಳು ಸುಮಾರು ಎರಡು ತಿಂಗಳ ಕಾಲ ಆಶ್ರಯ ಪಡೆದ ಸ್ಥಳವನ್ನು ಬಹಿರಂಗಪಡಿಸಲಿಲ್ಲ. ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದಳು.
ತನ್ನ ತಂದೆಯನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಲ್ಲಿ ಬಾಲಕಿ ಬೇಡಿಕೊಂಡಿದ್ದಾಳೆ. ನನ್ನ ತಂಗಿಯರನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲ ಎಂದು ಅವಳು ಕಣ್ಣೀರು ಸುರಿಸುತ್ತ ಹೇಳಿದಳು. ದಾಳಿಯ ಸಮಯದಲ್ಲಿ ತನ್ನ ತಾಯಿ ಕೋಪದಿಂದಿದ್ದ ಹಾಗೂ ಕುಡಿದ ಮತ್ತಿನಲ್ಲಿದ್ದ ತನ್ನ ತಂದೆಯನ್ನು ಪ್ರಚೋದಿಸಿದಳು ಎಂದು ಅವಳು ಆರೋಪಿಸಿದಳು.
ತನ್ನ ಸಂಬಂಧಿಕರನ್ನು ನಂಬುವುದಿಲ್ಲ ಎಂದು ಹೇಳಿಕೊಂಡು ಆಕೆ ಪೊಲೀಸ್ ರಕ್ಷಣೆಯನ್ನೂ ಕೋರಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯು ಜೀವಂತ ವಾಪಸ್ ಬಂದಿರುವುದರಿಂದ ಕೊಲೆ ಆರೋಪದಿಂದ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.
ವಿದ್ಯಾರ್ಥಿಯನ್ನು ಸರಪಳಿಯಲ್ಲಿ ಕಟ್ಟಿಹಾಕಿ ಶಿಕ್ಷೆ
ಪದೇ ಪದೆ ಹಾಸ್ಟೆಲ್ನಿಂದ ಮನೆಗೆ ಓಡಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ಒಡಿಶಾದಲ್ಲಿ ಇತ್ತೀಚೆಗೆ ನಡೆದಿತ್ತು. 4ನೇ ತರಗತಿಯ ವಿದ್ಯಾರ್ಥಿಯನ್ನು ಹಾಸ್ಟೆಲ್ನಲ್ಲಿ ಕಟ್ಟಿ ಹಾಕಲಾಗಿತ್ತು. ಈ ಕುರಿತು ಮಾಹಿತಿ ತಿಳಿದ ಕೂಡಲೇ ಅಧಿಕಾರಿಗಳು ತನಿಖೆಗೆ ಆದೇಶಿಸಿದರು. 8 ವರ್ಷದ ಬಾಲಕನನ್ನು ಕಬ್ಬಿಣದ ಸಂಕೋಲೆಯಿಂದ ಹಾಸಿಗೆಗೆ ಕಾಲಿನಿಂದ ಕಟ್ಟಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.